ಡಾ. ಸುಜಾತಾ ರಾಥೋಡ್ ನೇತ್ರ ತಜ್ಞೆ
ತಂದೆ ನಿರ್ದೇಶಕರಾಗಿದ್ದ ರಾಜ್ಯದ ಒಂದು ಪ್ರತಿಷ್ಠಿತ ಆಸ್ಪತ್ರೆಗೆ ಮಗಳು ನಿರ್ದೇಶಕಿಯಾಗುವುದು ಬಹಳ ಅಪರೂಪ. ಅಂತಹದೊಂದು ಅಪರೂಪದ ಸಾಧನೆ ಮಾಡಿದವರೇ ಡಾ. ಬಿ.ಎಲ್. ಸುಜಾತಾ ರಾಥೋಡ್……..!
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಿಂಟೋ ಕಣ್ಣಿನ ಆಸ್ಪತ್ರೆ ರಾಜ್ಯದ ಹೆಮ್ಮೆಯ ಆಸ್ಪತ್ರೆ. ಅದು ವಿಶ್ವದ ಹಳೆಯ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಯ 13ನೇ ನಿರ್ದೇಶಕಿಯಾಗಿ ಡಾ. ಸುಜಾತಾ ರಾಥೋಡ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ಸುಜಾತಾರ ತಂದೆ 1982-88ರ ಅವಧಿಯಲ್ಲಿ ಮಿಂಟೊ ಆಸ್ಪತ್ರೆಯ ಪ್ರಥಮ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅಪ್ಪನ ಮಾರ್ಗದರ್ಶನದಲ್ಲಿ ಸುಜಾತಾರಿಗೆ ಡಾಕ್ಟರ್ ಆಗಬೇಕೆಂಬ ಕನಸು ಇತ್ತು. ತಂದೆಗೆ ಮಗಳು ಸ್ತ್ರೀ ರೋಗ ತಜ್ಞೆಯಾಗಬೇಕೆಂಬ ಅಪೇಕ್ಷೆ ಇತ್ತು. ಆದರೆ ಸುಜಾತಾರಿಗೆ ಜನಸಾಮಾನ್ಯರ ಕಣ್ಣಿನ ಸಮಸ್ಯೆಗಳ ಬಗ್ಗೆ ಅರಿವಿತ್ತು. ಹೀಗಾಗಿ ಅವರೂ ನೇತ್ರ ತಜ್ಞೆಯಾದರು.
ಕಳೆದ 3 ದಶಕಗಳಿಂದ ಮಿಂಟೊ ಆಸ್ಪತ್ರೆಯಲ್ಲಿದ್ದುಕೊಂಡು ಸಾರ್ವಜನಿಕರ, ಅದರಲ್ಲೂ ಬಡರೋಗಿಗಳ ಹತ್ತು ಹಲವು ಪ್ರಕಾರಗಳ ನೇತ್ರ ಸಮಸ್ಯೆಗಳಿಗೆ ಸ್ಪಂದಿಸಿ, ಅವನ್ನು ಪರಿಹರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಲವು ವರ್ಷಗಳ ಅನುಭವದ ಪಕ್ವತೆಯಿಂದ ಡಾ. ಸುಜಾತಾ 2018 ರಿಂದ ಕಣ್ಣಾಸ್ಪತ್ರೆಯ ನಿರ್ದೇಶಕಿಯಾಗಿದ್ದಾರೆ. ನಿರ್ದೇಶಕರ ಹುದ್ದೆ ನಿಭಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅಪ್ಪನ ಮಾರ್ಗದರ್ಶನ, ಅವರು ತೋರಿಸಿಕೊಟ್ಟ ಆದರ್ಶದ ದಾರಿಯನ್ನು ಕಣ್ಮುಂದೆ ಇಟ್ಟುಕೊಂಡು ಡಾ. ಸುಜಾತಾ ಹತ್ತು ಹಲವು ಎಡರುತೊಡರುಗಳ ನಡುವೆಯೂ ನಿರ್ದೇಶಕರ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
ಸದಾ ಚುರುಕಾಗಿರುವ ಡಾ. ಸುಜಾತಾ ಮೊದಲಿನಿಂದಲೂ ತಮ್ಮನ್ನು ತಾವು ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಪಿ.ಯು.ಸಿಯಲ್ಲಿದ್ದಾಗಲೇ ಮಾಡೆಲಿಂಗ್ ಮಾಡುತ್ತಿದ್ದರು. ಬ್ಯೂಟಿ ಪೇಜೆಂಟ್ ಆಗಿದ್ದರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ 1985ರ `ಮಿಸ್ ಬಿಎಂಸಿ’ ಆಗಿದ್ದರು.
ಮದುವೆಯಾದ ಬಳಿಕ ಅವರು ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ರೋಟರಿ ಕ್ಲಬ್ ಆಯೋಜಿಸಿದ್ದ `ಮಿಸೆಸ್ಬೆಂಗಳೂರು’ ಸ್ಪರ್ಧೆಯಲ್ಲಿ ಅವರು ಮೌದಲನೇ ರನ್ನರ್ ಅಪ್ ಆಗಿದ್ದರು.
ಮಿಂಟೋನಲ್ಲಿ ನೇತ್ರ ತಜ್ಞೆಯಾದ ಬಳಿಕ, ಬಡರೋಗಿಗಳ ಆರೈಕೆಯಲ್ಲಿ ಮಗ್ನರಾಗಿ ತಮ್ಮೆಲ್ಲ ಗಮನವನ್ನು ಆ ಕಡೆಯೇ ಕೇಂದ್ರೀಕರಿಸಿದ್ದರು. ಆದರೆ ಆಗೊಮ್ಮೆ ಈಗೊಮ್ಮೆ ಅಲ್ಲಿ ನಡೆಯುತ್ತಿದ್ದ ಇತರ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿದ್ದರು. 2016ರಲ್ಲಿ `ಮಿಸೆಸ್ ಲಯನ್ಸ್ ಇಂಟರ್ ನ್ಯಾಷನಲ್ ಕ್ವೀನ್’ ಆಗಿ ತಮ್ಮ ಸೌಂದರ್ಯ ಪ್ರಜ್ಞೆಯನ್ನು ಬಿಂಬಿಸಿದ್ದರು.
ಕೋವಿಡ್ ಪೂರ್ವದಲ್ಲಿ ಅರು ತಮ್ಮದೇ ಆದ `ಟ್ರೆಕ್ಕಿಂಗ್ ಗ್ರೂಪ್’ ಮಾಡಿಕೊಂಡು ವರ್ಷಕ್ಕೊಮ್ಮೆಯಾದರೂ ಹೊರಗಡೆ ಸುತ್ತಾಡಲು ಹೋಗುತ್ತಿದ್ದರು. ಈ ಮೂಲಕ ತಮ್ಮ ಆಂತರಿಕ ಸ್ಛೂರ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.
ಕೋವಿಡ್ ನ ತುರ್ತು ಸ್ಥಿತಿಯಲ್ಲಿ ನೇತ್ರರೋಗಿಗಳ ತಪಾಸಣೆ, ಚಿಕಿತ್ಸೆ ಸ್ಥಗಿತಗೊಂಡಿತ್ತು. ಆಗ ಎಲ್ಲ ವೈದ್ಯರಿಗೂ ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಳ್ಳುವ ಸ್ಥಿತಿ ಎದುರಾಗಿತ್ತು. ಆಗ ನಾವೆಲ್ಲ ಅಸಹಾಯಕರಾಗಿದ್ದೆವು ಎಂದು ಡಾ. ಸುಜಾತಾ ಹೇಳುತ್ತಾರೆ.
ಸೇವಾ ಮನೋಭಾವದ ಡಾ. ಸುಜಾತಾ ಹೀಗೆ ಹೇಳುತ್ತಾರೆ, “ನಮ್ಮ ಮನಸ್ಸಿನಲ್ಲಿ ಸದಾ ಪಾಸಿಟಿವಿಟಿ ಇರಬೇಕು. ಸುತ್ತಮುತ್ತಲಿನವರಿಗೆ ಬೆಳಕು ಕೊಡುವ ಕೆಲಸ ಮಾಡಬೇಕು.”
ಡಾ. ಸುಜಾತಾರಿಗೆ ಸ್ತ್ರೀಯರ ಶಕ್ತಿಯ ಬಗ್ಗೆ ಅಪಾರ ಗೌರವವಿದೆ, ಅಷ್ಟೇ ಹೆಮ್ಮೆ ಕೂಡ ಇದೆ. ಸ್ತ್ರೀಯರು ಮಾಡುವಷ್ಟು `ಹೆಲ್ದಿ ಬ್ಯಾಲೆನ್ಸ್’ ಯಾರೂ ಮಾಡಲು ಸಾಧ್ಯವಿಲ್ಲ. ಅದು ಸಂಬಂಧಗಳನ್ನು ಕಾಯ್ದುಕೊಂಡು ಹೋಗುವ ಅನುಪಮ ಕೆಲಸ ಮಾಡುತ್ತದೆ, ಎನ್ನುವುದು ಅವರ ಅನಿಸಿಕೆ.
“ನೇತ್ರ ಆರೋಗ್ಯದ ಬಗ್ಗೆ ನಾವು ಹೆಚ್ಚೆಚ್ಚು ಗಮನ ಕೊಡಬೇಕು. ವರ್ಷಕ್ಕೊಮ್ಮೆ ತಪ್ಪದೇ ವಾಹನದ ಸರ್ವೀಸಿಂಗ್ ಮಾಡುವ ನಾವು ಆರೋಗ್ಯದ ಬಗ್ಗೆ ಅಷ್ಟು ಕಾಳಜಿ ತೋರಿಸದೇ ಇರುವುದು ವಿಷಾದದ ಸಂಗತಿ. 40ರ ಬಳಿಕ ವರ್ಷಕ್ಕೊಮ್ಮೆಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಇಂದಿನ ಕಂಪ್ಯೂಟರ್ ಯುಗದಲ್ಲಿ ಡ್ರೈ ಐ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆ ಬಗ್ಗೆ ನಿರ್ಲಕ್ಷ್ಯ ತೋರಬೇಡಿ,” ಎಂಡು ಡಾ. ಸುಜಾತಾ ಸಲಹೆ ಕೊಡುತ್ತಾರೆ.
ಡಾ. ಸುಜಾತಾ ತಮ್ಮ ಸೇವಾ ಅವಧಿಯಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ವೈದ್ಯಕೀಯ ವೇದಿಕೆಗಳಲ್ಲಿ ಹಲವು ಪ್ರಬಂಧಗಳನ್ನು ಮಂಡಿಸಿ ತಮ್ಮ ವೃತ್ತಿ ನೈಪುಣ್ಯತೆ ಮೆರೆದಿದ್ದಾರೆ.
ಪ್ರಶಸ್ತಿಗಳು
ಡಾ. ಸುಜಾತಾರ 3 ದಶಕಗಳ ನೇತ್ರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿಗಳು ಅವರ ಮುಡಿಯನ್ನು ಅಲಂಕರಿಸಿವೆ. ವೈದ್ಯ ನಾರಾಯಣ ರತ್ನ ಪ್ರಶಸ್ತಿ, ವುಮೆನ್ಸ್ ಎಕ್ಸಿನ್ಸ್ ಅವಾರ್ಡ್, ಇನ್ಸ್ ಪಿರೇಶನ್ ವುಮನ್ ಅಚೀವರ್ ಅವಾರ್ಡ್, ಸಾವಿತ್ರಿ ಬಾಯಿ ಪಿ ಅವಾರ್ಡ್, ಐಎಂಎ ಬೆಂಗಳೂರು ನೀವಡು ಡಾ. ಬಿ.ಸಿ. ರಾಯಲ್ ಅವಾರ್ಡ್, ರೋಟರಿ ಕ್ಲಬ್ ಪ್ರಶಸ್ತಿ ಹಾಗೂ ಶುಶ್ರೂಷಕರ ಮಹಾವಿದ್ಯಾಲಯದ `ನಾರಿಶಕ್ತಿ ಅವಾರ್ಡ್’ ಬಂದಿವೆ.
`ಯುವ ವೈದ್ಯರಿಗೆ ನೀವೇನು ಕಿವಿಮಾತು ಹೇಳಬಯಸುವಿರಿ?’ ಎಂದು ಕೇಳಿದರೆ, `ಕೀರ್ತಿ, ಹಣದ ಹಿಂದೆ ಧಾವಿಸದೆ, ತೊಂದರೆ ಹೊತ್ತು ಬರುವ ರೋಗಿಗಳಿಗೆ ಶ್ರದ್ಧೆ, ಸಮರ್ಪಣೆಯೊಂದಿಗೆ ಚಿಕಿತ್ಸೆ ಕೊಡಿ. ಆಗ ಎಲ್ಲರೂ ಮೆಚ್ಚುವಂತಹ ವೈದ್ಯರು ನೀವಾಗಬಲ್ಲಿರಿ,’ ಎನ್ನುತ್ತಾರೆ.
– ಅಶೋಕ ಚಿಕ್ಕಪರಪ್ಪ/ಎಚ್.ಎಂ. ಶಂಕರ್