ಗುಜರಾತ್​ನಲ್ಲಿ ಚಲನಚಿತ್ರ ನಿರ್ಮಾಪಕರ ನಾಪತ್ತೆ ಪ್ರಕರಣ ಇದೀಗ ಸಂಚಲನ ಸೃಷ್ಟಿಸಿದೆ. ಅದಕ್ಕೆ ಕಾರಣ ಅಹಮದಾಬಾದ್​ನಲ್ಲಿ ನಡೆದ ವಿಮಾನ ದುರಂತ ಪ್ರಕರಣ. ಈ ದುರ್ಘಟನೆಯಲ್ಲಿ ಅವರೂ ಕೂಡ ಜೀವ ಕಳೆದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ನರೋಡಾ ನಿವಾಸಿ ಮಹೇಶ್ ಕಲವಾಡಿಯಾ ನಾಪತ್ತೆ ಆಗಿರುವ ಸಿನಿಮಾ ನಿರ್ಮಾಪಕ. ಇವರು ಮಹೇಶ್ ಜೈರ್ವಾಲಾ ಎಂದೇ ಹೆಸರುವಾಸಿಯಾಗಿದ್ದಾರೆ. ಸಿನಿಮಾ ನಿರ್ಮಾಣದ ಜೊತೆ ಕೆಲವು ಆಲ್ಬಂ ಹಾಡುಗಳಿಗೆ ನಿರ್ದೇಶನ ಕೂಡ ಮಾಡಿದ್ದಾರೆ. ಮಹೇಶ್​, ವಿಮಾನ ದುರಂತ ನಡೆದ ದಿನ, ಒಬ್ಬರನ್ನು ಭೇಟಿಯಾಗಲು ಲಾ ಗಾರ್ಡನ್ ಪ್ರದೇಶಕ್ಕೆ ಹೋಗಿದ್ದರು. ನಂತರ ಮತ್ತೆ ವಾಪಸ್ ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ಹೇಟಲ್ ದೂರು ನೀಡಿದ್ದಾರೆ.

ನನ್ನ ಪತಿ ಅಂದು ಮಧ್ಯಾಹ್ನ 1.14ಕ್ಕೆ ಫೋನ್ ಮಾಡಿದ್ದರು. ಮೀಟಿಂಗ್ ಮುಗಿದಿದೆ. ನಾನು ಮನೆಗೆ ಬರುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಅವರು ಮನೆಗೆ ಹಿಂದಿರುಗಿಲ್ಲ. ನಾನು ಮತ್ತೆ ಮತ್ತೆ ಕರೆ ಮಾಡಿದೆ, ಅವರ ಫೋನ್ ಸ್ವಿಚ್ಡ್​ಆಫ್ ಎಂದು ಬರುತ್ತಿತ್ತು. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಫೋನ್ ಕೊನೆಯ ಲೊಕೇಷನ್ ಹುಡುಕಿದಾಗ ವಿಮಾನ ದುರಂತ ನಡೆದ ಸ್ಥಳದಿಂದ 700 ಮೀಟರ್​ ಆಸುಪಾಸಿನಲ್ಲಿ ಪತ್ತೆಯಾಗಿದೆ.

ಅವರ ಫೋನ್ ಮಧ್ಯಾಹ್ನ 1.40 ಸುಮಾರಿಗೆ ಸ್ವಿಚ್ಡ್​ ಆಫ್ ಆಗಿದೆ. ಅವರ ಸ್ಕೂಟರ್, ಮೊಬೈಲ್ ಫೋನ್ ಕೂಡ ಮಿಸ್​ ಆಗಿದೆ. ಅವರು ಮನೆಗೆ ಇನ್ನೂ ಬಂದಿಲ್ಲ. ಹೀಗಾಗಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಅವರೂ ಒಬ್ಬರೇ ಎಂದು ತಿಳಿದುಕೊಳ್ಳಲು ಡಿಎನ್​ಎ ಸ್ಯಾಂಪಲ್ ನೀಡಿದ್ದೇವೆ ಎಂದು ಹೇಟಲ್ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ