ನಮ್ಮ ಸಮಾಜದಲ್ಲಿ ಗಂಡಸರ ಅಧಿಕಾರ ಮೇಲುಗೈ ಆಗಿರಲಿ ಎಂದು ಧರ್ಮ ಯಾವ ರೀತಿ ಹೆಂಗಸರನ್ನು ಕತ್ತಿಯ ಕೂಪಕ್ಕೆ ದೂಡಿದೆ ಎಂದು ನಿಮಗೆ ಗೊತ್ತೇ……?

ನೀವು ಒಂದು ವಿಷಯ ಗಮನಿಸಿದ್ದೀರಾ? ಎಲ್ಲಾ ವ್ರತ, ಉಪವಾಸಗಳ ಪಾಲನೆಯನ್ನು ಹೆಂಗಸರೇ ಮಾಡಬೇಕಂತೆ! ಅದು ಯಾವುದೇ ಹಬ್ಬಕ್ಕೆ, ಪೂಜೆ ಪುನಸ್ಕಾರಕ್ಕೆ ಸಂಬಂಧಿಸಿರಬಹುದು. ಗಂಡಸರ ದೀರ್ಘಾಯುಷ್ಯಕ್ಕೆ ಸಂಬಂಧಿಸಿದಂತೆಯೇ ಈ ವ್ರತಗಳು ರೂಪುಗೊಂಡಿರುವುದೇಕೆ? ಪ್ರತಿ ವ್ರತದ ಜೊತೆಯೂ ಒಂದಲ್ಲ ಒಂದು ಪೌರಾಣಿಕ ಕಥೆ ತಳುಕು ಹಾಕಿಕೊಂಡಿರುತ್ತದೆ. ಹೆಂಗಸರು ಬಹುತೇಕ ಇಂಥ ವ್ರತಗಳನ್ನು ಶ್ರದ್ಧೆ, ನಿಷ್ಠೆ, ಭಕ್ತಿಗಳಿಂದ ಕಟ್ಟುನಿಟ್ಟಾಗಿ ಆಚರಿಸುತ್ತಾರೆ.

ಇದರಲ್ಲಿನ ಒಂದು ಅತಿ ಶಿಸ್ತಿನ ನಿಯಮವೆಂದರೆ, ಮೊದಲ ಸಲ ಮಾಡಿದ ವ್ರತ, ವರಮಹಾಲಕ್ಷ್ಮಿ ಅಥವಾ ವಟ ಸಾವಿತ್ರಿ ವ್ರತವೇ ಇರಲಿ, ಅದು ನಿರ್ಜಲ ಉಪವಾಸವಾಗಿದ್ದರೆ, ಮುಂದಿನ ಎಲ್ಲಾ ವರ್ಷಗಳಲ್ಲೂ ಅದನ್ನು ಕಟ್ಟುನಿಟ್ಟಾಗಿ ಹಾಗೇ ಅನುಸರಿಸಬೇಕು ಎಂಬುದು. ಇಂಥ ನಿರ್ಜಲ (ಅಂದ್ರೆ ಒಂದು ಹನಿ ನೀರೂ ಸಹ ಕುಡಿಯದೆ ಮಾಡಬೇಕಾದ್ದು) ವ್ರತಗಳಿಂದ ಹೆಂಗಸರ ಆರೋಗ್ಯ ಅದೆಷ್ಟು ಏರುಪೇರಾಗುವುದೋ ಕೇಳುವವರಾರು?

ಪ್ರತಿ ಹುಣ್ಣಿಮೆಗೆ, ಸಂಕಷ್ಟಿಗೆ, ಏಕಾದಶಿಗಳಲ್ಲಿ ನಿರ್ಜಲ ಉಪವಾಸ ಅನುಸರಿಸುವುದರಿಂದ ವಾಸ್ತವದಲ್ಲಿ ಮನೆಗಳಲ್ಲಿ ಶಾಂತಿ ಸೌಹಾರ್ದತೆ ನೆಲೆಸಿ, ಸಿರಿಸಮೃದ್ಧಿ ಹೆಚ್ಚುತ್ತದೆ ಎಂಬುದು ಎಷ್ಟು ನಿಜ? ಈ ವ್ರತ ಉಪವಾಸಗಳಿಗೆ ಇಷ್ಟೊಂದು ಶ್ರದ್ಧೆ, ನಿಷ್ಠೆ ತೋರಬೇಕಾದ ಅಗತ್ಯವೇನು? ಇದು ನಮ್ಮ ಧರ್ಮಭೀರು ಸ್ವಭಾವಕ್ಕೆ ಕೈಗನ್ನಡಿಯಲ್ಲವೇ? ಜೀವನದಲ್ಲಿ ಬರುವ ಕಷ್ಟನಷ್ಟಗಳನ್ನು ಎದುರಿಸುವುದನ್ನು ಬಿಟ್ಟು, ಧರ್ಮಗುರುಗಳು ಎಲ್ಲಾ ಹೆಂಗಸರಿಗೂ ವ್ರತ ಉಪವಾಸಗಳ ಸಲಹೆ ನೀಡುತ್ತಾರೆ.

ಸುಶಿಕ್ಷಿತರೂ ಇದರ ಕಪಿಮುಷ್ಟಿಯಲ್ಲಿ

ಯಾವುದೇ ಕಷ್ಟಕಾಲ ಬಂದಾಗಲೂ ನಾವೇಕೆ ಕರ್ತವ್ಯದ ಕರೆಗೆ ಓಗೊಡದೆ ವ್ರತಗಳಿಗೆ ಮಹತ್ವ ನೀಡುತ್ತೇವೆ? ಇಂದಿಗೂ ಸಹ ಸುಶಿಕ್ಷಿತರಾದರೂ ಈ ವ್ರತಗಳ ಕಪಿಮುಷ್ಟಿಯಿಂದ ಹೊರಬರಲಾಗದೆ ತತ್ತರಿಸುತ್ತಿದ್ದಾರೇಕೆ? ಇದಕ್ಕೆ ಮುಖ್ಯ ಕಾರಣ ಇಂಥ ಜನರ ಮೂಢನಂಬಿಕೆ ಅಥವಾ ಅವರ ಸೋಮಾರಿತನ. ಯಾವುದೇ ಸಮಸ್ಯೆಯ ಪರಿಹಾರಕ್ಕಾಗಿ ನಾವು ಒಂದು ಸುನಿಯೋಜಿತ ವಿಧಾನದಿಂದ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ನಾವು ಕಠಿಣ ಪರಿಶ್ರಮ ವಹಿಸದೆ ಬೇರೆ ದಾರಿ ಇಲ್ಲ. ಇದನ್ನು ಬಿಟ್ಟು ವ್ರತದ ದಾರಿ ಹಿಡಿಯುವುದೇ ಸುಲಭ, ಅದರಿಂದ ಎಲ್ಲಾ ಕಷ್ಟಗಳೂ ನಿವಾರಣೆ ಆಗುತ್ತವೆ ಅಂದುಕೊಳ್ಳುತ್ತೇವೆ. ಹಿಂದಿನಿಂದಲೂ ನಮಗೆ ಅತಿ ಪ್ರಿಯವಾಗುವ ವಿಷಯ ಎಂದರೆ, ಕನಸಿನ ಲೋಕಕ್ಕೆ ಕರೆದೊಯ್ಯುವ ವಿಷಯಗಳೇ ಅತ್ಯಾಕರ್ಷಕ ಎನಿಸುವಂಥದ್ದು.

ವೈಭವಲಕ್ಷ್ಮಿ ವ್ರತ ಮಾಡುವುದರಿಂದ ಧನಪ್ರಾಪ್ತಿ!

ಇದನ್ನು ನಂಬಿಕೊಂಡು ಬಹಳ ಹೆಂಗಸರು ಈ ವ್ರತವನ್ನು ಅತಿ ನಿಷ್ಠಾಭಕ್ತಿಗಳಿಂದ ಮಾಡಿ, ಇದರ ಉಧ್ಯಾಪನೆಗೆ ತೊಡಗುತ್ತಾರೆ. ಈ ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಬಹಳಷ್ಟು ಖರ್ಚಾಗುತ್ತದೆ ಎಂಬುದಂತೂ ನಿಜ. ಇವು ನಮ್ಮ ಜೇಬಿಗೆ ಭಾರಿ ಹೊರೆ. ಸಕಾಲಕ್ಕೆ ಆಹಾರ ಸೇವಿಸದೆ, ನಿರ್ಜಲ ಉಪವಾಸಗಳಿಂದ ಬಿ.ಪಿ., ಡಯಾಬಿಟಿಸ್‌ ಇರುವವರು ಏನೆಲ್ಲ ನರಳುತ್ತಾರೆ ಎಂಬುದು ಕಷ್ಟಪಟ್ಟವರಿಗೇ ಗೊತ್ತು.

ಗಂಭೀರ ಕುತಂತ್ರ

ಎಷ್ಟೋ ಹೆಂಗಸರು ಪತಿಯ ದೀರ್ಘಾಯುಷ್ಯಕ್ಕಾಗಿ ತಾವೇ 50+ ದಾಟಿದ್ದರೂ ನಿರ್ಜಲ ಉಪವಾಸ ಮಾಡುತ್ತಾರೆ. ಗಂಡಂದಿರಿಗೆ ಎಲ್ಲ ಒಳ್ಳೆಯದಾಗಲಿ ಎಂಬುದೇ ಇದರ ಗುರಿ. ಇಷ್ಟಾದರೂ ವ್ರತ ಮಾಡಿದವರೆಲ್ಲ ದೀರ್ಘ ಸುಮಂಗಲಿಯರಾಗಿಯೇ ಮರಣ ಹೊಂದುತ್ತಾರೆ ಎಂಬ ಗ್ಯಾರಂಟಿ ಇಲ್ಲ. ನೀವು ಗಮನವಿರಿಸಿ ನೋಡಿದರೆ ಈ ಎಲ್ಲಾ ವ್ರತ ಕಟ್ಟುಪಾಡುಗಳೂ ಕೇವಲ ಹೆಂಗಸರಿಗೆ  ಮಾತ್ರ ಸೀಮಿತ. ಅದು ಯಾವ ಬಗೆಯ ವ್ರತವೇ ಆಗಿರಲಿ, ಅದರ ನೇಮನಿಷ್ಠೆ, ಶ್ರದ್ಧಾಭಕ್ತಿ, ಉಪವಾಸ ಇತ್ಯಾದಿಗಳನ್ನು ಹೆಂಗಸರೇ ಪಾಲಿಸಬೇಕು. ಪ್ರತಿ ವ್ರತದ ಹಿಂದೆಯೂ ಇರುವ ಏಕೈಕ ಗುರಿ ಎಂದರೆ ಕೌಟುಂಬಿಕ ಸುಖಶಾಂತಿ, ಪುತ್ರ ಪ್ರಾಪ್ತಿಗಾಗಿ ಪೂಜೆ ಪುನಸ್ಕಾರ, ಪತಿಯ ದೀರ್ಘಾಯುಷ್ಯಕ್ಕಾಗಿ ನೋಂಪಿ. ಈ ವ್ರತ, ಅನುಷ್ಠಾನಗಳು ಕೇವಲ ಹೆಂಗಸರಿಗಷ್ಟೇ ಮಾತ್ರ ಸೀಮಿತವೇಕೆ? ಇದಕ್ಕೆ ಮೂಲಕಾರಣ ಬಾಲ್ಯದಿಂದಲೇ ಹೆಣ್ಣುಮಕ್ಕಳಿಗೆ ಆಸೆಗಳನ್ನು ಅದುಮಿಟ್ಟು, ಹೇಳಿದಂತೆ ಮೌನವಾಗಿ ನಡೆದುಕೊಳ್ಳಬೇಕೆನ್ನುವ ತರಬೇತಿ ನೀಡಲಾಗಿರುತ್ತದೆ. ಗಂಡಸರು ಈ ಸಮಾಜದಲ್ಲಿ ಯಾವಾಗಲೂ ತಮ್ಮದೇ ಅಧಿಕಾರ ನಡೆಸಬೇಕೆಂಬ ಹುನ್ನಾರಕ್ಕೆ ಕುತಂತ್ರವಿದು.

ಎಲ್ಲಾ ವ್ರತಗಳನ್ನೂ ಹೆಂಗಸರು ಮಾಡಬೇಕು, ಸರಿ. ಆದರೆ ಇದಕ್ಕೆ ಸಾಂಪ್ರದಾಯಿಕ ನಿಯಮ, ಕಟ್ಟಳೆ ರಚಿಸುವವರು ಮಾತ್ರ ಗಂಡಸರಾದ ಪುರೋಹಿತರು. ಮಹಿಳಾ ಪೌರೋಹಿತ್ಯ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆಯಾದರೂ, ಅವರಂತೂ ಹಿಂದಿನ ಕಟ್ಟಳೆಗಳನ್ನು ಖಂಡಿತಾ ಮೀರುವವರಲ್ಲ. ಇದರ ಅರ್ಥ ನೇರ, ಸ್ಪಷ್ಟ. ನಮ್ಮ ಸನಾತನ ಧರ್ಮ ಅಂದಿಗೂ ಇಂದಿಗೂ ಹೆಂಗಸರನ್ನು ಸದಾ ಕತ್ತಲ ಕೂಪದೊಳಗೆ ಬಂಧಿಸಿಡಲು ಹವಣಿಸುತ್ತದೆ. ಇಲ್ಲಿ ಹೆಣ್ಣು ಸ್ವತಂತ್ರ ವಿಚಾರಧಾರೆ ಬೆಳೆಸಿಕೊಳ್ಳಲು ಎಳ್ಳಷ್ಟೂ ಅವಕಾಶವಿಲ್ಲ. ವ್ರತ ಉಪವಾಸಗಳಿಂದ ಜೀವನ ಸ್ವರ್ಗಮಯ, ಸುಖದಸೂರೆ ಆಗುತ್ತದೆ ಎಂದಿಟ್ಟುಕೊಂಡರೆ, ಪ್ರಪಂಚದಲ್ಲಿ ಇರುವ ಶೇ.90 ಮಂದಿ ಪರಮ ಸುಖಿಗಳೇ ಆಗಿರಬೇಕಿತ್ತು, ಏಕೆಂದರೆ ಇವರೆಲ್ಲ ಅಪ್ಪಟ ಆಸ್ತಿಕರು!

ಜೀವನ ಸರಳ ಮಾಡಿಕೊಳ್ಳಿ

ಈ ವ್ರತ ಉಪವಾಸಗಳಿಗಾಗಿ ನಮ್ಮ ಹೆಂಗಸರು ಪಡುವ ಪಾಡು, ಕಷ್ಟಸಹಿಷ್ಣುತೆ, ಸಹನಾಶಕ್ತಿ, ಸಮಯಗಳನ್ನು ತಮ್ಮ ಏಳಿಗೆ, ಶ್ರೇಯೋಭಿಲಾಷೆಗಾಗಿ ಮೀಸಲಿಟ್ಟರೆ ಅವರು ಎಷ್ಟೋ ಮುಂದುವರಿದಿರುತ್ತಿದ್ದರು. ಇಂಥ ವ್ಯರ್ಥಾಲಾಪ ಮಾಡುತ್ತಾ ಕಾಲಹರಣ ಮಾಡುವ ಬದಲು ಆ ಸಮಯ, ಶಕ್ತಿಯನ್ನು ಶಿಕ್ಷಣ, ಕಲಿಕೆ, ತರಬೇತಿ, ವ್ಯಾಪಾರ ವಹಿವಾಟು, ಮಹಿಳಾ ಉನ್ನತಿ…. ಇತ್ಯಾದಿಗಳಿಗೆ ಉಳಿಸಿಕೊಂಡಿದ್ದರೆ ಹೆಂಗಸರು ಇಂದಿಗೂ ಇಷ್ಟು ದೈನೇಸಿ ಸ್ಥಿತಿಯಲ್ಲಿ ಇರಬೇಕಾಗಿರಲಿಲ್ಲ. ಅವರ ಜೀವನದ ದಾರಿ ಎಷ್ಟೋ ಸುಗಮ ಆಗಿರುತ್ತಿತ್ತು. ಈ ವ್ರತಗಳ ವಿರುದ್ಧ ದೊಡ್ಡ ಸಮರ ಸಾರಬೇಕು, ಕ್ರಾಂತಿ ನಡೆಸಬೇಕು ಅಂತಲ್ಲ. ಹೆಂಗಸರು ತಮ್ಮ ಏಳಿಗಾಗಿ, ಆರೋಗ್ಯ ಸುಧಾರಣೆಗಾಗಿ, ಮುಂದಿನ ಉಜ್ವಲ ಭವಿಷ್ಯಕ್ಕಾಗಿ ತಮಗೆ ಪೂರಕವಾಗುವಂಥ, ಅದರಿಂದ ತಮಗೆ ಎಳ್ಳಷ್ಟು ಬಾಧೆ ಬರದಂಥ ವ್ರತಗಳನ್ನು ಏಕೆ ಕೈಗೊಳ್ಳಬಾರದು? ಯಾವುದರಿಂದ ಹೆಣ್ಣಿಗೆ ಲಾಭವೋ, ಉದ್ಧಾರಕ್ಕೆ ದಾರಿಯೋ, ತನ್ನ ನಾಳಿನ ಕಷ್ಟಗಳಿಗೆ ಇಂದಿನಿಂದಲೇ ಆರ್ಥಿಕವಾಗಿ ಸದೃಢ ಜೀವನ ರೂಪಿಸಿಕೊಳ್ಳಬಹುದೋ, ಯಾವುದರಿಂದ ಅವಳ ಧೀಶಕ್ತಿಗೆ ಚ್ಯುತಿ ಬರುವುದಿಲ್ಲವೋ ಅಂಥ ವ್ರತಗಳನ್ನು ನಮ್ಮ ಹೆಂಗಸರೇ ಹೊಸದಾಗಿ ರೂಪಿಸಲಿ!

ಸುಜಾತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ