ಬೆಂಗಳೂರಿನ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಶನಿವಾರ ವೃಕ್ಷಮಾತೆ ಸಾಲುಮರದ ತಿಮಕ್ಕ ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದರು. ತಿಮ್ಮಕ್ಕನವರ ಪುತ್ರ ಉಮೇಶ್ಗೆ ಗೃಹಸಚಿವ ಡಾ.ಪರಮೇಶ್ವರ್ ತ್ರಿವರ್ಣ ಧ್ವಜ ಹಸ್ತಾಂತರಿಸಿದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ‘ಸಾಲುಮರದ ತಿಮ್ಮಕ್ಕ’ ನಿನ್ನೆ (ನವೆಂಬರ್ 14, 2025) ಬೆಂಗಳೂರಿನ ಜಯನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ, ಕಲಾ ಗ್ರಾಮಕ್ಕೆ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭ ಗೃಹ ಸಚಿವ ಜಿ. ಪರಮೇಶ್ವರ್, ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಸಾಲುಮರದ ತಿಮ್ಮಕ್ಕ ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದವರು. ಆಲಮರದ ತಿಮ್ಮಕ್ಕ ಎಂದೂ ಪ್ರಸಿದ್ಧರಾದ ಇವರು, ಕರ್ನಾಟಕದ ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವಿನ 4.5 ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಡುವ ಮತ್ತು ಪೋಷಿಸುವ ಮೂಲಕ ವಿಶ್ವಪ್ರಸಿದ್ಧರಾದವರು. ಅನಕ್ಷರಸ್ಥೆಯಾಗಿದ್ದರೂ, ಅವರ ಕಾರ್ಯಕ್ರಮಗಳು ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟು, 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ತಮಗೆ ಮಕ್ಕಳಿಲ್ಲದ ದುಃಖವನ್ನು ಮರೆಯಲು ಮರಗಳನ್ನು ಮಕ್ಕಳಂತೆ ಭಾವಿಸಿ ಬೆಳೆಸಿದ ಅವರು, ಪರಿಸರದ ತಾಯಿ ಎಂದೇ ಖ್ಯಾತರಾದವರು.
ಅವರ ತಂದೆ ಚಿಕ್ಕರಂಗಯ್ಯ ಮತ್ತು ತಾಯಿ ವಿಜಯಮ್ಮ ಅವರ ಮಗಳಾಗಿ ಬೆಳೆದ ತಿಮ್ಮಕ್ಕ ಅವರಿಗೆ ಶಿಕ್ಷಣ ದೊರೆಯಲಿಲ್ಲ. ಬದಲಿಗೆ, ಹತ್ತಿರದ ಕಲ್ಲು ಗಣಿಯಲ್ಲಿ ದಿನಗೂಲಿ ಕೆಲಸ ಮಾಡಿ ಜೀವನ ನಡೆಸಿದರು. ಚಿಕ್ಕಯ್ಯ ಎಂಬ ದನಕಾಯುವವರನ್ನು ಮದುವೆಯಾದರು. ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರು. ಆದರೆ ಈ ದಂಪತಿಗೆ ಮಕ್ಕಳಿರಲಿಲ್ಲ. ಈ ದುಃಖವನ್ನು ನಿವಾರಿಸಲು, ಅವರು ರಸ್ತೆ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು, ಅವುಗಳನ್ನು ನೀರೂಣಿಸಿ, ಪೋಷಿಸಿ ಬೆಳೆಸಿದರು. ಈ ಕೆಲಸವು ಪರಿಸರ ಸಂರಕ್ಷಣೆಯ ಒಂದು ಮಹಾ ಅಭಿಯಾನವಾಯಿತು.
1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಮತ್ತು ವೀರಚಕ್ರ ಪ್ರಶಸ್ತಿ, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮಾನ್ಯತೆ ಪ್ರಮಾಣಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಶ್ಲಾಘನೆ ಪ್ರಮಾಣಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ (2000), ಗಾಡ್ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ (2006), ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ನ್ಯಾಷನಲ್ ಸಿಟಿಜನ್ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಸಂದವು.





