ಕೆ. ಮಂಜುಳಾ

ಸಹಜವಾಗಿ ತೀರಿಕೊಂಡ ಕಾಡು ಪ್ರಾಣಿಗಳನ್ನು ಎಲ್ಲಿಯೋ ಒಂದೆಡೆ ಮಣ್ಣು ಮಾಡುವ ಬದಲು ಅಂತಹ ಪ್ರಾಣಿಗಳ ಮುಖದಲ್ಲಿ ಜೀವಂತ ಭಾವ ತುಂಬುವಂತೆ ಮಾಡುವ ಕಲೆಯೇ ಟ್ಯಾಕ್ಸಿಡರ್ಮಿನಮ್ಮ ದೇಶದ ಏಕೈಕ ಪ್ರಾಣಿ ಪ್ರಸಾಧನ ಕಲೆಯ ಅಪರೂಪದ ಕಲಾವಿದೆ ಕೆ. ಮಂಜುಳಾ ಕಲೆಯ ಬಗ್ಗೆ ಹೀಗೆ ವಿವರಿಸುತ್ತಾರೆ……..?

ನಾವು ಸಾಮಾನ್ಯವಾಗಿ ಹಳೆಯ ಕಾಲದ ಚಲನಚಿತ್ರಗಳಿಗೆ ಹೋದಾಗ ಅದರಲ್ಲಿದ್ದ ದೊಡ್ಡ ದೊಡ್ಡ ಅರಮನೆ ಅಥವಾ ಬಂಗಲೆಗಳನ್ನು ತೋರಿಸುವಾಗ ಗೋಡೆಯ ಮೇಲೆ ನೇತು ಹಾಕಿದ ಪ್ರಾಣಿಗಳು ನೋಡ ಸಿಗುತ್ತವೆ. ಉದಾಹರಣೆಗೆ ಹುಲಿಯ ಮುಖ, ಕಾಡು ಕೋಣದ ಮುಖ, ಪಕ್ಕದಲ್ಲಿ ಅದರ ಎರಡು ಕೊಂಬುಗಳು, ಜಿಂಕೆಯ ಮುಖ ಮತ್ತು ಅದರ ಕೊಂಬು…. ಈ ರೀತಿ ವಿಭಿನ್ನ ಪ್ರಾಣಿಗಳ ಮುಖಗಳು ಕೊಂಬುಗಳ ಸಮೇತ ಗೋಡೆಗಳನ್ನು ಅಲಂಕರಿಸುತ್ತಿದ್ದವು.

ಅನೇಕ ಬಾರಿ ವೀಕ್ಷಕರಿಗೆ ಹೆದರಿಕೆ ಹುಟ್ಟಿಸಲು ಆ ಪ್ರಾಣಿಯ ಮುಖವನ್ನು ತೋರಿಸಿದಾಗ ಭಯವಾಗುವಂತಹ ಹಿನ್ನೆಲೆ ಸಂಗೀತವನ್ನೂ ಮೂಡಿಸುತ್ತಿದ್ದರು. ಆಗ ನೋಡುಗನಿಗೆ ನಿಜವಾಗಲೂ ಭಯವಾಗುತ್ತಿತ್ತು. ಆ ಪ್ರಾಣಿಗಳ ಮುಖವಾಡದ ಹಿನ್ನೆಲೆ ಏನು? ಅಲ್ಲಿ ನಿಜವಾದ ಪ್ರಾಣಿಗಳೇ ಇರುವಂತೆ ಕಾಣಿಸುತ್ತಿತ್ತಲ್ಲಾ, ಅವು ನಿಜವಾದವುಗಳೇ? ಅಥವಾ ಕೃತಕವಾಗಿ ಮಾಡಿದವುಗಳೇ ಎನ್ನುವ ಪ್ರಶ್ನೆ ನಮ್ಮಲ್ಲಂತೂ ಮೂಡುವುದು ಸಹಜ. ಹಾಗಾದರೆ ಇವುಗಳ ಹಿಂದಿನ ಸ್ವಾರಸ್ಯಕರ ಕಥೆ ಏನು? ಇದಕ್ಕೆಂದೆ ಇರುವ ವಿಶೇಷ ಪ್ರಾಣಿ ಪ್ರಸಾಧನ ಕಲೆಯಾದ ಟ್ಯಾಕ್ಸಿಡರ್ಮಿಯ ಬಗ್ಗೆ ನಮ್ಮ ದೇಶದ ಏಕೈಕ ಕಲಾವಿದೆ ಮೈಸೂರಿನ ಕೆ. ಮಂಜುಳಾ ತಿಳಿಸುತ್ತಾರೆ.

ಶಿಕಾರಿಯಿಂದ ಸಿಂಗಾರ

ನಮ್ಮ ಹಿಂದಿನ ರಾಜ ಮಹಾರಾಜರು ಬೇಟೆಗೆ (ಶಿಕಾರಿ)ಗೆ ಹೋಗಿ ತಾವು ಕೊಂದ ಒಂದೆರಡು ಪ್ರಾಣಿಗಳನ್ನು ತಮ್ಮ ವಿಜಯದ ಸಂಕೇತ ಎನ್ನುವಂತೆ ತೆಗೆದುಕೊಂಡು ಬಂದುದುಂಟು. ನಂತರ ಬ್ರಿಟಿಷರಿಗೂ ಬೇಟೆ ಎನ್ನುವುದು ಒಂದು ಮನರಂಜನೆಯಾಗಿತ್ತು. ಅದರ ಮಾಂಸ ತಿಂದು ಮಿಕ್ಕ ಚರ್ಮವನ್ನು ಬಳಸಿಕೊಂಡು ಮತ್ತೆ ಅದೇ ಪ್ರಾಣಿಯ ರೂಪವನ್ನೇ ಕೊಡುತ್ತಿದ್ದರು. ಅದನ್ನು ಶ್ರೀಮಂತರ ಮನೆಗಳಲ್ಲಿ ಗೋಡೆಗಳ ಮೇಲೆ ಅಲಂಕಾರವನ್ನಾಗಿ ಬಳಸಲಾಗುತ್ತಿತ್ತು.

ಮಂಜುಳಾ ಅವರ ಅಜ್ಜ ಬೇಟೆಗಾರ ಆಗಿದ್ದರಂತೆ. ಜುಗರ್ಟ್‌ ವ್ಯಾನಿಂಗನ್‌ ಎನ್ನುವ ಬ್ರಿಟಿಷ್‌ ಅಧಿಕಾರಿಯ ಜೊತೆಯಲ್ಲಿ ಇದ್ದರಂತೆ ಮತ್ತು ಅವರ ಜೊತೆ ಒಳ್ಳೆಯ ಸಂಬಂಧವಿತ್ತಂತೆ. ಅವರ ಮೂಲಕ ಆಗಿನ ಕಾಲದಲ್ಲಿ ಅವರ ತಂದೆ ಸಹ ಪ್ರಾಣಿಗಳ ಜೊತೆ ಇದ್ದು ಪ್ರಾಣಿ ಪ್ರಸಾಧನ ಕಲೆಯನ್ನು ಕಲಿತುಕೊಂಡರಂತೆ. ಈ ಕಲೆಯ ಹಿನ್ನೆಲೆ ಸತ್ತ ಪ್ರಾಣಿಯ ಚರ್ಮವನ್ನು ತೆಗೆದು ಅದಕ್ಕೆ ಮತ್ತೆ ನಿಜ ರೂಪವನ್ನು ಕೊಡುವುದು. ಇದನ್ನು ಟ್ಯಾಕ್ಸಿ ಡರ್ಮಿ ಎಂತಲೂ ಹೇಳುತ್ತಾರೆ. ಈ ಕಲೆ ಬಹಳ ಹಿಂದಿನದು 1700-1800 ರಿಂದ ಬಂದದ್ದು.

ಜುಗರ್ಟ್‌ ವ್ಯಾನಿಗನ್‌ ಸಂಸಾರದ ಜೊತೆ, ಅವರ ಆಶ್ರಯದಲ್ಲಿ ಇವರ ಕುಟುಂಬ ಬೆಳೆಯಿತು. ಆಗಿನ ಕಾಲದಲ್ಲಿ ಜನರನ್ನು ಪ್ರಾಣಿಗಳಿಂದ ಕಾಪಾಡುವ ದೃಷ್ಟಿಯಿಂದ ಶಿಕಾರಿಗೆ ಮಹಾರಾಜರೂ ಹೋಗುತ್ತಿದ್ದರು. ಇದು ಪ್ರಾಣಿಗಳು ಕಾಡಿನಲ್ಲಿ ವಿಪುಲವಾಗಿದ್ದ ಕಾಲ, ಆದರೆ ನಂತರ ಪ್ರಾಣಿಗಳ ಸಂತತಿ ಕಡಿಮೆ ಆಗತೊಡಗಿದಾಗ, ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರದ ಕಡೆಯಿಂದ ಪ್ರಾಣಿಗಳನ್ನು ಸಾಯಿಸುವ ಬಗ್ಗೆ ನಿಯಂತ್ರಣ ಹೇರಲಾಗುತ್ತದೆ ಮತ್ತು ಕಾಯಿದೆಯನ್ನೂ ತರಲಾಗುತ್ತದೆ.

ಶಿಕಾರಿ ನಿಷೇಧಿಸಲ್ಪಟ್ಟಾಗ

ಪರಿಣಾಮ ಶಿಕಾರಿ ಮಾಡುವ ಮೂಲಕ ಸತ್ತ ಪ್ರಾಣಿಗಳ ಚರ್ಮ ಸಿಗುಲಪದು ಇಲ್ಲವಾಗುತ್ತದೆ. ಆಗ ಈ ಕಂಪನಿ ಮುಚ್ಚಿ ಹೋಗುತ್ತದೆ. ಅದರ ಪರಿಣಾಮ ಸಹಜವಾಗಿ ಸತ್ತ ಪ್ರಾಣಿಗಳ ಚರ್ಮವನ್ನು ಕಾಪಾಡು ಅಥವಾ ಅದನು ಪ್ರಿಸರ್ವ್ ‌ಮಾಡುವ ಅಭ್ಯಾಸ ತಪ್ಪಿ ಹೋಗಿ, ಪ್ರಾಣಿ ಪ್ರಸಾಧನ ಕಲೆಯಿಂದ ಪ್ರಾಣಿಗಳ ಅವಶೇಷಗಳನ್ನು ಕಾಪಾಡುತ್ತಿದ್ದ ಇವರ ವ್ಯಾನಿಂಗನ್‌ ಕಂಪನಿ ಮುಚ್ಚಿಹೋಯಿತು. ಈಗ ಆ ಸ್ಥಳ ಮೈಸೂರಿನಲ್ಲಿ ಫೋರಂ ಮಾಲ್ ‌ಆಗಿದೆ.

ಪ್ರಾಣಿ ಪ್ರಸಾಧನ ಕಲೆ

ಪ್ರಾಣಿ ಪ್ರಸಾಧನ ಕಲೆಯನ್ನು ಮೈಸೂರಿನ ವ್ಯಾನಿಂಗನ್‌ ನ ಕಂಪನಿ ಮಾತ್ರ ಮಾಡುತ್ತಿದ್ದುದರಿಂದ ಎಲ್ಲೆಲ್ಲಿ ಪ್ರಾಣಿಗಳ ಸಾಲವಾದರೂ ಅವು ಮೈಸೂರಿನ ಕಂಪನಿಗೇ ಬರುತ್ತಿತ್ತು. ಆದರೆ ಸರ್ಕಾರ ಹೊಸದಾಗಿ ಮಾಡಿದ ಕಾಯಿದೆಯಿಂದ ಸತ್ತ ಪ್ರಾಣಿಯನ್ನು ನಿಜರೂಪಕ್ಕೆ ತರುವ 1700ನೇ ಇಸವಿಯಿಂದಲೂ ಇದ್ದ ಈ ಕಲೆ ಮಾಯವಾಗತೊಡಗಿತು. ಭಾರತದಲ್ಲಿ ಎಲ್ಲಿಯೇ ಪ್ರಾಣಿಗಳ ಮರಣವಾದರೂ ಸರಿ, ವಿದೇಶದಿಂದಲೂ ಪ್ರಾಣಿಗಳ ಚರ್ಮ ಮತ್ತು ಮೂಳೆಗಳು ಬರುತ್ತಿತ್ತು.

1900-2000ರಲ್ಲಿ ಹೊಸ ಕಾಯಿದೆಯ ನಂತರ ಕಂಪನಿ ಮುಚ್ಚಿ ಹೋಯಿತು. ಅನೇಕ ಕೆಲಸಗಾರರಿಗೆ ಕೆಲಸ ಹೋಯಿತು. ಹಿಂದೆ ಬ್ರಿಟಿಷರ ಕಾಲದಲ್ಲಿ ಅವರಿಗೆ ಪರವಾನಗಿ ಇತ್ತು. ಆದರೆ ಈ ಪರವಾನಗಿಯ ದುರುಪಯೋಗವಾಗುತ್ತದೆ ಎನ್ನುವ ಉದ್ದೇಶದಿಂದ ಕಾಯಿದೆ ತರಲಾಯಿತು. ಆದರೆ ಮಂಜುಳಾ ಆ ಕಲೆಯನ್ನು ಜೀವಂತಗೊಳಿಸುವ ಉದ್ದೇಶದಿಂದ ಸತ್ತ ಪ್ರಾಣಿಗಳನ್ನು ಪುನರುಜ್ಜೀವನಗೊಳಿಸುವ ಕ್ರಿಯೆ ಮುಂದುವರಿಸಿದ್ದಾರೆ. ಇವು ಅನೇಕ ಮ್ಯೂಸಿಯಂಗಳಲ್ಲೂ ಇವೆ.

ಆದರೆ ಅದನ್ನು ಕಾಪಾಡು ಪ್ರಕ್ರಿಯೆ ಮುಂದುವರಿದು ಬಂದಿಲ್ಲ. ಅನೇಕ ಮ್ಯೂಸಿಯಂಗಳಲ್ಲಿ ಇವುಗಳ ನಿರ್ವಹಣೆ ಸರಿಯಾಗಿ ಆಗಿಲ್ಲ. ಆದ್ದರಿಂದ ಅದನ್ನು ಪುನರುಜ್ಜೀನಗೊಳಿಸುವುದೇ ನಮ್ಮ ಉದ್ದೇಶ. ಇನ್ನು ಅತಿ ಹೆಚ್ಚಾಗಿ ಆರ್ಮಿಗಳಿಗೆ ಮಾಡಿ ಕೊಡ್ತಾ ಇದ್ದೀವಿ. ಏಕೆಂದರೆ ರಾಜ ಮಹಾರಾಜರು ಮತ್ತು ಸರ್ಕಾರ ಆರ್ಮಿಯರಿಗೆ ಟ್ರೋಫಿಗಳ ರೂಪದಲ್ಲಿ ಇವುಗಳನ್ನು ನೀಡುತ್ತಿದ್ದರು. ಅವರು ಬಿಟ್ಟುಹೋದ ಮನೆಗಳಲ್ಲಿ ಸಹ ಈ ಪ್ರಾಣಿಗಳು ದೊರಕುತ್ತಿದ್ದವು. ಉಳಿಸಿಕೊಳ್ಳಬೇಕಾದ ಕಲೆ ಮೈಸೂರಿನ ಹಿಸ್ಟರಿ ಮ್ಯೂಸಿಯಂ, ಬೆಂಗಳೂರಿನ ಮ್ಯೂಸಿಯಂ, ಬೆಂಗಳೂರು ಕ್ಲಬ್‌, ಗಾಲ್ಫ್ ಕ್ಲಬ್‌, ಎಲ್ಲೆಡೆಯೂ ಇರುವ ಮಾಡಿದ ಟ್ರೋಫಿಗಳು ನೋಡ ಸಿಗುತ್ತವೆ. ಆದರೆ ನಿರ್ವಹಣೆ ಇಲ್ಲ. ಪ್ರಾಣಿಗಳು ಓಡುವಾಗ ಅದರ ಮುಖ ಚಹರೆ ಹೇಗಿರುತ್ತೆ? ನಿಂತಿರುವಾಗ ಹೇಗಿರುತ್ತೆ? ಹಂಟಿಂಗ್ ಅರ್ಥಾತ್‌ ಬೇಟೆಯಾಡುವಾಗ ಅದರ ಮುಖ ಭಾವ, ಒಂದು ಪ್ರಾಣಿ ನೀರು ಕುಡಿಯುವಾಗ ಅದನ್ನು ಮತ್ತೊಂದು ಪ್ರಾಣಿ ಆಕ್ರಮಣ ಮಾಡಲು ಬಂದರೆ ಅದರ ಮುಖಭಾವ ಹೇಗಿರುತ್ತದೆ ಎನ್ನುವುದನ್ನು ವಿವರವಾಗಿ ಮೂಡಿಸುವ ಕಲೆ ಇವರಿಗೆ ಕರಗತವಾಗಿದೆ. ಇವರು ಮಾಡುವುದು ಬರಿಯ ಗೊಂಬೆ ಅಲ್ಲ, ಜೀವಂತ ಭಾವಗಳನ್ನು ತುಂಬಿದ ಪ್ರಾಣಿ ಅಲ್ಲಿ ಗೋಚರಾಗುತ್ತದೆ!

ಈ ಕಲೆ ಹೀಗೆಯೇ ನಶಿಸಿ ಹೋದರೆ ಪ್ರಾಣಿಗಳ ವಿಭಿನ್ನ ಮುಖಭಾವಗಳನ್ನು ಶಾಲೆಗಳ ಪಾಠದಲ್ಲಿ ಅಥವಾ ಯಾರಾದರೂ ಇದರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಈಗ ಸಾಧ್ಯವಿಲ್ಲ. ಪ್ರಾಣಿಗಳನ್ನು ಕಾಪಾಡುವ ದೃಷ್ಟಿಯಿಂದ ಕಾಯಿದೆ ಬಂತು. ಆದರೆ ಕಾಡಿನಲ್ಲಿ ಸಹಜವಾಗಿಯೇ ಸತ್ತ ಪ್ರಾಣಿಗಳನ್ನೂ ಸಹ ಕಾಪಾಡುತ್ತಿಲ್ಲ. ಫಾರೆಸ್ಟ್ ಡಿಪಾರ್ಟ್‌ ಮೆಂಟ್‌ ಈ ಬಗ್ಗೆ ಗಮನ ತೆಗೆದುಕೊಂಡಿಲ್ಲ. ಅದರ ನಿರ್ವಹಣೆ ಇಲ್ಲ. ಗೋಡೌನ್‌ ನಲ್ಲಿ ತುಂಬುತ್ತಿದ್ದಾರೆ. ಬದಲಾಗಿ ನಮಗೆ ನೀಡಿದರೆ ಅದನ್ನು ನಾವು ಟ್ಯಾಕ್ಸಿಡರ್ಮಿ ಕಲೆಯ ಮೂಲಕ ಅದನ್ನು ಪುನರುಜ್ಜೀವನಗೊಳಿಸ ಬಯಸುತ್ತೇವೆ. ಬಹಳಷ್ಟು ಜನರಿಗೆ ಈ ಚರ್ಮ ಪ್ರಸಾಧನ ಕಲೆಯ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಾರೆ ಮಂಜುಳಾ.

IMG-20220625-220120

ಯಾರಿಗೆ ಪ್ರಯೋಜನ?

ಮೈಸೂರಿನ ಅರಮನೆಯಲ್ಲಿ 97 ಟ್ರೋಫಿಗಳಿವೆ. ಮೌಂಟೆಡ್‌ ಹೆಡ್‌, ಘೇಂಡಾಮೃಗ, ಜಿರಾಫೆ, ಸಿಂಹ ಅಟ್ಯಾಕ್‌ ಮಾಡುವ ರೀತಿ, ಒಟ್ಟಾರೆ ಲಾರ್ಡ್‌ ಮೌಂಟ್‌ ಬೆಟನ್‌ ಕಾಲದವುಗಳು. ಒಂದಕ್ಕಿಂತ ಒಂದು ವಿಭಿನ್ನಾಗಿವೆ. ಒಂದಷ್ಟು ವರ್ಷಗಳಾದ ಮೇಲೆ ಅದರ ಚರ್ಮ ಗಟ್ಟಿಯಾಗಿ ಬಿರುಕು ಬಿಟ್ಟಿರುತ್ತದೆ. ಅದನ್ನು ಪುನರುಜ್ಜೀಗೊಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಫಾರೆಸ್ಟ್ ಡಿಪಾರ್ಟ್‌ ಮೆಂಟ್‌ ನಲ್ಲಿ ಅಷ್ಟೊಂದು ಬೆಲೆ ಬಾಳುವಂಥದನ್ನು ಗೋಡೌನ್‌ ನಲ್ಲಿ ಹಾಕಿದ್ದಾರೆ. ಅವುಗಳನ್ನೆಲ್ಲಾ ಸೇರಿಸಿದರೆ ಕೋಟಿಗಟ್ಟಲೆ ಆಗುತ್ತದೆ. ಅವುಗಳನ್ನೆಲ್ಲಾ ಸೇರಿಸಿ ಒಂದು ಮ್ಯೂಸಿಯಂ ಮಾಡಬಹುದು. ಇಲ್ಲವಾದಲ್ಲಿ ಮಿಲಿಟರಿ ಕಾಲೇಜಿನಲ್ಲಿ, ವಿಜ್ಞಾನದ ಪಾಠ ಮಾಡುವಗ ಇದನ್ನು ಬಳಸಿಕೊಳ್ಳಬಹುದು. ದೂರದಿಂದ ಬರುವ ಪ್ರಾಣಿಗಳನ್ನು ನಾವು ಯಾವ ರೀತಿ ಕಾಪಾಡಬಹುದು ಎನ್ನುವ ಬಗ್ಗೆಯೂ ತಿಳಿಸಿ ಕೊಡುತ್ತೇವೆ.

ಅಪರೂಪದ ಕಲೆ

ಒಟ್ಟಾರೆ ನಶಿಸಿ ಹೋಗುತ್ತಿರುವ ಕಲೆ ಇದಾಗಿದೆ. ಬಹಳ ಪುರಾತನವಾದ ಈ ಅಪರೂಪದ ಕಲೆಯನ್ನು ನಾವು ಮಾಡುವಷ್ಟು ಚಂದವಾಗಿ ವಿದೇಶಗಳಲ್ಲೂ ಯಾರೂ ಮಾಡುತ್ತಿಲ್ಲ. ವಿದೇಶಗಳಲ್ಲಿ ಇದಕ್ಕೆ ಪರವಾನಗಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ಟ್ಯಾಕ್ಸಿ ಡರ್ಮಿಯ ಮೂಲಕ ಉಳಿಸಿದ್ದು ಕೇವಲ ನಲವತ್ತು ವರ್ಷ ಇದ್ದರೆ, ನಾವು ಮಾಡಿದ್ದು 150 ವರ್ಷ ಇರುತ್ತದೆ. ಮುಂದಿನ ಜನಾಂಗಕ್ಕೆ ಹಳೆಯ ಅಪರೂಪದ ತಳಿಗಳನ್ನು ನೋಡುವ ಅವಕಾಶವಿರುತ್ತದೆ. ಆರ್ಮಿ ಮತ್ತು ಮ್ಯೂಸಿಯಂಗಳಿಂದಷ್ಟೇ ಇವರಿಗೆ ಕೆಲಸ ಸಿಗುತ್ತದೆ. ಇಡೀ ದೇಶದಲ್ಲಿ ಈ ಕಲೆಯನ್ನು ಬಲ್ಲವರು ಮತ್ತು ರೂಢಿಸಿಕೊಂಡ ಏಕೈಕ ಮಹಿಳೆ ಮಂಜುಳಾ. ಈ ಕಲೆಯನ್ನು ಬಲ್ಲವರು ಬಹಳ ಕಡಿಮೆ ಜನ. ಪ್ರಾಣಿಗಳನ್ನು ಸುಮ್ಮನೆ ಸುಟ್ಟು ಹಾಕುವ ಬದಲು ಅದಕ್ಕೊಂದು ನೆಲೆ ನೀಡಿ, ನಮಗೆ ಕೆಲಸ ಕೊಟ್ಟರೆ ನಾವು ಕೆಲಸ ಮಾಡ್ತೀವಿ. ನಮ್ಮ ಗುಂಪು ಅಳಿಸಿ ಹೋದರೆ ಮುಂದೆ ಈ ಕಲೆ ನಶಿಸಿ ಹೋಗುತ್ತದೆ. ಪಿ.ಎಚ್‌.ಡಿ. ವಿದ್ಯಾರ್ಥಿಗಳು ಮಾಹಿತಿ ತೆಗೆದುಕೊಳ್ಳಲು ಬರುತ್ತಾರೆ. ನೆದರ್‌ ಲ್ಯಾಂಡಿನಿಂದ ಬಂದು ಈ ಕಲೆಯ ಬಗ್ಗೆ ತಿಳಿದುಕೊಂಡು ಹೋಗಿದ್ದಾರೆ. ನಮ್ಮ ದೇಶದಲ್ಲಿ ಟ್ಯಾಕ್ಸಿಡರ್ಮಿಯ ಬಗ್ಗೆ ಒಂದು ಮ್ಯೂಸಿಯಂ ತೆರೆದರೆ ಜನರಿಗೆ ವಿಷಯ ತಿಳಿಯುತ್ತದೆ ಜೊತೆಗೆ ಸರ್ಕಾರಕ್ಕೆ ಲಾಭ ಆಗುತ್ತದೆ. 44ರ ಹರೆಯದ ಈ ಮಹಿಳೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ಟಿ.ವಿ.9 ನಿಂದ ಹೆಮ್ಮೆಯ ಕನ್ನಡತಿ ಎನ್ನುವ ಪ್ರಶಸ್ತಿ ಲಭಿಸಿದೆ. ಆದರೆ ಇವರಿಗೆ ಪ್ರಶಸ್ತಿಗಿಂತ ಈ ಕಲೆಯನ್ನು ಉಳಿಸಿಕೊಳ್ಳುವ ಬಗ್ಗೆ ಆಶಯವಿದೆ. ಇವರ ಆಸೆ  ಕೈಗೂಡಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ