ಇಸ್ರೋ-ನಾಸಾದಿಂದ (ISRO-NASA) ಜಂಟಿಯಾಗಿ ಮತ್ತೊಂದು ಸ್ಯಾಟಲೈಟ್ ಇಂದು (ಜುಲೈ 30)ಉಡಾವಣೆ ಆಗಲಿದೆ.
ನಿಸಾರ್ ಹೆಸರಿನ ಭೂಮಿಯನ್ನು ಬಾಹ್ಯಾಕಾಶದಿಂದ ರೆಕಾರ್ಡ್ ಮಾಡುವ ಸ್ಯಾಟಲೈಟ್ ಉಡಾವಣೆ ಆಗಲಿದೆ. ಇಂದು ಸಂಜೆ (ಜುಲೈ 30) 5.40ಕ್ಕೆ ನಿಸಾರ್ ಸ್ಯಾಟಲೈಟ್ ಉಡಾವಣೆ ಆಗಲಿದೆ. ಆಂಧ್ರದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ಯಾಟಲೈಟ್ ಉಡಾವಣೆ ಆಗಲಿದ್ದು, ಜಿಎಸ್ಎಲ್ವಿ- ಎಂಕೆ2 ಮೂಲಕ ಸ್ಯಾಟಲೈಟ್ ಉಡಾವಣೆ ಆಗಲಿದೆ.
12,500 ಕೋಟಿ ರೂ. ವೆಚ್ಚ: ಇದು ಬರೋಬ್ಬರಿ 12,500 ಕೋಟಿ ರೂಪಾಯಿ ವೆಚ್ಚದಲ್ಲಿ ಉಡಾವಣೆ ಆಗುತ್ತಿರುವ ಸ್ಯಾಟಲೈಟ್. ಆದರೆ ಭಾರತವು 788 ಕೋಟಿ ರೂ. ವೆಚ್ಚ ಮಾಡುತ್ತಿದೆ. ಉಳಿದ ಬಾಕಿ ಹಣವನ್ನು ಅಮೆರಿಕಾದ ನಾಸಾ ವೆಚ್ಚ ಮಾಡುತ್ತಿದೆ. ನಿಸಾರ್, ಬಾಹ್ಯಾಕಾಶದಿಂದ ಭೂಮಿಯನ್ನು ಸೆರೆ ಹಿಡಿಯಲಿದೆ. ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯನ್ನು ಸೆರೆ ಹಿಡಿಯಲಿದೆ. ಇದರ ಡಾಟಾವನ್ನು ಓಪನ್ ಸೋರ್ಸ್ ಮೂಲಕ ಎಲ್ಲ ವಿಜ್ಞಾನಿಗಳಿಗೂ ಕಳುಹಿಸಲಿದೆ,
ನಿಸಾರ್ ಸ್ಯಾಟಲೈಟ್ ಅನ್ನು ನಾಸಾದ ಎಲ್ ಬ್ಯಾಂಡ್ ರಾಡಾರ್ ಮತ್ತು ಇಸ್ರೋದ ಎಸ್ ಬ್ಯಾಂಡ್ ರಾಡಾರ್ ಬಳಸಿ ಉಡಾವಣೆ ಮಾಡುತ್ತಿರುವುದು ವಿಶೇಷ. ಎರಡು ಬೇರೆ ಬೇರೆ ಪ್ರಿಕ್ವೆನ್ಸಿ ಹೊಂದಿರುವ ಸಿಂಥೆಟಿಕ್ ಅಪರಚರ್ ರಾಡಾರ್ಗಳನ್ನು ಒಗ್ಗೂಡಿಸಿ ಸ್ಯಾಟಲೈಟ್ ಉಡಾವಣೆ ಮಾಡಲಾಗುತ್ತಿದೆ. ಇದರಿಂದ ಹಗಲು ಮತ್ತು ರಾತ್ರಿ ಎರಡೂ ವೇಳೆಯೂ ಭೂಮಿಯ ಮೇಲೆ ನಿಸಾರ್ ನಿಗಾ ಇಡಲಿದೆ. ಎಲ್ -ಬ್ಯಾಂಡ್ ಜೀವಸಂಕುಲ, ಬಂಡೆ, ಮರದ ಟೊಂಗೆಗಳ ಮೇಲೆ ನಿಗಾ ಇಟ್ಟರೆ, ಎಸ್ -ಬ್ಯಾಂಡ್ ಎಲೆಗಳು, ಭೂಮಿಯ ಮೇಲ್ಪದರ, ಮೋಡಗಳ ಮೇಲೆ ಕಣ್ಣಿಡುತ್ತದೆ. ಹೀಗೆ ಒಂದೇ ಪ್ರದೇಶದ ಮಾಹಿತಿಯನ್ನು ಎರಡು ಪ್ರತೇಕ ರಾಡಾರ್ಗಳ ಮೂಲಕ ಸಂಗ್ರಹಿಸಲಾಗುತ್ತೆ. ಈ ನಿಸಾರ್ ಸ್ಯಾಟಲೈಟ್ ನಿಂದ ಭೂಮಿಯ ಮೇಲಿನ ಬದಲಾವಣೆಗಳನ್ನು ಗಮನಿಸಬಹುದು.
ಇದರಿಂದ ಭೂಮಿಯ ಒಳಭಾಗದ ಭೂಕಂಪದ ಫಾಲ್ಟ್ ಶಿಫ್ಟ್ ಆಗುವುದನ್ನು ಗಮನಿಸಬಹುದು. ಭೂಮಿಯ ಮೇಲ್ಭಾಗ, ಒಳಭಾಗದ ಬದಲಾವಣೆಗಳನ್ನು ಅರ್ಥ ಮಾಡಿಕೊಂಡು ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಭೂಮಿಯ ಬದಲಾವಣೆಗಳ ಮಾಹಿತಿ ಸಂಗ್ರಹಿಸುವ ನಿಸಾರ್ ಅದನ್ನು 12 ದಿನಕ್ಕೊಮ್ಮೆ ಭೂಮಿಗೆ ಕಳಿಸುತ್ತದೆ. ಇದಕ್ಕಾಗಿ ಸ್ವೀಪ್ ಸಾರ್ ತಂತ್ರಜ್ಞಾನ ಬಳಸಲಾಗಿದೆ.
ಉಪಗ್ರಹದಲ್ಲಿ ಈ ತಂತ್ರಜ್ಞಾನ ಬಳಕೆ ಇದೇ ಮೊದಲು. ನಿಸಾರ್, ತನ್ನಲ್ಲಿರುವ ಸ್ವೀಪ್ ಸಾರ್ ತಂತ್ರಜ್ಞಾನ ಬಳಸಿ, 747 ಕಿ.ಮೀ.ಎತ್ತರದಿಂದ ಭೂಮಿಯ ಮೇಲೆ ನಿಗಾ ವಹಿಸಲಿದೆ. ಸ್ವೀಪ್ ಸಾರ್ ತಂತ್ರಜ್ಞಾನ ಅಂದರೆ ಅತ್ಯಾಧುನಿಕ ರಾಡಾರ್ ಇಮೇಜಿಂಗ್ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನದ ಬಳಕೆಯಿಂದ ನಿಸಾರ್ ಉಪಗ್ರಹ ಒಂದು ಭಾರಿ ಕಕ್ಷೆಗೆ ಸುತ್ತು ಬರುವಷ್ಟರಲ್ಲಿ 242 ಕಿ.ಮೀ. ಭೂಮಿ ಅಥವಾ ಸಾಗರ ಪ್ರದೇಶದ ಡೇಟಾವನ್ನು ಸೆರೆ ಹಿಡಿಯುತ್ತದೆ. 3-10 ಮೀಟರ್ ರೆಸಲ್ಯೂಷನ್ ಹೊಂದಿರುವ ಈ ಉಪಗ್ರಹವು, ಅಷ್ಟು ಸಣ್ಣ ಪ್ರದೇಶದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಮಾಡಬಲ್ಲದು. ನಿಸಾರ್ನ ಪ್ರತಿ ಪಿಕ್ಸೆಲ್ನಲ್ಲಿ ಟೆನಿಸ್ ಕೋರ್ಟ್ನ ಅರ್ಧ ಗಾತ್ರ ಪ್ರದೇಶ ಸೆರೆಯಾಗುವುದು ವಿಶೇಷ. ಪ್ರತಿ 12 ದಿನಗಳಿಗೊಮ್ಮೆ ಹವಾಮಾನ ವರದಿ ಲಭ್ಯವಾಗುವುದರಿಂದ ನೈಸರ್ಗಿಕ ವಿಕೋಪಗಳನ್ನು ಮೊದಲೇ ಪತ್ತೆ ಮಾಡಿ, ಮುಂಜಾಗ್ರತೆ ವಹಿಸುವುದು ಸಾಧ್ಯವಾಗುತ್ತದೆ.