ಸರಸ್ವತಿ ಜಾಗೀರ್ದಾರ್*
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಂ ದೇವರಾಜ್ ನಾಯಕನಾಗಿ ಹಾಗೂ “ದಿಯಾ” ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ “S/O ಮುತ್ತಣ್ಣ” ಚಿತ್ರ ಇದೇ ಸೆಪ್ಟೆಂಬರ್ 12 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಚಿತ್ರತಂಡ ಜಯಂತ ಕಾಯ್ಕಿಣಿ ಅವರು ಬರೆದಿರುವ “ಕರೆದರೆ ಹಾಗೆಲ್ಲಾ ಬರಲಾರೆ ನಾನು” ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ ಮಾಡುವುದರೊಂದಿಗೆ ದೀಪ್ತಿ ಸುರೇಶ್ ಅವರ ಜೊತೆಗೆ ಈ ಹಾಡನ್ನು ಹಾಡಿದ್ದಾರೆ. ಮಾಧ್ಯಮದವರ ಸಮ್ಮುಖದಲ್ಲಿ ಈ ಹಾಡನ್ನು ಬಿಡುಗಡೆ ಮಾಡಿದ ಚಿತ್ರತಂಡದ ಸದಸ್ಯರು ನಂತರ ಹಾಡಿನ ಕುರಿತು ಮಾತನಾಡಿದರು.
ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಆರಂಭದಿಂದಲೂ ತಾವೆಲ್ಲಾ ನೀಡುತ್ತಿರುವ ಪ್ರೋತ್ಸಾಹ ಹಾಗೂ ಚಿತ್ರತಂಡದವರು ನೀಡಿದ ಸಹಕಾರಕ್ಕೆ ಧನ್ಯವಾದ. ಚಿತ್ರ ಬಿಡುಗಡೆಗೆ ಮುನ್ನ ನಮ್ಮ ಚಿತ್ರದ ಹಾಡೊಂದನ್ನು ಇಂದು ಅನಾವರಣ ಮಾಡಿದ್ದೇವೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್, ಟೀಸರ್ ಹಾಗೂ ಹಾಡುಗಳ ಮೂಲಕ “S/O ಮುತ್ತಣ್ಣ” ನಿಮ್ಮೆಲ್ಲರ ಗಮನ ಸೆಳೆದಿದ್ದಾನೆ. ಚಿತ್ರ ಕೂಡ ನಿಮ್ಮೆಲ್ಲರಿಗೂ ಮೆಚ್ಚುಗೆಯಾಗಲಿದೆ ಎಂದು ನಿರ್ದೇಶಕ ಶ್ರೀಕಾಂತ್ ಹುಣಸೂರು ತಿಳಿಸಿದರು.
“s/o ಮುತ್ತಣ್ಣ*, ಅಪ್ಪ – ಮಗನ ಬಾಂಧವ್ಯದ ಚಿತ್ರ. ರಂಗಾಯಣ ರಘು ಅವರು ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಜೊತೆಗೆ ನಟನೆ ಮಾಡಿದೆ ಎಂದು ಅನಿಸಲೇ ಇಲ್ಲ.
ನಮ್ಮ ತಂದೆಯ ಜೊತೆಗೆ ಕಾಲ ಕಳೆದ ಹಾಗೆ ಇತ್ತು. ಇಡೀ ತಂಡ ನೀಡಿಸ ಪ್ರೀತಿಗೆ ನನ್ನ ಧನ್ಯವಾದ. ಸೆಪ್ಟೆಂಬರ್ 12 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಸುಮಧುರ ಹಾಡೊಂದನ್ನು ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತಿದ್ದೇವೆ. ಆರು ವರ್ಷಗಳ ಬಳಿಕ ನನ್ನ ಚಿತ್ರ ಬಿಡುಗಡೆಯಾಗುತ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಪ್ರಣಾಂ ದೇವರಾಜ್.
“s/o ಮುತ್ತಣ್ಣ’ ಚಿತ್ರದಲ್ಲಿ ನಟಿಸಿರುವುದಕ್ಕೆ ನಾಯಕಿ ಖುಷಿ ರವಿ ಸಹ ಖುಷಿಪಟ್ಟರು. ಛಾಯಾಗ್ರಾಹಕ ಸ್ಕೇಟಿಂಗ್ ಕೃಷ್ಣ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಸಹ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಪ್ರಣಾಂ ದೇವರಾಜ್, ಖುಷಿ ರವಿ, ರಂಗಾಯಣ ರಘು, ತಬಲ ನಾಣಿ , ಸುಧಾ ಬೆಳವಾಡಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.