ನರೇಂದ್ರ ಮೋದಿಯವರ ಸಾವಿರ ಭಾಷಣಗಳ ದಾವೆಯ ನಡುವೆಯೂ, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಕಾಟ ಕಡಿಮೆ ಆಗಿಲ್ಲ ಹಾಗೂ ಕಲಂ 370 ಬಹುಶಃ ಸಡಿಲ ಆಗಿರುವಂತಿದೆ, ಆದರೆ ಅಲ್ಲಿ ಭಯೋತ್ಪಾದಕರಂತೂ ಖಂಡಿತಾ ಕಡಿಮೆಯಾಗಿಲ್ಲ. ಕಳೆದ ನವೆಂಬರ್ ಕೊನೆಯ ವಾರದಲ್ಲಿ ಭಯೋತ್ಪಾದಕರ ದಾಳಿ ಸತತ ಮುಂದುವರಿದಿತ್ತು. ಅವರು ಪ್ಯಾರಾಟ್ರೂಪರ್ ಸಚಿನ್ ವಾರ್ ಮತ್ತು ಕ್ಯಾಪ್ಟನ್ ಎಂ.ವಿ. ಪ್ರಾಂಜ್, ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್ ಹಾಗೂ ಲಾನ್ಸ್ ನಾಯಕ್ ಸಂಜಯ್ ಬಿಷ್ಟ್ ರನ್ನು ನಿರ್ದಯವಾಗಿ ಕೊಂದಿದ್ದಾರೆ.
ಸರ್ಕಾರ ಸಂವಿಧಾನದ ಕಲಂ 370 ಜೊತೆ ಹೀಗೆ ಮಾಡಬಾರದಿತ್ತು, ನಮ್ಮ ದೇಶದ ಯಾವ ಸೈನಿಕರೂ ಭಯೋತ್ಪಾದಕರಿಂದ ಸಾಯದೆ ಇದ್ದಾಗ ಮಾತ್ರ, ಈ ಕ್ರಮ ಯಶಸ್ವಿ ಎನ್ನಬಹುದಿತ್ತು. ಈಗ ಸೈನಿಕರಷ್ಟೇ ಸತ್ತಿದ್ದಾರೆ, ಈ ಹಾಳು ಭಯೋತ್ಪಾದಕರು ಸಾಮಾನ್ಯ ಜನರನ್ನು ಉಳಿಸುತ್ತಾರೆಂದು ಏನು ಗ್ಯಾರಂಟಿ? ವ್ಯತ್ಯಾಸ ಇಷ್ಟೆ, ಮೋದಿಮಯಂ ಆಗಿರುವ ಮೀಡಿಯಾ ಇಂಥ ಸುದ್ದಿ ಬಿತ್ತರಿಸುವ ಬದಲಿಗೆ, ಇಸ್ರೇಲ್ V/S ಗಾಝಾದ ಯುದ್ಧ ತೋರಿಸುತ್ತಿರುತ್ತದೆ, ಚುನಾವಣೆಯ ಪ್ರಚಾರದ ಭರಾಟೆ ಇದ್ದೇ ಇರುತ್ತದೆ.

ಇಲ್ಲಿನ ವಿಡಂಬನೆ ಎಂದರೆ, ಪ್ರತಿ ಸೈನಿಕರ ದುಃಖಾಂತ್ಯದ ನಂತರ ಬಿಜೆಪಿ ನೇತಾರರು, ಫೋಟೋಗ್ರಾಫರ್ ಗಳ ದಂಡು ಕಟ್ಟಿಕೊಂಡು, ಹುತಾತ್ಮರ ಮನೆಗೆ ಚೆಕ್ ಕೊಂಡು ಹೋಗುತ್ತಾರೆ ಹಾಗೂ ಸತ್ತರ ದುಃಖ ಸಂಕಟಗಳನ್ನು ತಮ್ಮ ಪಬ್ಲಿಸಿಟಿಯ ಅಸ್ತ್ರವಾಗಿಸಿಕೊಳ್ಳುತ್ತಾರೆ. ಈ ನೇತಾರರು ಹುತಾತ್ಮನ ಪತ್ನಿ, ತಾಯಿ, ತಂಗಿಯರಿಗೆ ಚೆಕ್ ಕೊಡುತ್ತಾ, ತಾವು ಪೋಸ್ ನೀಡುತ್ತಾ ನಿಂತುಬಿಡುತ್ತಾರೆ. ತಾವು ಹುತಾತ್ಮರಿಗೆ ಎಂಥ ಮಹಾನ್ ಸಹಾಯ ಮಾಡುತ್ತಿದ್ದೇವೆ ಎಂದು ಜನತೆ ಎದುರು ಬೀಗುತ್ತಾರೆ. 2-3 ತಿಂಗಳ ನಂತರ ಮೃತ ಸೈನಿಕರ ಪರಿವಾರದವರ ಜೊತೆ ಏನು ನಡೆಯಿತು ಎಂದು ಯಾರಿಗೂ ಏನೂ ಗೊತ್ತಾಗೋಲ್ಲ, ಏಕೆಂದರೆ ಮಿಲಿಟರಿ ಕಛೇರಿಗಳಲ್ಲಿ ಕಾನೂನಿನ ಶಾಸನ ಅಷ್ಟು ಕಠೋರವಾಗಿರುತ್ತದೆ.
ದೊಡ್ಡ ವಿಷಯ ಅಂದ್ರೆ, ಕಲಂ 370 ತೊಲಗಿದ ನಂತರ ಭಯೋತ್ಪಾದಕರಿಗೆ ಅಲ್ಲೇನು ಕೆಲಸ? ಬಿಜೆಪಿ ಸದಾ ಪ್ರಚಾರ ಮಾಡುವುದೆಂದರೆ, ಭಯೋತ್ಪಾದನೆಯ ಬುಡದಲ್ಲೇ ಈ ಕಲಂ 370 ಇದೆ, ಇದನ್ನು ಕಿತ್ತು ಹಾಕಿದ ನಂತರ ನಮ್ಮ ಸೈನಿಕರು ಹೀಗೆ ಸಾಯಬೇಕೇಕೆ? ಹಾಗಾದರೆ ಇಲ್ಲಿನ ಮುಖ್ಯ ದೋಷ ಈ ಪ್ರಚಾರದ್ದೇ ಆಗಿದೆ. ಇದನ್ನು ಅಚ್ಚುಕಟ್ಟಾಗಿ ರೂಪಿಸಿ, ಟಿವಿಗಳಲ್ಲಿ ಪ್ರದರ್ಶಿಸುವ ಪರಿಯನ್ನು ನೋಡಬೇಕು!
ಹೀಗೆ ಸೇನೆಯಲ್ಲಿ ನೌಕರಿಗೆಂದು ಸೇರುವವರು ಘಳಿಗೆಗೊಂಡು ಗಂಡಾಂತರ ಎದುರಿಸುತ್ತಾ, ಅಂಗೈಯಲ್ಲೇ ಪ್ರಾಣ ಹಿಡಿದುಕೊಂಡು ಇರಬೇಕಾಗುತ್ತದೆ. ಅವರಿಗೂ ಸಹ ತಮ್ಮ ಸರ್ಕಾರ ತಮಗೆ ಸಮರ್ಪಕ ಸಮರ್ಥನೆ ನೀಡಲಿ ಎಂದಿರುವುದಿಲ್ಲವೇ? ಇವರ ಸಾವಿಗೆ ಜನತೆ ಕಣ್ಣೀರು ಮಿಡಿಯುವುದು ಸರಿ, ಆದರೆ ಇದನ್ನೇ ಪ್ರಚಾರದ ಅಸ್ತ್ರ ಮಾಡಿಕೊಂಡರೆ…..? ದೊಡ್ಡದಾಗಿ ಭಾಷಣಗಳಲ್ಲಿ ಮಾತ್ರ ಭಯೋತ್ಪಾದನೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಘೋಷಿಸುವುದು ತಪ್ಪುತ್ತಿಲ್ಲ. ಇದೀಗ ಆ ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ, ಇದರಿಂದ ಸೈನಿಕರ ಮನೆಯವರು ನೆಮ್ಮದಿಯಾಗಿರಿ ಎಂದು ಹೇಳುವುದಷ್ಟೆ. ಆದರೆ ಮಗನ ಹೆಣ ಮನೆಗೆ ಬಂದಾಗ ಮಾತ್ರ ಆ ಮನೆಯವರ ಸಂಕಟ ಮುಗಿಲು ಮುಟ್ಟುತ್ತದೆ.
ಕ್ಯಾಪ್ಟನ್ ಶುಭಂ ಗುಪ್ತಾರ ತಾಯಿಗೆ ಬಿಜೆಪಿಯ ನೇತಾರರು ಯಾವ ತರಹ ಕೈಗೆ ಚೆಕ್ ತುರುಕುತ್ತಿದ್ದರು ಎಂದರೆ, ಕ್ಯಾಮೆರಾದಲ್ಲಿ ಇವರ ಮುಖವೇ ಪ್ರಧಾನವಾಗಿ ಎದ್ದು ಕಾಣುವಂತೆ ಪಿತೂರಿ ನಡೆದಿತ್ತು. ಇದು ವೈರಲ್ ಆಗಿರುವ ಪರಿ ನೋಡಿದರೆ, ಹುತಾತ್ಮರ ಶೋಕಾಚರಣೆಗಿಂತ ಬಿಜೆಪಿ ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದೇ ಆಗಿದೆ.
ಅನಾದಿ ಕಾಲದಿಂದಲೂ ರಾಜನ ಹಿತಕ್ಕಾಗಿ ಸೈನಿಕರು ರಣರಂಗದಲ್ಲಿ ಪ್ರಾಣ ತೆರುವುದು ಹೊಸತೇನಲ್ಲ. ಧರ್ಮ ಇದಕ್ಕಿಂತಲೂ ಕ್ರೂರ. ಧರ್ಮ ಸಾಮಾನ್ಯ ಜನತೆಯನ್ನೂ ಕುಪ್ರಚೋದಿಸಿ ಹೊಡೆದಾಡಿ ಸಾಯುವಂತೆ ಮಾಡುತ್ತದೆ. ಅತ್ತ ರಾಜ ಇತ್ತ ಧರ್ಮ, ಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾರರು. ಅದೇನಿದ್ದರೂ ಪೊಲೀಸರಿಂದ ದೊರಕಬೇಕಷ್ಟೆ!
ಇಂಥ ಜ್ಞಾನದಿಂದ ಏನು ಲಾಭ?
ನಿಮಗೆ ಯಾವುದೇ ಮಾಹಿತಿ ಬೇಕಿದ್ದರೆ, ಗೂಗಲ್ ಒತ್ತಿ ನೋಡಿ. ಕ್ಷಣಾರ್ಧದಲ್ಲಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಅದು ಹಾಜರ್! ಇದಕ್ಕಾಗಿ ಹೆಚ್ಚಿನ ಖರ್ಚೇನಿಲ್ಲ. ಇಲ್ಲಿ ಹೆಚ್ಚಿನ ಅಂದ್ರೆ ಫೋನಿಗೆ ಬಂಡವಾಳ, ಚಾರ್ಜಿಂಗ್, ಡೇಟಾಗಾಗಿ ಈಗಾಗಲೇ ಖರ್ಚು ಮಾಡಿಬಿಟ್ಟಿರುತ್ತೀರಿ. ಯಾವ ಮಾಹಿತಿ ಬೇಕಿದಿಯೋ ಅದನ್ನು ಹೆಚ್ಚಿನ ಖರ್ಚಿಲ್ಲದೆ ಪಡೆಯಬಹುದು. ಮನೆಯಲ್ಲಿ ಅಲೆಕ್ಸಾ ಇದ್ದರೆ ಮಾಹಿತಿಗಾಗಿ ಟೈಪಿಸುವ ತೊಂದರೆಯೂ ಇಲ್ಲ. ಕೇಳಿದ್ದಕ್ಕೆ ಜವಾಬು ರೆಡಿ!
ಹಾಗೇಂತ ಗೂಗಲ್ ನಿಮಗೆ ಬಿಟ್ಟಿಯಾಗಿ ಮಾಹಿತಿ ನೀಡುತ್ತದೆ ಅಂದುಕೊಳ್ಳಬೇಡಿ. ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಭರಾಟೆಯಲ್ಲಿ ಅದು ತಾನು ಕೋಟಿಗಟ್ಟವೆ ಸಂಪಾದಿಸಿದ ಜಾಹೀರಾತನ್ನು ಧಾರಾಳ ಪ್ರದರ್ಶಿಸುತ್ತದೆ. ನೀವು `ಧೌಲಾವೀರಾ’ ಎಂಬುದರ ಬಗ್ಗೆ ಮಾಹಿತಿ ಕೇಳಿದರೆ, ಅದು ಗುಜರಾತ್ ಬಳಿಯ ಹರಪ್ಪಾ ಮೊಹಂಜೋದಾರೋಗೆ ಸಂಬಂಧಿಸಿದ ಮಾಹಿತಿ ಎನ್ನುತ್ತಾ ನಿಮಗೆ ಬೇಕೋ ಬೇಡವೋ….. ಅದು ಇಡೀ ಗುಜರಾತ್ನ ಹೋಟೆಲ್, ಬಟ್ಟೆ ಅಂಗಡಿ, ಜ್ಯೂವೆಲರಿ, ಅಲ್ಲಿನ ಸರ್ಕಾರದ ಸಾಧನೆ, ಆಸ್ಪತ್ರೆಗಳ ಜಾಹೀರಾತು…. ಇತ್ಯಾದಿ ಎಲ್ಲವನ್ನೂ ತೋರಿಸುತ್ತದೆ.
ಗೂಗಲ್ ನೀಡಿದ ಈ ಮಾಹಿತಿ ಅದು ಹತ್ತಿರದ ಪತ್ರಿಕೆ, ವೆಬ್ ಸೈಟ್, ಪುಸ್ತಕಗಳಲ್ಲಿರುವ ಸಂಗ್ರಾಹ್ಯ ಮಾಹಿತಿ ಎಂಬುದು ನೆನಪಿರಲಿ. ಗೂಗಲ್ ಇಂಥವರಿಗೆಲ್ಲ ಇದುವರೆಗೂ ಏನೂ ಹಣ ಕೊಡುತ್ತಿರಲಿಲ್ಲ. ಆದರೆ ಈ ಮಾಹಿತಿಗಳ ಸುರಿಮಳೆಯಿಂದಾಗಿ, ಗೂಗಲ್ ಈಗ ಇವರಿಗೆಲ್ಲ ಹಣ ಹಂಚಬೇಕಾಗಿದೆ.
ಸರ್ಕಾರದ ಒತ್ತಡದಿಂದಾಗಿ ಗೂಗಲ್ ಕೆನಡಾದಲ್ಲಿ 612 ಕೋಟ್ಯಂತರ ಡಾಲರ್ ನ್ನು ಅಲ್ಲಿನ ಮೀಡಿಯಾಗೆ ಹಂಚಬೇಕಾಗಿದೆ. ಈ ಹಣ ಯಾವ ರೀತಿ ಹಂಚಲ್ಪಡುತ್ತದೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟ ಆಗಿಲ್ಲ, ಆದರೆ ಇದಂತೂ ಒಳ್ಳೆಯ ಪ್ರಯತ್ನ.
ಜ್ಞಾನದ ಅನ್ವೇಷಣೆಯಲ್ಲಿ ಗೂಗಲ್ ಇಡೀ ವಿಶ್ವಕ್ಕೆ ಮಾಡಿರುವ ನಷ್ಟ ಎಂದರೆ ಅದು ಅಭೂತಪೂರ್ವವಾದುದು. ಇದು ಜ್ಞಾನಿಗಳು ಹಾಗೂ ಜ್ಞಾನ ಸಂಗ್ರಾಹಕರನ್ನು ಭಿಕಾರಿ ಆಗಿಸಿದೆ. ಅವರ ಜ್ಞಾನ, ವಿಜ್ಞಾನ, ಅನಾಲಿಸಿಸ್ ನ್ನು ಬಳಸಿಕೊಳ್ಳುತ್ತಾ ತಾನೊಂದೇ ಶತಸಹಸ್ರ ಕೋಟಿ ಡಾಲರ್ ಗಳಿಸುತ್ತಿದೆ! ಹೀಗೆ ಮಾಹಿತಿ ಸಂಗ್ರಹಿಸಿ, ನೀಡಿದವರನ್ನು ಇದು ತನ್ನ ಕಬಂಧ ಬಾಹುಗಳಲ್ಲಿ ಇನ್ನಿಲ್ಲವಾಗಿಸಿ, ತಾನು ಮಾತ್ರ ಪ್ರಚಂಡವಾಗಿ ಮೆರೆಯುತ್ತಿದೆ.
ವಿಶ್ವದ ಎಲ್ಲಾ ದೇಶಗಳ ಸರ್ಕಾರಗಳೂ ಇದರತ್ತ ಜಾಣ ಕುರುಡು/ಕಿವುಡು ತೋರಿತು. ಏಕೆಂದರೆ ಇಂದು ಬಹುತೇಕ ದೇಶಗಳ ಚುನಾಯಿತ ಸರ್ಕಾರಗಳು ಸಹ ಮೋಸ, ದಗಾ, ವಂಚನೆಯ ಆಧಾರದಿಂದಲೇ ನಡೆಯುತ್ತಿವೆ. ಈ ಗೂಗಲ್ ಯಾರು ಇಂಥ ದೇಶಗಳ ಮಾಹಿತಿ ಕೇಳಿದರೋ, ಆಯಾ ಸರ್ಕಾರಗಳ ಬಿಟ್ಟಿ ಪ್ರಚಾರವನ್ನೂ ಮಾಡಿತು. ನೀವು ಭಾರತದಿಂದ ಸರ್ಚ್ ಮಾಡುತ್ತಿದ್ದರೆ, ನಿಮಗೆ ಇಲ್ಲಿನ ಖಾಲಿಸ್ತಾನೀಯರು, ದಲಿತರ ಬೇಡಿಕೆಗಳ ಬಗ್ಗೆ ಮಾಹಿತಿ ದೊರಕಲಾರದು ಬಿಡಿ. ಸರ್ಕಾರದ ಎಂದಿರುವ ಸೈಟುಗಳತ್ತ ಮಾತ್ರ ಇದು ನಿಮ್ಮನ್ನು ಕೊಂಡೊಯ್ಯುತ್ತದೆ. ಸರ್ಕಾರದ ಕೃಪಾಪೋಷಿತ ಇಂಥ ಧರ್ಮ, ಉದ್ದಿಮೆಗಳ ಮಾಹಿತಿಯಿಂದ ಸಾಮಾನ್ಯರಿಗೆ ಆಗಬೇಕಾಗಿರುವುದೇನು?
ಗೂಗಲ್ ಅಂತೂ ಈಗ ಭ್ರಾಂತಿಕಾರಕ ಮಾಹಿತಿಗಳ ಭಂಡಾರವೇ ಆಗಿದೆ. ಭಾರತದ ನ್ಯೂಸ್ ಮೀಡಿಯಾ ಈಗ ಒನ್ ವೇ ಟ್ರಾಫಿಕ್ ಆಗಿದೆ. ಹಾಗೇಕೆ ಎಂದರೆ, ಇದು ತನಗೆ ಬೇಕಾದ್ದನ್ನು ಮಾತ್ರ ಹೇಳುತ್ತದೆ, ವಿಶಿಷ್ಟ ಉದ್ದೇಶವಿದ್ದರೆ, ಅದು ಜನ ಬಯಸುವ ವಾಸ್ತವ ಮಾಹಿತಿ ನೀಡಬೇಕು. ತನ್ನ ಜಾಹೀರಾತಿನ ಹಣವನ್ನು ಇಂಥವರಿಗೆ ಹಂಚಬೇಕು. ಆಗ ಮಾತ್ರ ಜನತೆಗೆ ಸಮರ್ಪಕ, ಪೂರ್ತಿ ಮಾಹಿತಿ ಸಿಗಬಲ್ಲದು, ಕೇವಲ ಪ್ರಾಯೋಜಿತ ಅಲ್ಲ! ಆಗ ಮಾತ್ರ ಇಂಥ ಮಾಹಿತಿ ಸಂಗ್ರಾಹಕರು ಪಟ್ಟ ಕಷ್ಟಕ್ಕೆ ಸಂಭಾವನೆ ಸಿಗಲು ಸಾಧ್ಯ.
ಪತಿ ಈಗ ಪರಮೇಶ್ವರ ಅಲ್ಲ!
ಇದೀಗ ಪುಣೆಯ ರೇಣುಕಾ ಖನ್ನಾ ಕೇಸ್ ಗಮನಿಸಿದಾಗ, ಈಕೆಯನ್ನು ಬೈಯಬೇಕೋ ಹೊಗಳಬೋಕೋ ತಿಳಿಯುತ್ತಿಲ್ಲ. ಈಕೆ ಈಗ ಅಂಥ ಟ್ರೆಂಡ್ ಸೆಟರ್ ಎನಿಸಿದ್ದಾಳೆ. ಅಸಲಿಗೆ ಈಕೆ ಕಳೆದ ನವೆಂಬರ್ ಕೊನೆಯ ವಾರದಲ್ಲಿ ತನ್ನ ಬಿಲ್ಡರ್ ಪತಿಯ ಕೊಲೆಯ ಆರೋಪದ ಮೇರೆಗೆ ಪುಣೆಯ ಕೋರ್ಟಿಗೆ ಹಾಜರಾಗಬೇಕಾಯಿತು. ನಡೆದಿದ್ದಷ್ಟೇ, ಪತಿಪತ್ನಿಯರ ವಾಗ್ವಾದ ರೌದ್ರವಾಗಿ ಮುಂದುವರಿದು, ಈಕೆ ಕೈಗೆ ಸಿಕ್ಕಿದ್ದನ್ನು ತೆಗೆದು ಆತನ ಮೂಗಿಗೆ ಬಾರಿಸಿದ್ದಕ್ಕೆ, ಅದು ಒಡೆದು, ಅಪಾರ ರಕ್ತ ಹರಿದು ಆತ ಸತ್ತೇ ಹೋದ!
ಇಲ್ಲಿನ ವಿಡಂಬನೆ ಎಂದರೆ ಈಕೆ ಈಗ ಕೊಲೆಗಡುಕಿ ಎನಿಸಿದ್ದಾಳೆ. ಈ ಮೂಲಕ ಎಲ್ಲಾ ಭಾರತೀಯ ಗಂಡಂದಿರಿಗೂ ಎಚ್ಚರಿಕೆ ನೀಡಿ ಟ್ರೆಂಡ್ ಸೆಟರ್ ಎನಿಸಿದ್ದಾಳೆ! ಹಿಂಸೆ ಎರಡೂ ಪಕ್ಷಗಳಿಂದ ಸಾಧ್ಯ ಎಂದು ತೋರಿಸಿದ್ದಾಳೆ. ಲಂಚ ಪಡೆಯದ ಬೆರಳೆಣಿಕೆಯ ಸರ್ಕಾರಿ ಸಿಬ್ಬಂದಿ ತರಹ, ಇದನ್ನೆಲ್ಲಾ ಸಹಿಸುವ ಪತಿವ್ರತೆಯರೂ ಕಡಿಮೆ ಆಗುತ್ತಿದ್ದಾರೆ ಎಂದು ಸಾಧಿಸಿದ್ದಾಳೆ. ಇದು ಮೂಗನ್ನು ಜಜ್ಜಿ ಆದ ಸಾವೋ ಅಥವಾ ಬೇರೇನೋ ಎಂಬುದು ಇನ್ನೂ ಖಚಿತವಾಗಿಲ್ಲ. ಈಕೆ ಕೇವಲ ಮೂಗಿಗೆ ಜೋರಾಗಿ ಗುದ್ದಿ ಈ ಹಂತ ತಲುಪಿದ್ದಾಳೆ ಅಂದ್ರೆ ಭಾರತೀಯ ಗಂಡಂದಿರು ಮಾತ್ರವಲ್ಲದೆ, ಎಲ್ಲಾ ಕುಸ್ತಿಪಟುಗಳೂ ಎಚ್ಚೆತ್ತುಕೊಳ್ಳಬೇಕಾದ್ದೇ! ಅಂದ್ರೆ ಹೆಣ್ಣು ಅಬಲೆ ಅನ್ನುವುದನ್ನು ಕಟ್ಟಿಟ್ಟುಬಿಡಿ. ಹೆಣ್ಣು ಸಹನಾಮೂರ್ತಿ ಎಂದು ಹಾಡಿ ಹೊಗಳುತ್ತಿದ್ದ ತುಳಸೀದಾಸರ ಕಾಲ ಇದಲ್ಲ. ಹಾಗೆಯೇ ಶೂದ್ರರು, ಪಶುಗಳೂ ಸಹ ಪೆಟ್ಟು ತಿಂದು ಕೂರುವ ಜೀವಗಳಲ್ಲ. ತುಳಸೀದಾಸರ ಹಿಂಬಾಲಕರು ಅವರ ರಾಮಚರಿತ ಮಾನಸವನ್ನು ಹಾಡಿ ಹೊಗಳಿದ್ದೇ ಬಂತು, ಈಗೆಲ್ಲ ತಿರುಗುಬಾಣ ಆಗಿದೆ.
ಇಂಥ ಪುರಾಣ ಪುಣ್ಯಕಥೆ ನಂಬುತ್ತಾ ಕೂರುವ ಹೆಂಗಸರ ಕಾಲ ಮುಗಿಯುತ್ತಾ ಬಂತು. ಆಕೆ ದಾನದ ವಸ್ತುವಲ್ಲ, ಭೋಗದ ವಸ್ತುವಲ್ಲ ಅಥವಾ ಹಿಂಸೆ ಸಹಿಸುವ ಸಹನಾಮಯಿ ಕ್ಷಮಯಾ ಧರಿತ್ರಿಯಲ್ಲ! ಒಬ್ಬರೇ ಆದಾಗ ಎಂಥವರೂ ಪೆಟ್ಟು ತಿನ್ನುತ್ತಾರೆ, ಹಾಗೆಂದು ಹೆಣ್ಣನ್ನು ನಿರ್ಲಕ್ಷಿಸಬೇಡಿ. ಹೀಗಾಗಿ ಎಲ್ಲಾ ಹೆಂಗಸರೂ ಕೈ ಸೇರಿಸಿದರೆ, ಹಿಂಸೆ ಮಾಡುವ ಯಾವ ಗಂಡೂ ಉಳಿಯಲಾರ.
ರಾಜಸ್ಥಾನದ ಹೆಂಗಳೆಯರ ಗುಲಾಬಿ ಗ್ಯಾಂಗ್ ಇದಕ್ಕೆ ಮತ್ತೊಂದು ನಿದರ್ಶನ. ಹೀಗಾಗಿ ರೇಣುಕಾ ಖನ್ನಾ ಹೊಸ ಟ್ರೆಂಡ್ ಸೆಟ್ ಮಾಡಿದ್ದಾಳೆ ಎಂದೇ ಹೇಳಬೇಕು. 2017ರಲ್ಲಿ ನಿಖಿಲ್ ಖನ್ನಾ ಜೊತೆ ಮದುವೆಯಾಗಿದ್ದಳು. ಈ ಸಲದ ಬರ್ತ್ ಡೇಗೆ ಈಕೆಯನ್ನು ದುಬೈ ಟ್ರಿಪ್ ಗೆ ಕರೆದೊಯ್ಯಲಿಲ್ಲ ಎಂದು ಶುರುವಾದ ಜಗಳ, ಈ ಹತ್ಯಾಕಾಂಡಕ್ಕೆ ತಲುಪಿತು. ಅಷ್ಟು ಮಾತ್ರವಲ್ಲದೆ, ಆತ ಈಕೆಗೆ ವೆಡ್ಡಿಂಗ್ ಆ್ಯನಿವರ್ಸರಿಗೆ ಡೈಮಂಡ್ ರಿಂಗ್ ಕೊಡಿಸಲಿಲ್ಲ, ಈಕೆಯ ಕಸಿನ್ ಮದುವೆಗೆಂದು ದೆಹಲಿಗೆ ಏರ್ ಟಿಕೆಟ್ ಸಹ ಬುಕ್ ಮಾಡಿಸಿರಲಿಲ್ಲವಂತೆ!
ಯಾವ ರೀತಿ ಅನಾದಿ ಕಾಲದಿಂದ ಪತ್ನಿ ಸಹನಾಮಯಿ ಆಗಿ ಸಂಸಾರ ತೂಗಿಸಿದಳೋ, ಈಗ ಗಂಡಂದಿರು ಹಾಗೇ ತೂಗಿಸಬೇಕಿದೆ. ಧರ್ಮದ ವಿರುದ್ಧ ಸಿಡಿದೆದ್ದ ಪತ್ನಿ, ಪತಿಯನ್ನು ಪರಮೇಶ್ವರ ಎಂದು ಭಾವಿಸದೆ, ಕೈಗೆ ಸಿಕ್ಕಿದ ವಸ್ತು ತೆಗೆದು ಬಡಿಯಬಲ್ಲಳು ಎಂದು ನಿರೂಪಿಸಿದ್ದಾಳೆ. ಕಾನೂನು ರೇಣುಕಾಳಿಗೆ ಏನೇ ಶಿಕ್ಷೆ ವಿಧಿಸಲಿ, ಇನ್ನು ಮುಂದೆ ಯಾವ ಭಾರತೀಯ ಗಂಡನೂ ತನ್ನ ಹೆಂಡತಿ ಮೇಲೆ ಕೈ ಮಾಡುವ ಮೊದಲು 2 ಸಲ ಯೋಚಿಸಬೇಕಾದ್ದೇ!





