– ರಾಘವೇಂದ್ರ ಅಡಿಗ ಎಚ್ಚೆನ್.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟನೆ ಮಾಡಿರುವ ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ, ಚಿತ್ರತಂಡ ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ಸಹ ಮಾಡಿದೆ. ಈ ಸಿನಿಮಾದ ಶೂಟಿಂಗ್ ವೇಳೆ ಕೆಲ ವದಂತಿಗಳು ಸಹ ಹಬ್ಬಿತ್ತು. ಈ ಬಗ್ಗೆ ಮೊದಲ ಬಾರಿಗೆ ರಿಷಬ್ ಶೆಟ್ಟಿ ಅವರೇ ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶೂಟಿಂಗ್ ವೇಳೆ ಎದುರಾದ ಸವಾಲುಗಳ ಬಗ್ಗೆಯೂ ಮಾತನಾಡಿರುವ ಅವರು ನಾಲ್ಕೈದು ಸಲ ನಾನೇ ಹೋಗಿಬಿಡಬೇಕಿತ್ತು ಎಂದು ಶಾಕಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಒಂದು ಕಥೆಯನ್ನ ತಗೊಂಡು ಬಂದಾಗ, ಅದನ್ನೆಲ್ಲ ಹೇಗೆ ಇನ್ನಷ್ಟು ಚೆನ್ನಾಗಿ ಕಾಣಿಸಬೇಕು ಎಂದು ಎಲ್ಲರೂ ಕೆಲಸ ಮಾಡಿದ್ದಾರೆ. ಕಥೆ ಮೇಲೆ, ನನ್ನ ಮೇಲೆ ಇದ್ದ ನಂಬಿಕೆ ಇಂದ ಅವರು ಬಜೆಟ್ ಬಗ್ಗೆ ಹೊಂಬಾಳೆಯವರು ತಲೆಕೆಡಿಸಿಕೊಳ್ಳಲಿಲ್ಲ. ನಮ್ಮದು ಎಲ್ಲವೂ ದಿನಗೂಲಿ ಅಂತಾನೇ ಲೆಕ್ಕ ಹಾಕಿದ್ರು ಹೊಂಬಾಳೆಯವರು ನಾಲ್ಕೂವರೆ ವರ್ಷದವರೆಗೆ ನಮ್ಮೆಲ್ಲರಿಗೂ ಈ ಸಿನಿಮಾಗಾಗಿ ಊಟ ಹಾಕಿದ್ದಾರೆ. ಇಡೀ ಚಿತ್ರತಂಡ ಹಗಲಿರುಳು ಶ್ರಮ ಪಡುತ್ತಲೇ ಇದೆ’ ಎಂದು ರಿಷಬ್ ಹೇಳಿದ್ದಾರೆ.
ಮಾತನಾಡುವಾಗ ಭಾವುಕರಾದ ರಿಷಬ್ ಶೆಟ್ಟಿ ಅವರು, ಮೂರು- ನಾಲ್ಕು ಬಾರಿ ನಾನು ಸತ್ತೆ ಹೋಗಬೇಕಿತ್ತು. ಆ ಮಟ್ಟಿಗೆ ತೊಂದರೆ ಆಗಿದೆ. ಮೂರು ತಿಂಗಳಿಂದ ನಾವು ಸರಿಯಾಗಿ ನಿದ್ದೆನೇ ಮಾಡಿಲ್ಲ. ಎಲ್ಲರೂ ನಮ್ಮ ಸಿನಿಮಾ ಅಂತಾ ಕೆಲಸ ಮಾಡಿದರು. ಈ ವೇಳೆ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ. ಈ ಸಿನಿಮಾನ ಈ ಹಂತಕ್ಕೆ ತಂದಿದ್ದೇ ಕನ್ನಡಿಗರು. ಕನ್ನಡಿಗರಿಂದ ಈ ಮೂವಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಬಹುತೇಕ ಕನ್ನಡ ಕಲಾವಿದರೇ ಸಿನಿಮಾದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಮುಳುಗೋಗಿದ್ದರಿಂದ ಹೊರಗಡೆ ಏನು ಆಗುತ್ತಿದೆ ಎನ್ನುವುದು ನನ್ನ ಗಮನಕ್ಕೆ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರೇ ಇಂಡಸ್ಟ್ರಿ ಚೆನ್ನಾಗಿರುತ್ತದೆ. ಅಭಿಮಾನಿಗಳಲ್ಲಿ ಸಿನಿಮಾದ ಅಭಿರುಚಿಗಳು ಬದಲಾವಣೆ ಆದಾಗ ಸಿನಿಮಾದವರು ಅವುಗಳನ್ನು ನೀಗಿಸಬೇಕು. ಆಗ ಸಕ್ಸಸ್ ಸಿಗುತ್ತದೆ. ಅಮೆರಿಕದಲ್ಲಿ ಕಾಂತಾರ ಕನ್ನಡದಲ್ಲಿ ರಿಲೀಸ್ ಆಗುತ್ತದೆ. ಜೊತೆಗೆ ಎಲ್ಲ ಭಾಷೆಗಳಲ್ಲೂ ಇರುತ್ತದೆ ಎಂದು ಹೇಳಿದ್ದಾರೆ.
ಕಾಂತಾರ ಪ್ರೀಕ್ವೆಲ್ ಮಾಡಬೇಕಾದರೆ ಸಾಕಷ್ಟು ಕಷ್ಟಗಳನ್ನು ದಾಟಿ ಸಿನಿಮಾ ಮುಗಿಸಿದ್ದೇವೆ. ಇದರ ಮಧ್ಯೆ ಪ್ರಗತಿ ಅವರು ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊತ್ತಿದ್ದರು. ಎಲ್ಲರೂ ಹೇಳುತ್ತಿದ್ದರು. ನನ್ನಿಂದ ಅಂತಾ. ಅದು ನನ್ನಿಂದ ಆಗಿದ್ದಲ್ಲ, ನನ್ನ ಹೆಂಡತಿ, ನನ್ನ ರೈಟರ್ ಟೀಂ ಮನೆ ಬಿಟ್ಟು ನನ್ನ ಜೊತೆಗೆ ಶ್ರಮ, ಶ್ರದ್ಧೆ ಹಾಕಿದ್ದರಿಂದ ದೊಡ್ಡ ಪ್ರಾಜೆಕ್ಟ್ ಮಾಡಿ ಮುಗಿಸುವಲ್ಲಿ ಯಶಸ್ವಿಯಾದೆವು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.