ಜಾಗೀರ್ದಾರ್*
ಹೆಸರಾಂತ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ, ರಿಷಬ್ ಶೆಟ್ಟಿ ಅವರು ನಿರ್ದೇಶನದ ಜೊತೆಗೆ ನಾಯಕರಾಗೂ ನಟಿಸಿರುವ “ಕಾಂತಾರ” ಚಿತ್ರ ಕಳೆದ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ವಿಶ್ವದ ಜನರ ಮನ ಗೆಲ್ಲುತ್ತಿದೆ. ಬಿಡುಗಡೆಯಾದ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ನವದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಗೆ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಣೆ ನಂತರ “ಕಾಂತಾರ” ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
“ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನಿಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವದ ಪರಂಪರೆಯ ವಿರಾಟ್ ಅನಾವರಣ. ಈ ಚಿತ್ರ ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ . ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ & ನಟ ರಿಷಬ್ ಶೆಟ್ಟಿ ಹಾಗೂ ಮತ್ತವರ ತಂಡದ ಪ್ರಯತ್ನಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.