ಜಾತಿ ಸಮೀಕ್ಷೆ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಈ ನಡುವೆ ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಸಮೀಕ್ಷೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.
ಜನಸಾಮಾನ್ಯರ ಜೊತೆ ರಾಜಕೀಯ ನಾಯಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದು ಸಂಪೂರ್ಣ ಸ್ವಯಂಪ್ರೇರಿತವೆಂದು ಆಯೋಗ ಸ್ಪಷ್ಟನೆ ನೀಡಿರುವುದರಿಂದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಪ್ರಶ್ನೆಗಳನ್ನು ನೋಡಿಯೇ ದೂರ ಹೋಗಿದ್ದಾರೆ. ಈ ನಡುವೆ ಇನ್ಫೋಸಿಸ್ ಮುಖ್ಯಸ್ಥರಾದ ಮೂರ್ತಿ ದಂಪತಿ ಸಮೀಕ್ಷೆಯನ್ನು ವಿರೋಧಿಸಿದ್ದಾರೆ.
ಈ ಕುರಿತು ಸುಧಾಮೂರ್ತಿ ದಂಪತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವಯಂ ದೃಢೀಕರಣ ಪತ್ರ ಬರೆದಿದೆ.
‘ನಾವು ಸಮೀಕ್ಷೆಯಲ್ಲಿ ಭಾಗವಹಿಸಲ್ಲ’
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತಿದ್ದೇವೆ. ನಾವು ಹಿಂದುಳಿದ ಯಾವುದೇ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಹಾಗಾಗಿ ನಮ್ಮ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುದಿಲ್ಲ ಮತ್ತು ಮಾಹಿತಿಯನ್ನು ನೀಡಲು ನಿರಾಕರಿಸಿದ್ದೇವೆ.
ಸುಧಾ, ನಾರಾಯಣ ಮೂರ್ತಿ, ಇನ್ಫೋಸಿಸ್ ಮುಖ್ಯಸ್ಥರು
‘ಯಾರಿಗೂ ಬಲವಂತ ಮಾಡಲ್ಲ’ ಎಂದ ಡಿಕೆಶಿ: ಇನ್ನು ಮೂರ್ತಿ ದಂಪತಿ ಜಾತಿಗಣತಿಯಲ್ಲಿ ಭಾಗಿಯಾಗಲ್ಲ ಎಂದಿದ್ದಕ್ಕೆ ಉಪಮುಖ್ಯಮಂತ್ರಿ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ. ನಾನು ಈ ಮೊದಲೇ ಹೇಳಿದ್ದೇನೆ. ಯಾರಿಗೂ ಬಲವಂತ ಮಾಡಲ್ಲ ಎಂದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಇನ್ನೇನು ಜಾತಿಗಣತಿ ಸಮೀಕ್ಷೆ ಮುಕ್ತಾಯ ಹಂತಕ್ಕೆ ಬಂದಿದೆ. ಇದ್ದ ಕಡಿಮೆ ಸಮಯದಲ್ಲಿ ಸಮೀಕ್ಷೆ ಹೇಗಾಗಿದೆ. ಅದರ ವರದಿ ಹೇಗೆ ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಈ ನಡುವೆ ನಾವು ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಅಂತ ಮೂರ್ತಿ ದಂಪತಿ ಪತ್ರ ಬರೆದಿದ್ದು ಮಹತ್ವ ಪಡೆದಿದೆ.