ಅರವಿಂದಮ್ಮ ಏದುಸಿರು ಬಿಡುತ್ತಾ ಕೈಯಲ್ಲೊಂದು ಸುತ್ತಿಗೆ ಹಿಡಿದು ಹೈಸ್ಕೂಲ್ ‌ಕಲಿಯುತ್ತಿದ್ದ ತಮ್ಮ ಮಗನ ಶಾಲೆ ತಲುಪಿದರು. ಅಲ್ಲಿ ಶಾಲೆ ಮುಂದಿದ್ದ ಜವಾನ ಸಿದ್ದನನ್ನು ಕೇಳಿದರು, “ಏನಪ್ಪ…. ಇಲ್ಲಿ ಶಾಂತಮೂರ್ತಿಗಳ ಕ್ಲಾಸ್‌ ಯಾವುದು?”

“ಅದೇಕೆ ಕೇಳ್ತಿದ್ದೀರಿ ತಾಯಿ?” ಆಕೆಯ ಕೈಯಲ್ಲಿದ್ದ ಭಾರಿ ಸುತ್ತಿಗೆ ಕಂಡು ಗಾಬರಿಗೊಂಡ ಸಿದ್ದ ಪ್ರಶ್ನಿಸಿದ.

“ಏ….. ಅವರು ನನ್ನ ಮಗನ ಕ್ಲಾಸ್‌ ಟೀಚರ್‌ ಕಣಪ್ಪ…..” ಸುತ್ತಿಗೆ ಝಳಪಿಸುತ್ತಾ ಆಕೆ ಹೇಳಿದರು.

ಅದನ್ನು ಕೇಳಿ ಎದ್ದೆನೋ ಬಿದ್ದೆನೋ ಎಂದು ಸಿದ್ದ ಓಡೋಡಿ ಶಾಂತಮೂರ್ತಿಗಳ ಕ್ಲಾಸಿಗೆ ಹೋಗಿ, “ಸಾರ್‌….. ನಿಮ್ಮನ್ನು ಹುಡುಕಿಕೊಂಡು ಯಾರೋ ಒಬ್ಬ ಭಾರಿ ಹೆಂಗಸು ಮಾರಿಮುತ್ತು ತರಹ ಸುತ್ತಿಗೆ ಸಮೇತ ಬಂದಿದ್ದಾರೆ. ಯಾವುದಕ್ಕೂ ಹುಷಾರಾಗಿರಿ!” ಎಂದ.

ಅದನ್ನು ಕೇಳಿ ಅವರಿಗೆ ಚಳಿ ಜ್ವರ ಬಂತು. ತಕ್ಷಣ ಪ್ರಿನ್ಸಿಪಾಲರ ಚೇಂಬರ್‌ ಗೆ ಓಡಿಹೋದರು. ವಿಷಯ ತಿಳಿದ ಅವರು ಯಾರಿರಬಹುದು ಈ ಮಾರಿಮುತ್ತು ಅಂತ ಹುಡುಕುತ್ತಾ ಶಾಲೆ ಮುಂಭಾಗಕ್ಕೆ ಬಂದರು.

ಈಕೆಯನ್ನು ಕಂಡವರೇ, “ದಯವಿಟ್ಟು ಶಾಂತರಾಗಿ ತಾಯಿ….. ಏನು ವಿಷಯ ಹೇಳಿ…..”

“ನಾನು ಶಾಂತವಾಗಿಯೇ ಇದ್ದೇನೆ. ಶಾಂತಮೂರ್ತಿಗಳ ಕ್ಲಾಸ್‌ ಹುಡುಕುತ್ತಿದ್ದೇನೆ, ಅಷ್ಟೆ!”

“ಅದೇ….. ಯಾಕೆ ಅಂತ?”

“ಅಂದ್ರೆ…. ಅಲ್ಲಿ ನನ್ನ ಮಗ ಕೂರುವ ಬೆಂಚಿನಲ್ಲಿ 1 ತಿಂಗಳಿನಿಂದ ಯಾವುದೋ ಮೊಳೆ ಎದ್ದುಬಿಟ್ಟಿದೆ, ಅದನ್ನು ಸರಿ ಮಾಡಬೇಕು. ಮೊನ್ನೆ ಮೂರನೇ ಪ್ಯಾಂಟು ಹರಿದುಕೊಂಡು ಬಂದಿದ್ದಾನೆ ಆ ಬಡವಾ!” ಎಂದು ಶಾಂತವಾಗಿ ವಿವರಿಸಿದರು.

ಆಗ ಶಾಂತಮೂರ್ತಿಗಳು ನೆಮ್ಮದಿಯ ನಿಟ್ಟುಸಿರಿಟ್ಟು ಆ ತಾಯಿಯನ್ನು ತಮ್ಮ ಕ್ಲಾಸಿಗೆ ಕರೆದೊಯ್ದರು.

 

ಮಹೇಶ : ಜೋಕ್‌ ಮಾಡುವವರೆಲ್ಲ ಹೆಂಡತಿ ಬಲು ಶೋಷಣೆ ಮಾಡುತ್ತಾಳೆ ಅಂತ ಅವಳನ್ನು ವ್ಯಂಗ್ಯವಾಗಿ ಚಿತ್ರಿಸುತ್ತಾರೆ. ನೀನೇನೇ ಹೇಳು, ನನ್ನ ಹೆಂಡತಿ ಮಾತ್ರ ನನ್ನನ್ನು ಅಪಾರವಾಗಿ ಪ್ರೀತಿಸುತ್ತಾಳೆ, ಎಂದೂ ಕೋಪ ಮಾಡಿಕೊಳ್ಳೋಲ್ಲ…. ಗೊತ್ತಾ….?

ಸುರೇಶ : ಹೌದೇನು? ಹಾಗಾದರೆ ಆಕೆ ಮನೆ ಒರೆಸುತ್ತಿರುವಾಗ ಧಡಧಡ ಅಂತ ಅಲ್ಲಿಂದ ಇಲ್ಲಿಗೆ ಒಮ್ಮೆ ನಡೆದುಕೊಂಡು ಬಾ ನೋಡೋಣ….!

 

ಸಂದರ್ಶಕ : ಅಲ್ಲಯ್ಯ, ಈ ಇಂಡಸ್ಟ್ರಿ ಬಗ್ಗೆ ಹೆಚ್ಚಿಗೇನೂ ಗೊತ್ತಿಲ್ಲ ಅಂತೀಯ. ಆಗಿನಿಂದ ಕೇಳಿದ ಪ್ರಶ್ನೆಗಳಿಗೆಲ್ಲ ತಪ್ಪು ತಪ್ಪಾಗಿ ಉತ್ತರಿಸಿದ್ದೀಯ. ಮತ್ತೆ 4 ವರ್ಷದ ಅನುಭವ ಇದೆ ಅಂತ ಹೇಗಯ್ಯ ಬರೆದೆ?

ಅಭ್ಯರ್ಥಿ : ಓ…. ಅದಾ? ಅದು ನನ್ನ ಮಗ `ಅನುಭವ್,’ ಅವನಿಗೆ 4 ವರ್ಷ ಅಂತ.

ಸಂದರ್ಶಕ : ತಾವಿನ್ನು ಹೊರಡಬಹುದು… ಬಾಗಿಲು ಆ ಕಡೆ ಇದೆ!

 

ಸಂಜೆ ಗುಂಡು ಪಾರ್ಟಿಯಲ್ಲಿ ಮೂವರು ಗೆಳೆಯರು ಮದುವೆ ಬಗ್ಗೆ ಚರ್ಚಿಸುತ್ತಿದ್ದರು.

ಗಿರೀಶ : ಮದುವೆಯ ಅರ್ಥ…. `ಎಲ್ಲಿಗೆ ಹೋಗಿದ್ರಿ’ಯಿಂದ ಹಿಡಿದು `ಎಲ್ಲಿಗೆ ಸಾಯಕ್ಕೆ ಹೋಗಿದ್ರಿ?’ ವರೆಗೂ ಇದೆ.

ಸುರೇಶ : ಅಷ್ಟೇ ಅಲ್ಲ… `ಏನೂಂದ್ರೆ…’ಯಿಂದ ಹಿಡಿದು `ಇದೇನು ಕಿವಿ ಕೆಪ್ಪಾಯ್ತೆ?’ವರೆಗೂ!

ಮಹೇಶ : ಅಷ್ಟು ಮಾತ್ರ ಅಲ್ಲ, `ನೀನು ಸಿಕ್ಕಿದ್ದು ನನ್ನ ಅದೃಷ್ಟ,` ಹೋಗಿ `ಯಾವ ಪಾಪ ಮಾಡಿದ್ನೋ, ನಿನ್ನಂಥ ಕರ್ಮ ಗಂಟು ಬಿತ್ತು,’ ಅನ್ನುವವರೆಗೆ!

 

ಆಗಿನ್ನೂ ಕೊರೆಯುವ ಚಳಿಗಾಲ. ಅಪ್ಪಟ ಸೋಮಾರಿಗಳಾದ ತಾತಾ, ಮಗ, ಮೊಮ್ಮಗ ಕಂಬಳಿ ಹೊದ್ದು ಗೊರಕೆ ಹೊಡೆಯುತ್ತಿದ್ದರು. ಎಲ್ಲಿಂದಲೋ ಇಬ್ಬರು ಕಳ್ಳರು ಮನೆಗೆ ನುಗ್ಗಿ, ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಓಡತೊಡಗಿದರು.

ತಾತಾ : ಏ ಸೋಮಾರಿಗಳಾ…. ಎದ್ದು ಹಿಡೀರೋ ಆ ಕಳ್ಳರನ್ನ!

ಮಗ : ಹೋಗೋ ಮಗನೇ…. ತಾತಾ ಹೇಳ್ತಿರೋದು ನಿನಗೇ!

ಮೊಮ್ಮಗ : ಈ ತಲೆದಿಂಬು ಎಳೆದುಕೊಳ್ಳಲು ಬರ್ತಾನಲ್ಲ, ಆಗ ಹಿಡಿದುಕೊಳ್ಳುತ್ತೇನೆ…. ಇರಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ