– ರಾಘವೇಂದ್ರ ಅಡಿಗ ಎಚ್ಚೆನ್
ಬಹುಚರ್ಚಿತ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಇಂದು (ನ.3) ಅಧಿಕೃತವಾಗಿ ಚಾರ್ಜ್ ಫ್ರೇಮ್ (ದೋಷಾರೋಪ ನಿಗದಿ) ಮಾಡಲಾಗಿದೆ.
ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿಗಳ ವಿರುದ್ಧದ ದೋಷಾರೋಪಗಳನ್ನು ನ್ಯಾಯಾಧೀಶರು ಓದಿ ಕೇಳಿಸಿದರು. ಕಿಕ್ಕಿರಿದು ತುಂಬಿದ್ದ ಕೋರ್ಟ್ ಹಾಲ್ನಲ್ಲಿ ಗದ್ದಲದ ನಡುವೆ ಈ ಪ್ರಕ್ರಿಯೆ ಪೂರ್ಣಗೊಂಡಿತು.
ಆರೋಪಗಳು ಓದಿ ಕೇಳಿಸಿದ ನಂತರ, ನ್ಯಾಯಾಧೀಶರು ಆರೋಪಿಗಳಿಗೆ “ನಿಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ, “ಪೊಲೀಸರು ಹೊರಿಸಿದ ಆರೋಪಗಳು ಸುಳ್ಳು,” ಎಂದು ಎಲ್ಲ ಆರೋಪಿಗಳು ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ, ಕೋರ್ಟ್ ನವೆಂಬರ್ 10ಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ಆ ದಿನದಿಂದಲೇ ಡಿ–ಗ್ಯಾಂಗ್ ವಿರುದ್ಧ ಕೊಲೆ ಪ್ರಕರಣದ ಟ್ರಯಲ್ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಇದೀಗ ವಿಚಾರಣೆಯ ವೇಳೆ, ಸುಮಾರು ಎರಡು ತಿಂಗಳ ಬಳಿಕ ನಟ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಮುಖಾಮುಖಿಯಾಗಿದ್ದು, ಕೋರ್ಟ್ ಆವರಣದಲ್ಲಿ ನೂಕುನುಗ್ಗಲಿನ ನಡುವೆ ಪವಿತ್ರಾ ದರ್ಶನ್ ಅವರೊಂದಿಗೆ ಮಾತನಾಡಲು ಯತ್ನಿಸಿದ ಘಟನೆ ಗಮನಸೆಳೆಯಿತು.
ಜಾಮೀನು ರದ್ದು ಮಾಡಿ ಮತ್ತೆ ಜೈಲಿಗೆ ಹಿಂತಿರುಗಿದ ನಂತರ, ಇಬ್ಬರಿಗೂ ಇದೇ ಮೊದಲ ಬಾರಿಗೆ ಕೋರ್ಟ್ನಲ್ಲಿ ಮುಖಾಮುಖಿ ಸಂಭವಿಸಿದೆ.





