- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಕಿರುತೆರೆಯ ನಟಿ ನಂದಿನಿ ಬೆಂಗಳೂರಿನ ಕೆಂಗೇರಿ ವ್ಯಾಪ್ತಿಯ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆ ಕೊಟ್ಟೂರಿನ ನಂದಿನಿ, ಬೆಂಗಳೂರಿನ ಆರ್ಆರ್ ನಗರದಲ್ಲಿ ನೆಲೆಸಿದ್ದರು. ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದ ಇವರು ಕೆಂಗೇರಿ ವ್ಯಾಪ್ತಿಯ ಪಿಜಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕೆಂಗೇರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಂದಿನಿ ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾರೆ. ವೈಯಕ್ತಿಕ ಸಮಸ್ಯೆ ಹಾಗೂ ಕುಟುಂಬದ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ನಂದಿನಿ ಆತ್ಮಹತ್ಯೆಯ ಹಿಂದೆ ಹಲವು ಕಾರಣಗಳು ಕೇಳಿಬರುತ್ತಿವೆ. 3 ವರ್ಷಗಳ ಹಿಂದೆ ಶಿಕ್ಷಕರಾಗಿದ್ದ ತಂದೆ ನಿಧನರಾಗಿದ್ದರು. ಅವರ ವೃತ್ತಿಯನ್ನೇ ಮುಂದುವರಿಸುವಂತೆ ಕುಟುಂಬದಿಂದ ಒತ್ತಡವಿತ್ತು ಎನ್ನಲಾಗಿದೆ. ಆದರೆ ಶಿಕ್ಷಕಿಯಾಗಲು ಇಷ್ಟವಿಲ್ಲದ ನಂದಿನಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದ ನಟಿ ನಂದಿನಿ.
ನಂದಿನಿ ಅವರು ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಜೀವ ಹೂವಾಗಿದೆ, ಸಂಘರ್ಷ ಮತ್ತು ನೀನಾದೆ ನಾ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದರು. ಕೆಂಗೇರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.





