ಮೈಸೂರು ಸಂಸ್ಥಾನವನ್ನು ಆಳಿದ ಒಡೆಯರ್ ಸಂಸ್ಥಾನದಲ್ಲಿ ಚಾಮರಾಜ ಒಡೆಯರ್ ಎಂಬ ಹೆಸರಿನ ಹಲವು ರಾಜರಿದ್ದರೂ, ಶಿಕ್ಷಣ, ಕಲೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಆಧುನಿಕ ಮೈಸೂರಿನ ನಿರ್ಮಾತೃ ಎಂದೇ ಪ್ರಖ್ಯಾತರಾದ ಹತ್ತನೇ ಚಾಮರಾಜೇಂದ್ರ ಒಡೆಯರ್ (1881-1894) ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ
ವಿಜಯನಗರ ಸಾಮ್ರಾಜ್ಯದ ಅವಸಾನದ ನಂತರ, ಶ್ರೀರಂಗಪಟ್ಟಣದ ವಿಜಯನಗರ ಪ್ರತಿನಿಧಿಯಾಗಿದ್ದ ಶ್ರೀರಂಗರಾಯರ ಪತ್ನಿ ಅಲಮೇಲಮ್ಮನವರ ಬಳಿ ಇದ್ದ ಆಭರಣಗಳನ್ನು ಬಲವಂಅವಾಗಿ ಮೈಸೂರು ಸಂಸ್ಥಾನದ ಸೈನ್ಯ ಯತ್ನಿಸಿದಾಗ, ಒಡವೆಯನ್ನು ಕೊಡಲು ನಿರಾಕರಿಸಿದ್ದಲ್ಲದೇ, ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ, ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡುತ್ತಾಳೆ. ಈ ಶಾಪದ ಹಿನ್ನಲೆಯೋ ಎನ್ನುವಂತೆ ಸುಮಾರು 400 ವರ್ಷಗಳ ಕಾಲ ಮೈಸೂರು ರಾಜರ ವಂಶದಲ್ಲಿ ಪ್ರತಿ ಎರಡು ತಲೆಮಾರಿಗೆ ಒಮ್ಮೆ ಮಾತ್ರ ಪುತ್ರ ಸಂತಾನವಾಗುತ್ತಿದ್ದು ಹಾಗಾಗಿ ಪ್ರತೀ ಎರಡು ಸಂತತಿಗೊಮ್ಮೆ ತಮ್ಮದೇ ಕುಟುಂಬದವರ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯವಿದೆ.

ಆದೇ ಪ್ರಕಾರದಂತೆ ಕೃಷ್ಣರಾಜ ಒಡೆಯರ್ III ಅವರಿಗೆ ಗಂಡು ಸಂತಾನ ಇಲ್ಲದಿದ್ದ ಕಾರಣ ತಮ್ಮ ಪುತ್ರಿ ರಾಜಕುಮಾರಿ ಪುಟಮ್ಮಣಿ ದೇವಿ ಮತ್ತು ಬೆಟ್ಟದ-ಕೋಟೆ ಅರಸು ಶಾಖೆಯ ಸರ್ದಾರ್ ಚಿಕ್ಕ ಕೃಷ್ಣರಾಜ ಅರಸು ಅವರ ಮೂರನೇ ಮಗನಾಗಿ ಫೆಬ್ರವರಿ 22, 1863 ರಂದು ಜನಿಸಿದ್ದ ಶ್ರೀ ಜಾಮರಾಜೇಂದ್ರ ಅವರನ್ನು ಜೂನ್ 18,1865 ದತ್ತು ಮಗನಾಗಿ ಸ್ವೀಕರಿಸಿ, ಮುಂದೆ ಸೆಪ್ಟೆಂಬರ್ 23, 1868ರಂದು ಮೈಸೂರಿನ 23ನೇ ಮಹಾರಾಜರಾಗಿ ಪಟ್ಟಾಭಿಷೇಕವನ್ನು ಮಾಡಲಾಗುತ್ತದೆ.
ಹೀಗೆ 23ನೇ ಮೈಸೂರು ಅರಸರಾದರೂ 1831ರಲ್ಲಿ ಮೈಸೂರು ಆರಸರು ದುಂಚುವೆಚ್ಚಮಾಡಿ ಅಧಿಕಾರ ನಡೆಸುತ್ತಿದ್ದಾರೆ ಎಂಬ ಆರೋಪದಿಂದ ಬ್ರಿಟೀಷರು ಕೃಷ್ಣರಾಜ ಒಡೆಯರ್ III ಅವರಿಂದ ಅಧಿಕಾರವನ್ನು ಕಿತ್ತುಕೊಂಡು ನೇರವಾಗಿ ತಮ್ಮ ಅಧಿಕಾರಿಗಳ ಮೂಲಕ ಮೈಸೂರು ಸಂಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಿಂದ ಅವರ ಅಧಿಕಾರವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಮೈಸೂರು ಸಂಸ್ಥಾನದ ಆಡಳಿತ ಹಕ್ಕನ್ನು ಹಿಂದುರಿಗಿಸಬೇಕೆಂದು ನಿರಂತರವಾಗಿ ಬ್ರೀಟೀಷರಿಗೆ ಪತ್ರ ಬರೆಯುತ್ತಿದ್ದ ಪರಿಣಾಮ 1881 ರಲ್ಲಿ, ಮೈಸೂರು ರಾಜಪ್ರಭುತ್ವ ರಾಜ್ಯವನ್ನು ಪುನರ್ರಚಿಸಿ ಒಡೆಯರ್ ರಾಜವಂಶಕ್ಕೆ ಅಧಿಕಾರವನ್ನು ಹಸ್ತಾಂತರ ಗೊಳಿಸಿದಾಗ, ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರು ಅಧಿಕೃತವಾಗಿ ಮೈಸೂರಿನ ಒಡೆಯರಾಗಿ ಆಡಳಿತದ ಜವಾಬ್ದಾರಿಯನ್ನು ವಹಿಸಿ ಕೊಳ್ಳುತ್ತಾರೆ

ಚಾಮರಾಜ ಒಡೆಯರು ಅಧಿಕಾರ ವಹಿಸಿಕೊಳ್ಳುತಿದ್ದಂತೆಯೇ ಬ್ರಿಟಿಷರು ತಮ್ಮ ವಶದಲ್ಲಿದ್ದ ಶ್ರೀರಂಗಪಟ್ಟಣವನ್ನು ಅವರಿಗೆ ಬಿಟ್ಟುಕೊಟ್ಟು ಬೆಂಗಳೂರಿನ ದಂಡು ಪ್ರದೇಶದ ಕಡೆ ತಮ್ಮ ವಲಸೆ ಹೋಗುತ್ತಾರೆ. ಹೀಗೆ ಅಧಿಕಾರ ತಮ್ಮ ಕೈವಶವಾಗುತ್ತಿದ್ದಂತೆಯೇ, ದೂರದೃಷ್

1883ರಲ್ಲಿ ಸಿ. ರಂಗಾಚಾರ್ಲು ಅವರು ಅಕಾಲಿಕವಾಗಿ ಮರಣ ಹೊಂದಿದಾಗ, ಕೆ. ಶೇಷಾದ್ರಿ ಅಯ್ಯರ್ ಅವರು ದಿವಾನರಾಗಿ ನಿಯುಕ್ತರಾದ ನಂತರ ಚಾಮರಾಜ ಒಡೆಯರ ಪ್ರಜಾಹಿತದೃಷ್ಟಿ ಮತ್ತು ದಿವಾನರ ವಿವೇಕ ಹಾಗೂ ಜಾಣ್ಮೆಯಿಂದ ಮೈಸೂರು ರಾಜ್ಯದ ಪ್ರಗತಿ ಮತ್ತೊಂದು ಮಜಲಿಗೆ ತಲುಪುತ್ತದೆ. ಪ್ರಜೆಗಳ ಹಿತರಕ್ಷಣೆಗಾಗಿ ಬಹಳಷ್ಟು ಒತ್ತು ನೀಡಿ ಶಿಕ್ಷಣ, ಆರೋಗ್ಯ, ಅರಣ್ಯ ಸಂಪತ್ತು ಕಾಪಾದುವ ಮೂಲಕ ರಾಜ್ಯದ ಪ್ರಗತಿಯನ್ನು ತರುವುದಲ್ಲದೇ, ರಾಜ್ಯದ ಆದಾಯವನ್ನು ಹೆಚ್ಚಿಸುವ ಮೂಲಕ ಪ್ರಜೆಗಳ ನೆಮ್ಮದಿಯನ್ನು ಇಮ್ಮಡಿಸುವುದರಲ್ಲಿ ಸಫಲರಾಗುತ್ತಾರೆ. ರಾಜ್ಯಾಡಳಿತದ ಪ್ರಮುಖ ಹುದ್ದೆಗಳಿಗೆ ಪ್ರತಿಭಾವಂತರನ್ನು ನೇಮಿಸುವ ಸಲುವಾಗಿ ಸಿವಿಲ್ ಪರೀಕ್ಷೆಯನ್ನು ನಡೆಸುವ ಪದ್ಧತಿಯನ್ನು ಜಾರಿಗೆ ತರಲಾಗುತ್ತದೆ. 1892ರಲ್ಲಿ ಭಾರತದ ವೈಸ್ರಾಯ್ ಲಾರ್ಡ್ ಲ್ಯಾನ್ಸ್ಡೌನ್ ಮೈಸೂರಿಗೆ ಭೇಟಿ ನೀಡಿ, ಇಲ್ಲಿನ ಪ್ರಗತಿಯನ್ನು ಕಂಡು ಸುಪ್ರೀತನಾಗಿ, ಇಡೀ ಭಾರತದಲ್ಲಿ ಪ್ರಭುವಿಗೂ, ಪ್ರಜೆಗಳಿಗೂ ಇಂಥ ಮಧುರ ಬಾಂಧವ್ಯ ಬೆಳೆದಿರುವುದೂ, ಇಂಥ ಸರ್ಕಾರವೇರ್ಪಟ್ಟಿರುವುದೂ, ಪ್ರಜಾಕ್ಷೇಮವೇ ಸರ್ಕಾರದ ಪರಮಾದರ್ಶವೆಂಬ ಘನತತ್ತ್ವ ಯಶಸ್ವಿಯಾಗಿರುವುದೂ ಮೈಸೂರು ಸಂಸ್ಥನದಲ್ಲಿ ಮಾತ್ರಾ ಎಂದು ಮುಕ್ತಕಂಠದಲ್ಲಿ ಪ್ರಶಂಸಿರುವುದು ಗಮನಾರ್ಹವಾಗಿದೆ.
ಇದೇ ಸಮಯದಲ್ಲೇ ಕೇವಲ ಗುಡಿ ಕೈಗಾರಿಕೆಗಳಿಗಷ್ಟೇ ಸೀಮಿತವಾಗಿದ್ದ ರಾಜ್ಯದಲ್ಲಿ ದೊಡ್ಡ ದೊಡ್ಡ ಪ್ರಮಾಣದ ಕೈಗಾರಿಕೀಕರಣಕ್ಕೆ ನಾಂದಿ ಹಾಡಿದ್ದಲ್ಲದೇ, ಆ ಕೈಗಾರಿಕೆಗಳಿಗೆ ಅಗತ್ಯವಿದ್ದ ನುರಿತ ಕೆಲಸಗಾರರನ್ನು ಒದಗಿಸುವ ಸಲುವಾಗಿ ರಾಜ್ಯಾದ್ಯಂತ ಹಲವಾರು ಕೈಗಾರಿಕಾ ಶಾಲೆಗಳನ್ನು ಸ್ಥಾಪಿಸಿದರು. ವಾರ್ಷಿಕ ದಸರಾ ಕೈಗಾರಿಕಾ ಪ್ರದರ್ಶನವನ್ನು ನಡೆಸುವ ಮೂಲಕ ಅವರು ಮೈಸೂರು ಸಾಮ್ರಾಜ್ಯದ ಕೈಗಾರಿಕೀಕರಣಕ್ಕೆ ಉತ್ತೇಜನ ನೀಡಿದರು ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡುವ ಸಲುವಾಗಿ ಕನ್ನಡ ಬಾಷೋಜ್ಜೀವಿನಿ ಶಾಲೆಯನ್ನು ಸ್ಥಾಪಿಸಿದರು. ರೈತರಿಗೆ ಹಣಕಾಸು ಒದಗಿಸಲು ಕೃಷಿ ಬ್ಯಾಂಕ್ಗಳ ಸ್ಥಾಪನೆಗೆ ಅವರು ಅನುಕೂಲ ಮಾಡಿಕೊಟ್ಟರು ಮತ್ತು ಸರ್ಕಾರಿ ಉದ್ಯೋಗಿಗಳಿಗೆ ಜೀವ ವಿಮೆಯನ್ನು ಪ್ರಾರಂಭಿಸಿದರು. ಸೂಕ್ತ ಸಾರಿಗೆ ವ್ಯವಸ್ಥೆಯ ಮೂಲಕ ಹಳ್ಳಿಗಳು ಮತ್ತು ಪಟ್ಟಣಗಳನ್ನು ಸೇರಿಸಿದಲ್ಲಿ, ಮತ್ತಷ್ಟು ಪ್ರಗತಿಯನ್ನು ಕಾಣಬಹುದು ಎಂಬುದನ್ನು ಮನಗಂಡು, ಅವರದ್ದೇ ಕಾಲದಲ್ಲಿ ಬೆಂಗಳೂರು ಮತ್ತು ಮೈಸೂರು ರೈಲು ಮಾರ್ಗವನ್ನು ಆರಂಭಿಸಿ ಸಣ್ಣ ಸಣ್ಣ ಹಳ್ಳಿಗಳ ಮೂಲಕ ಸಂಪರ್ಕ ವ್ಯವಸ್ಥೆಯನ್ನು ಜಾರಿಗೆ ತಂದರು. ಆವರ ಅಡಳಿತ ಸಮಯದಲ್ಲೇ ಮೂರ್ನಾಲ್ಕು ವರ್ಷಗಳ ಕಾಲ ಬಂದ ಬರದಿಂದಾಗಿ ರೈತಾಪಿವರ್ಗದವರು ಕೃಷಿಗೆ ಬಿಡಿ ಕುಡಿಯುವ ನೀರಿಗೂ ಸಹಾ ಬವಣೆ ಪಡುತ್ತಿದ್ದದ್ದನ್ನು ಗಮನಿಸಿ ಅದಕ್ಕೊಂದು ಶಾಶ್ವತ ಪರಿಹಾರವನ್ನು ನೀಡುವ ಸಲುವಾಗಿ ಅಣೆಕಟ್ಟಬೇಕೆಂಬ ಆಶಯವೇ ಮುಂದೆ ಕನ್ನಂಬಾಡಿ ಅಣೆಕಟ್ಟಾಗಿ ಸಾಕಾರ ಗೊಂಡಿದೆ.
ಚಾಮರಾಜೇಂದ್ರ ಅವರ ಕಾಲದಲ್ಲೇ, ಬೆಂಗಳೂರು ಅರಮನೆ ಲಾಲ್ಬಾಗ್ ನಲ್ಲಿರುವ ಗಾಜಿನ ಮನೆ, ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಮಹಾರಾಜ ಕಾಲೇಜು (1889), ಮಹಾರಾಜ ಸಂಸ್ಕೃತ ಶಾಲೆ, ಮೈಸೂರಿನ ಸರ್ಕಾರಿ ಕಛೇರಿ, ಮೈಸೂರಿನ ಲ್ಯಾನ್ಸ್ಡೌನ್ ಬಜಾರ್, ಡಫರಿನ್ ಟವರ್, ಮೈಸೂರು ಮೃಗಾಲಯ , ಊಟಿಯಲ್ಲಿ ಫರ್ನ್ ಹಿಲ್ ಪ್ಯಾಲೇಸ್ ಎಲ್ಲವೂ ಆರಂಭವಾಗಿ ಮೈಸೂರಿನ ಅಭಿವೃದ್ಧಿಯ ಹರಿಕಾರ ಎಂಬ ಖಾತಿಗೆ ಪಾತ್ರರಾದರು
ಸ್ವತಃ ಒಳ್ಳೆಯ ಸಂಗೀತ ವಿದ್ವಾಂಸರಾಗಿದ್ದ ಅದರಲ್ಲೂ ಪಿಟೀಲು ವಾದಕರಾಗಿದ್ದರು ಚಾಮರಾಜೇಂದ್ರರು ಕಲೆ ಮತ್ತು ಸಂಗೀತದ ಮಹಾನ್ ಪೋಷಕರಾಗಿದ್ದರು. ಹಾಗಾಗಿಯೇ ಅವರ ಆಸ್ಥಾನದಲ್ಲಿ ವೀಣೆ ಸುಬ್ಬಣ್ಣ, ವೀಣೆ ಶೇಷಣ್ಣ, ಮೈಸೂರು ವಾಸುದೇವಾಚಾರ್ ವೀಣಾ ಪದ್ಮನಾಭಯ್ಯ, ಮೈಸೂರು ಕರಿಗಿರಿ ರಾವ್, ಬಿಡಾರಂ ಕೃಷ್ಣಪ್ಪ ನಂತರ ಅವರ ಶಿಷ್ಯರಾದಂತಹ ಪಿಟೀಲು ಚೌಡಯ್ಯನವರಂತಹ ಹೆಸರಾಂತ ಕಲಾವಿದರನ್ನು ಬೆಳೆಸಿ ಪೋಷಿಸಿದ ಹೆಗ್ಗಳಿಕೆ ಅವರದ್ದಾಗಿತ್ತು. ಅರಮನೆಯಲ್ಲಿ ಪ್ರತಿ ದಿನವೂ ನಡೆಯುತ್ತಿದ್ದ ವೀಣಾ ಸುಬ್ಬಣ್ಣ ಅವರ ಗಾಯನ ಮತ್ತು ವೀಣಾ ಶೇಷಣ್ಣ ಅವರ ವೀಣಾ ಕಛೇರಿಯಲ್ಲಿ ಸ್ವತಃ ಮಹಾರಾಜರೇ ಪಿಟೀಲು ಪಕ್ಕವಾದ್ಯಗಾರರಾಗಿದ್ದು ಜನರನ್ನು ಮನರಂಜಿಸಿದ್ದರು. ಅವರ ನೆಚ್ಚಿನ ಕೃತಿಗಳಲ್ಲಿ ಸುಜನ ಜೀವನ ಮತ್ತು ಲಾವಣ್ಯ ರಾಮ ಸೇರಿವೆ ಅವರು ಕರ್ನಾಟಕ ಸಂಗೀತದ ಒಂದು ಸುಂದರ ಪ್ರಕಾರವಾದ ಜಾವಳಿಯಲ್ಲಿ ಪರಿಣಿತರಾಗಿದ್ದರು

ಕೇವಲ ತಮ್ಮ ರಾಜ್ಯ ಮತ್ತು ತಮ್ಮ ರಾಜ್ಯದ ಪ್ರಜೆಗಳಲ್ಲದೇ ನೆರೆಹೊರೆಯ ರಾಜ್ಯದೊಂದಿಗೂ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದರು 19ನೇ ಶತಮಾನದ ಉತ್ತರಾರ್ಧ ಮತ್ತು 20ನೇ ಶತಮಾನದ ಆರಂಭದಲ್ಲಿ ಭಾರತದ ಅತ್ಯಂತ ಪ್ರಗತಿಪರ, ಆಧುನೀಕರಣಗೊಳಿಸಿದ ಆಡಳಿತಗಾರರಲ್ಲಿ ಮೈಸೂರಿನ ಚಾಮರಾಜ ಒಡೆಯರ್ ವಡೋದರಾದ ಮಹಾರಾಜರಾಗಿದ್ದಂತಹ ಸಯಾಜಿರಾವ್ ಗಾಯಕ್ವಾಡ್ ಅವರ ಹೆಸರು ಚಿರಸ್ಥಾಯಿಯಾಗಿದೆ. ಅವರಿಬ್ಬರೂ ಸಹಾ ಬಹಳ ನಿಕಟ ಸ್ನೇಹ ಮತ್ತು ಪರಸ್ಪರ ಗೌರವವನ್ನು ಇಟ್ಟುಕೊಂಡಿದ್ದಲ್ಲದೇ, ತಮ್ಮ ರಾಜ್ಯಗಳ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿಯ ಕುರಿತಾಗಿ ಒಟ್ಟಾಗಿ ಸಮಾಲೋಚಿಸಿ ಅದನ್ನು ಜಾರಿಗೆ ತಂದರು, ತ್ತಿದ್ದರು ಕುರಿತು ವಿಚಾರಗಳನ್ನು ಹಂಚಿಕೊಂಡರು. ಈ ಎರಡೂ ದಿಗ್ಗಜರ ಸ್ನೇಹದ ಕುರುಹನ್ನು ಆಚಂದ್ರಾರ್ಕವಾಗಿ ಇರುವಂತೆ ಮಾಡುವ ಸಲುವಾಗಿ ಆ ಇಬ್ಬರೂ ಮಹಾನ್ ನಾಯಕರು ತಮ್ಮ ತಮ್ಮ ರಾಜಧಾನಿಯ ಪ್ರಮುಖ ರಸ್ತೆಗಳಿಗೆ ಪರಸ್ಪರ ಹೆಸರನ್ನು ಇಟ್ಟಿದ್ದು, ಅದೇ ವಡೋದರದ ಮಹರಾಜಾ ಚಾಮರಾಜ ರಸ್ತೆ ಮತ್ತು ಮೈಸೂರಿನ ಸಯಾಜಿರಾವ್ ರಸ್ತೆಯಾಗಿ ಇಂದಿಗೂ ಇದೆ.

ಮೇ 1878 ರಲ್ಲಿ, ಚಾಮರಾಜೇಂದ್ರ ಒಡೆಯರ್ ಅವರಿಗೆ ಮೈಸೂರು ರಾಜ್ಯದ ಪ್ರಮುಖ ಕುಲೀನರಾದ ಕಲಾಲೆಯ ಅರಸರ ಮಗಳಾದ ಮಹಾರಾಣಿ ಕೆಂಪನಂಜಮ್ಮಣ್ಣಿ ದೇವಿಯವರೊಂದಿಗೆ ವಿವಾಹ ಮಾಡಲಾಗುತ್ತದೆ. ಆವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಅವರಿಗೆ ನಾಲ್ಕು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳ ಜನನವಾಗುತ್ತದೆ.
1893 ರಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನಕ್ಕೆ ಹೋಗುವ ಮೊದಲು ಇಡೀ ದೇಶಾದ್ಯಂತ ಪರಿವ್ರಾಜಕರಾಗಿ ಪಯಣಿಸುತ್ತಿದ್ದ ಸಂಧರ್ಭದಲ್ಲಿ ಮೈಸೂರು ಸಂಸ್ಥಾನಕ್ಕೂ ಭೇಟಿ ನೀಡಿ ಚಾಮರಾಜೇಂದ್ರ ಮತ್ತು ಅಮ್ಮಣ್ಣಿ ದಂಪತಿಗಳನ್ನು ಭೇಟಿಯಾಗಿ ಉತ್ತಮ ಸಂಬಂಧ ಹೊಂದಿದ್ದ ಕಾರಣದಿಂದಾಗಿಯೇ ವಿವೇಕಾನಂದರ ಅಮೇರಿಕಾ ಪ್ರವಾಸಕ್ಕೆ ಮೈಸೂರು ಅರಸರು ಅರ್ಥಿಕವಾಗಿ ಸಹಾಯ ಮಾಡಿರುವುದು ವಿಶೇಷವಾಗಿದೆ.
ಅದೇಕೋ ಏನೋ, ಸಾಮನ್ಯವಾಗಿ ಮಹಾನ್ ಸಾಧನೆ ಮಾಡಿದ ಸಾಧನೆಕಾರರ ಆಯಸ್ಸು ಅತ್ಯಂತ ಅಲ್ಪವಾಗಿರುತ್ತದೆ ಎನ್ನುವುದಕ್ಕೆ, ಆದಿಗುರು ಶ್ರೀ ಶಂಕರಾಚಾರ್ಯರು, ವಿವೇಕಾನಂದರುಗಳೇ ಸಾಕ್ಷಿಯಾದಂತೆ ಸಣ್ಣ ವಯಸ್ಸನಲ್ಲೇ ಪಟ್ಟಕ್ಕೆ ಬಂದು ಸಿಕ್ಕ ಕಡಿಮೆ ವರ್ಷದ ಅಧಿಕಾರದಲ್ಲೇ ಇಷ್ಟೇಲ್ಲಾ ಸಾಧನೆಗಳನ್ನು ಮಾಡುವ ಮೂಲಕ ಮೈಸೂರು ಸಂಸ್ಥಾನದ ಮಹಾನ್ ಹರಿಕಾರರಾಗಿ ಧಾಫುಗಾಲು ಹಾಕುತ್ತಿದ್ದ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಕಲ್ಕತ್ತಾ ಪ್ರವಾದಲ್ಲಿದ್ದಾಗ ಡಿಫ್ತೀರಿಯಾ ಖಾಯಿಲೆಗೆ ತುತ್ತಾಗಿ, ಅಲ್ಲಿನ ವೈದ್ಯರುಗಳು ನೀಡಿದ ಚಿಕಿತ್ಸೆಗಳು ಫಲಕಾರಿಯಾಗದೇ, ಡಿಸೆಂಬರ್ 28, 1894 ರಂದು ಕಲ್ಕತ್ತಾದಲ್ಲಿಯೇ ತಮ್ಮ 31 ನೇ ವಯಸ್ಸಿನಲ್ಲಿ ನಿಧನರಾಗುವ ಮೂಲಕ ಮೈಸೂರು ಸಂಸ್ಥಾನದ ಧೃವ ನಕ್ಷತ್ರವೊಂದು ಅಕಾಲಿಕವಾಗಿ ಮಾಯವಾದರೂ, ಮುಂದೆ ಅವರ ಮಗ ನಾಲ್ವಡೀ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆಯ ಎಲ್ಲಾ ಕನಸುಗಳ ಜೊತೆ ತಮ್ಮ ಆಶಯಗಳನ್ನೂ ನನಸು ಮಾಡುವ ಮೂಲಕ ಇಡೀ ವಿಶ್ವದಲ್ಲೇ ಮೈಸೂರು ಸಂಸ್ಥಾನವನ್ನು ವಿಖ್ಯಾತ ಗೊಳಿಸಿದ್ದು ಈಗ ಇತಿಹಾಸ. ಇಂತಹ ಮಹಾನ್ ಚೇತನರೂ ಮತ್ತು ಪ್ರಾಥಃ ಸ್ಮರಣೀಯರೂ ಆದ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಜಯಂತಿಯಂದು ಅವರಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯಕರ್ತವೇ ಆಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





