ಗ್ರಾಮೋತ್ಥಾನವೇ ರಾಷ್ಟ್ರೋತ್ಥಾನ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹೇಳಿದ್ದಾರೆ. ಆದರೆ ರಾಜ್ಯದ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮೀಣ ಭಾಗದ ಜನತೆಗೆ ಸೂಕ್ತ ಆಡಳಿತ ನೀಡಲು ಅಧಿಕಾರಿಗಳೇ ಲಭ್ಯವಿರುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸದಾ ಸಿಗಬೇಕು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

IMG-20260429-WA0094

ಹೌದು..! ಕಚೇರಿಗೆ ಹಾಜರಾಗದೇ ಕಳ್ಳಾಟವಾಡುವ ಪಿಡಿಓಗಳಿಗೆ ಶಿಸ್ತಿನ ಪಾಠ ಬೋಧಿಸುವ ಉದ್ದೇಶದೊಂದಿಗೆ ಇನ್ಮುಂದೆ ರಾಜ್ಯದ ಎಲ್ಲಾ ಪಿಡಿಓಗಳಿಗೆ ಬಯೋಮೆಟ್ರಿಕ್​ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪಂಚತಂತ್ರ 2.0 ಮೂಲಕ ಕೇವಲ ಪಿಡಿಓಗಳು ಮಾತ್ರವಲ್ಲದೇ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳು ಬಯೋಮೆಟ್ರಿಕ್​ ಹಾಜರಾತಿ ಹಾಕುವುದು ಕಡ್ಡಾಯವಾಗಿರಲಿದೆ.

ಇನ್ನು ಇದರ ಜೊತೆಯಲ್ಲಿ ಪಿಡಿಓಗಳು ಸೋಮವಾರದಿಂದ ಶನಿವಾರದವರೆಗೆ ತಾವು ಎಲ್ಲೆಲ್ಲಿ ಹೋಗುತ್ತೇವೆ, ಯಾವ ಸಭೆಯಲ್ಲಿ ಇರುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಪ್ರವಾಸದ ವಿವರವನ್ನು ಬಹಿರಂಗಪಡಿಸಬೇಕು. ಅಲ್ಲದೇ ಇದರ ಜೊತೆಯಲ್ಲಿ ಪಿಡಿಓಗಳಿಗೆ ಜಿಪಿಎಸ್​ ಆಧಾರಿತ ಟ್ರ್ಯಾಕಿಂಗ್​ ವ್ಯವಸ್ಥೆ ಜಾರಿಗೂ ಸರ್ಕಾರ ಚಿಂತನೆ ನಡೆಸಿದೆ. ಒಟ್ನಲ್ಲಿ ಅಧಿಕಾರಿಗಳು ಸಾರ್ವಜನಿಕರ ಕಣ್ತಪ್ಪಿಸಿ ಆಡಳಿತ ವ್ಯವಸ್ಥೆ ನಿಧಾನಗತಿಯಲ್ಲಿ ಸಾಗುವಂತೆ ಮಾಡಬಾರದು ಎಂಬ ಉದ್ದೇಶದೊಂದಿಗೆ ಸರ್ಕಾರ ಈ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ