ಗ್ರಾಮೋತ್ಥಾನವೇ ರಾಷ್ಟ್ರೋತ್ಥಾನ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹೇಳಿದ್ದಾರೆ. ಆದರೆ ರಾಜ್ಯದ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮೀಣ ಭಾಗದ ಜನತೆಗೆ ಸೂಕ್ತ ಆಡಳಿತ ನೀಡಲು ಅಧಿಕಾರಿಗಳೇ ಲಭ್ಯವಿರುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸದಾ ಸಿಗಬೇಕು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಹೌದು..! ಕಚೇರಿಗೆ ಹಾಜರಾಗದೇ ಕಳ್ಳಾಟವಾಡುವ ಪಿಡಿಓಗಳಿಗೆ ಶಿಸ್ತಿನ ಪಾಠ ಬೋಧಿಸುವ ಉದ್ದೇಶದೊಂದಿಗೆ ಇನ್ಮುಂದೆ ರಾಜ್ಯದ ಎಲ್ಲಾ ಪಿಡಿಓಗಳಿಗೆ ಬಯೋಮೆಟ್ರಿಕ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪಂಚತಂತ್ರ 2.0 ಮೂಲಕ ಕೇವಲ ಪಿಡಿಓಗಳು ಮಾತ್ರವಲ್ಲದೇ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳು ಬಯೋಮೆಟ್ರಿಕ್ ಹಾಜರಾತಿ ಹಾಕುವುದು ಕಡ್ಡಾಯವಾಗಿರಲಿದೆ.
ಇನ್ನು ಇದರ ಜೊತೆಯಲ್ಲಿ ಪಿಡಿಓಗಳು ಸೋಮವಾರದಿಂದ ಶನಿವಾರದವರೆಗೆ ತಾವು ಎಲ್ಲೆಲ್ಲಿ ಹೋಗುತ್ತೇವೆ, ಯಾವ ಸಭೆಯಲ್ಲಿ ಇರುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಪ್ರವಾಸದ ವಿವರವನ್ನು ಬಹಿರಂಗಪಡಿಸಬೇಕು. ಅಲ್ಲದೇ ಇದರ ಜೊತೆಯಲ್ಲಿ ಪಿಡಿಓಗಳಿಗೆ ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೂ ಸರ್ಕಾರ ಚಿಂತನೆ ನಡೆಸಿದೆ. ಒಟ್ನಲ್ಲಿ ಅಧಿಕಾರಿಗಳು ಸಾರ್ವಜನಿಕರ ಕಣ್ತಪ್ಪಿಸಿ ಆಡಳಿತ ವ್ಯವಸ್ಥೆ ನಿಧಾನಗತಿಯಲ್ಲಿ ಸಾಗುವಂತೆ ಮಾಡಬಾರದು ಎಂಬ ಉದ್ದೇಶದೊಂದಿಗೆ ಸರ್ಕಾರ ಈ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.





