– ರಾಘವೇಂದ್ರ ಅಡಿಗ ಎಚ್ಚೆನ್.
ನಟ ರವಿಚಂದ್ರನ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಭಾವುಕರಾಗಿ ಮಾತನಾಡಿರುವುದು ಗಮನ ಸೆಳೆದಿದೆ.
ಮದ್ದೂರು ಉತ್ಸವ–2026 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರವಿಚಂದ್ರನ್ ತಮ್ಮ ಕಷ್ಟದ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ನೀಡಿದ ನೆರವನ್ನು ನೆನೆದು ಭಾವನಾತ್ಮಕವಾಗಿ ಮಾತಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್, “ಮನುಷ್ಯನ ಜೀವನದಲ್ಲಿ ಕೆಲವೊಮ್ಮೆ ಕಠಿಣ ಸಮಯ ಬರುತ್ತದೆ. ಅಂಥ ಸಂದರ್ಭದಲ್ಲಿ ಯಾರು ನಮ್ಮ ಕೈ ಹಿಡಿಯುತ್ತಾರೆ ಎಂಬುದನ್ನು ನೋಡುತ್ತಿರುತ್ತೇವೆ. ಆದರೆ ನಾನು ಕೈ ಚಾಚುವ ಮುಂಚೆಯೇ ನನ್ನ ಕೈ ಹಿಡಿದವರು ಡಿ.ಕೆ. ಶಿವಕುಮಾರ್” ಎಂದು ಹೇಳಿದರು.
“ಈ ಜೀವನದಲ್ಲಿ ನಿಮ್ಮನ್ನು ಮರೆಯೋದಿಲ್ಲ ಸರ್… ಈ ಜೀವ ನಿಮಗೇ ಅರ್ಪಣೆ” ಎಂದು ವೇದಿಕೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ರವಿಚಂದ್ರನ್, “ಚಿತ್ರರಂಗಕ್ಕೆ ಬಂದು 40 ವರ್ಷಗಳಾದರೂ ನಾನು ಯಾರ ಬಳಿಯೂ ಸಹಾಯ ಕೇಳಿಲ್ಲ. ಆದರೆ ನಾನು ಸಂಕಷ್ಟದಲ್ಲಿದ್ದಾಗ ಡಿ.ಕೆ. ಶಿವಕುಮಾರ್ ನನ್ನ ಹೆಗಲ ಮೇಲೆ ಕೈ ಹಾಕಿ ‘ನಾನು ಏನು ಮಾಡಬೇಕು ಏಳಪ್ಪ’ ಎಂದು ಕೇಳಿದ್ದರು” ಎಂದು ನೆನಪಿಸಿಕೊಂಡರು.
ತಮ್ಮ ವೃತ್ತಿ ಜೀವನದ ಏರುಪೇರುಗಳ ಬಗ್ಗೆ ಮಾತನಾಡಿದ ಅವರು, “ನಾನು ಬಿದ್ದಾಗ ಜನ ನನ್ನ ಕೈ ಬಿಡಲಿಲ್ಲ. ‘ರಾಮಾಚಾರಿ’ ಸಿನಿಮಾ ವೇಳೆ ಪಂಚೆ ಹಾಕಿ ಬಂದಾಗಲೂ ಜನ ಬೆಂಬಲಿಸಿದರು. ಈಗ ನೀವು ನನ್ನ ಕೈ ಹಿಡಿದಿದ್ದೀರಿ, ನನಗೆ ಅದೇ ಸಾಕು” ಎಂದರು.
ಇನ್ನೂ ಮದ್ದೂರು ಶಾಸಕ ಉದಯ್ ಅವರ ಸಹಾಯವನ್ನೂ ನೆನೆದ ರವಿಚಂದ್ರನ್, “ಅವರು ನನಗೆ ಗೊತ್ತಿಲ್ಲದಂತೆ ಸಹಾಯ ಮಾಡಿದ್ದಾರೆ. ನಂತರ ಸ್ನೇಹಿತರ ಮೂಲಕ ಅದು ತಿಳಿಯಿತು. ನನ್ನ ಜೀವ ಇರುವವರೆಗೆ ಪ್ರೀತಿ ಮತ್ತು ಸ್ನೇಹಕ್ಕೆ ಮಾತ್ರ ತಲೆಬಾಗುತ್ತೇನೆ” ಎಂದು ಹೇಳಿದರು.
“ಡಿ.ಕೆ. ಶಿವಕುಮಾರ್ ಎಲ್ಲಿರ್ತಾರೋ ಅಲ್ಲಿ ರವಿಚಂದ್ರನ್ ಇರುತ್ತಾನೆ” ಎಂಬ ಅವರ ಹೇಳಿಕೆ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆಯಿತು.





