– ರಾಘವೇಂದ್ರ ಅಡಿಗ ಎಚ್ಚೆನ್.
ನಾದಯೋಗಿ ಡಾ. ರಾಜಕುಮಾರ್ ಅವರ ಜೀವನ, ವ್ಯಕ್ತಿತ್ವ ಹಾಗೂ ಒಡನಾಟವನ್ನು ಒಳಗೊಂಡಿರುವ “ನಾದಯೋಗಿ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಡಾ. ರಾಜ್ಕುಮಾರ್ ಭವನದಲ್ಲಿ ನಡೆಯಿತು.
ಡಾ||ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಪುಸ್ತಕವನ್ನು ಅನಾವರಣ ಮಾಡಿದರು. ಡಾ||ರಾಜಕುಮಾರ್ ಸಹೋದರ ವರದಪ್ಪ ಅವರ ಪುತ್ರಿ ಡಾ||ಲತಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಲಹರಿ ಸಂಸ್ಥೆಯ ಮನೋಹರ ನಾಯ್ಡು, ಲಹರಿ ವೇಲು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾವೇರಿ ಕನ್ನಡ ಸಂಘ ಧಾರ್ ಎಸ್ ಸಲಾಂ ತಾಂಜಾನಿಯಾ ಪೂರ್ವ ಆಫ್ರಿಕಾ ಪ್ರತಿನಿಧಿ ಗೌಡ ಅವರು ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್. ಮಂಜುನಾಥ್ ಚವಾಣ್, “1990ರಲ್ಲಿ ಡಾ. ರಾಜ್ಕುಮಾರ್ ಅವರನ್ನು ಭೇಟಿ ಮಾಡಿದಾಗ, ಅವರೊಳಗೆ ‘ಮುತ್ತುರಾಜ್’ ಎಂಬ ಸರಳ ವ್ಯಕ್ತಿತ್ವವನ್ನು ಕಂಡೆ. ತೆರೆ ಮೇಲೆ ರಾಜ್ಕುಮಾರ್ ಇದ್ದರೂ, ಅಂತರಂಗದಲ್ಲಿ ಮುತ್ತುರಾಜ್ ಬದುಕುತ್ತಿದ್ದರು,” ಎಂದು ಸ್ಮರಿಸಿದರು.
“ನಾದಯೋಗಿ” ಪುಸ್ತಕದಲ್ಲಿ 25 ಅಧ್ಯಾಯಗಳ ಮೂಲಕ ಡಾ. ರಾಜ್ಕುಮಾರ್ ಅವರ ಜೀವನದ ಅನೇಕ ನೆನಪುಗಳು, ಅನುಭವಗಳು ಮತ್ತು ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, “ಡಾ. ರಾಜ್ಕುಮಾರ್ ಅವರು ತಮ್ಮ ಸಿನಿ ಪಯಣದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಮನಸ್ಸಿನಲ್ಲಿ ನನಗೆ ಒಂದು ಪುಟ್ಟ ಜಾಗ ಸಿಕ್ಕಿದ್ದು ನನ್ನ ಜೀವನದ ದೊಡ್ಡ ಸಾಧನೆ,” ಎಂದು ಭಾವುಕರಾದರು.
“ರಾಜ್ಕುಮಾರ್ ಅವರಂತಹ ಸಾಧಕರಿಗೆ ಸರ್ಕಾರ ಜಾಗ ನೀಡುವುದು ಸಾಮಾನ್ಯ ವಿಷಯವಲ್ಲ. ಸಾಧನೆ ಮಾಡಿದಕ್ಕೆ ಜನರು ಇಂದಿಗೂ ಸ್ಮರಿಸುತ್ತಾರೆ. ಅಣ್ಣಾವ್ರು ನೀಡಿದ ಸ್ಪೂರ್ತಿದಾಯಕ ಮಾತುಗಳೇ ಇಂದಿಗೂ ಅನೇಕ ರಾಜ್ಯಗಳು ಮತ್ತು ದೇಶಗಳಿಂದ ಅಭಿಮಾನಿಗಳನ್ನು ಸೆಳೆಯುತ್ತಿವೆ. ಜನರು ಇಂದಿಗೂ ಸಹ ಅಣ್ಣವ್ರ ಪ್ರತಿಷ್ಠಾನಕ್ಕೆ ದೇವಸ್ಥಾನಕ್ಕೆ ಬಂದಂತೆ ಅನೇಕ ರಾಜ್ಯ ದೇಶಗಳಿಂದ ಭೇಟಿ ನೀಡುತ್ತಾರೆ,” ಎಂದರು.
ಪುಸ್ತಕ ಅನಾವರಣ ಮಾಡಿ ಮಾತನಾಡಿದ ಡಾ||ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್, ನಮ್ಮ ತಂದೆಗೆ ಸಂಗೀತವೆಂದರೆ ಪ್ರಾಣ. ಗಜಲ್ ಬಹಳ ಇಷ್ಟ. ನಮ್ಮ ಮನೆಯಲ್ಲಿ ಎಲ್ಲರೂ ಸಂಗೀತ ಪ್ರೇಮಿಗಳೆ. ನಮ್ಮ ಕುಟುಂಬಕ್ಕೆ ಆತ್ಮೀಯರಾದ ಆರ್ ಮಂಜುನಾಥ್ ಹಾಗೂ ಸೌಮ್ಯ ಮಂಜುನಾಥ್ ಅವರು ಅಪ್ಪಾಜಿ ಅವರಿಗಿದ್ದ ಸಂಗೀತದ ಜ್ಞಾನವನ್ನು ಪರಿಚಯಿಸುವ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಅನಾವರಣ ಮಾಡಿದ್ದು ಬಹಳ ಖುಷಿಯಾಗಿದೆ ಎಂದರು.
ನಾದಯೋಗಿ ಕನ್ನಡಕ್ಕೆ ಅನುವಾದ ಮಾಡಿದ ಸಂಶೋಧಕಿ ಸೌಮ್ಯ ಮಂಜುನಾಥ್ ಮಾತನಾಡಿ, “ಡಾ. ರಾಜ್ಕುಮಾರ್ ಅವರ ಸರಳತೆ ಅಚ್ಚರಿಯಾಯಕದ್ದು. 1990ರಲ್ಲಿ ನಾಡೋಜ ಪ್ರಶಸ್ತಿ ಪಡೆದ ಸಂದರ್ಭದಲ್ಲೂ ಅವರು ‘ನಾನು ಬಣ್ಣ ಹಚ್ಚಿಕೊಂಡು ನಾಟಕ ಮಾಡುವವನು, ನಿಮ್ಮಷ್ಟೂ ಓದಿಲ್ಲ’ ಎಂದು ವಿನಯದಿಂದ ಮಾತನಾಡಿದ್ದರು,” ಅಂತಹ ಸರಳ ವ್ಯಕ್ತಿತ್ವ ಇನ್ನೂ ನಾವೇಲ್ಲಾ ಯಾರು ಎಂದು ನೆನಪಿಸಿಕೊಂಡರು.





