ವಿಶ್ವದ ಬಹುತೇಕ ದೇಶಗಳಲ್ಲಿ ನದಿಗಳನ್ನು ಮುಖ್ಯವಾಗಿ ಪ್ರಕೃತಿ ಸಂಪನ್ಮೂಲ (Natural Resource) ಎಂದು ನೋಡಲಾಗುತ್ತದೆ. ಕುಡಿಯುವ ನೀರು, ಕೃಷಿ, ವಿದ್ಯುತ್ ಉತ್ಪಾದನೆ, ಪರಿಸರ ಸಮತೋಲನ—ಇವೆಲ್ಲಕ್ಕಾಗಿ ನದಿಗಳನ್ನು ಸಂರಕ್ಷಿಸುವುದು ಒಂದು ಕಡ್ಡಾಯ ಜವಾಬ್ದಾರಿ ಎಂದು ಅರ್ಥೈಸುತ್ತಾರೆ. ಅಲ್ಲಿ ನದಿಗಳನ್ನು “ಬಳಸುವ”ಷ್ಟೇ ಅಲ್ಲ, ಕಾಪಾಡುವ ಸಂಸ್ಕೃತಿ ಹೆಚ್ಚು ಗಟ್ಟಿ.
*ಆದರೆ ಭಾರತದಲ್ಲಿ ನದಿಗಳ ಸ್ಥಿತಿ ವಿಭಿನ್ನ. ಇಲ್ಲಿ ನದಿಗಳು ಕೇವಲ ನೀರಿನ ಮೂಲವಲ್ಲ, ಅವು ಪವಿತ್ರ ದೇವತೆಗಳು. ಗಂಗಾ, ಯಮುನಾ, ನರ್ಮದಾ—ಇವುಗಳನ್ನು “ತಾಯಿ” ಎಂದು ಕರೆಯುವ ಪರಂಪರೆ ಇದೆ. ಧಾರ್ಮಿಕ ಗ್ರಂಥಗಳು ಮತ್ತು ಸಂಸ್ಕೃತಿಯಲ್ಲಿ ನದಿಗಳೊಂದಿಗೆ ಜನರ ಭಾವನಾತ್ಮಕ ನಂಟು ಸಾವಿರಾರು ವರ್ಷಗಳಿಂದ ಬೆಳೆದಿದೆ.*
ಭಾರತದಲ್ಲಿ ನದಿಗಳನ್ನು ಕೇವಲ ನೀರು ಕೊಡುವ ಮೂಲವಾಗಿ ನೋಡದೆ, ದೈವಿಕ ಸ್ಥಾನ ನೀಡಿ ‘ಪೂಜನೀಯ ಮಾತೆ’ ಎಂದು ಆರಾಧಿಸುವ ಅದ್ಭುತ ಸಂಸ್ಕೃತಿ ನಮ್ಮದಾಗಿದೆ. ಹೀಗಿದ್ದರೂ, ವಾಸ್ತವದಲ್ಲಿ ನದಿಗಳನ್ನು ನಡೆಸಿಕೊಳ್ಳುವ ರೀತಿ ಮಾತ್ರ ಅತ್ಯಂತ ವಿರೋಧಾಭಾಸದಿಂದ ಕೂಡಿದೆ. ನದಿಯಲ್ಲಿ ಸ್ನಾನ ಮಾಡಿದರೆ ತಮ್ಮ ಎಲ್ಲ ಪಾಪಗಳು ತೊಳೆಯುತ್ತವೆ ಎಂಬ ನಂಬಿಕೆಯಿಂದ ಜನರು ನದಿಗಿಳಿಯುತ್ತಾರೆ, ಆದರೆ ಸ್ನಾನದ ನಂತರ ತಾವು ಉಟ್ಟ ಹಳೆಯ ಬಟ್ಟೆಗಳನ್ನು, ಪ್ಲಾಸ್ಟಿಕ್ ಹಾಗೂ ಪೂಜಾ ಸಾಮಗ್ರಿಗಳನ್ನು ಅಲ್ಲೇ ಎಸೆದು ನದಿಯನ್ನೇ ಕಲುಷಿತಗೊಳಿಸಿ ಬರುತ್ತಾರೆ. “ನಮ್ಮ ಪಾಪ ತೊಳೆದರೆ ಸಾಕು, ನದಿಯ ಸ್ವಚ್ಚತೆ ನಮಗೇಕೆ?” ಎಂಬ ಶಿಸ್ತಿನ ಕೊರತೆಯೇ ಇಂದು ಭಾರತದ ನದಿಗಳು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದೆ.
*ಪ್ರಕೃತಿಯನ್ನು ದೇವರೆಂದು ಆರಾಧಿಸುವ ಹಿಂದೂ ಧರ್ಮದ ನಿಜವಾದ ಆಶಯ ಪರಿಸರವನ್ನು ರಕ್ಷಿಸುವುದೇ ಆಗಿದೆ. ಕೇವಲ ಮಂತ್ರ ಪಠಿಸಿ, ನದಿಯ ಒಡಲಿಗೆ ಕಸ ಎಸೆಯುವುದು ನಿಜವಾದ ಭಕ್ತಿಯಲ್ಲ; ಬದಲಿಗೆ, ನದಿಗಳನ್ನು ಸ್ವಚ್ಛವಾಗಿಡುವುದೇ ನಾವು ಆ ದೇವತೆಗೆ ಸಲ್ಲಿಸುವ ಶ್ರೇಷ್ಠ ಪೂಜೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನೂ ಅರಿತುಕೊಳ್ಳಬೇಕಿದೆ.*ಧಾರ್ಮಿಕ ಭಾವನೆಗಳ ಜೊತೆಗೆ ವಿದೇಶಗಳಲ್ಲಿರುವಂತಹ ಕಠಿಣ ನಾಗರಿಕ ಶಿಸ್ತು ಮತ್ತು ಜಾಗೃತಿಯನ್ನು ನಾವು ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ನದಿ ತೀರಗಳಲ್ಲಿ ಬಟ್ಟೆ ಹಾಗೂ ತ್ಯಾಜ್ಯಗಳನ್ನು ಬಿಟ್ಟುಬರುವ ಕೆಟ್ಟ ಅಭ್ಯಾಸ ನಿಲ್ಲಬೇಕು ಮತ್ತು ಪರಿಸರ ಸ್ನೇಹಿ ಧಾರ್ಮಿಕ ಆಚರಣೆಗಳಿಗೆ ಒತ್ತು ನೀಡಬೇಕು. *ನಮ್ಮ ಧಾರ್ಮಿಕ ಭಕ್ತಿಗೆ ವಿದೇಶಿಗರ ಪರಿಸರ ಶಿಸ್ತು ಮತ್ತು ವೈಜ್ಞಾನಿಕ ಜಾಗೃತಿ ಜೊತೆಯಾದಾಗ ಮಾತ್ರ, ಭಾರತದ ಪವಿತ್ರ ಜೀವನದಿಗಳನ್ನು ಮುಂದಿನ ಪೀಳಿಗೆಗಾಗಿ ಜೀವಂತವಾಗಿ ಹಾಗೂ ಪಾವಿತ್ರ್ಯತೆಯಿಂದ ಉಳಿಸಿಕೊಳ್ಳಲು ಸಾಧ್ಯ.*
*ರಘು ಚಿಕ್ಕಮಗಳೂರು*





