– ರಾಘವೇಂದ್ರ ಅಡಿಗ ಎಚ್ಚೆನ್.
ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳಾದ
ಫಸ್ಟ್ ಡೇ ಫಸ್ಟ್ ಶೋ, ಶಾಲಿವಾಹನ ಶಕೆ, ಒಂದ್ ಕಥೆ ಹೇಳ್ಲಾ ಹಾಗೂ ವಾವ್ ಸಿನಿಮಾಗಳ ಖ್ಯಾತಿಯ ಯುವ ನಿರ್ದೇಶಕ ಗಿರೀಶ್ ಜಿ ಈಗ ಒಂದು ಟಗರಿನ ಯಶೋಗಾಥೆಯನ್ನು ಡಾಕ್ಯುಮೆಂಟರಿ ಫಿಲ್ಮ್ ಮೂಲಕ ಹೇಳಲು ಹೊರಟಿದ್ದಾರೆ.
ಸಾವಿರಾರು ಅಭಿಮಾನಿ ಬಳಗ ಹೊಂದಿದ್ದ, ಸೋಲಿಲ್ಲದ ಸರದಾರ ಎನಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಟಗರು’ಬೆಳ್ಳೂಡಿ ಕಾಳಿ’. ವಿವಿಧ ಟಗರು ಕಾಳಗದಲ್ಲಿ ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಗತ್ತು, ಗಾಂಭೀರ್ಯದಿಂದ ಕಣಕ್ಕೆ ಇಳಿಯುತ್ತಿದ್ದ ಕಾಳಿಯ ಆಟವನ್ನು ತಮ್ಮ ಕಣ್ಣಾರೆ ಕಾಣಲೆಂದೇ ದೂರದ ಊರುಗಳಿಗೆ ಅಭಿಮಾನಿಗಳು ತೆರಳುತ್ತಿದ್ದರು. ‘ಬೆಳ್ಳೂಡಿ ಕಾಳಿ’ ಇವತ್ತು ಕಣಕ್ಕೆ ಇಳಿಯಲಿದೆ ಅಂತ ಗೊತ್ತಾದರೆ ಇತರೆ ಟಗರಿನ ಮಾಲೀಕರು ಹುಡ್ಡಿ ಕಾಳಗಕ್ಕೆ ತಮ್ಮ ಟಗರುಗಳನ್ನು ಇಳಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಈ ಕಾಳಿ ಹೆಸರು ಮಾಡಿತ್ತು.
2024ರಲ್ಲಿ ಅಕಾಲಿಕವಾಗಿ ಮರಣ ಹೊಂದಿದ ‘ಬೆಳ್ಳೂಡಿ ಕಾಳಿ’ಗೆ ವಿದಾಯ ಹೇಳಲು ಜನಸಾಗರವೇ ಹರಿದುಬಂದಿತ್ತು. ಅಲ್ಲದೆ, ಮನುಷ್ಯರ ರೀತಿಯಲ್ಲಿ ಹಿಂದೂ ಧರ್ಮದ ವಿಧಿವಿಧಾನದಂತೆ ದಫನ್ ಕೂಡ ಮಾಡಲಾಯಿತು. ಪ್ರೀತಿಯ ಕಾಳಿಗೆ ಮಾಲೀಕರಾದ ರಾಘವೇಂದ್ರ ಮತ್ತು ಅವರ ತಂಡದಿಂದ ಅದರ ಸಮಾಧಿ ನಿರ್ಮಾಣ ಮಾಡಲಾಗಿದೆ.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಶಿವಮೊಗ್ಗ ರಸ್ತೆಯಲ್ಲಿರುವ ಸಮಾಧಿ ನಿರ್ಮಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಇಲ್ಲಿ ನಿತ್ಯವು ಪೂಜೆ ಸಲ್ಲಿಸಲಾಗುತ್ತದೆ ಅನ್ನೋದು ಮತ್ತೊಂದು ವಿಶೇಷತೆ. ಈ ಟಗರಿನ ಯಶೋಗಾಥೆಯನ್ನು ನಿರ್ದೇಶಕ ಗಿರೀಶ್ ಡಾಕ್ಯುಮೆಂಟರಿ ರೂಪಕ್ಕೆ ಇಳಿಸುತ್ತಿದ್ದಾರೆ.
ಜೈನ್ ಯೂನಿವರ್ಸಿಟಿ ಸೇರಿದಂತೆ ಹಲವು ಸಿನಿಮಾ ವಿದ್ಯಾರ್ಥಿಗಳನ್ನು ಸೇರಿಸಿ ಹೊಸ ತಂತ್ರಜ್ಞಾರನ್ನು ಗುರುತಿಸಿ ಬಹುತೇಕ ದಾವಣಗೆರೆ ಮತ್ತು ಬಾಗಲಕೋಟೆ ಕಣಗಳಲ್ಲಿ ಸ್ಥಳೀಯರ ಬೆಂಬಲದಿಂದ ಈ ಡಾಕ್ಯುಮೆಂಟರಿ ಚಿತ್ರೀಕರಿಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲಾಗ್ತಿದೆ. ದೊಡ್ಡ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಮಾಡುವ ಯೋಚನೆ ಇದೆ. ಕನ್ನಡದ ಜೊತೆಗೆ ಇಂಗ್ಲೀಷ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನೂ ಎರಡು ಮೂರು ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಈ ಡಾಕ್ಯುಮೆಂಟರಿಗೆ ಕಾಳಿ-ದಿ ಗೋಟ್ ಎಂಬ ಶೀರ್ಷಿಕೆ ಇಡಲಾಗಿದೆ. ಇದೊಂದು ಪ್ರಪಂಚದಾದ್ಯಂತ “ಕಾಳಿ” ಸಾಧನೆಯನ್ನು ವಿಶ್ವಮಟ್ಟದಲ್ಲಿ ಕೊಂಡೋಯ್ಯುವ ಪ್ರಯತ್ನ, ಮನುಷ್ಯ ಮತ್ತು ಪ್ರಾಣಿ ನಡುವಿನ ಭಾವನಾತ್ಮಕ ಪಯಣವನ್ನು ಈ ಡಾಕ್ಯುಮೆಂಟರಿ ಫಿಲ್ಮ್ ಮೂಲಕ ನಿರ್ದೇಶಕ ಗಿರೀಶ್ ಹೇಳಲು ಸಜ್ಜಗಿದ್ದಾರೆ.





