ಬೆಂಗಳೂರು : ದೇಶದಲ್ಲಿ ಎಲ್ನಿನೋ ಪ್ರಭಾವದಿಂದಾಗಿ ಮುಂಗಾರು ಕೊರತೆ ಉಂಟಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಂದರ್ಭದಲ್ಲಿ ಬರಗಾಲದಿಂದಾಗಿ ದೇಶದ ಯಾವುದೇ ಪಡಿತರರ ಮನೆಯಲ್ಲಿ ರೇಷನ್​ಗೆ ಕೊರತೆ ಉಂಟಾಗಬಾರದು ಎಂಬ ಸದುದ್ದೇಶದೊಂದಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಮಳೆಗಾಲದಲ್ಲಿ ಉಂಟಾಗಬಹುದಾದ ದಾಸ್ತಾನು ಸಮಸ್ಯೆ ಹಾಗೂ ಪಡಿತರರಿಗೆ ಸಾರಿಗೆ ಸಮಸ್ಯೆ ಮತ್ತು ಬರಗಾಲದಿಂದಾಗಿ ಉಂಟಾಗಬಹುದಾದ ಇನ್ನಿತರ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಆದೇಶ ಪ್ರಕಟಿಸಿದೆ.

ಈ ನೂತನ ನಿಯಮದ ಅನ್ವಯ 2026ರ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿಗೆ ಅನ್ವಯವಾಗುವ ಒಟ್ಟು ಪಡಿತರ ಅಕ್ಕಿಯನ್ನು ಆಗಸ್ಟ್ ತಿಂಗಳಲ್ಲೇ ಒಟ್ಟಿಗೆ ವಿತರಿಸಲಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಈ ಸೌಲಭ್ಯ ದೊರೆಯಲಿದ್ದು, ಸಾರ್ವಜನಿಕರು ಅಥವಾ ನ್ಯಾಯಬೆಲೆ ಅಂಗಡಿ ಮಾಲೀಕರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.

ಮೂರು ತಿಂಗಳ ಪಡಿತರವನ್ನು ಒಂದೇ ಅವಧಿಯಲ್ಲಿ ಪಡೆಯುವುದರಿಂದ ಫಲಾನುಭವಿಗಳು ಇ-ಪಾಯಿಂಟ್ ಯಂತ್ರದಲ್ಲಿ ಕಡ್ಡಾಯವಾಗಿ ಮೂರು ಬಾರಿ ಹೆಬ್ಬೆರಳಿನ ಗುರುತು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಕೇವಲ 15 ದಿನಗಳು ಮಾತ್ರ ರೇಷನ್ ವಿತರಿಸಲಾಗುತ್ತಿತ್ತು, ಆದರೆ ಈ ಬಾರಿ ಸಾರ್ವಜನಿಕರ ಅನುಕೂಲಕ್ಕಾಗಿ ಆಗಸ್ಟ್ 1 ರಿಂದ 31 ರವರೆಗೆ ಪೂರ್ತಿ ತಿಂಗಳು ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲಿವೆ.

ಸಾರ್ವಜನಿಕರು ತಮ್ಮ ಪಡಿತರ ಚೀಟಿಯ ಸಕ್ರಿಯ ಸ್ಥಿತಿ ಮತ್ತು ಮಾಸಿಕ ಹಂಚಿಕೆಯನ್ನು ತಿಳಿಯಲು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ahara.kar.nic.in ಭೇಟಿ ನೀಡಬಹುದು. ಒಂದು ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ವಿತರಣೆಗೆ ನಿರಾಕರಿಸಿದರೆ ಅಥವಾ ನಿಯಮ ಮೀರಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟರೆ ಗ್ರಾಹಕರು ತಕ್ಷಣವೇ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 1967 ಅಥವಾ 1800-425-9339 ಗೆ ಕರೆ ಮಾಡಿ ನೇರವಾಗಿ ದೂರನ್ನು ದಾಖಲಿಸಬಹುದಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ