ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಭರ್ತಿಯಾಗಿದೆ. ಕಳೆದೆರಡು ತಿಂಗಳಿಂದ ನಡೆಯುತ್ತಿದ್ದ ಸಂಪುಟ ಸರ್ಕಸ್ ಗೆ ಕೊನೆಗೂ ತೆರೆಬಿದ್ದಿದೆ. ಮೊದಲ ಹಂತದಲ್ಲಿ ಸಿಎಂ ಸೇರಿ 14 ಜನ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರೆ, ಎರಡನೇ ಹಂತದಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸೋಮವಾರ ಸಂಜೆ 5 ಗಂಟೆಗೆ ಸರಿಯಾಗಿ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ದೆಹಲಿ ವರಿಷ್ಠರು ಕಳೆದ ಒಂದು ವಾರದಿಂದ ಪಟ್ಟಿಯನ್ನು ಫೈನಲ್ ಮಾಡದೇ ಇದ್ದ ಕಾರಣ ಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಪಟ್ಟಿ ಪರಿಶೀಲಿಸಿದ್ದರೂ ಕೂಡ ಅದಕ್ಕೆ ಅಧಿಕೃತ ಒಪ್ಪಿಗೆ ಕೊಟ್ಟಿರಲಿಲ್ಲ. ದೆಹಲಿಯಲ್ಲಿ ನಡೆಯುತ್ತಿದ್ದ ನೀಟ್ ಹೋರಾಟದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಪಟ್ಟಿ ತಡವಾಗಿತ್ತು. ಹಾಗಾಗಿ ಪಟ್ಟಿ ನಾವೇ ರಾಜ್ಯಕ್ಕೆ ಕಳುಹಿಸುತ್ತೇವೆ ಎಂದು ದೆಹಲಿ ವರಿಷ್ಠರು ಸಿಎಂ ಹಾಗೂ ರಾಜ್ಯ ನಾಯಕರನ್ನು ಬೆಂಗಳೂರಿಗೆ ಕಳುಹಿಸಿದ್ದರು. ಹೀಗಾಗಿ ಭಾನುವಾರವೇ ರಾಜ್ಯಕ್ಕೆ ಬಂದಿದ್ದ ಸಿಎಂ ಆದಿಯಾಗಿ ರಾಜ್ಯ ನಾಯಕರೆಲ್ಲರೂ ಪಟ್ಟಿ ಬಗ್ಗೆ ಭಾರೀ ಕುತೂಹಲದಲ್ಲಿದ್ದರು.
ಮಧ್ಯಾಹ್ನ ಗೊಂದಲ, ಹೈಡ್ರಾಮಾ: ಕೊನೆಗೂ ಸೋಮವಾರ ಬೆಳಗ್ಗೆ ಪಟ್ಟಿ ಅಂತಿಮವಾಗಿ ಮುಖ್ಯಮಂತ್ರಿಗಳ ಕೈ ಸೇರಿತ್ತು. ಬಳಿಕ ಫೈನಲ್ ಆಗಿದ್ದ 19 ಜನರಿಗೂ ಕರೆ ಮಾಡಿ ಪ್ರಮಾಣ ವಚನ ಸ್ವೀಕಾರಕ್ಕೆ ಅಣಿಯಾಗುವಂತೆ ಸೂಚನೆ ನೀಡಲಾಯಿತು. ಆದರೆ, ಮಧ್ಯಾಹ್ನದ ವೇಳೆಗೆ ಪಟ್ಟಿ ಗೊಂದಲ ಮೂಡಿಸಿತ್ತು. ಆರಂಭದಲ್ಲಿ 20 ಜನರ ಪಟ್ಟಿ ರಿಲೀಸ್ ಆಗಿತ್ತು. ಅದರಲ್ಲಿ ಎಂಎಎಲ್ಸಿ ಗಾಯತ್ರಿ ಶಾಂತೇಗೌಡರಿಗೆ ಸ್ಥಾನ ಸಿಕ್ಕಿದ್ದರಿಂದ ಹಾಗೂ ಕೆಲ ಶಾಸಕರಿಗೆ ಸಚಿವ ಸ್ಥಾನ ಸಿಗದೇ ಇದ್ದಿದ್ದರಿಂದ ಎಲ್ಲೆಡೆ ಆಕ್ರೋಶ ಭುಗಿಲೆದ್ದಿತ್ತು. ಅದರಲ್ಲೂ ಗಾಯತ್ರಿ ಹೆಸರು ಸೂಚಿಸದೇ ಇದ್ದರೂ ಕೂಡ ಹೆಸರು ಸೇರ್ಪಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೆನಲಿ ಕೆಂಡವಾಗಿ ವರಿಷ್ಠರಿಗೆ ಫೋನ್ ಮಾಡಿ ಹೆಸರು ಬದಲಿಸುವಂತೆ ಕೇಳಿಕೊಂಡಿದ್ದರು. ತಾವು ಉತ್ತರ ಕರ್ನಾಟಕ ಭಾಗದ ಕುರುಬರಿಗೆ ಟಿಕೆಟ್ ಕೊಡುವಂತೆ ಕೇಳಿಕೊಂಡಿದ್ದು, ಆದರೆ, ಮೊದಲ ಬಾರಿಗೆ ಎಂಎಲ್ ಸಿ ಆಗಿರೋರಿಗೆ ಬೇಡ ಅಂತಾ ತಾಕೀತು ಮಾಡಿದರು.
ಇದರ ಜೊತೆಗೆ ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಮಿಸ್ ಆಗಿದ್ದರಿಂದ ಮಧ್ಯಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಅನ್ನೋ ಕೂಗು ಕೇಳಿಬಂದಿತ್ತು. ಬಳಿಕ ಕೂಡಲೇ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಚಾನ್ಸ್ ಕೊಟ್ಟು ಮಂಕಾಳ್ ವೈದ್ಯ ಹೆಸರನ್ನ ಕೈಬಿಡಲಾಯಿತು. ಅಂತಿಮವಾಗಿ ಮಹಿಳಾ ಕೋಟಾದಲ್ಲಿದ್ದ ಗಾಯತ್ರಿ ಶಾಂತೇಗೌಡರ ಹೆಸರನ್ನ ಬಿಟ್ಟು ಉಳಿದ 19 ಮಂದಿಗೆ ಸ್ಥಾನ ಎಂಬುದನ್ನ ಖಚಿತಪಡಿಸಿಕೊಳ್ಳಲಾಯಿತು. ಈ ಗೊಂದಲದಿಂದಾಗಿ ಸಂಜೆ 4 ಗಂಟೆ 5 ನಿಮಿಷಕ್ಕೆ ನಿಗದಿಯಾಗಿದ್ದ ಪ್ರಮಾಣವಚನ ಸಮಾರಂಭ ಸಂಜೆ 5 ಗಂಟೆಗೆ ನೆರವೇರಿ ಎಲ್ಲಾ 19 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವರು ದೇವರ ಹೆಸರಿನಲ್ಲಿ ಇನ್ನು ಕೆಲವರು ಸಂವಿಧಾನ, ಅಂಬೇಡ್ಕರ್ ಹೆಸರಲ್ಲಿ ಪ್ರತಿಜ್ಞೆ ಮಾಡಿದರು. ಕುಟುಂಬ ಹಾಗೂ ಬೆಂಬಲಿಗರ ಜೊತೆ ಆಗಮಿಸಿದ್ದ ನೂತನ ಸಚಿವರು ಫೋಟೋ ಕ್ಲಿಕ್ಕಿಸಿಕೊಂಡರು. ಬಳಿಕ ವಿಧಾನಸೌಧಕ್ಕೆ ತೆರಳಿ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು.
ನೂತನ ಸಚಿವರ ಪಟ್ಟಿ :
- ಪಿ.ಎಂ ನರೇಂದ್ರಸ್ವಾಮಿ, ಮಳವಳ್ಳಿ (2ನೇ ಬಾರಿ ಸಚಿವ ಸ್ಥಾನ )
- ಶಿವರಾಜ ತಂಗಡಗಿ, ಕನಕಗಿರಿ (4ನೇ ಬಾರಿ ಸಚಿವ ಸ್ಥಾನ
- ರುದ್ರಪ್ಪ ಲಮಾಣಿ, ಹಾವೇರಿ (ಮೊದಲ ಬಾರಿ ಸಚಿವ ಸ್ಥಾನ)
- ಕೆ.ಎಸ್ ಬಸವಂತಪ್ಪ, ಮಾಯಕೊಂಡ (ಮೊದಲ ಬಾರಿ ಸಚಿವ ಸ್ಥಾನ)
- ಬಿ.ನಾಗೇಂದ್ರ, ಬಳ್ಳಾರಿ (2ನೇ ಬಾರಿ ಸಚಿವ ಸ್ಥಾನ)
- ಟಿ ರಘುಮೂರ್ತಿ, ಚಳ್ಳಕೆರೆ (ಮೊದಲ ಬಾರಿ ಸಚಿವ ಸ್ಥಾನ)
- ಜಮೀರ್ ಅಹಮದ್ ಖಾನ್, ಚಾಮರಾಜಪೇಟೆ (4 ಬಾರಿ ಸಚಿವ ಸ್ಥಾನ)
- ರಿಜ್ವಾನ್ ಅರ್ಷದ್, ಶಿವಾಜಿನಗರ (ಮೊದಲ ಬಾರಿ ಸಚಿವ ಸ್ಥಾನ)
- ಸಂತೋಷ್ ಲಾಡ್, ಕಲಘಟಗಿ (3ನೇ ಬಾರಿ ಸಚಿವ ಸ್ಥಾನ)
- ಮಧು ಬಂಗಾರಪ್ಪ, ಸೊರಬ (2ನೇ ಬಾರಿ ಸಚಿವ ಸ್ಥಾನ)
- ಸಿ ಪುಟ್ಟರಂಗಶೆಟ್ಟಿ, ಚಾಮರಾಜನಗರ (2ನೇ ಬಾರಿ ಸಚಿವ ಸ್ಥಾನ)
- ಎಸ್.ಎಸ್ ಮಲ್ಲಿಕಾರ್ಜುನ, ದಾವಣಗೆರೆ (3ನೇ ಬಾರಿ ಸಚಿವ ಸ್ಥಾನ)
- ಅಜಯ್ ಸಿಂಗ್, ಜೇವರ್ಗಿ (ಮೊದಲ ಬಾರಿ ಸಚಿವ ಸ್ಥಾನ)
- ಎನ್.ಚಲುವರಾಯಸ್ವಾಮಿ, ನಾಗಮಂಗಲ (3ನೇ ಬಾರಿ ಸಚಿವ ಸ್ಥಾನ)
- ಕೆ.ಎಂ ಶಿವಲಿಂಗೇಗೌಡ, ಅರಸೀಕೆರೆ ( ಮೊದಲ ಬಾರಿ ಸಚಿವ ಸ್ಥಾನ)
- ಎಚ್.ಸಿ ಬಾಲಕೃಷ್ಣ, ಮಾಗಡಿ (ಮೊದಲ ಬಾರಿ ಸಚಿವ ಸ್ಥಾನ)
- ಬಸವರಾಜ್ ರಾಯರೆಡ್ಡಿ, ಯಲಬುರ್ಗಾ (4ನೇ ಬಾರಿ ಸಚಿವ ಸ್ಥಾನ)
- ವಿಜಯಾನಂದ ಕಾಶಪ್ಪನವರ್, ಹುನಗುಂದ (ಮೊದಲ ಬಾರಿ ಸಚಿವ ಸ್ಥಾನ)
- ಲಕ್ಷ್ಮಣ ಸವದಿ, ಅಥಣಿ (3ನೇ ಬಾರಿ ಸಚಿವ ಸ್ಥಾನ)





