ಬದುಕಿದ್ದಾಗ ಯಾರಿಗೂ ಕಾಣದ ಸಂಪತ್ತು, ಸತ್ತ ಬಳಿಕ ಬಯಲಿಗೆ! ಬದುಕಿದ್ದಾಗ ನೆರವು ಇಲ್ಲ… ಸತ್ತ ಬಳಿಕ ಹಣಕ್ಕೆ ಹಕ್ಕು?
ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಂಡ್ಯದ ವೃದ್ಧ ಭಿಕ್ಷುಕಿಯೊಬ್ಬರು ನಿಧನರಾದ ಬಳಿಕ, ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಬದುಕಿದ್ದಾಗ ಅತ್ಯಂತ ಸರಳ ಹಾಗೂ ಸಂಕಷ್ಟದ ಜೀವನ ನಡೆಸುತ್ತಿದ್ದಂತೆ ಕಾಣುತ್ತಿದ್ದ ಈ ವೃದ್ಧೆ, ವರ್ಷಗಳ ಕಾಲ ಭಿಕ್ಷೆಯಿಂದ ಬಂದ ಹಣವನ್ನು ಖರ್ಚು ಮಾಡದೆ ಸಂಗ್ರಹಿಸುತ್ತಿದ್ದರೆನ್ನಲಾಗಿದೆ. ಈ ಘಟನೆ ಮತ್ತೊಂದು ಪ್ರಶ್ನೆಯನ್ನೂ ಹುಟ್ಟುಹಾಕಿದೆ — ಹಣವಿದ್ದರೂ ಅದನ್ನು ಬಳಸದೇ, ಬದುಕಿನ ಕೊನೆಯವರೆಗೂ ಭಿಕ್ಷೆಯನ್ನೇ ಅವಲಂಬಿಸಿ ಬದುಕುವ ಪರಿಸ್ಥಿತಿ ಏಕೆ ಎದುರಾಗುತ್ತದೆ?
‘ಪುಷ್ಪಕ ವಿಮಾನ’ದ ದೃಶ್ಯ ನೆನಪಿಸುವ ಘಟನೆ

ಇಂತಹ ಘಟನೆ ಎಂದಾಕ್ಷಣ 1980ರ ದಶಕದ ಜನಪ್ರಿಯ ಮೂಕಿ ಚಿತ್ರ ಪುಷ್ಪಕ ವಿಮಾನ’ದ ಒಂದು ದೃಶ್ಯ ನೆನಪಾಗುತ್ತದೆ. ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಹಾಗೂ ಶೃಂಗಾರ್ ನಾಗರಾಜ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಕಮಲ ಹಾಸನ್ ನಾಯಕನಾಗಿ ನಟಿಸಿದ್ದರು.

ನಾಯಕ ವಾಸಿಸುತ್ತಿದ್ದ ಹೋಟೆಲ್ ಎದುರು ಪ್ರತಿದಿನವೂ ಒಬ್ಬ ಭಿಕ್ಷುಕ ಅತ್ಯಂತ ದೈನ್ಯ ಸ್ಥಿತಿಯಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ. ಆತನ ಪರಿಸ್ಥಿತಿಯನ್ನು ಕಂಡು ನಾಯಕನಿಗೂ ಒಂದು ರೀತಿಯ ಕಸಿವಿಸಿ ಉಂಟಾಗುತ್ತಿತ್ತು. ಒಂದು ದಿನ ಆ ಭಿಕ್ಷುಕ ಅಚಾನಕ್ಕಾಗಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿಯುತ್ತದೆ. ಆತನಿಗೆ ಸಂಬಂಧಿಕರು ಯಾರೂ ಇಲ್ಲವೆಂದು ತಿಳಿದ ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಮುಂದಾಗುತ್ತಾರೆ. ಆಗ ಆತ ಪ್ರತಿದಿನ ಕುಳಿತುಕೊಳ್ಳುತ್ತಿದ್ದ ಗೋಣಿ ಚೀಲವನ್ನು ಎತ್ತಿ ನೋಡಿದಾಗ, ಅದರೊಳಗಿದ್ದ ನೋಟುಗಳು ಗಾಳಿಗೆ ಹಾರುತ್ತವೆ!
ಹಣಕ್ಕಾಗಿ ಬದುಕಿನುದ್ದಕ್ಕೂ ಭಿಕ್ಷೆ ಬೇಡಿದ ವ್ಯಕ್ತಿ, ತನ್ನ ಬಳಿ ಇದ್ದ ಹಣವನ್ನು ಮಾತ್ರ ಬಳಸದೆ ಉಳಿಸಿದ್ದಾನೆ ಎಂಬ ವ್ಯಂಗ್ಯಮಯ ಸತ್ಯ ಅಲ್ಲಿ ಬಯಲಾಗುತ್ತದೆ.
ಇದನ್ನು ಕಂಡು ಜನರು ಅಚ್ಚರಿ ಪಡುವಷ್ಟರಲ್ಲಿ, ಗಾಳಿಯಲ್ಲಿ ಹಾರುತ್ತಿದ್ದ ನೋಟುಗಳನ್ನು ಹೆಕ್ಕಿಕೊಳ್ಳಲು ಕ್ಷಣಾರ್ಧದಲ್ಲಿ ಜನರು ಸೇರಿಕೊಳ್ಳುವ ದೃಶ್ಯವೂ ಚಿತ್ರದ ಕಹಿ ವಾಸ್ತವವನ್ನು ತೋರಿಸುತ್ತದೆ.
ಮಂಡ್ಯದಲ್ಲೂ ಅದೇ ರೀತಿಯ ಅಚ್ಚರಿ

ಇದೀಗ ಇಂತಹದ್ದೇ ಒಂದು ಘಟನೆ ಮಂಡ್ಯ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಂಡ್ಯದ ಗುತ್ತಲು ಬಡಾವಣೆಯಲ್ಲಿ ವಾಸಿಸುತ್ತಿದ್ದ ನೂರ್ ಎಂಬ ವೃದ್ಧೆ, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಸರೆ ಇಲ್ಲದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶನಿವಾರ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ವಿಷಯ ತಿಳಿದ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಅಂತ್ಯಸಂಸ್ಕಾರ ಮುಗಿದ ಬಳಿಕ, ನೂರ್ ವಾಸಿಸುತ್ತಿದ್ದ ಮನೆ ಪರಿಶೀಲಿಸಿದಾಗ ಅಲ್ಲಿದ್ದ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮನೆ ತುಂಬಾ ನೋಟಿನ ಕಂತೆ… ಚೀಲಗಳಲ್ಲಿ ನಾಣ್ಯ!

ಮನೆಯ ಮೂಲೆಮೂಲೆಗಳಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ಸುತ್ತಿ ಇಡಲಾಗಿದ್ದ ನೋಟಿನ ಕಂತೆಗಳು, ಮತ್ತೊಂದೆಡೆ ಚೀಲಗಳಲ್ಲಿ ತುಂಬಿ ಇಡಲಾಗಿದ್ದ ರಾಶಿಗಟ್ಟಲೆ ನಾಣ್ಯಗಳು ಪತ್ತೆಯಾಗಿವೆ ಎನ್ನಲಾಗಿದೆ. ಭಿಕ್ಷಾಟನೆಯಿಂದ ದಿನನಿತ್ಯ ಅಲ್ಪಸ್ವಲ್ಪ ಹಣ ಸಂಪಾದಿಸುತ್ತಿದ್ದ ವೃದ್ಧೆ, ಆ ಹಣವನ್ನು ಖರ್ಚು ಮಾಡದೆ ವರ್ಷಗಳ ಕಾಲ ಹೀಗೆ ಕೂಡಿಟ್ಟಿದ್ದರು ಎನ್ನಲಾಗಿದೆ. ಸ್ಥಳೀಯರು ಹಾಗೂ ಸಂಬಂಧಿಕರು ಒಟ್ಟಾಗಿ ಹಣವನ್ನು ಎಣಿಸಿದಾಗ, ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಎಂದು ತಿಳಿದುಬಂದಿದೆ. ಅಂದರೆ, ದಿನನಿತ್ಯದ ಬದುಕಿಗಾಗಿ ಇತರರ ಮುಂದೆ ಕೈಚಾಚುತ್ತಿದ್ದಂತೆ ಕಾಣುತ್ತಿದ್ದ ಈ ವೃದ್ಧೆಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿತ್ತು ಎಂಬುದು ಸ್ಥಳೀಯರಿಗೆ ನಂಬಲಾರದ ಸಂಗತಿಯಾಗಿ ಪರಿಣಮಿಸಿದೆ.
ಬದುಕಿದ್ದಾಗ ನೆರವು ಇಲ್ಲ… ಸತ್ತ ಬಳಿಕ ಹಣಕ್ಕೆ ಹಕ್ಕು?

ಈ ಘಟನೆ ಕೇವಲ ಅಚ್ಚರಿ ಮೂಡಿಸುವ ಹಣ ಪತ್ತೆಯ ಘಟನೆ ಮಾತ್ರವಲ್ಲ; ಸಾಮಾಜಿಕವಾಗಿ ಹಲವು ಪ್ರಶ್ನೆಗಳನ್ನು ಎತ್ತಿದೆ. ಭಿಕ್ಷೆ ಬೇಡಿ ಬದುಕುತ್ತಿದ್ದ ವೃದ್ಧೆಯ ಜೀವನದ ಕಷ್ಟವನ್ನು ಗಮನಿಸಿದವರು ಎಷ್ಟು ಮಂದಿ? ಆಕೆ ಬದುಕಿದ್ದಾಗ ಆಕೆಯ ಆರೋಗ್ಯ, ಆಹಾರ ಅಥವಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದವರು ಯಾರು? ಆದರೆ ಆಕೆ ಮೃತಪಟ್ಟ ನಂತರ, ಆಕೆ ಕಷ್ಟಪಟ್ಟು ಸಂಗ್ರಹಿಸಿದ್ದ ಹಣದ ವಿಷಯ ತಿಳಿಯುತ್ತಿದ್ದಂತೆ ಅದರ ಹಂಚಿಕೆ ಕುರಿತು ಚರ್ಚೆಗಳು ಆರಂಭವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
“ವೃದ್ಧೆ ಬದುಕಿದ್ದಾಗ ಯಾವೊಬ್ಬ ಸಂಬಂಧಿಯೂ ಸಹಾಯಕ್ಕೆ ಬರಲಿಲ್ಲ. ಆದರೆ ಆಕೆ ಸತ್ತ ಮೇಲೆ ಆಕೆಯ ಭಿಕ್ಷಾಟನೆಯ ಕಷ್ಟದ ಹಣದ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದಾರೆ” ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹಣದ ಅಂತ್ಯವೂ ಒಂದು ವಿಚಿತ್ರ ಕಥೆ
ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು ಮಾತುಕತೆ ನಡೆಸಿ, ಪತ್ತೆಯಾದ ಸಂಪೂರ್ಣ ಹಣವನ್ನು ಮೃತ ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಘಟನೆ ಉಳಿಸುವ ದೊಡ್ಡ ಪ್ರಶ್ನೆ ಹಣ ಎಷ್ಟು ಎಂಬುದಲ್ಲ.
ಒಬ್ಬ ಮನುಷ್ಯ ಬದುಕಿದ್ದಾಗ ಅನುಭವಿಸಬೇಕಾದ ನೆಮ್ಮದಿ, ಸುರಕ್ಷತೆ ಮತ್ತು ಮಾನವೀಯ ಸಂಬಂಧಗಳು ಆತನ ಬಳಿ ಇರದಿದ್ದಾಗ, ಲಕ್ಷಾಂತರ ರೂಪಾಯಿಗಳ ಸಂಪತ್ತು ಇದ್ದರೂ ಅದರ ಅರ್ಥವೇನು? ಜೀವನಪೂರ್ತಿ ಭಿಕ್ಷೆಯಿಂದ ಬಂದ ಹಣವನ್ನು ಕೂಡಿಸುತ್ತಾ ಬಂದ ವೃದ್ಧೆ, ಆ ಹಣವನ್ನು ತನ್ನ ಬದುಕಿನಲ್ಲಿ ಎಷ್ಟು ಬಳಸಿಕೊಂಡರು ಎಂಬುದು ತಿಳಿದಿಲ್ಲ. ಆದರೆ ಅವರ ನಿಧನದ ಬಳಿಕ ಹೊರಬಂದ ಈ ಸಂಪತ್ತು, “ಹಣವನ್ನು ಸಂಪಾದಿಸುವುದಕ್ಕಿಂತ ಅದನ್ನು ಬದುಕಿನಲ್ಲಿ ಸರಿಯಾದ ಸಮಯದಲ್ಲಿ ಬಳಸುವುದೂ ಮುಖ್ಯ” ಎಂಬ ಕಹಿ ಸತ್ಯವನ್ನು ನೆನಪಿಸುವಂತಿದೆ.
ಸಾಮಾನ್ಯವಾಗಿ ಚಿತ್ರಗಳಲ್ಲಿ ತೋರಿಸುವ ದೃಶ್ಯಗಳು ಕಲ್ಪನೆಯಾಗಿದ್ದರೆ, ಅಂತಹ ಕಲ್ಪನೆಯ ಕಥೆಯೇ ಮಂಡ್ಯಾದಲ್ಲಿ ನಿಜ ಜೀವನದಲ್ಲೂ ನಡೆದಿರುವುದು ಮಾತ್ರ ವಿಪರ್ಯಾಸವಾಗಿದ್ದು, ಇನ್ನು ಮುಂದೆ ಭಿಕ್ಷುಕರಿಗೆ ಹಣ ನೀಡುವಾಗ ಅವರು ನಿಜವಾಗಿಯೂ ಭಿಕ್ಷಕರೇ ಎನ್ನುವ ಅನುಮಾನ ಹುಟ್ಟಿಸುವಂತಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





