ನೇಪಾಳದ ಭೋಟೆ ಕೋಶಿ ಬಳಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯ ಸಂಕಷ್ಟದ ಸಮಯದಲ್ಲಿ ನೇಪಾಳಕ್ಕೆ ಭಾರತ ಮಾನವೀಯ ನೆರವು ನೀಡಲು ಮುಂದಾಗಿದ್ದು, ತುರ್ತಾಗಿ ಭಾರತೀಯ ವಾಯುಪಡೆಯ ಮೂಲಕ 10 ಟನ್ HADR ಪರಿಹಾರ ವಸ್ತುಗಳು ಹಾಗೂ ಔಷಧಿಗಳನ್ನು ಕಾಠ್ಮಾಂಡುವಿಗೆ ರವಾನಿಸಿದೆ.
ಇದರ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. ಭಾರತದ ಈ ಸಹಾಯಕ್ಕೆ ನೇಪಾಳ ಧನ್ಯವಾದ ಅರ್ಪಿಸಿದೆ. ಇತ್ತ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, 142 ಭಾರತೀಯರು ಸೇರಿದಂತೆ 800ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿ ನೂರಾರು ಭಾರತೀಯರು, ವಿದೇಶಿಗರು ಸೇರಿದಂತೆ ಅಲ್ಲಿನ ಸ್ಥಳೀಯರ ಸಿಲುಕಿದ್ದು, ಈಗಾಗಲೇ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈ ನಡುವೆ ನೇಪಾಳದ ಸಹಾಯಕ್ಕೆ ಭಾರತ ಮುಂದಾಗಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪರಿಸ್ಥಿತಿಗೆ ನೇಪಾಳದ ಪ್ರಧಾನಿ ಬಾಲೇಂದ್ರ ಶಾಗೆ ಕರೆ ಮಾಡಿ ಸಂತಾಪ ಸೂಚಿಸಿದ್ದು, ಅಗತ್ಯವಿರುವ ಎಲ್ಲಾ ನೆರವನ್ನು ನೀಡಲು ಸಿದ್ದ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ನೇಪಾಳದಲ್ಲಿ ಪ್ರವಾಹದಿಂದ ಉಂಟಾದ ಜೀವಹಾನಿ ಕುರಿತು ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ. ಈ ಕಷ್ಟದ ಸಮಯದಲ್ಲಿ ಭಾರತದ ಜನರು ನೇಪಾಳದಲ್ಲಿರುವ ತಮ್ಮ ಸಹೋದರ-ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ. ಈ ಸಮಯದಲ್ಲಿ ನೇಪಾಳಕ್ಕೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು ನೀಡಲು ಭಾರತ ಸಿದ್ಧವಾಗಿದೆ. ನಮ್ಮ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ.” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ನೇಪಾಳದ ಪ್ರಧಾನ ಮಂತ್ರಿ ಕಚೇರಿ ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಭಾರತದ ನೆರವಿಗೆ ಧನ್ಯವಾದ ತಿಳಿಸಿದೆ. “ಈ ಸಮಯದಲ್ಲಿ ಕರೆ ಮಾಡಿ ನಮಗೆ ಸಂತಾಪ ಸೂಚಿಸುವ ಮೂಲಕ ನಮಗೆ ನೆರವಾಗಲು ಮುಂದಾಗಿದ್ದಾಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಈ ಕಷ್ಟದ ಸಮಯದಲ್ಲಿ ನೇಪಾಳಕ್ಕೆ ನಿಮ್ಮ ಒಗ್ಗಟ್ಟಿನ ಮಾತುಗಳು ಮತ್ತು ಉದಾರ ಸಹಾಯದ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ಒಗ್ಗಟ್ಟಿನ ಸೂಚನೆಯು ನಮ್ಮ ಎರಡು ದೇಶಗಳ ನಡುವಿನ ಶಾಶ್ವತ ಸ್ನೇಹದ ಬಂಧಗಳ ಪ್ರತಿಬಿಂಬವಾಗಿದೆ, ಇದನ್ನು ನಾವು ಬಹಳವಾಗಿ ಗೌರವಿಸುತ್ತೇವೆ” ಎಂದು ಕೃತಜ್ಞತೆ ತಿಳಿಸಿದ್ದಾರೆ.
ನೇಪಾಳದಲ್ಲಿ ಪ್ರವಾಹದ ಪರಿಸ್ಥಿತಿ ಹಿನ್ನಲೆಯಲ್ಲಿ ಸಾಗುತ್ತಿರುವ ರಕ್ಷಣಾ ಕಾರ್ಯಗಳಿಗೆ ನೆರವು ನೀಡಲು ಹಾಗೂ ಅಲ್ಲಿನ ಭಾರತೀಯರ ಸುರಕ್ಷತೆಗೆ ಕ್ರಮವಹಿಸಲು ಭಾರತ ಸಹ ಮುಂದಾಗಿದೆ. ನೇಪಾಳದ ತುರ್ತು ರಕ್ಷಣಾ ಕಾರ್ಯಗಳಿಗೆ ನೆರವಾಗಲು ಭಾರತ ಮಾನವೀಯ ನೆರವು ನೀಡಲು ಮುಂದಾಗಿದ್ದು, ದಿಲ್ಲಿಯ ಹಿಂಡನ್ ವಾಯುನೆಲೆಯಿಂದ ಭಾರತೀಯ ವಾಯುಪಡೆಯ ಸಿ-130ಜೆ ಸಾರಿಗೆ ವಿಮಾನದ ಮೂಲಕ ಮೊದಲ ಹಂತದಲ್ಲಿ ತುರ್ತು ನೆರವು ರವಾನೆಯಾಗಿದೆ.
ಈ ಕುರಿತು “ನೇಪಾಳದ ಭೀಕರ ಪ್ರವಾಹಕ್ಕೆ ಸಿಲುಕಿರುವ ಎಲ್ಲಾ ಕುಟುಂಬಗಳು ಹಾಗೂ ಜನರ ಕುರಿತು ನಾವು ಆಲೋಚನೆ ನಡೆಸಿದ್ದೇವೆ. ನೇಪಾಳ ಈ ಸವಾಲನ್ನು ಎದುರಿಸುವಾಗ, ಭಾರತ ನೇಪಾಳ ಮತ್ತು ಅದರ ಜನರೊಂದಿಗೆ ನಿಂತಿದ್ದು, ಅವರಿಗೆ ನೆರವಾಗಲು 10 ಟನ್ HADR ನೆರವು ಮತ್ತು ಅಗತ್ಯ ಔಷಧಿಗಳನ್ನು ರವಾನಿಸಲಾಗಿದೆ. ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡಲು ಹೆಚ್ಚಿನ ಸಹಾಯವನ್ನು ಸಂಗ್ರಹಿಸಲಾಗುತ್ತಿದೆ” ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.





