– ರಾಘವೇಂದ್ರ ಅಡಿಗ ಎಚ್ಚೆನ್.
ನವಿರಾದ ಪ್ರೇಮವನ್ನು ಸಾರುವ ಆಲ್ಬಮ್ ಗೀತೆಯೊಂದು ‘ಕನಸಲು..’ ಹೆಸರಲ್ಲಿ ಬಿಡುಗಡೆಯಾಗಿದೆ. ಯುವ ಪ್ರತಿಭೆ ಶ್ರೀರಾಮ್ ಗಂಧರ್ವ ಸಾರಥ್ಯದಲ್ಲಿನ ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಯುವ ಪ್ರತಿಭೆಗಳ ಸಂಗಮವೇ ನಡೆದಿತ್ತು.
ಕನಸಲು.. ಹಾಡನ್ನು ವೇದಿಕೆ ಮೇಲೆ ಸಾಂಕೇತಿಕವಾಗಿ ಬಿಡುಗಡೆಗೊಳಿಸಿ, ಪರದೆಯ ಮೇಲೆ ಪ್ರದರ್ಶಿಸಲಾಯಿತು. ಅತಿಥಿಯಾಗಿ ಆಗಮಿಸಿ ಶುಭಕೋರಿದ ‘ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್ ಮಾತನಾಡಿ, “ಶ್ರೀರಾಮ್ ನಿಮ್ಮ ಕೆಲಸವನ್ನು ಇಷ್ಟಕ್ಕೆ ನಿಲ್ಲಿಸಬೇಡಿ. ಜನ ಬಹಳ ಬೇಗ ಮರೆಯುತ್ತಾರೆ. ಪದೇ ಪದೆ ಹಾಡುಗಳನ್ನು ಕೊಟ್ಟರೆ ಮಾತ್ರ ಜನ ನೆನಪಿರಿಸಿಕೊಳ್ಳುತ್ತಾರೆ” ಎಂದು ಸಲಹೆ ನೀಡಿದರು.

ಖ್ಯಾತ ಜಾನಪದ ಗಾಯಕ ಜೋಗಿಲಾ ಸಿದ್ಧರಾಜು ಮಾತನಾಡಿ, 35 ವರ್ಷಗಳಿಂದ ಜನಪದ ಗಾಯಕನಾಗಿರುವ ನಾನು ಕಳೆದ ಒಂದು ದಶಕದಿಂದ ಸುಮಾರು 12ರಷ್ಟು ಸಿನಿಮಾ ಗೀತೆಗಳನ್ನು ಹಾಡಿದ್ದೇನೆ. ರಾಗ ಸಂಯೋಜಿಸಿ ಹಾಡಿರುವ ಶ್ರೀರಾಮ್ ನಂಥ ಬಹುಮುಖ ಪ್ರತಿಭೆಗೆ ಅಭಿನಂದನೆಗಳು. ಆದರೆ ಕನ್ನಡದಲ್ಲಿ ಆಮದು ಗಾಯಕ ಗಾಯಕಿಯರನ್ನೇ ಬಳಸುತ್ತಿರುತ್ತಾರೆ. ಅವರ ಮಧ್ಯೆ ಶ್ರೀರಾಮ್ ನಂಥವರ ಪ್ರತಿಭೆ ಅನಾವರಣವಾಗಲು ಇಂಥ ಆಲ್ಬಮ್ ಬೇಕಾಗುತ್ತದೆ ಎಂದರು.
ಕನಸಲು ಆಲ್ಬಮ್ ಹಾಡಿನಲ್ಲಿ ಟೈಲರಿಂಗ್ ಶಾಪ್
ಹುಡುಗನ ಪ್ರೇಮವನ್ನು ತೋರಿಸಲಾಗಿದೆ. ಅಲ್ಲಿಗೆ ಬರುವ ಮೀರಾ ಎನ್ನುವ ಯುವತಿಯಲ್ಲಿ ದರ್ಜಿಯ ಸಹಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ಅದಕ್ಕೆ ಅವಳ ಪ್ರತಿಕ್ರಿಯೆ ಏನಿರುತ್ತದೆ ಎನ್ನುವುದನ್ನು ಹಾಡಿನ ಕೊನೆಯಲ್ಲಿ ತೋರಿಸಲಾಗಿದೆ. ಈ ಹಾಡಿನಲ್ಲಿ ಪ್ರಿಯಕರನಾಗಿ ನಟಿಸಿರುವ ಯುವನಟ ದರ್ಶನ್, ನನಗೆ ಇದೇ ಮೊದಲ ಅನುಭವ. ಈ ಹಾಡಿನ ಮೂಲಕ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದೆ ಎಂದರು. ಆತನ ಪ್ರೇಯಸಿ ಮೀರಾಳಾಗಿ ಕಾಣಿಸಿಕೊಂಡಿರುವ ಗಗನಾ ಅವರು ಈಗಾಗಲೇ ಸಿನೆಮಾ, ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ಅನುಭವ ಇರುವುದಾಗಿ ಹೇಳಿದರು. ಆದರೆ ಇದು ತಮ್ಮ ಮೊದಲ ಆಲ್ಬಮ್ ಹಾಡು ಎನ್ನಲು ಮರೆಯಲಿಲ್ಲ. “ನಿರ್ದೇಶಕರು ಚಿತ್ರೀಕರಣಕ್ಕೂ ಮೊದಲು ಹೇಳಿದ್ದನ್ನೇ ಪರದೆಯ ಮೇಲೆ ತಂದಿದ್ದಾರೆ. ಸಾಧಾರಣ ಹಳ್ಳಿಯಲ್ಲಿ ನಡೆಯುವ ಮುದ್ದಾದ ಸಹಜ ಪ್ರೇಮವನ್ನು ತೋರಿಸಿದ್ದಾರೆ.ಖುಷಿಯಾಗಿದೆ” ಎಂದರು.

ಮಗ ಮತ್ತು ತಂಡವನ್ನು ಮೆಚ್ಚಿ ಮಾತನಾಡಿದ
ಶ್ರೀರಾಮ್ ಗಂಧರ್ವ ಅವರ ತಂದೆ ನಿರ್ದೇಶಕ ಗಂಧರ್ವ, “ಸಿನೆಮಾದಲ್ಲಿ ಎರಡೂವರೆ ಗಂಟೆಗಳಲ್ಲಿ ಕಟ್ಟಿಕೊಡಲಾಗದೇ ಇರುವುದನ್ನು ಆಲ್ಬಮ್ ಮೂಲಕ ತೋರಿಸಿದ್ದಾರೆ. ಕಲಾವಿದರು ಮತ್ತು ತಂತ್ರಜ್ಞರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ನನ್ನ ಮಗ ಮೊದಲ ಚಿತ್ರದಲ್ಲೇ ಎಲ್ಲವೂ ಆಗಿರುವುದು ಖುಷಿಯಾಗಿದೆ” ಎಂದರು.
ಈ ಗೀತೆಯನ್ನು ಬರೆದು, ಸಂಗೀತ ಸಂಯೋಜಿಸಿ, ಹಾಡಿ ನಿರ್ದೇಶಿಸಿದವರು ಖುದ್ದು ಶ್ರೀರಾಮ್ ಗಂಧರ್ವ. ಈ ಅನುಭವದ ಬಗ್ಗೆ ಮಾತನಾಡಿದ ಶ್ರೀರಾಮ್, ಲವ್ ಸ್ಟೋರೀನೇ ಮಾಡಬೇಕು ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಯಾಕೆಂದರೆ ಎಲ್ಲರ ಬದುಕಲ್ಲೂ ಇರುವಂಥ ವಿಚಾರ. ಹುಡುಗಿ, ಹುಡುಗನನ್ನು ಆತನ ಪ್ರಾಮಾಣಿಕತೆಗೆ ಇಷ್ಟಪಡುತ್ತಾಳೆ. ಸಂಗೀತ ನಿರ್ದೇಶಕನಾಗಿ ಸಂಗೀತಕ್ಕೆ ಭಾಷೆಯ ಗಡಿಗಳಿಲ್ಲ. ತಂದೆ ನಿರ್ದೇಶಕರಾದರೂ ಅವರನ್ನು ಈ ಪ್ರಾಜೆಕ್ಟ್ ನಲ್ಲಿ ಬಳಸಿಕೊಂಡಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಹಿಂದಿ ಹಾಡನ್ನು ಕೂಡ ಪ್ರದರ್ಶಿಸಲಾಯಿತು. ಹಿಂದಿ ಸಾಹಿತ್ಯವನ್ನು ಜುನೈದ್ ಅಹಮದ್ ಕಬೀರ್ ರಚಿಸಿದ್ದಾರೆ
ಆನಂದ್ ಆಡಿಯೋದವರು ಹಾಡನ್ನು ಮೆಚ್ಚಿಕೊಂಡು ಪ್ರಮುಖ ವಾಹಿನಿಯಲ್ಲೇ ಹಾಕಿದ್ದಾರೆ ಎಂದು ನಿರ್ದೇಶಕ ಶ್ರೀರಾಮ್ ಸಂಭ್ರಮಿಸಿದರು.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮ್,
ನಿರ್ದೇಶಕರಾಗಿ ತಮ್ಮ ಮೂರು ಸಿನಿಮಾಗಳು ಸರದಿಯಲ್ಲಿವೆ ಎಂದರು. ಒಂದರಲ್ಲಿ ಕಿಶೋರ್, ಇನ್ನೊಂದರಲ್ಲಿ ರವಿಶಂಕರ್ ಗೌಡ ಪ್ರಧಾನ ಪಾತ್ರದಲ್ಲಿದ್ದಾರೆ. ಇನ್ನೊಂದು ಬಾಲಿವುಡ್ ಸಿನಿಮಾ ಕೂಡ ಚಿತ್ರೀಕರಣ ಹಂತದಲ್ಲಿದೆ ಎಂದರು.

ಡಾಲಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ರಿಚರ್ಡ್ ಈ ಆಲ್ಬಮ್ ನಿರ್ಮಿಸಿದ್ದಾರೆ. ನಿರ್ಮಾಪಕರು ರೋಲ್ಸ್ ರಾಯ್ಸ್ ಪ್ರಿಯರಾಗಿದ್ದು, ಹಾಗಾಗಿ ತಮ್ಮ ಸಂಸ್ಥೆಗೆ ಅದೇ ತರಹ ಲೋಗೋ ಮಾಡಿದ್ದಾಗಿ ನಿರ್ದೇಶಕರು ಹೇಳಿದರು.
ರವಿಕುಮಾರ್ ಬಿ.ಎಮ್ ಅವರು ಈ ಹಾಡಿನ
ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಎರಡೇ ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಯೋಜನೆ ಹಾಕಿದ ಸಮಯದಲ್ಲಿ ಜೋರು ಬಿಸಿಲಿತ್ತು. ಆದರೆ ಚಿತ್ರೀಕರಣದ ವೇಳೆ ವಾತಾವರಣ ಸಹಕಾರ ನೀಡಿತ್ತೆಂದು ರವಿಕುಮಾರ್ ಹೇಳಿದರು.
‘ಮತ್ತೆ ಬಂತು ಮಾನ್ಸೂನ್’ ಚಿತ್ರವನ್ನು ನಿರ್ಮಿಸಿ, ನಾಯಕರಾಗಿ ನಟಿಸಿರುವ ಡಾ. ಮಂಜುನಾಥ್,
ತೆಲುಗು ಚಿತ್ರದಲ್ಲಿ ನಟಿಸಿರುವ ಕನ್ನಡದ ಪ್ರತಿಭೆ ನಿಹಾಲ್, ಬರಹಗಾರ ಹರೀಶ್ ಮೊದಲಾದವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು.





