ಬಾಹ್ಯವಾಗಿ ನಾವು ಎಷ್ಟೇ ಮೇಕಪ್ ಮಾಡಿಕೊಂಡರೂ, ಆಂತರಿಕವಾಗಿ ನಾವು ಫಿಟ್ ಫೈನ್ ಆಗಿರದಿದ್ದರೆ, ಮುಖದಲ್ಲಿ ನಗು ಮೂಡುವುದಿಲ್ಲ. ಬಲವಂತವಾಗಿ ಮುಗುಳ್ನಕ್ಕರೂ, ಮುಖದಲ್ಲಿ ಸಹಜ ಕಾಂತಿ ಇರುವುದಿಲ್ಲ. ನಿಮ್ಮ ಸುಸ್ತಾದ ಅನಾರೋಗ್ಯಕರ ಕಂಗಳ ಕೆಳಗೆ ಕಪ್ಪು ವೃತ್ತಗಳು, ನಿರ್ಜೀವ, ಡ್ರೈ ಹಾಗೂ ಕುಂದಿಹೋದ ಚರ್ಮ, ಶುಷ್ಕ ಮತ್ತು ದುರ್ಬಲ ಕೂದಲು, ಅಂದಗೆಟ್ಟ ಕಳಾಹೀನ ಉಗುರು ನಿಮ್ಮ ಆರೋಗ್ಯ ದಾರಿ ತಪ್ಪಿದೆ ಎಂದು ಹೇಳುತ್ತವೆ. ಇವನ್ನು ನೀವು ಬಲವಂತವಾಗಿ ಮೇಕಪ್ ನಿಂದ ಮರೆಮಾಚಲು ಆಗುವುದಿಲ್ಲ.
ಹೌದು, ನಿಮ್ಮ ದೇಹದಲ್ಲೂ ಕಬ್ಬಿಣಾಂಶದ ಕೊರತೆ ಇದ್ದರೆ, ಈ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಸದಾ ಓಟದ ಈ ಯಾಂತ್ರಿಕ ಜೀವನದಲ್ಲಿ ಆರೋಗ್ಯದ ಕುರಿತಾಗಿ ಮಹಿಳೆಯರು ಸದಾ ನಿರ್ಲಕ್ಷ್ಯ ವಹಿಸುತ್ತಾರೆ. ಮನೆಗೆಲಸ, ಮನೆಯವರ ಬೇಕುಬೇಡ ಗಮನಿಸುವುದರಲ್ಲಿ ತಮ್ಮ ಆರೋಗ್ಯದ ಕಡೆ ಲಕ್ಷ್ಯ ವಹಿಸುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಮಾತ್ರವಲ್ಲದೆ, ಸೌಂದರ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.
ಹೀಗಾಗಿ ನೀವು ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಬೇಕಿದ್ದರೆ, ಕಬ್ಬಿಣಾಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿ ಆರೋಗ್ಯದಿಂದ ನಳನಳಿಸಿ. ಆಗ ಮಾತ್ರ ನೀವು ಅನೀಮಿಯಾ (ರಕ್ತಹೀನತೆ)ಗೆ ಬಲಿ ಆಗುವುದಿಲ್ಲ.
ಕಬ್ಬಿಣಾಂಶದ ಕೊರತೆಯ ದುಷ್ಪ್ರಭಾವ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡುತ್ತಿದ್ದರೆ, ಚರ್ಮ ಮಾತ್ರವಲ್ಲದೆ, ಕೂದಲು ಮತ್ತು ಇತರ ಅಂಗಗಳೂ ಅದರ ದುಷ್ಪ್ರಭಾವಕ್ಕೆ ಒಳಗಾಗುತ್ತವೆ. ಮುಖ್ಯವಾಗಿ ಸೌಂದರ್ಯ ಬೇಗ ಕಳೆಗುಂದುತ್ತದೆ.
ಉಗುರಿನ ಸಮಸ್ಯೆ :
ಉಗುರು ಹೆಣ್ಣಿನ ಕೈಗಳ ಸೌಂದರ್ಯದ ಒಂದು ಪ್ರಮುಖ ಅಂಗ. ಸೌಂದರ್ಯ ಎದ್ದು ತೋರಲು ಸುಂದರ ಉಗುರುಗಳು ಬೇಕೇ ಬೇಕು. ನಿಮ್ಮ ಉಗುರು ಅಕಸ್ಮಾತ್ ಹಳದಿ ಆಗತೊಡಗಿದರೆ, ನಿರ್ಜೀವವಾಗಿ ತಂತಾನೇ ತುಂಡರಿಸ ತೊಡಗಿದರೆ ಆಗ ನೀವು ಬೇಗ ಎಚ್ಚೆತ್ತುಕೊಳ್ಳಬೇಕು. ಏಕೆಂದರೆ ಇವೆಲ್ಲ ದೇಹದಲ್ಲಿ ಐರನ್ ಕೊರತೆ ಸೂಚಿಸುತ್ತದೆ. ಹೀಗಾಗಿ ನೀವು ನಿಮ್ಮ ಸೌಂದರ್ಯ ಉಳಿಸಿಕೊಳ್ಳ ಬಯಸಿದರೆ, ಐರನ್ ಯುಕ್ತ ಆಹಾರ ಸೇವಿಸಿ.
ನಿರ್ಜೀವ ಚರ್ಮ :
ದೇಹದಲ್ಲಿ ಐರನ್ ಕಡಿಮೆ ಆದಾಗ ಮುಖ ಬಿಳಚಿಕೊಳ್ಳುತ್ತಾ ಹೋಗುತ್ತದೆ. ಒಮ್ಮೊಮ್ಮೆ ಲೈಟ್ ಹಳದಿ ಬಣ್ಣಕ್ಕೂ ತಿರುಗಬಹುದು. ಏಕೆಂದರೆ ಐರನ್ ಕೊರತೆಯಿಂದ ಹಿಮೋಗ್ಲೋಬಿನ್ ಮಟ್ಟ ಕುಸಿಯುತ್ತದೆ. ಇದರಿಂದಲೇ ರಕ್ತಕ್ಕೆ ಕೆಂಪು ಕಣ ಸಪ್ಲೈ ಆಗುವುದು. ಇದರಿಂದಾಗಿಯೇ ಮುಖದಲ್ಲಿ ತುಸು ಕೆಂಬಣ್ಣ ಹರಡಿ ಕಳೆಕಳೆಯಾಗಿ ಕಾಣುವುದು. ದೇಹದಲ್ಲಿ ಇಂಥ ಕೆಂಪು ರಕ್ತಕಣ ಕಡಿಮೆ ಆದರೆ, ಮುಖದಲ್ಲಿ ಹಳದಿ ಬಣ್ಣ, ನಿರ್ಜೀವ ಕಳೆ ತಂತಾನೇ ಮೂಡುತ್ತದೆ.
ಡಾರ್ಕ್ ಸರ್ಕಲ್ಸ್ :
ಕಂಗಳ ಕೆಳಗೆ ಹಾಗೂ ಸುತ್ತಮತ್ತಲೂ ಕಪ್ಪು ವೃತ್ತಗಳಿದ್ದರೆ ಯಾವ ಹೆಣ್ಣಿಗೆ ತಾನೇ ಇಷ್ಟವಾದೀತು? ದೇಹದಲ್ಲಿ ಐರನ್ ಕೊರತೆ ಇದ್ದರೆ, ನಿಮ್ಮ ಕಂಗಳ ಕೆಳಗೆ ಕಪ್ಪು ವೃತ್ತ ಅಂದ್ರೆ ಡಾರ್ಕಲ್ ಸರ್ಕಲ್ಸ್ ತಂತಾನೇ ಮೂಡುತ್ತವೆ.
ಕೂದಲಿನ ಮೇಲೆ ದುಷ್ಪರಿಣಾಮ :
ದೇಹದಲ್ಲಿ ಐರನ್ ಕೊರತೆ ಕಾಡಿದಾಗ, ರಕ್ತ ಸಂಚಾರದ ಮೇಲೆ ದಟ್ಟ ಪರಿಣಾಮ ಆಗುತ್ತದೆ. ಇದರಿಂದಾಗಿ ಆಮ್ಲಜನಕ ಸಲೀಸಾಗಿ ಅಗತ್ಯ ಪ್ರಮಾಣದಲ್ಲಿ ಕೂದಲಿನಡಿಯ ಸ್ಕಾಲ್ಪ್ ವರೆಗೂ ತಲುಪಲಾರದು. ಹೀಗಾಗಿ ಕೂದಲಿನ ಬೆಳವಣಿಗೆ ಕುಂಟುತ್ತದೆ. ಕ್ರಮೇಣ ಅದು ನಿರ್ಜೀವ ಆಗುತ್ತದೆ. ನಂತರ ಕೂದಲು ಉದುರುವಿಕೆ ಮಾಮೂಲಿ ಆಗುತ್ತದೆ. ಹೀಗಾದಾಗ ವೈದ್ಯರನ್ನು ಸಂಪರ್ಕಿಸಿ. ಅವರ ಬಳಿ ನೀವು ರಕ್ತಹೀನತೆಗೆ ತುತ್ತಾಗಿಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳಿ.