ಶರತ್ ಚಂದ್ರ
ಧ್ರುವ ಸರ್ಜಾ ಅವರ ನಾಯಕತ್ವದ ‘ಕ್ರಿಮಿನಲ್ ‘ ಚಿತ್ರ ಇತ್ತೀಚೆಗೆ ಅದ್ದೂರಿ ಮುಹೂರ್ತ ಕಂಡಿತ್ತು. ‘ಕೆರೆ ಬೇಟೆ ‘ಚಿತ್ರದ ನಿರ್ದೇಶಕ ರಾಜಗುರು ಆಕ್ಷನ್ ಕಟ್ ಹೇಳಲಿರುವ ಈ ಚಿತ್ರದ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಚಿತ್ರದ ಇನ್ನೊಬ್ಬ ನಾಯಕಿಯನ್ನು ಫೈನಲ್ ಮಾಡಲಾಗಿದೆ.
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಸರು ಮಾಡುತ್ತಿರುವ ಐಶ್ವರ್ಯ ರಾಜೇಶ್ ‘ಕ್ರಿಮಿನಲ್ ‘ಚಿತ್ರಕ್ಕೆ ಎಂಟ್ರಿ ನೀಡಿದ್ದಾರೆ.

ಈ ಹಿಂದೆ ರೋಹಿತ್ ಪದಕಿ ನಿರ್ದೇಶನದ ಶಿವಣ್ಣ ಮತ್ತು ಡಾಲಿ ಧನಂಜಯ್ ಅಭಿನಯದ ‘ಉತ್ತರ ಕಾಂಡ ‘ಚಿತ್ರಕ್ಕೂ ಕೂಡ ನಾಯಕಿರಲ್ಲೊಬ್ಬರಾಗಿ ಆಯ್ಕೆಯಾಗಿದ್ದರು. ಅದರೆ ಆ ಚಿತ್ರ ಸದ್ಯಕ್ಕೆ ನಿಂತುಹೋಗಿದೆ. ಈ ಮಧ್ಯೆ ಐಶ್ವರ್ಯ ರಾಜೇಶ್ ಇನ್ನೊಂದು ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ವರ್ಷದ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾದ ತೆಲುಗು ಚಿತ್ರ ‘ಸಂಕ್ರಾಂತಿಕಿ ವಸ್ತುನ್ನಾಮು’ ಚಿತ್ರದಲ್ಲಿ ನಾಯಕ ವೆಂಕಟೇಶ್ ಪತ್ನಿಯಾಗಿ ಅಭಿನಯಿಸಿ ಗಮನ ಸೆಳೆದಿದ್ದರು.

ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಐಶ್ವರ್ಯ ತಂದೆ ಮತ್ತು ತಾಯಿ ಕೂಡ ನಟ ನಟಿಯರಾಗಿ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ತಮ್ಮ ಅಭಿನಯಕ್ಕೆ ತಮಿಳುನಾಡು ರಾಜ್ಯ ಪ್ರಶಸ್ತಿ ಫಿಲಂ ಫೇರ್ ಸೈಮಾ ಪ್ರಶಸ್ತಿಗಳನ್ನು ಪಡೆದಿರುವ ಐಶ್ವರ್ಯ ರಾಜೇಶ್, ತಮ್ಮ ಸಹಜ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಪ್ರೇಕ್ಷಕರ ಪ್ರೀತಿ ಪಾತ್ರರಾಗಿದ್ದಾರೆ.

ಒಂದಷ್ಟು ವೆಬ್ ಸೀರೀಸ್ ನಲ್ಲಿ ಕೂಡ ಅಭಿನಯಿಸಿರುವ ಐಶ್ವರ್ಯ ರಾಜೇಶ್ ಉದ್ಯಮಿಯು ಹೌದು. Arczsilverjewellery ಎಂಬ ಜ್ಯುವೆಲ್ಲರಿ ಸಂಸ್ಥೆಯ ಸಂಸ್ಥಾಪಕಿಯಾಗಿ ಯಶಸ್ಸನ್ನು ಕಂಡವರು.
ಸದ್ಯಕ್ಕೆ ಆಕೆಯ ಪಾತ್ರದ ಬಗ್ಗೆ ನಿರ್ದೇಶಕರು ತಿಳಿಸಿಲ್ಲವಾದರೂ,ಕನ್ನಡದ ಕ್ರಿಮಿನಲ್ ಮೂಲಕ ಧ್ರುವ ಸರ್ಜನಿಗೆ ಜೋಡಿಯಾಗಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಐಶ್ವರ್ಯ ರಾಜೇಶ್ ಸ್ಯಾಂಡಲ್ವುಡ್ ಗೆ ಭರ್ಜರಿ ಎಂಟ್ರಿ ನೀಡಿದ್ದಾರೆ.





