ಜಾಗೀರ್ದಾರ್ *
ಜುಲೈ 2, ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ. ತಮ್ಮ ನಾಯಕನ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬ. ನಾಯಕರಿಗೂ ಅಷ್ಟೇ. ತಮ್ಮನ್ನು ಇಷ್ಟಪಡುವ ಅಭಿಮಾನಿ ದೇವರುಗಳನ್ನು ಹತ್ತಿರದಿಂದ ನೋಡಿ ಅವರೊಂದಿಗೆ ಕಾಲ ಕಳೆಯುವ ಸಂತಸದ ಸಮಯ.
ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬವನ್ನು ಮನೆಯ ಬಳಿ ಅಭಿಮಾನಿಗಳೊಂದಿಗೆ ಗಣೇಶ್ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ಮೂಡಿ ಬರುತ್ತಿರುವ “ಪಿನಾಕ” ಹಾಗೂ “ಯುವರ್ ಸಿನ್ಸಿಯರ್ಲಿ ರಾಮ್” ಚಿತ್ರಗಳ ಚಿತ್ರೀಕರಣದಲ್ಲಿ ಗಣೇಶ್ ಅವರು ಪಾಲ್ಗೊಂಡಿರುವುದರಿಂದ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿಲ್ಲ.
ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಗಣೇಶ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ತಮ್ಮ ನಾಯಕನ ಚಿತ್ರ ಯಶಸ್ವಿಯಾಗಬೇಕು. ತಮ್ಮ ನೆಚ್ಚಿನ ಪಾತ್ರಗಳಲ್ಲಿ ನಮ್ಮ ನಾಯಕನನ್ನು ನೋಡಬೇಕು ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಅಭಿಮಾನಿಗಳಿಗೆ ಬೇಕಾದನ್ನು ನೀಡುವಲ್ಲಿ ನಾಯಕರು ಸಾಕಷ್ಟು ಶ್ರಮ ಪಡುತ್ತಿರುತ್ತಾರೆ. ತಾವು ಅಂದು ಕೊಂಡ ಹಾಗೆ ಸಿನಿಮಾ ಬಂದು ಅಭಿಮಾನಿಗಳಿಗೆ ಅದು ಮೆಚ್ಚುಗೆ ಆಗಿ ಅವರು ಚಿತ್ರಮಂದಿರಗಳಿಗೆ ಬಂದರೆ ಅದಕ್ಕಿಂತ ಖುಷಿ ಕಲಾವಿದರಿಗೆ ಮತ್ತೊಂದಿಲ್ಲ.
ಆದರೆ ಈ ಬಾರಿಯ ಹುಟ್ಟುಹಬ್ಬಕ್ಕೆ ಗಣೇಶ್ ಅವರು ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆ ನೀಡಿದ್ದಾರೆ. ಹವ್ಯಾಸಿ ಛಾಯಾಗ್ರಾಹಕ ಹಾಗೂ ಪ್ರಸ್ತುತ ಶಿಲ್ಪ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ತುಳು ಚಿತ್ರದ ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಅವರು ಸೆರೆ ಹಿಡಿದಿರುವ ಗಣೇಶ್ ಅವರ ವಿಶೇಷ
ಭಾವಚಿತ್ರಗಳನ್ನು ತಮ್ಮ ಹುಟ್ಟುಹಬ್ಬದ ಗಣೇಶ್ ಅವರು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
ಚಿತ್ರಮಂದಿರಗಳಿಗೆ ಜನರೆ ಬಾರದ ಪರಿಸ್ಥಿತಿಯಲ್ಲಿ ಕಳೆದವರ್ಷ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಚಿತ್ರ ಭರ್ಜರಿ ಯಶಸ್ವಿಯಾಯಿತು. ಈ ಚಿತ್ರದ ಮೂಲಕ ಮತ್ತೆ ಕುಟುಂಬ ಸಮೇತ ಜನರು ಚಿತ್ರಮಂದಿರಗಳಿಗೆ ಬರಲು ಆರಂಭಿಸಿದರು. ಸೂಪರ್ ಹಿಟ್ ಚಿತ್ರ ನೀಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಪಿನಾಕ”, “ಯವರ್ ಯುನಿವರ್ಸಲ್ ರಾಮ್” ಮುಂತಾದ ಚಿತ್ರಗಳ ಮೇಲೂ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.