ಇತ್ತೀಚಿಗೆ ಸಿನಿಮಾಗಳು ಅಂದ್ರೆ ಜಸ್ಟ್ ಎಂಟರ್ಟೇನ್ಮೆಂಟ್ ಅಂತಾನೇ ಜನ ಭಾವಿಸಿದ್ದಾರೆ. ಆದರೆ, ಹಿಂದೆ ಸಿನಿಮಾ ಅಂದ್ರೆ ಅದೊಂದು ಎಮೋಷನ್ ಅಂತಾ ಜನ ಭಾವಿಸ್ತಿದ್ರು. ಥಿಯೇಟರ್ನಿಂದ ಹೊರಗೆ ಬಂದ್ರೂ ಸಿನಿಮಾ ಜೊತೆಗೆ ಒಂದು ಅಟ್ಯಾಚ್ಮೆಂಟ್ ಇರ್ತಿತ್ತು. ಬಹಳ ವರ್ಷಗಳ ನಂತರ ಅಂತಹದ್ದೊಂದು ಚಿತ್ರ ಭಾರಿ ಸದ್ದು ಮಾಡ್ತಿದೆ. ಯಾವುದು ಆ ಚಿತ್ರ..? ಜನ ಎಮೋಷನ್ ಆಗ್ತಿರೋದ್ಯಾಕೆ ಅಂತಾ ನೋಡೋಣ ಬನ್ನಿ.
ಅಣ್ಣಾವ್ರು.. ಎನ್ಟಿಆರ್.. ಎಂಜಿಆರ್ ಕಾಲದಲ್ಲಿ ಸಿನಿಮಾಗಳನ್ನು ನೋಡಿ ಜನ ಇನ್ಸ್ಪೈರ್ ಆಗ್ತಿದ್ರು. ರಾಜ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ ಹಲವಾರು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ರು. ಅಷ್ಟರ ಮಟ್ಟಿಗೆ ಚಲನಚಿತ್ರಗಳು ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಅಂತಹುದೇ ಒಂದು ಚಿತ್ರ ಈಗ ಭಾರಿ ಸದ್ದು ಮಾಡ್ತಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟಿಸಿರೋ ಹಿಂದಿ ಚಿತ್ರ ಛಾವ ಜನರ ಕಣ್ಣಲ್ಲಿ ಗಳಗಳನೇ ನೀರು ತರಿಸುತ್ತಿದೆ. ಚಿಕ್ಕ ಮಕ್ಕಳು ಮಾತ್ರವೇ ಅಲ್ಲ.. ದೊಡ್ಡವರು ಕೂಡ ತಮಗೇ ಗೊತ್ತಿಲ್ಲದಂತೆ ಅಶ್ರುಧಾರೆ ಸುರಿಸುತ್ತಿದ್ದಾರೆ.
ಛಾವ ಸಿನಿಮಾ ಮರಾಠ ಸಾಮ್ರಾಜ್ಯದ ಎರಡನೇ ರಾಜ ಛತ್ರಪತಿ ಸಾಂಭಾಜಿ ಮಹಾರಾಜ್ ಜೀವನಾಧಾರಿತ ಸಿನಿಮಾ ಆಗಿದೆ. ಮರಾಠಿ ಭಾಷಿಕರಿಗೆ ಛತ್ರಪತಿ ಶಿವಾಜಿ, ಸಂಭಾಜಿ ಕುರಿತು ವಿಶೇಷ ಗೌರವವಿದೆ. ತಾವು ಹೆಮ್ಮೆಯಿಂದ ತಲೆ ಎತ್ತಿ ತಿರುಗುವಂತೆ ಮಾಡಿದ ರಾಜರು ಇವರು ಮರಾಠಿಗರು ಅಂತಾ ಭಾವಿಸಿದ್ದಾರೆ. ಇಂತಾ ಛತ್ರಪತಿ ಸಂಭಾಜಿ ಮಹಾರಾಜ್ ಮಾಡಿದ ತ್ಯಾಗವನ್ನು ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ತೋರಿಸಲಾಗಿದೆ. ಸಂಭಾಜಿ ಮಹಾರಾಜ್ ಮಾಡಿರೋ ತ್ಯಾಗವನ್ನು ಸ್ಮರಿಸುತ್ತಾ ವೀಕ್ಷಕರು ಅಳುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಬಾಲಕನೊಬ್ಬ ಸಿನಿಮಾ ಕ್ಲೈಮ್ಯಾಕ್ಸ್ ಬಳಿಕ ತನ್ನ ಎದೆಯ ಮೇಲೆ ಕೈ ಇಟ್ಟು, ಛತ್ರಪತಿ ಶಿವಾಜಿ ಮಹಾರಾಜ್ ಸ್ಮರಿಸುವ ಪ್ರಜಾಪತಿ, ಗಜಪತಿ ಮಂತ್ರವನ್ನು ಹಾಡುತ್ತಾ ಕಣ್ಣೀರು ಹಾಕಿದ್ದಾನೆ. ವಿಕ್ಕಿ ಕೌಶಲ್ ಈ ವಿಡಿಯೋ ಶೇರ್ ಮಾಡಿ ನಿನ್ನ ಕುರಿತು ಹೆಮ್ಮೆ ಇದೆ. ಸಾಧ್ಯವಾದರೆ ನಿನ್ನನ್ನ ತಬ್ಬಿಕೊಳ್ಳಬೇಕು ಅನ್ನಿಸುತ್ತಿದೆ ಅಂತಾ ಪೋಸ್ಟ್ ಮಾಡಿದ್ದಾರೆ. ವಿಕ್ಕಿ ಕೌಶಲ್ ಮಾಡಿರೋ ಪೋಸ್ಟ್ ಭಾರಿ ವೈರಲ್ ಆಗಿದೆ.
ಕೇವಲ ಬಾಲಕನ ವಿಡಿಯೋ ಮಾತ್ರ ವೈರಲ್ ಆಗಿಲ್ಲ.. ಬದಲಿಗೆ ಛತ್ರಪತಿ ಶಿವಾಜಿ, ಛತ್ರಪತಿ ಸಂಭಾಜಿಯ ತ್ಯಾಗಗಳ ಸ್ಮರಿಸಲು ಮರಾಠಿಗರು ಹಲವಾರು ಮಂತ್ರಗಳನ್ನು ಪಠಿಸುತ್ತಾರೆ. ಇದೇ ರೀತಿ ಒಂದು ಚಿತ್ರಮಂದಿರದಲ್ಲಿ ಸಿನಿಮಾ ಮುಗಿದ ಬಳಿಕ ಟೈಟಲ್ ಕಾರ್ಡ್ ಓಡುತ್ತಿದ್ದ ವೇಳೆ ಯುವತಿಯೊಬ್ಬಳು ಆ ಮಂತ್ರಗಳನ್ನ ಪಠಿಸಿದ್ದಾಳೆ. ಇದಕ್ಕೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ ವಿಚಿತ್ರ ಅಂದ್ರೆ, ನಾಗಪುರದಲ್ಲಿ ಮರಾಠ ಯುವಕನೊಬ್ಬ ಕುದರೆ ಮೇಲೆ ಬಂದು ಚಿತ್ರ ವೀಕ್ಷಿಸಿದ್ದಾನೆ. ಬ್ಯಾಂಡ್ ಸೆಟ್ ಜೊತೆಗೆ ಚಿತ್ರಮಂದಿರಕ್ಕೆ ಆಗಮಿಸಿ ಸಂಭಾಜಿಯ ಕುರಿತ ತನ್ನ ಅಭಿಮಾನ ಪ್ರದರ್ಶಿಸಿದ್ದಾನೆ.
ಮರಾಠಿಗರಿಗೆ ಜೈ ಭವಾನಿ.. ಜೈ ಶಿವಾಜಿ ಘೋಷಣೆಗಳು ಅಂದ್ರೆ ಭಾರಿ ಅಚ್ಚುಮೆಚ್ಚು. ಜೊತೆಗೆ ಪಾರ್ವತಿ ಪತಯೇ.. ಹರಹರ ಮಹಾದೇವ್ ಕೂಡ ಮಹಾರಾಷ್ಟ್ರದಲ್ಲಿ ದಿನಂಪ್ರತಿ ಮೊಳಗೋ ಘೋಷಣೆಗಳು. ಛಾವ ನೋಡಲು ಬಂದಿದ್ದ ಪ್ರೇಕ್ಷಕರು ಸಹ ಇದೇ ರೀತಿ ಜೈ ಭವಾನಿ, ಹರಹರ ಮಹಾದೇವ್ ಅನ್ನೋ ಘೋಷಣೆಗಳನ್ನ ಕೂಗಿ ಥಿಯೇಟರ್ನಲ್ಲಿ ಭಾರಿ ಹಲ್ಚಲ್ ಎಬ್ಬಿಸಿದ್ದಾರೆ. ಈ ಘೋಷಣೆಗಳನ್ನ ಕೂಗೋ ವಿಡಿಯೋಗಳು ಸಹ ಇಂಟರ್ನೆಟ್ನಲ್ಲಿ ಭಾರಿ ಸೆನ್ಸೇಷನ್ ಕ್ರಿಯೇಟ್ ಮಾಡಿವೆ. ಈ ಮೂಲಕ ಛಾವ ಚಿತ್ರ ವೀಕ್ಷಕರನ್ನ ಭಾವನಾತ್ಮಕವಾಗಿ ಸೂಜಿಗಲ್ಲಿನಂತೆ ಸೆಳೀತಿದೆ.