ಇತ್ತೀಚೆಗಷ್ಟೇ ನಿಧನ ಹೊಂದಿದ ಉದ್ಯಮಿ ಸಂಜಯ್ ಕಪೂರ್ ಅವರ 30,000 ಕೋಟಿ ರೂ. ಆಸ್ತಿ ಹಂಚಿಕೆ ಸಂಬಂಧ ಅವರ 2ನೇ ಪತ್ನಿ ಹಾಗೂ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳು ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಸಂಜಯ್ ಕಪೂರ್ ನಿಧನದ ನಂತರ ಅವರ ಆಸ್ತಿಯನ್ನು ಅವರ ಮೂರನೇ ಪತ್ನಿ ಪ್ರಿಯಾ ಸಚ್​ದೇವ್ ನಿರ್ವಹಣೆ ಮಾಡುತ್ತಿದ್ದಾರೆ. ಈಗ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರಿಂದ ಪ್ರಿಯಾ ಸಚ್​ದೇವ್ ಅವರ ನಡುವಳಿ ಮೇಲೆ ಪ್ರಶ್ನೆಗಳು ಎದ್ದಿವೆ. ಆಸ್ತಿಯಲ್ಲಿ ಕರಿಷ್ಮಾ ಕಪೂರ್ ಅವರ ಮಕ್ಕಳು ಕೂಡ ಪಾಲುದಾರರು ಎಂದು ಹೇಳಲಾಗಿದೆ.ಸಂಜಯ್ ಕಪೂರ್​ಗೆ ಸಂಬಂಧಿಸಿದ ಆಸ್ತಿ, ಲೆಕ್ಕಪತ್ರಗಳ ಹಂಚಿಕೆ ಪ್ರತಿಪಾದನೆಗೆ ಅರ್ಜಿ ಸಲ್ಲಿಕೆ ಮಾಡಿ ಶಾಶ್ವತ ತಡೆಯಾಜ್ಞೆಗೆ ಕೋರಿದ್ದಾರೆ. ತಂದೆ ಸಂಜಯ್ ಕಪೂರ್ ಅವರು ನಿಧನದ ನಂತರ ಮಲತಾಯಿ ಪ್ರಿಯಾ ಸಚ್​ದೇವ್ ಅವರು ಆಸ್ತಿ, ದಾಖಲೆ ಪತ್ರಗಳಿಗೆ ಸಂಬಂಧಿಸಿದಂತೆ ಇತರೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೇ ನಮಗೆ ಆಸ್ತಿ ಸಿಗದಂತೆ ಮಾಡಲು ಮುಂದಾಗಿದ್ದಾರೆ.

ಇಡೀ ಆಸ್ತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಂದೆಯ ವಿಲ್ ಅನ್ನು ನಕಲು ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜುಲೈ 30, 2025ರಂದು ನಡೆದ ಕೌಟುಂಬಿಕ ಸಭೆಯಲ್ಲಿ ತಮ್ಮ ಮಲತಾಯಿ ಏಳು ವಾರಗಳಿಗೂ ಹೆಚ್ಚು ಕಾಲ ದಿನೇಶ್ ಅಗರ್ವಾಲ್ ಮತ್ತು ನಿತಿನ್ ಶರ್ಮಾ ಎಂಬ ಇಬ್ಬರು ಸಹಚರರೊಂದಿಗೆ ಸಂಚು ರೂಪಿಸಿ ತಮ್ಮನ್ನು ಹತ್ತಿಕ್ಕಿದ್ದರು ಎಂದು ದೂರಲಾಗಿದೆ. ಈ ಉಯಿಲು ನಕಲಿ ಮತ್ತು ಕೃತ್ರಿಮತೆಯಿಂದ ಕೂಡಿದೆ ಎಂದು ಕೂಡ ವಾದಿಸಲಾಗಿದೆ.

ತಮ್ಮನ್ನು ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ಘೋಷಿಸಬೇಕು ಮತ್ತು ತಮ್ಮ ತಂದೆಯ ಆಸ್ತಿಯಲ್ಲಿ ತಲಾ 5ನೇ 1 ಪಾಲನ್ನು ನೀಡುವ ಆಸ್ತಿ ವಿಭಜನೆ ಆದೇಶ ಹೊರಡಿಸಬೇಕು. ಮಧ್ಯಂತರ ಪರಿಹಾರವಾಗಿ, ಪ್ರಕರಣ ಬಗೆಹರಿಯುವವರೆಗೆ ಸಂಜಯ್ ಕಪೂರ್ ಅವರಿಗೆ ಸೇರಿದ ಎಲ್ಲಾ ವೈಯಕ್ತಿಕ ಆಸ್ತಿಗಳನ್ನು ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ