ಬಾಲಿವುಡ್ ಒಂದೇ ಅಲ್ಲದೆ, ಎಲ್ಲಾ ಭಾರತೀಯ ಚಿತ್ರಗಳಲ್ಲೂ ಹಿಂದಿನ ಪ್ರೇಮದ ವ್ಯಾಖ್ಯಾನ ಖಂಡಿತಾ ಅದೇ ರೀತಿ ಉಳಿದಿಲ್ಲ. ಇಂದಿನ ಆಧುನಿಕ ಕಾಲದವರ ಈ ಪರಿಯ ವ್ಯತ್ಯಾಸಕ್ಕೆ ಕಾರಣವಾದರೂ ಏನು……?
ಚಿತ್ರಗಳು ಸಮಾಜದ ಕೈಗನ್ನಡಿ ಎನಿಸುತ್ತವೆ. ಸಮಾಜದಲ್ಲಿ ನಡೆಯುತ್ತಿರುವ ಪ್ರತ್ಯಕ್ಷ ಘಟನೆಗಳೇ ಬೆಳ್ಳಿ ಪರದೆಯಲ್ಲಿ ಸಿನಿಮಾ ಆಗುತ್ತವೆ. ಅದು ಪ್ರೀತಿಪ್ರೇಮ, ತಕರಾರು, ಅಪರಾಧ, ಇಂದಿನ ಆಧುನಿಕ ಕಾಲದರ ಲವ್ ಸ್ಟೈಲ್…… ಏನೇ ಇರಬಹುದು.
ಹಿಂದಿನ ಕಾಲದಲ್ಲಿ ಪ್ರೇಮವೆಂದರೆ ಅದು ಅಮರ ಎಂದಾಗಿತ್ತು. ಲೈಲಾ ಮಜ್ನು, ಹೀರ್ ರಾಂಝ, ಸೋನಿ ಮಹಿವಾಲ್, ಮಾಲತಿ ಮಾಧವ, ಅಂಬಿಕಾಪತಿ ಅಮರಾವತಿ ಮುಂತಾದವರ ಪ್ರೇಮ ಕಥೆಗಳೇ ಆಗಿದ್ದವು. ಕಾಲಕ್ರಮೇಣ ಜನರ ಆಧುನಿಕ ಮನೋಭಾವಕ್ಕೆ ತಕ್ಕಂತೆ ಎಲ್ಲ ಬದಲಾಗ ತೊಡಗಿತು. ಕುಚ್ ಕುಚ್ ಹೋತಾ ಹೈ, ಹಂ ಆಪ್ಕೆ ಹೈ ಕೌನ್, ಮೈನೆ ಪ್ಯಾರ್ಕಿಯಾ….. ಮುಂತಾದ ಚಿತ್ರಗಳು ಸಾಲು ಸಾಲಾಗಿ ಬಂದವು. ಇವುಗಳಲ್ಲಿ ಪ್ರೇಮದ ಪರಿಯೂ ವಿಭಿನ್ನ, ಮದುವೆಯ ವ್ಯಾಖ್ಯಾನ ಡಿಫರೆಂಟ್. ಒಂದೇ ವಿಷಯ ಕಾಮನ್ ಎಂದರೆ, ಇಂದಿನ ಆಧುನಿಕ ಹುಡುಗಿಯರು ಇಂಥ ಸಿನಿಮಾಗಳ ಹೀರೋ ತರಹವೇ ತನ್ನ ಪ್ರೇಮಿ, ಮದುವೆ ಆಗಲಿರುವ ವರ ಇರಬೇಕೆಂದು ಕನಸು ಕಾಣತೊಡಗಿದರು.
ಮದುವೆ ಆದ ನಂತರ ಪತಿಯಲ್ಲಿ ಇಂಥ ಹೀರೋ ಕಾಣಲು ಯತ್ನಿಸುತ್ತಿದ್ದರು. ಮುಂದೆ ಕಾಲಕ್ರಮೇಣ ಜನರ ಯೋಚನಾಧಾಟಿ ಬದಲಾದಂತೆ, ಪ್ರೇಮ ಮದುವೆ ಬಗ್ಗೆ ಸಹ ಜನರ ದೃಷ್ಟಿಕೋನ ಬದಲಾಗ ತೊಡಗಿತು.
ಪ್ರೇಮವೆಂದರೆ…. `ಅಲೌಕಿಕ….. ಅದ್ಭುತ…. ಅದರಲ್ಲಿ ಕೊಚ್ಚಿಹೋದ ಮೇಲೆ ಮಳೆ ಏನು ಬಿಸಿಲೇನು….’ ಎಂಬಂಥ ಹುಚ್ಚುಚ್ಚು ಕಲ್ಪನೆಗಳು ರಾರಾಜಿಸುತ್ತಿವೆ. ಇಂದಿನ ಫಿಲ್ಮಿ ಪ್ರೇಮಿಗಳು, ದಂಪತಿ ಹಿಂದಿನವರಂತೆ ಪ್ರೇಮದಲ್ಲಿ ಕುರುಡಲ್ಲ. ಬದಲಿಗೆ ಸಂಗಾತಿ ಕುರಿತಾಗಿ, ಮುಖ್ಯವಾಗಿ ಆರ್ಥಿಕ ಸ್ಥಿತಿ ಸದೃಢ ತಾನೇ ಎಂದು ಹಲವು ಸಲ ಚಿಂತಿಸಿ, ಸ್ವತಂತ್ರ ಧೋರಣೆ ತಾಳುತ್ತಾರೆ.
ಇದರ ಅರ್ಥ ಇಂದಿನ ಕಾಲದಲ್ಲಿ ಪ್ರೇಮ ಸತ್ತೇ ಹೋಗಿದೆ ಅಂತಲ್ಲ ಅಥವಾ ಜನರಿಗೆ ಪ್ರೇಮದ ಕುರಿತು ವಿಶ್ವಾಸವೇ ಇಲ್ಲ ಅಂತಲೂ ಅಲ್ಲ. ಬದಲಿಗೆ ಇಂದಿಗೂ ಸಹ ಪ್ರೇಮಿ ಅಥವಾ ದಂಪತಿಗಳಲ್ಲಿ, ಸಂಗಾತಿ ಕುರಿತು ಹಿಂದಿನಂತೆಯೇ ಮನದಾಳದ ಪ್ರೀತಿ ತುಂಬಿದೆ ಎನ್ನಬಹುದು. ಹಾಗಾದರೆ ವ್ಯತ್ಯಾಸ ಏನು? ಇಂದಿನ ಜನ ಪ್ರೇಮ, ಮದುವೆಗಳ ಕುರಿತಾಗಿ ಬಲು ಪ್ರಾಕ್ಟಿಕಲ್ ಆಗಿ ಚಿಂತಿಸುತ್ತಾರೆ. ಜೀವನವಿಡೀ ನಿಭಾಯಿಸಬೇಕಾದ ನಂಟಾದ್ದರಿಂದ ಬಲು ಎಚ್ಚರಿಕೆ ವಹಿಸುತ್ತಾರೆ.
ಲವ್ ಅದೇ ವಿಚಾರ ಬೇರೆ
ಇಂದಿನ ಕಾಲದವರಿಗೆ ಪ್ರೀತಿಪ್ರೇಮ ಅದೇ ಆದರೂ, ಅವರ ಯೋಚನಾಧಾಟಿ, ವಿಚಾರಲಹರಿ ಮಾತ್ರ ಖಂಡಿತಾ ಬೇರೆ! ಅದನ್ನೇ ಇಂದಿನ ರೊಮಾಂಟಿಕ್ ಚಿತ್ರಗಳಲ್ಲಿ ತೋರಿಸಲಾಗುತ್ತಿದೆ. ಈ ಕುರಿತಾಗಿ ಆಧುನಿಕ ಸಿನಿಮಾಗಳ ಕೆಲವು ದೃಶ್ಯಗಳ ಬಗ್ಗೆ ಗಮನಿಸೋಣ.
ಇತ್ತೀಚೆಗೆ ಬಿಡುಗಡೆಯಾದ ಕರಣ್ ಜೋಹರ್ ನಿರ್ದೇಶನದ, ಆಲಿಯಾ ರಣವೀರ್ ನಟಿಸಿದ್ದ `ರಾಕಿರಾನಿ ಕೀ ಪ್ರೇಂ ಕಹಾನಿ’ ಚಿತ್ರದಲ್ಲಿ ಇಂಥದ್ದೇ ವಿಭಿನ್ನ ಪಾತ್ರಗಳಿವೆ. ಆಲಿಯಾ ರಣವೀರ್ ಮಧ್ಯೆ ಪ್ರೇಮಾಂಕುರ ಆಗುತ್ತದೆ. ಆದರೆ ಇಬ್ಬರೂ ಪರಸ್ಪರ ವಿಭಿನ್ನ ಧ್ರುವಗಳಂಥ ಸ್ವಭಾವದವರು. ಇವರು ಮಾತ್ರವಲ್ಲ, ಇವರ ಕುಟುಂಬಗಳೂ ಪರಸ್ಪರ ಬಲು ವಿರುದ್ಧ ಸಂಸ್ಕೃತಿಯವರು.
ಆದರೆ ಇವರಿಬ್ಬರೂ ಗಾಢವಾಗಿ ಪ್ರೇಮಿಸುವುದರಿಂದ, ಕುಟುಂಬದವರನ್ನು ಒಪ್ಪಿಸಲು 3 ತಿಂಗಳ ಕಾಲಾವಧಿ ಕೇಳುತ್ತಾರೆ. ಇಬ್ಬರೂ ಪರಸ್ಪರರ ಕುಟುಂಬಗಳಿಗೆ ಹೊಂದುತ್ತೇವೋ ಇಲ್ಲವೋ, ಅವರ ಪ್ರೀತಿ ಪ್ರೇಮ ಗಳಿಸುತ್ತೇವೋ ಎಂಬುದನ್ನು ನೋಡಿಕೊಂಡು, ಮುಂದೆ ಮದುವೆ ಎಂದು ನಿರ್ಧರಿಸುತ್ತಾರೆ. ಕಥೆ ವಿಭಿನ್ನ ಹಾಗೂ ಕಾಲಕ್ಕೆ ತಕ್ಕಂತೆ ಇದೆ, ಹೀಗಾಗಿ ಪ್ರೇಕ್ಷಕರು ಸ್ವೀಕರಿಸಿದರು.
ಪರಸ್ಪರರ ಸಾಂಗತ್ಯ
ಇದೇ ತರಹ ವರುಣ್ ಧವನ್ ಜಾಹ್ನವಿ ಕಪೂರ್ ನಟಿಸಿರುವ `ಬಾಲ್’ ಚಿತ್ರದಲ್ಲಿ, ಪತ್ನಿಗೆ ಆಗಾಗ ಫಿಟ್ಸ್ ಬರುವುದರಿಂದ ಅವಳನ್ನು ಪತಿ ಸಹಜವಾಗಿ ಸ್ವೀಕರಿಸಲಾರ. ಮದುವೆಯ ದಿನವೇ ಅವಳು ಫಿಟ್ಸ್ ಆಟ್ಯಾಕ್ ಗೆ ತುತ್ತಾಗುತ್ತಾಳೆ. ಹೀಗಾಗಿ ಕಸಿವಿಸಿ, ಗೊಂದಲಕ್ಕೆ ಒಳಗಾದ ಪತಿ ಅವಳನ್ನು ಪತ್ನಿಯಾಗಿ ಸ್ವೀಕರಿಸಲಾರೆ ಅಂತಾನೆ, ದೂರ ಉಳಿಯುತ್ತಾನೆ. ಅದಕ್ಕೆ ಆ ಪತ್ನಿ ಅಸಹಾಯಕಳಾಗಿ ಅಳುತ್ತಾ ಕೂರದೆ, ತನಗೆ ಫಿಟ್ಸ್ ಬರುವುದು ನಿಜವೇ ಆದರೂ, ಪ್ರತಿ ಒಂದು ಸಂದರ್ಭದಲ್ಲೂ ತಾನು ಪತಿಗಿಂತ ಸ್ಮಾರ್ಟ್ ಎಂಬುದನ್ನು ಸಾಧಿಸಿ ತೋರಿಸುತ್ತಾಳೆ. ಗಂಡನ ಬಗ್ಗೆ ಸದಾ ದೂರುತ್ತಾ ಕೂರುವ ಬದಲು, ತನ್ನ ಸ್ವಸಾಮರ್ಥ್ಯದಿಂದ ಸಮಾಜದಲ್ಲಿ ಮೇಲೆದ್ದು ನಿಲ್ಲುತ್ತಾಳೆ, ಕೊನೆಗೆ ಪತಿಯೇ ಕ್ಷಮ ಕೋರಿ ಅವಳ ಬಳಿ ಬರುವಂತಾಗುತ್ತದೆ.
ಇದೇ ತರಹ `ಝರಾ ಹಟ್ ಕೇ ಝರಾ ಬಚ್ ಕೇ’ ಚಿತ್ರದಲ್ಲಿಯೂ ಸಹ ಹೀಗೆಯೇ ಪತಿಪತ್ನಿ ಸಂಬಂಧವನ್ನು ವಿಭಿನ್ನವಾಗಿ ತೋರಿಸಲಾಗಿದೆ. ಪ್ರೇಮಕ್ಕೆ ಕಟ್ಟುಬಿದ್ದು ಮದುವೆ ಅಂತೂ ಆಯಿತು. ವಾಸಕ್ಕೆ ತಮ್ಮದೇ ಆದ ಒಂದು ಮನೆ ಇಲ್ಲದೆ ಅತಿ ದುಃಖಕ್ಕೆ ಒಳಗಾಗುತ್ತಾರೆ. ಇದನ್ನೇ ದೊಡ್ಡದಾಗಿಸಿ, ತಮ್ಮ ವೈವಾಹಿಕ ಸಂಬಂಧ ಹಳಿ ತಪ್ಪುವಂತೆ ಮಾಡಿಕೊಳ್ಳುತ್ತಾರೆ. ನಂತರ ಅವರಿಗೆ ಅರಿವಾಗುವುದೆಂದರೆ, ಮನೆಗಿಂತಲೂ ಹೆಚ್ಚಿನದು ತಮ್ಮಿಬ್ಬರ ನಿಕಟ ಸಂಬಂಧ ಎಂಬುದು. ಕೊನೆಗೆ ಸುಖಾಂತ.
ಒಂದು ಅದ್ಭುತ ಕಥೆ
ಇತ್ತೀಚೆಗೆ ಬಿಡುಗಡೆಯಾದ ರಣಬೀರ್ ಶ್ರದ್ಧಾ ಕಪೂರ್ ರ `ತೂ ಜೂಠಿ ಮೈ ಮಕ್ಕಾರ್’ ಚಿತ್ರದಲ್ಲೂ ಇಂಥದ್ದೇ ಇಬ್ಬರು ಪ್ರೇಮಿಗಳ ಕಥೆ ಇದೆ. ಪರಸ್ಪರ ಅತ್ಯಧಿಕ ಪ್ರೇಮಿಸುವ ಇವರು, ಮದುವೆಯಾಗಲು ಹಲವು ಸಲ ಯೋಚಿಸುತ್ತಾರೆ. ನಾಯಕಿಗೆ ಇಲ್ಲಿ ಅವಿಭಕ್ತ ಕುಟುಂಬ ಇಷ್ಟವಿಲ್ಲ. ಜಾಯಿಂಟ್ ಫ್ಯಾಮಿಲಿ ಅಂದ್ರೆ ಬಹು ಜನರ ಮನೆ ಆಗುವ ಕಾರಣ, ತಮಗೆ ಪ್ರೈವೆಸಿ ಇರೋಲ್ಲ, ಎಲ್ಲದಕ್ಕೂ ಇತರರು ಮೂಗು ತೂರಿಸುತ್ತಾರೆ ಅಂತ. ಆದರೆ ಕೊನೆಯಲ್ಲಿ ಅತ್ತೆ ಮನೆಯವರ ಪ್ರೀತಿ ವಾತ್ಸಲ್ಯ ಕಂಡು ಇವಳ ಮನಸ್ಸು ಬದಲಾಗುತ್ತದೆ, ಅಂತೂ ಸುಖಾಂತದಲ್ಲಿ ಮದುವೆ ಮುಗಿಯುತ್ತದೆ.
ಇದೇ ತರಹ ಕುಡುಕ ಪ್ರೇಮಿಯ ಅಮಿತಾಭ್ ರ ಶರಾಬಿ, ಶಾಹಿದ್ ಕಪೂರ್ ನ ಕಬೀರ್ ಸಿಂಗ್, ಆದಿತ್ಯ ರಾಯ್ ಕಪೂರ್ ನ ಆಶಿಕಿ-2, ಮಾತ್ರವಲ್ಲದೆ, ಇದರಲ್ಲಿ ಹೆಂಗಸರೇನು ಕಡಿಮೆ ಎಂಬಂತೆ `ಒಳಗೆ ಸೇರಿದರೆ ಗುಂಡು….’ ಎಂದು ಮಾಲಾಶ್ರೀ `ನಂಜುಂಡಿ ಕಲ್ಯಾಣ’ದಲ್ಲಿ ಹಾಡಿದ್ದರೆ, ಗುಂಡು ಹಾಕಿಕೊಂಡೇ ಹಸೆಮಣೆಯಲ್ಲಿ ಗಂಟು ಹಾಕಿಸಿಕೊಳ್ಳುತ್ತಾಳೆ, ಇತ್ತೀಚಿನ `ಕೌಸ್ಯಲ್ಯಾ ಸುಪ್ರಜಾ ರಾಮ’ ಚಿತ್ರದ ನಾಯಕಿ. ಇಲ್ಲೆಲ್ಲ ಸಂಗಾತಿಯನ್ನು ಪ್ರೇಮಿಸುವ ನಾಯಕ/ನಾಯಕಿ ಹೆಂಡ ಮಾತ್ರ ಬಿಡಲಾರೆ ಅಂತಾರೆ. ಎಷ್ಟೋ ಪಡಿಪಾಟಲುಗಳ ನಂತರ, ಅಂತೂ ಆ ಜೋಡಿ ಒಂದಾಗುತ್ತದೆ.
ಪ್ರೇಮಕ್ಕಾಗಿ ತ್ಯಾಗ
ಸಂಜಯ್ ಲೀಲಾ ಬನ್ಸಾಲಿಯವರ `ಗಂಗೂಬಾಯಿ’ ಚಿತ್ರದ ಕಥೆಯಲ್ಲೂ, ಪ್ರೌಢ ಯುವತಿ ಗಂಗೂಬಾಯಿ ಹೇಗೆ ತನ್ನ ಪ್ರೇಮ ಕಂಡುಕೊಳ್ಳುತ್ತಾಳೆ ಎಂಬುದಾಗಿದೆ. ಎಂಥ ಅಮರ ಪ್ರೇಮಿಯೇ ಆದರೂ ವೇಶ್ಯೆಯನ್ನು ಮದುವೆ ಆಗಲಾರ ಎಂದು ಗೊತ್ತಿದ್ದರೂ, ಇಲ್ಲಿ ಅವಳು ತನ್ನ ಪ್ರೇಮ ಬಿಟ್ಟುಕೊಡಲಾರಳು. ಅಂಥವಳನ್ನು ಪತ್ನಿ ಆಗಿಸಿಕೊಂಡರೆ ಈ ಸಮಾಜ ಆ ಗಂಡನ ಬಗ್ಗೆ ವ್ಯಂಗ್ಯ ಆಡದೆ ಬಿಟ್ಟೀತೇ? ಅವರಿಬ್ಬರೂ ನೆಮ್ಮದಿಯಾಗಿ ಸಮಾಜದಲ್ಲಿ ಬದುಕಲು ಸಾಧ್ಯವೇ? ಹೀಗಾಗಿ ತನ್ನನ್ನು ಮದುವೆಯಾಗಿ ಪ್ರೇಮಿ ಕಷ್ಟಪಡುವ ಬದಲು, ಬೇರೆ ಮದುವೆಯಾಗಿ ಅವನಾದರೂ ಸುಖವಾಗಿರಲಿ ಎಂದು ಗಂಗೂಬಾಯಿ ತನ್ನ ಪ್ರೇಮವನ್ನು ತ್ಯಾಗ ಮಾಡುತ್ತಾಳೆ. ತಾನೇ ಮುಂದೆ ನಿಂತು ಅವನ ಮದುವೆ ಮಾಡಿಸುತ್ತಾಳೆ.
ಇದೇ ತರಹ `ಗದ್ದರ್’ ಚಿತ್ರದಲ್ಲಿಯೂ ಇಂಥದ್ದೇ ತ್ಯಾಗ ಬಲಿದಾನಗಳ ಕಥೆ ಇದೆ. ಇಲ್ಲಿ ನಾಯಕಿ ತನ್ನ ಪ್ರೇಮಕ್ಕಾಗಿ, ಪಾಕಿಸ್ತಾನದಿಂದ ಹಿಂದೂಸ್ಥಾನಕ್ಕೆ ಬಂದುಬಿಡುತ್ತಾಳೆ, ಇಲ್ಲಿ ತನ್ನ ಪರಿವಾರ ಹೂಡುತ್ತಾಳೆ. ತನ್ನ ಪ್ರೇಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಈ ಹೊಸ ಚಿತ್ರಗಳಿಂದ ತಿಳಿದು ಬರುವುದೆಂದರೆ, ಆ ಕಾಲದಿಂದ ಈ ಕಾಲಕ್ಕೆ ಸಿನಿಮಾಗಳಲ್ಲಿ ಪ್ರೀತಿ ಪ್ರೇಮ ಇದ್ದೇ ಇದೆ, ಆದರೆ ಅದನ್ನು ಅಭಿವ್ಯಕ್ತಿಗೊಳಿಸುವ ಪರಿ ಮಾತ್ರ ಬದಲಾಗಿದೆ! ನೂರಾರು ವರ್ಷಗಳಿಂದ ನಡೆದು ಬರುತ್ತಿರುವ ಈ ಕ್ರಮ, ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ ಅಷ್ಟೇ!
– ಪ್ರತಿನಿಧಿ





