ಶರತ್ ಚಂದ್ರ
ಇತ್ತೀಚೆಗೆ ಅಗಲಿದ ಕನ್ನಡದ ಹಿರಿಯ ಸಿನಿಮಾ ಪತ್ರಕರ್ತ ಕೆ. ಜೆ. ಕುಮಾರ್, ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದು ಡಾ. ರಾಜಕುಮಾರ್ ಆದಿಯಾಗಿ ಕನ್ನಡ ಚಿತ್ರರಂಗದ ಹೆಚ್ಚಿನ ಎಲ್ಲರ ಒಡನಾಟ ಇಟ್ಟುಕೊಂಡಿದ್ದರು. ಅದರಲ್ಲೂ ರಜನಿ ಕಾಂತ್ ಮತ್ತು ಅಂಬರೀಷ್ ಅವರ ಜೊತೆಗಿನ ಗೆಳತನ ಏಕವಚನದಲ್ಲಿ ಮಾತನಾಡುವಷ್ಟು ಗಾಢವಾಗಿತ್ತು. ವಿಜಯ ಚಿತ್ರ ಪತ್ರಿಕೆ ಜನಪ್ರಿಯವಾಗಿದ್ದಾಗ ‘ರೂಪತಾರಾ ‘ ಪತ್ರಿಕೆಯನ್ನು ನಂಬರ್ ಒನ್ ಸಿನಿಮಾ ಪತ್ರಿಕೆಯಾಗಿಸುವಲ್ಲಿ ಅವರ ಪಾತ್ರ ಕೂಡ ಇತ್ತು.
ನಿನ್ನೆ ಸೂಪರ್ ಸ್ಟಾರ್ ರಜನಿ ಕಾಂತ್ ಕೂಡ ಕುಮಾರ್ ಅವರಿಗೆ ತಮ್ಮ X ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ತಮ್ಮ ಚಿತ್ರ ಜೀವನದ ಆರಂಭದ ದಿನಗಳಿಂದ ತಮ್ಮನ್ನು ಪ್ರೋತ್ಸಾಹಿಸಿಕೊಂಡು ಬಂದ ಪತ್ರಕರ್ತ ಎಂದು ಸ್ಮರಿಸಿದ್ದಾರೆ.

ಆ ದಿನಗಳಲ್ಲಿ ಮೈಸೂರು ಸುತ್ತ ಮುತ್ತ ಸಿನಿಮಾ ಶೂಟಿಂಗ್ ಹೆಚ್ಚಾಗಿ ನಡೆಯುತ್ತಿತ್ತು. ರಜನಿಕಾಂತ್ ಅವರ ಧರ್ಮ ದೊರೈ (ಕನ್ನಡದ ದೇವ ಚಿತ್ರದ ರಿಮೇಕ್ ) ಮಣಿರತ್ನಂ ಅವರ ದಳಪತಿ, ಮುತ್ತು ಮುಂತಾದ ಚಿತ್ರಗಳ ಹೆಚ್ಚಿನ ಭಾಗಗಳು ಮೈಸೂರಿನಲ್ಲಿ ಚಿತ್ರೀಕರಣಗೊಂಡಿತ್ತು. ಮೈಸೂರಿನಲ್ಲಿ ಶೂಟಿಂಗ್ ಇದ್ದಾಗಲೆಲ್ಲ ಅಂಬಿ, ರಜನಿ ಕಾಂತ್ ಮತ್ತು ಕುಮಾರ್ ಒಟ್ಟಿಗೆ ಸೇರುತ್ತಿದ್ದರಂತೆ.ಚೆನ್ನೈಯಲ್ಲಿನ ರಜನಿ ಕಾಂತ್ ಮನೆಗೆ ಹೋದಾಗ ಎಷ್ಟೇ ಬ್ಯುಸಿ ಇದ್ದರೂ ಕೂಡ ಕುಮಾರ್ ಅವರನ್ನು ಆತ್ಮೀಯತೆಯಿಂದ ಬರ ಮಾಡಿಕೊಳ್ಳುತ್ತಿದ್ದರಂತೆ.

ತಮ್ಮ ಸಂಘರ್ಷಗಳ ದಿನಗಳಲ್ಲಿ ಪ್ರಚಾರಕ್ಕಾಗಿ ಪತ್ರಕರ್ತರ ಹಿಂದೆ ಮುಂದೆ ಓಡಾಡುವ ಒಂದಷ್ಟು ನಟ ನಟಿಯರು ಸ್ಟಾರ್ ಗಳು ಆದ ಮೇಲೆ ಪತ್ರಕರ್ತರನ್ನು ಕ್ಯಾರೇ ಅನ್ನದಿರುವ ಈ ಕಾಲದಲ್ಲಿ ರಜನಿ ಕಾಂತ್ ಪೋಸ್ಟ್ ಹಾಕಿ ಸ್ಮರಿಸಿರುವುದು ಪ್ರಶಂಸನೀಯ.





