ಆಕಾಶದಲ್ಲಿ ಹಾರಾಡುವ ಹುಡುಗಿ ಆಕಸ್ಮಿಕವಾಗಿ ಭೂಮಿಗಿಳಿದು ಬಂದಾಗ ಅವಳು ನೇರವಾಗಿ ಲ್ಯಾಂಡ್ ಆಗಿದ್ದು ಬಣ್ಣದ ಲೋಕದಲ್ಲಿ. ಅಲ್ಲಿ ಗಗನಸಖಿಯಾಗಿದ್ದಳು ಬಣ್ಣ ಹಚ್ಚಿ `ಜಟ್ಟಿ’ ಚಿತ್ರದಲ್ಲಿ ಗಟ್ಟಿ ಹುಡುಗಿಯಾದಳು. ಕರಾವಳಿ ಹುಡುಗಿ ಸುಕೃತಾ ವಾಗ್ಲೆ ಬಗ್ಗೆ ಹೇಳುತ್ತಾ ಹೋದರೆ ಪರಿಚಯದ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ. ಬುದ್ಧಿವಂತೆ, ಕನ್ನಡ ಪ್ರಿಯೆ, ಅಷ್ಟೇ ಸೊಗಸಾಗಿ ಮಾತನಾಡುತ್ತಾಳೆ. ನೀವು ಯಾವುದೇ ಟಾಪಿಕ್ ಕೊಟ್ಟರೂ ಮಾತನಾಡುವ ಗತ್ತಿದೆ. ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಆಕಸ್ಮಿವಾಗಿ!
ಏರ್ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದಾಗ ಜೊತೆಗೆ ಮಾಡೆಲಿಂಗ್ನಲ್ಲೂ ಬಿಜಿಯಾಗಿರುತ್ತಿದ್ದ ಸುಕೃತಾಳ ಫೋಟೋವನ್ನು ಛಾಯಾಗ್ರಾಹಕರೊಬ್ಬರು `ಜಟ್ಟಿ’ ನಿರ್ದೇಶಕರಿಗೆ ಕಳುಹಿಸಿ ಕೊಟ್ಟಿದ್ದಾಗ ಚಿತ್ರಕ್ಕೆ ಸುಕೃತಾಳನ್ನೇ ಸೆಲೆಕ್ಟ್ ಮಾಡಿದ್ದರಂತೆ.
`ನನಗೆ ಸಿನಿಮಾ ಆರ್ಟಿಸ್ಟ್ ಆಗಬೇಕೆಂಬ ಆಸೆ ಯಾವತ್ತೂ ಇರಲಿಲ್ಲ. ಆದರೆ ರಂಗಭೂಮಿಯಲ್ಲಿ ಆಸಕ್ತಿ ಇತ್ತು. ನಾಟಕಗಳಲ್ಲೂ ಅಭಿನಯಿಸಿದ್ದೆ. `ಜಟ್ಟಿ’ ಮೊದಲ ಚಿತ್ರದಲ್ಲೇ ಪವರ್ಫುಲ್ ಕ್ಯಾರೆಕ್ಟರ್ ಸಿಕ್ಕಾಗ ನಿಜಕ್ಕೂ ಖುಷಿಯಾಗಿತ್ತು,’ ಎಂದು ಈಗಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.
ಸಿನಿಮಾರಂಗಕ್ಕೆ ಬಂದು ಮೂರು ವರ್ಷ ಕಳೆದಿದೆ. ಈಗಾಗಲೇ ಆರು ಚಿತ್ರಗಳಲ್ಲಿ ನಟಿಸಿರುವ ಸುಕೃತಾ ಇತ್ತೀಚೆಗಷ್ಟೆ `ದಯವಿಟ್ಟು ಗಮನಿಸಿ’ ಎನ್ನುವ ಚಿತ್ರಕ್ಕೆ ಸಹಿ ಹಾಕಿದ್ದಾಳೆ. ಮುಹೂರ್ತ ಮುಗಿಸಿಕೊಂಡಿರುವ ಈ ಚಿತ್ರದಲ್ಲಿ ಸುಕೃತಾ ಗಮನಾರ್ಹ ಪಾತ್ರ ಮಾಡುತ್ತಿದ್ದಾಳಂತೆ.
`ಕಿರಗೂರಿನ ಗಯ್ಯಾಳಿಗಳು’ ಚಿತ್ರದಲ್ಲಿ ಗಯ್ಯಾಳಿ ಪಾತ್ರ ಮಾಡಿದ್ದ ಸುಕೃತಾ ಸಾಕಷ್ಟು ಸುದ್ದಿಯಾಗಿದ್ದಳು. ಸುಕೃತಾ ಇತ್ತೀಚೆಗೆ ಹರಟೆಗೆ ಸಿಕ್ಕಿದಾಗ ಸಾಕಷ್ಟು ಮಾತನಾಡಿದ್ದಾಳೆ. ಸಂದರ್ಶನದ ರೂಪದಲ್ಲಿ ಹರಿದುಬಂದಿದೆ.
`ದಯವಿಟ್ಟು ಗಮನಿಸಿ‘ ಏನಿದು….?
‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ನನಗೆ ಬಂದ ಪಾತ್ರಗಳೆಲ್ಲ ಅಂಥಾದ್ದೇನು ಇಂಟ್ರೆಸ್ಟಿಂಗಾಗಿರಲಿಲ್ಲ. ಬಜಾರಿ ಪಾತ್ರ, ಜಗಳಗಂಟಿ ರೋಲ್, ಇದೆಲ್ಲ ನನಗೆ ಅಷ್ಟಾಗಿ ಹಿಡಿಸಲಿಲ್ಲ. ಪಾತ್ರದ ಸಲುವಾಗಿ ಗಯ್ಯಾಳಿಯಲ್ಲಿ ನಾನು ನನ್ನ ತೂಕವನ್ನು ಹೆಚ್ಚಿಸಿಕೊಂಡಿದ್ದೆ ಅಷ್ಟೆ. ಆದರೆ ಅಂಥದ್ದೇ ಪಾತ್ರಕ್ಕೆ ಬ್ರಾಂಡ್ ಆಗುತ್ತೇನೆಂದು ಖಂಡಿತ ತಿಳಿದಿರಲಿಲ್ಲ. ದೊಡ್ಡ ಬ್ಯಾನರ್ಗಳಿಂದ ಅಂಥದ್ದೇ ಪಾತ್ರಕ್ಕೆ ಆಫರ್ಸ್ ಬಂದಾಗ ನಾನು ಸ್ವೀಕರಿಸಲಿಲ್ಲ. ಒಳ್ಳೆ ಪಾತ್ರಕ್ಕಗಿ ಕಾಯುತ್ತಿದ್ದಾಗ, ಸಂಭಾಷಣೆಕಾರ ರೋಹಿತ್ಪದಕಿ ಅವರ ಮೊದಲ ನಿರ್ದೇಶನದ `ದಯವಿಟ್ಟು ಗಮನಿಸಿ’ ಚಿತ್ರದಲ್ಲಿನ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಬಹುತಾರಾಗಣದ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ವಶಿಷ್ಟ ಸಿಂಹ, ರಘು ಮುಖರ್ಜಿ ನಾಯಕರು. ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶಕರು ಮಾತ್ರವಲ್ಲದೆ, ಈ ಚಿತ್ರಕ್ಕೆ ಸಹನಿರ್ಮಾಪಕರು ಕೂಡ. ನನ್ನ ಪಾತ್ರ ತುಂಬಾ ವಿಶೇಷವಾಗಿದೆ. ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ಆಗಿ ಕಾಣಿಸಿಕೊಳ್ಳುತ್ತೇನೆ. ಗಯ್ಯಾಳಿಯಲ್ಲಿ ಏರಿದ್ದ ತೂಕವನ್ನು ಸಾಕಷ್ಟು ಇಳಿಸಿಕೊಂಡು ಮೊದಲಿನಂತಾಗಿದ್ದೇನೆ. ನನಗೆ ದಪ್ಪಗಾಗೋಕ್ಕೂ ಬರುತ್ತೆ…. ಹಾಗೆಯೇ ತೆಳ್ಳಗಾಗಲೂ ಬಲ್ಲೆ.
ಪ್ರಶಸ್ತಿಗಳು, ಪ್ರಶಂಸೆಗಳು ಎಷ್ಟು ಮುಖ್ಯಾಗುತ್ತವೆ?
ನಾನು ಅವಾರ್ಡ್ಗಾಗಿ ನಟಿಸೋದಿಲ್ಲ. ನನ್ನ ಮೊದಲ `ಜಟ್ಟಿ’ ಚಿತ್ರದಲ್ಲಿ ನನ್ನ ಅಭಿನಯನ್ನು ವಿಮರ್ಶಕರು, ಪತ್ರಕರ್ತರು ಎಲ್ಲರೂ ಸಾಕಷ್ಟು ಹೊಗಳಿದರು. ಸಿನಿಮಾ ಮಾಡಿದವರೆಲ್ಲರೂ ಎಷ್ಟು ಚೆನ್ನಾಗಿ ನಟಿಸಿದ್ದೀರಿ ಎಂದಿದ್ದರು. ಆದರೆ ಅವಾರ್ಡ್ ಜ್ಯೂರಿ ಸದಸ್ಯರಿಗೇಕೋ ನನ್ನ ಅಭಿನಯ ಇಷ್ಟವಾಗಲಿಲ್ಲವೋ ಅಥಾ ಅವರ ನಿರೀಕ್ಷೆಗೆ ತಕ್ಕಂತೆ ನಾನು ನಟಿಸಿರಲಿಲ್ಲವೋ ಗೊತ್ತಿಲ್ಲ. ಆದರೂ ನನಗೇನೂ ಬೇಸರವಿಲ್ಲ. ನನಗೆ ಪತ್ರಿಕೆಗಳಿಂದ ಸಿಕ್ಕಂಥ ಪ್ರಶಂಸೆಗಳೇ ರಿವಾರ್ಡ್, ನನಗದು ಪ್ರಶಸ್ತಿಗಿಂತ ದೊಡ್ಡದು!
ಹಾಯಾಗಿ ಹಾರಾಡಿಕೊಂಡಿದ್ದ ಕೆಲಸಕ್ಕೆ ಬೈ ಹೇಳಿ ಬಣ್ಣದ ಲೋಕಕ್ಕೆ ಬಂದಾಗ ಓ ಯಾಕಾದ್ರೂ ಬಂದ್ನೋ ಅಂತ ಅನಿಸಿದ್ದಿದ್ಯಾ…..?
ಬಂದದ್ದು ಆಕಸ್ಮಿಕ. ಹಾಯಾಗೇನೋ ಹಾರಾಡಿಕೊಂಡಿದ್ದೆ. ಮಾಡೆಲಿಂಗ್ ಮಾಡುತ್ತಿದ್ದಾಗ ಫೋಟೋಗ್ರಾಫರ್ ಮೂಲಕ `ಜಟ್ಟಿ’ ಆಫರ್ ಬಂದಾಗ ಒಂದು ರೀತಿಯ ಕ್ಯೂರಿಯಾಸಿಟಿ ಇತ್ತು. ಆದರೆ ಸಿನಿಮಾದಲ್ಲಿ ಅಭಿನಯಿಸಿದ ಮೇಲೆ ನನಗೆ ಈ ಚಿತ್ರರಂಗ, ಅಭಿಮಾನಿಗಳ ಪ್ರೀತಿ, ಸಿನಿಮಾ ಎನ್ನುವ ಮಾಯಾಲೋಕ ಎಲ್ಲ ಇಷ್ಟವಾಯಿತು. ಏನಾದರೂ ಸಾಧಿಸಬೇಕು…… ನನ್ನಲ್ಲೂ ಒಬ್ಬಳು ಅಭಿನೇತ್ರಿ ಅಡಗಿದ್ದಾಳೆ ಅಂತ ತೋರಿಸಿಕೊಟ್ಟಿದ್ದೇ ಈ ಸಿನಿಮಾ ಲೋಕ. ನನಗಿದು ತುಂಬಾ ಪ್ರಿಯಾಗಿಬಿಟ್ಟಿದೆ. ಆದರೂ ಒಂದೊಂದ್ಸಲ ಏರ್ಹೋಸ್ಟೆಸ್ ಕೆಲಸವನ್ನು ಕೂಡಾ ನೆನಪು ಮಾಡಿಕೊಳ್ತೀನಿ. ಅಲ್ಲಿಗೇ ಹೋಗಿಬಿಡ್ಲಾ…. ಜಗತ್ತು ಸುತ್ತುವ ಆಸೆ ನನಗಿದೆ. ಹಾಗೆಯೇ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಛಲವಿದೆ. ಈ ಸಿನಿಮಾ ಲೋಕ ಒಂಥರಾ ಬಿಡೆನೆಂದರೂ ಬಿಡದಂಥ ಮಾಯೆ. ಸದ್ಯಕ್ಕೆ ಇಲ್ಲೇ ಇದ್ದು ಸಾಧಿಸುವ ಆಸೆ. ಈ ಲೈಮ್ ಲೈಟ್ ಒಂದು ರೀತಿ ಅಡಿಕ್ಷನ್ ಇದ್ದ ಹಾಗೆ.
ಅಭಿನಯ ಬಿಟ್ಟು ಬೇರೇನು ಆಸಕ್ತಿ ಇದೆ?
ಹೊಸದನ್ನು ಕಲಿಯುವಾಸೆ. ನನಗೆ ಸಿನಿಮಾ ಮೇಕಿಂಗ್, ನಿರ್ದೇಶನ ಎಲ್ಲದರಲ್ಲೂ ಆಸಕ್ತಿ ಇದೆ. ಸಬ್ಟೈಟಲ್ ಮಾಡ್ತೀನಿ. ಇದೆಲ್ಲದರ ಜೊತೆಗೆ ಟ್ರಾಪ್ಲಿಂಗ್ ನನಗೆ ತುಂಬಾ ಇಷ್ಟ. ಉಪನ್ಯಾಸಗಳನ್ನು ಕೇಳುವುದೆಂದರೆ ಎಲ್ಲಿಲ್ಲದ ಆಸಕ್ತಿ. ನನ್ನ ಅಮ್ಮನಿಗೆ ನಾನು ದೇವಿ ಪಾತ್ರ ಮಾಡಬೇಕೆಂಬ ಆಸೆ ಇದೆ. ಅವಕಾಶ ಸಿಕ್ಕರೆ ಅದನ್ನು ಸಹ ಮಾಡಬಲ್ಲೇ.
ಇಂದು ಸಿನಿಮಾರಂಗ ಬದಲಾಗಿದೆ. ಹೊಸಬರು ಹೊಸತನವನ್ನು ತರುತ್ತಿದ್ದಾರೆ. ಒಳ್ಳೆ ಚಿತ್ರಗಳಿಗೆ ಒಳ್ಳೆ ಕಾಲ ಕೂಡಿಬರುತ್ತಿದೆ. ನನ್ನಂಥ ಕಲಾವಿದರಿಗೆ ಒಳ್ಳೆ ಪಾತ್ರಗಳು ಸೃಷ್ಟಿಯಾಗುತ್ತಿವೆ. ನಿಜಕ್ಕೂ ಹೊಸಬರಿಗಿದು ಸುವರ್ಣಕಾಲ. ಸದ್ಯಕ್ಕೆ ಅಭಿನಯದ ಕಡೆ ಹೆಚ್ಚು ಆಸಕ್ತಿ ವಹಿಸುತ್ತಿದ್ದೇನೆ. ಮುಂದೊಂದು ದಿನ ನಾನು ಸಹ ಒಂದೊಳ್ಳೆ ಚಿತ್ರ ಮಾಡ್ತೀನಿ ಎಂದು ಸುಕೃತಾ ಆತ್ಮವಿಶ್ವಾಸದಿಂದ ಹೇಳುತ್ತಾಳೆ. ಅಂದುಕೊಂಡಂತೆ ಆಗಲಿ ಎನ್ನೋಣ.
– ಸರಸ್ವತಿ