ಎಲ್ಲರ ಬಾಯಲ್ಲೂ.... `ನೀರ್ ದೋಸೆ'
`ನೀರ್ ದೋಸೆ' ಚಿತ್ರ ಶುರುವಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತವೇ ಇದೆ. ಮೊದಲಿಗೆ ರಮ್ಯಾ ಈ ಚಿತ್ರದಿಂದ ಆಚೆ ಹೋದದ್ದು, ಆ ಸ್ಥಾನಕ್ಕೆ ಹರಿಪ್ರಿಯಾ ಸೆಲೆಕ್ಟ್ ಆಗಿದ್ದು. ಈಗ ಈ ಚಿತ್ರದ ಟೀಸರ್ ಎಲ್ಲ ಕಡೆ ಸಂಚಲನ ಉಂಟು ಮಾಡಿದೆ. ಡೈಲಾಗ್ಗಳು ಡಬ್ಬಲ್ ಮೀನಿಂಗ್ ಅಲ್ಲ ಸ್ಟ್ರೇಟ್ ಅಂತ ಹೇಳುತ್ತಲೇ ನಿರ್ದೇಶಕರು ಅರ್ಧ ಯಶಸ್ಸನ್ನು ಬಿಡುಗಡೆ ಮೊದಲೇ ಗಿಟ್ಟಿಸಿದ್ದಾರೆ. ಚಿತ್ರದ ಕೇಂದ್ರಬಿಂದು ಹರಿಪ್ರಿಯಾ ಬೋಲ್ಡಾಗಿ ನಟಿಸಿರುವುದಲ್ಲದೆ, ಸಿಗರೇಟ್ ಸೇದಿದ್ದಾಳೆ. ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ತುಂಡುಡುಗೆ ಧರಿಸಿದ್ದಾಳೆ. ಪಾತ್ರಕ್ಕೆ ತಕ್ಕಂತೆ ತನ್ನನ್ನು ಸಿದ್ಧಪಡಿಸಿಕೊಂಡಿರುವ ಹರಿಪ್ರಿಯಾ ಚಿತ್ರದಲ್ಲಿನ ಒಂದು ಹಾಡಿನ ಸಲುವಾಗಿ ಒಂದೇ ದಿನದಲ್ಲಿ ಬೆಲ್ಲಿ ಡ್ಯಾನ್ಸ್ ಕಲಿತು ಅಚ್ಚರಿ ಮೂಡಿಸಿದ್ದಾಳೆ!
ಲಕ್ಕಿ ನಕ್ಷತ್ರ
`ಅಶ್ವಿನಿ ನಕ್ಷತ್ರ' ಎಂದ ಕೂಡಲೇ ಥಟ್ಟನೆ ನೆನಪಾಗೋದು ನಟಿ ಮಯೂರಿ. ಕಿರುತೆರೆಯಿಂದ ದೊಡ್ಡ ಪರದೆಗೆ ಬಂದಾಗಿನಿಂದ ಮಯೂರಿ ನಟಿಸಿದ ಚಿತ್ರಗಳು ಯಶಸ್ಸು ಕಾಣುತ್ತಿವೆ. `ಕೃಷ್ಣಲೀಲ' ಹಿಟ್ ಆಯ್ತು. `ಇಷ್ಟಕಾಮ್ಯ' ಚಿತ್ರದ ಮೂಲಕ ಉತ್ತಮ ನಟಿ ಅನಿಸಿಕೊಂಡಳು. ಇದೀಗ ಮಯೂರಿ `ನಟರಾಜ ಸರ್ವೀಸ್' ಚಿತ್ರದಲ್ಲಿ ನಾಯಕ ಶರಣ್ ಜೊತೆ ಕಾಣಿಸಿಕೊಳ್ಳುತ್ತಿದ್ದಾಳೆ. ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮುಗಿಸಿ ಬಂದ ಈ ಅಪರೂಪದ ಪ್ರತಿಭೆಗೆ ಸ್ಯಾಂಡಲ್ವುಡ್ ಕೈಬೀಸಿ ಕರೆದಿದೆ. ಮೊದಲ ಚಿತ್ರ `ಕೃಷ್ಣಲೀಲ' ನೂರು ದಿನ ಓಡಿತು. ಬಿಡುಗಡೆಗೆ ರೆಡಿಯಾಗಿರುವ `ನಟರಾಜ ಸರ್ವೀಸ್' ಚಿತ್ರದಲ್ಲೂ ಮಯೂರಿಗೆ ಗಮನಾರ್ಹ ಪಾತ್ರವಿದೆಯಂತೆ. ಈ ಚಿತ್ರ ಪುನೀತ್ ರಾಜ್ಕುಮಾರ್ ಬ್ಯಾನರಿನಡಿ ನಿರ್ಮಾಣವಾಗುತ್ತಿರುವುದು ಕೂಡಾ ಹೆಗ್ಗಳಿಕೆಯ ಸಂಗತಿ.
ಮುಂಗಾರು ಮಳೆ-2
`ಮುಂಗಾರು ಮಳೆ' ಚಿತ್ರ ಬಂದು ಹತ್ತು ವರ್ಷ ಕಳೆದಿದೆ. ಇಂದಿಗೂ ಆ ಸಿನಿಮಾವನ್ನು ಯಾರೂ ಮರೆತಿಲ್ಲ. ಚಿತ್ರದ ಪ್ರಮುಖ ಆಕರ್ಷಣೆ, ಚಿತ್ರದ ಹಾಡುಗಳು ಮ್ಯೂಸಿಕಲಿ ಹಿಟ್ ಆದಂಥ ಚಿತ್ರವದು. ಪರಭಾಷೆಯವರು ಸಹ ಕನ್ನಡ ಚಿತ್ರಗೀತೆ ಕೇಳುವಂತೆ ಮಾಡಿತ್ತು. ಇದೀಗ `ಮುಂಗಾರು ಮಳೆ-2' ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರಕ್ಕೆ ಅರ್ಜುನ್ಜನ್ಯ ಸಂಗೀತ ನೀಡಿದ್ದಾರೆ. ಶಶಾಂಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ರವಿಚಂದ್ರನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರದ ಹಾಡುಗಳು ಹಿಟ್ ಆಗಿವೆ. ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ (`ರಾಯ್' ಚಿತ್ರ) ಅರ್ಮಾನ್ ಮಲ್ಲಿಕ್ ಈ ಚಿತ್ರಕ್ಕಾಗಿ ಹಾಡಿರೋದು ವಿಶೇಷ. ಸರಿಯಾಗಿ ನೆನೆಪಿದೆ ನನಗೆ.... ಮತ್ತು ನೀ ಎದೆಯೊಳಗೆ ಬಂದ ಮೇಲೆ..... ಹಾಡುಗಳನ್ನು ಹಾಡಿರುವ ಅರ್ಮಾನ್ ಮಲ್ಲಿಕ್ ಸಾಕಷ್ಟು ಮಿಂಚಿಬಿಟ್ಟಿದ್ದಾರೆ. `ಮುಂಗಾರು ಮಳೆ'ಯಲ್ಲಿ ಸೋನು ಜಾದೂ ಮಾಡಿದ್ದರು. `ಮುಂಗಾರು ಮಳೆ -2' ಚಿತ್ರದ ಮೂಲಕ ಅರ್ಮಾನ್ ಜಾದೂ ಮಾಡಬಲ್ಲರೇ.....?
ಕಿಚ್ಚನ ಫ್ಯಾನ್ಸ್
ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳನ್ನು ತುಂಬಾನೆ ಇಷ್ಟಪಡುತ್ತಾರೆ. ಅವರು ಒಳ್ಳೆ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುತ್ತಾರೆ. ಸೋಶಿಯಲ್ ನೆಟ್ವರ್ಕ್ನಲ್ಲಿ ಕಿಚ್ಚನ ಅಭಿಮಾನಿಗಳು ಸಾಕಷ್ಟಿದ್ದಾರೆ. ಇತ್ತೀಚೆಗೆ `ಕೋಟಿಗೊಬ್ಬ-2' ಬಿಡುಗಡೆ ಸಡಗರದಲ್ಲಿ ಅಭಿಮಾನಿಗಳು ಕಿಚ್ಚನ ಡೈಲಾಗ್ನ್ನು ಹೇಳುವುದರ ಮೂಲಕ `ಡಬಲ್ ಸ್ಮ್ಯಾಶ್' ಮಾಡಿ ತಮ್ಮ ಮೆಚ್ಚಿನ ನಟನಿಗೆ ಕಳಿಸಿದ್ದಾರೆ. ಸುದೀಪ್ ಬಿಡುವು ಮಾಡಿಕೊಂಡು ಅವರೆಲ್ಲರ ಟ್ವೀಟ್ನ್ನು ತಾಳ್ಮೆಯಿಂದ ನೋಡಿ ಉತ್ತರಿಸಿದ್ದಾರೆ. ಅಭಿಮಾನಿಗಳ ಜೊತೆ ನೇರವಾಗಿ ಸ್ಪಂದಿಸುವ ಸುದೀಪ್ ದೊಡ್ಡತನವನ್ನು ಅಭಿಮಾನಿಗಳು ಇನ್ನಷ್ಟು ಅವರನ್ನು ಪ್ರೀತಿಸುವಂತೆ ಮಾಡಿದೆ. ಹಿರಿಯರಿರಲಿ, ಕಿರಿಯರಿರಲಿ, ಪುಟ್ಟ ಮಕ್ಕಳಿರಲಿ ಎಲ್ಲರಿಗೂ ಉತ್ತರಿಸುವ ಕಿಚ್ಚ ಕೋಟಿಗೊಬ್ಬ ಎಂದೆನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.