ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದ 131 ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ಏಪ್ರಿಲ್ ಅಂತ್ಯಕ್ಕೆ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಮುನ್ಸೂಚನೆ ನೀಡಿದೆ.
ಇಂಡಿಗೋ ಸಂಸ್ಥೆಯು ಏಪ್ರಿಲ್ 30ರ ವರೆಗಷ್ಟೇ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಿದ್ದು, ಮೇ 1ರಿಂದ ಯಾವುದೇ ಬುಕ್ಕಿಂಗ್ ಲಭ್ಯವಿಲ್ಲ.
ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ವಿಮಾನ ದುರಂತದ ಹಿನ್ನೆಲೆ ಡಿಜಿಸಿಎ (DGCA) ವಿಮಾನಯಾನ ನಿಯಮಗಳನ್ನು ಕಠಿಣಗೊಳಿಸಿದೆ. ಪೈಲಟ್ಗಳ ಕೆಲಸದ ಅವಧಿ ಮತ್ತು ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ನಿಯಮಗಳಿಂದಾಗಿ ಇಂಡಿಗೋ ಸಂಸ್ಥೆಗೆ ಪೈಲಟ್ಗಳ ಕೊರತೆ ಎದುರಾಗಿದೆ. ಈ ತಾಂತ್ರಿಕ ಕಾರಣದಿಂದಾಗಿ ಸಂಸ್ಥೆಯು ಸಣ್ಣ ನಗರಗಳಿಗೆ ನೀಡುತ್ತಿದ್ದ ಎಟಿಆರ್ ವಿಮಾನ ಸೇವೆಗಳನ್ನು ಕಡಿತಗೊಳಿಸಲು ಮುಂದಾಗಿದೆ ಎಂಬ ಮಾಹಿತಿ ದೊರೆತಿದೆ.
ಸಂಚಾರ ಸ್ಥಗಿತ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಾರ್ಗಸೂಚಿಗಳ ಪ್ರಕಾರ, ಪೈಲಟ್ಗಳ ಕೊರತೆಯಿಂದಾಗಿ ಇಂಡಿಗೋ ಏರ್ಲೈನ್ಸ್ ಮೇ 1ರಿಂದ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಮೊಗ್ಗ ವಿಮಾನ ನಿಲ್ದಾಣದ ಅಧಿಕಾರಿ, ಇಂಡಿಗೋ ಪ್ರಸ್ತುತ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಪ್ರತಿದಿನ ವಿಮಾನಗಳನ್ನು ಸಂಚರಿಸುತ್ತಿದೆ. ಕಂಪನಿಯು ಮೂರು ತಿಂಗಳ ಅವಧಿಗೆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಮೇ ಮಧ್ಯಭಾಗದಿಂದ ಮಳೆಗಾಲ ಪ್ರಾರಂಭವಾಗುವುದರಿಂದ ಇದು ಆಫ್-ಸೀಸನ್ ಅವಧಿ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂದಿದ್ದಾರೆ.
ಡಿಜಿಸಿಎ ನಿಯಮ: ಕಳೆದ ವರ್ಷ ಜೂನ್ 12ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ (AI171) ವಿಮಾನ ಅಪಘಾತದ ನಂತರ, ವಿಮಾನಗಳ ಸುರಕ್ಷಿತ ಸಂಚಲನಕ್ಕಾಗಿ ಡಿಜಿಸಿಎ ಕೆಲವು ನಿಯಮಗಳನ್ನು ರೂಪಿಸಿದೆ. ಅವುಗಳನ್ನು ಜಾರಿಗೆ ತರಲು ಏರ್ಲೈನ್ಸ್ಗಳಿಗೆ ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ. ಆ ನಿಯಮಗಳನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇಂಡಿಗೋಗೆ ಪೈಲಟ್ಗಳ ಕೊರತೆ ಉಂಟಾಗಿ, ವಿಮಾನ ಸೇವೆಗೆ ವ್ಯತ್ಯಯ ಉಂಟಾಗಿದೆ.
ಪ್ರಸ್ತುತ ಸ್ಟಾರ್ ಏರ್ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ಪ್ರತಿದಿನ ವಿಮಾನ ಸೇವೆ ನಡೆಸುತ್ತಿದೆ. ಸ್ಪೈಸ್ಜೆಟ್ ಶಿವಮೊಗ್ಗದಿಂದ ಹೈದರಾಬಾದ್ ಮತ್ತು ಚೆನ್ನೈಗೆ ದಿನನಿತ್ಯ ವಿಮಾನಗಳನ್ನು ನಡೆಸುತ್ತಿದೆ. ಆದರೆ ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ಪ್ರಯಾಣಿಕರ ಸಂಚಾರವೇ ಹೆಚ್ಚಾಗಿದೆ.





