ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿರುವ ಕಿತ್ತೂರಿನಲ್ಲಿ ನಾನು ಹುಟ್ಟಿದ್ದು, ಆದರೆ ನಾನು ನನ್ನ ಬಾಲ್ಯ ಜೀವನವನ್ನು ಹೆಚ್ಚಾಗಿ ಕಳೆದದ್ದು ಕೂರ್ಗ್ನಲ್ಲಿದ್ದ ನನ್ನ ಸೋದರತ್ತೆ ಮನೆಯಲ್ಲಿ. ನನ್ನ ತಂದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಪ್ರಕೃತಿಯ ಮಡಿಲಲ್ಲಿ
ಆದರೆ ಕಲಾವಿದರಿಗೆ ತುಂಬಾ ಪ್ರೋತ್ಸಾಹ ಕೊಡೋರು. ನಾನಾಗ ತುಂಬಾನೆ ಚಿಕ್ಕವಳು. ತಂದೆ ಕಂಡರೆ ಅಪಾರ ಪ್ರೀತಿ. ಹಾಗಾಗಿ ಅವರ ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದೆ. ಸ್ಕೂಲು ಬಿಟ್ಟರೆ ಅಪ್ಪ ಅಷ್ಟೇ ನನ್ನ ಲೋಕವಾಗಿತ್ತು. ಕೂರ್ಗ್ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೆ. ಅವರ ಮನೆ ಆ ಪರಿಸರ, ಎಲ್ಲದಕ್ಕಿಂತ ಹೆಚ್ಚಾಗಿ ತುಂಬಾ ಓದುತ್ತಿದ್ದರು. ಎಲ್ಲ ದಿನಪತ್ರಿಕೆಗಳನ್ನು ತರಿಸುತ್ತಿದ್ದರು. ಇದೇ ಕಾರಣಕ್ಕೆ ನಾನು ಆ ವಾತಾವರಣವನ್ನು ತುಂಬಾ ಇಷ್ಟಪಡುತ್ತಿದ್ದೆ.
ನಾನು ಕನಸು ಕಂಡವಳೇ ಅಲ್ಲ....
ನಾನ್ಯಾತ್ತೂ ಕನಸು ಕಂಡವಳಲ್ಲ. ಓದಬೇಕೆನ್ನುವ ಆಸೆ. ಆದರೆ ಏನು ಓದಬೇಕೆಂಬುದು ಗೊತ್ತಿರಲಿಲ್ಲ. ಹೆಚ್ಚು ಓದಿದರೆ ಜ್ಞಾನ ಹೆಚ್ಚುತ್ತೆ ಎಂದಷ್ಟೇ ಗೊತ್ತಿತ್ತು. ಹೆಚ್ಚು ಓದಿದರೆ ಹೆಣ್ಣುಮಕ್ಕಳ ಸ್ಥಿತಿಗತಿ ಬದಲಾಗುತ್ತೆ ಎಂಬುದನ್ನು ವಿದ್ಯಾವಂತ ಮಹಿಳೆಯರನ್ನು ಕಂಡು ಅರಿತುಕೊಂಡಿದ್ದೆ. ಹಾಗಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದಿರಲಿ, ಅದರ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ. ನಾನು ನನ್ನ ಬದುಕಿನಲ್ಲಿ ಕಂಡಂಥ ತಿರುವು ಬೆಂಗಳೂರಿಗೆ ಬಂದ ನಂತರ. ಇವಳಲ್ಲಿ ಇಂಥದ್ದೊಂದು ಪ್ರತಿಭೆ ಇದೆ ಅಂತ ಗುರುತಿಸಿದ್ದು ಶ್ರೀಧರ್ ಸರ್. ಗುರುತಿಸುವುದೂ ಕೂಡಾ ಒಂದು ಕಲೆ. ಆಗಲೇ ಪ್ರೋತ್ಸಾಹ ಕೊಡಲಿಕ್ಕೆ ಸಾಧ್ಯ.
ಗುರುಗಳ ಹುಡುಕಾಟದಲ್ಲಿ
ನಾನು ವಿದ್ಯಾಭ್ಯಾಸ ಮುಗಿಸಿ ತಂದೆ ಜೊತೆ ಬೆಂಗಳೂರಿಗೆ ಬಂದಾಗ ಇದೊಂದು ದೊಡ್ಡ ಸಮುದ್ರದಂತೆ ಕಂಡಿತು. ತಂದೆಗೆ ಶ್ರೀಧರ್ಸರ್ ದೂರದ ಸಂಬಂಧಿ. ಹಾಗಾಗಿ ನಾವು ಶ್ರೀಧರ್ರನ್ನು ಹುಡುಕುವುದೇ ಒಂದು ಕೆಲಸವಾಗಿತ್ತು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಾವು ಬೆಂಗಳೂರಿಗೆ ಬಂದಿದ್ದು. ಆದರೆ ಶ್ರೀಧರ್ ನಮಗೆ ಸಿಗಲಿಲ್ಲ. ಅವರೆಲ್ಲಿದ್ದಾರೆ ಎಂದೂ ನನಗೆ ಗೊತ್ತಿರಲಿಲ್ಲ. ಹೇಗಾದರೂ ಮಾಡಿ ಅವರನ್ನು ಭೇಟಿಯಾಗಲೇಬೇಕು ಎಂದು ನಾನು ಪತ್ರಕರ್ತಳಾಗಿ ಬೇರೆ ಬೇರೆ ಪತ್ರಿಕೆಗಳಿಗೆ ಬರೆಯಲು ಶುರು ಮಾಡಿದೆ. ಬರವಣಿಗೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಾಗ ಎಲ್ಲರ ಪರಿಚಯವಾಯಿತು. ಶ್ರೀಧರ್ ಸರ್ `ಅಗ್ನಿ' ಎನ್ನುವ ಪತ್ರಿಕೆ ಶುರು ಮಾಡಿರುವುದು ಗೊತ್ತಾಯಿತು. ಆಗ ನಾನು ಶ್ರೀಧರ್ ಸರ್ ಅವರನ್ನು ಭೇಟಿಯಾದೆ. ಇಂಥವರ ಮಗಳೆಂದು ಗೊತ್ತಾದಾಗ ತಂದೆಯನ್ನು ಕರೆಸಿ ನನ್ನನ್ನು ಓದಿಸುವುದಾಗಿ ಹೇಳಿದರು. ನಮ್ಮ ತಂದೆ ನನ್ನನ್ನು ಬಿಟ್ಟು ಊರಿಗೆ ಹೋದ ಮರುದಿನವೇ ಹೃದಯಾಘಾತವಾಗಿ ತೀರಿಕೊಂಡರು. ಆಗ ಶ್ರೀಧರ್ ಮತ್ತು ಅವರ ಪತ್ನಿ ಲತಾ ನನ್ನನ್ನು ಅವರ ಮನೆಯ ಮಗಳಂತೆ ಸಾಕಿದರು. ತಂದೆ ಸ್ಥಾನದಲ್ಲಿ ಶ್ರೀಧರ್ ಸರ್ ನಿಂತಿದ್ದರು. ಅವರನ್ನು ಬಿಟ್ಟುಹೋಗಲು ಆಗಲಿಲ್ಲ.
``ನಾನು ಓದೋದಿಲ್ಲ ಬರೆಯುತ್ತೇನೆ,'' ಎಂದು ಹೇಳಿದೆ.
``ಮಗಳೇ ನೀನು ಯಾವ ಯೂನಿರ್ಸಿಟಿಗೂ ಹೋಗಬೇಡ,'' ಎಂದರು. ಅವರೇನು ಹೇಳಿಕೊಟ್ಟರೋ ಅದನ್ನೇ ಮಾಡಿದೆ. ಅವರು ತೋರಿಸಿದ ದಾರಿಯಲ್ಲೇ ನಡೆಯುವ ಪ್ರಯತ್ನ ಮಾಡಿದೆ, `ಅಗ್ನಿ' ಪತ್ರಿಕೆಗೆ ಬರೆಯಲು ಶುರುಮಾಡಿದೆ. ಅರಿವಿಗಾಗಿ ನಾವು ದಿನನಿತ್ಯ ಹೋರಾಟ ಮಾಡಬೇಕು ಎನ್ನುವುದನ್ನು ಕಲಿತೆ.