`ಆರ್ಟಿಕಲ್ (ವಿಧಿ) 370' ಚಿತ್ರದ ಖ್ಯಾತಿವೆತ್ತ ನಿರ್ದೇಶಕ ಶಂಕರ್ ತಮ್ಮ `ಹಲೋ ಸರ್' ಚಿತ್ರದ ಮೂಲಕ ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ......?
`ಆರ್ಟಿಕಲ್ (ವಿಧಿ) 370' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಿರ್ದೇಶಕ ಕೆ. ಶಂಕರ್ ಅವರ ಹಲೋ ಸರ್ ಸಿನಿಮಾ ಸುಂದರವಾಗಿ ಮೂಡಿಬಂದಿದೆ. `ಹಲೋ ಸರ್' ಚಿತ್ರದ ನಾಯಕನಾಗಿ ತೆಲುಗು ಮೂಲದ ರಾಜಬಾಲ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ರಾಜಬಾಲ ಈಗಾಗಲೇ ತೆಲುಗಿನಲ್ಲಿ `ಚಿತ್ರಂ, ಲವ್ ಬೂಮ್, ತೊಂಗಿ ತೊಂಗಿ ಚುದಾಮುಕ್ಕು ಚಂದಮಾಮ, ಅಂತಕು ಮಿಂಚು,' ಚಿತ್ರಗಳಲ್ಲಿ ನಟಿಸಿರುವ ರಾಜಬಾಲರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.
ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ರನ್ನರ್ ಅಪ್ ಮತ್ತು ಮಿಸೆಸ್ ಇಂಡಿಯಾ ಅಲ್ಲು ರಿಂಗ್ ಟೈಟ್ ಮುಡಿಗೇರಿಸಿ, ಈ ಹಿಂದೆ `ತಾಯವ್ವ, ಶೇರ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಸ್ವಾತಿ ಲಿಂಗರಾಜ್ ಈ ಚಿತ್ರದಲ್ಲಿ ಪರಿಪೂರ್ಣ ನಾಯಕಿಯಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ.
ನಿರ್ದೇಶಕ ಕೆ. ಶಂಕರ್ ಶ್ರೀ ಅಂಕುರ ಕ್ರಿಯೇಷನ್ ಬ್ಯಾನರ್ ನಡಿ ಎಲ್. ಮಂಜುನಾಥ್ ಮತ್ತು ಗೆಳೆಯರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆ. ಶಂಕರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎಂ.ಎನ್. ಕೃಪಾಕರ್ ರ ಸಂಗೀತ, ಚಂದ್ರು ಸೊಂಡೇಕೊಪ್ಪರವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ಗಾಂಧಿನಗರದ ಪ್ರಬುದ್ಧರು.

ಪರಿಸರ ಸಂರಕ್ಷಣೆಯ ಕಾಳಜಿ
`ಹಲೋ ಸರ್' ಚಿತ್ರ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಮತ್ತು ಮಾನವ ಸಂಕುಲದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆ ಸರ್ಕಾರಿ ಶಾಲಾ ಶಿಕ್ಷಕರ ಮಹತ್ವ ಮತ್ತು ಸರ್ಕಾರಿ ಶಾಲಾ ಶಿಕ್ಷಣದ ಸಕಾರಾತ್ಮಕ ಮತ್ತು ನಕಾರಾತ್ಮಕ ಧೋರಣೆಗಳ ಮೇಲೆ ಬೆಳಕು ಚೆಲ್ಲುತ್ತದೆ. ತಮ್ಮ ಹಣ, ಅಂತಸ್ತಿನ ಪ್ರಭಾವ ಬಳಸಿಕೊಂಡು ಕಾನೂನು ಉಲ್ಲಂಘಿಸಿ, ಸಮಾಜದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವವರ ವಿರುದ್ಧ ಹೋರಾಡುವ ಯುವಕನ ಕಥೆಯೂ ಹೌದು.
ಸಾಮಾಜಿಕ ದುಷ್ಪರಿಣಾಮಗಳ ಕುರಿತು ತಿಳಿದೂ ತಿಳಿದೂ ಸಮಾಜದಲ್ಲಿ ಅಪರಾಧ ಕೃತ್ಯ ಮಾಡಿ, ತಮ್ಮ ಹಣಬಲ, ಜನರ ಸಾಮಾರ್ಥ್ಯವನ್ನು ಬಳಸಿಕೊಂಡು, ಪ್ರಾಮಾಣಿಕರ ಹಾಗೂ ಪೊಲೀಸ್ರಾಜಕಾರಣಿಗಳ ವಿರುದ್ಧ ಸಮರ ಸಾರುವ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಚಿತ್ರದಲ್ಲಿದೆ.

ಇನ್ನಿತರ ತಾರಾಗಣ
ಇದಲ್ಲದೆ ಈ ಸಿನಿಮಾದಲ್ಲಿ ಕನ್ನಡದ ಖ್ಯಾತ ನಿರ್ದೇಶಕ, ನಟ ಎಸ್. ನಾರಾಯಣ್ ಸಹ ತೆರೆ ಹಂಚಿಕೊಂಡಿದ್ದು ಅವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಭಿನಯಿಸಿದ್ದಾರೆ. ಶಿವಣ್ಣ, ಕಿಲ್ಲರ್ ವೆಂಕಟೇಶ್, ರಮಾನಂದ, ಬೇಬಿ ಎಸ್ ಪವಿತ್ರಾ ಉಳಿದ ತಾರಾಗಣದಲ್ಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಿರ್ದೇಶಕರ ಪುತ್ರಿ ಪವಿತ್ರಾ ಸಹ ತೆರೆ ಮೇಲೆ ಕಾಣಿಸಿಕೊಳ್ಳುವ ಮೂಲಕ ನಟಿಯಾಗುವ ಸನ್ನಾಹದಲ್ಲಿದ್ದಾರೆ.
- ಪ್ರತಿನಿಧಿ





