ಕಳೆದ ತಿಂಗಳಷ್ಟೇ ಕಾಶೀ, ಗಯಾ, ಪ್ರಯಾಗ್ ರಾಜ್ ಯಾತ್ರೆ ಮುಗಿಸಿ ಕಡೆಯದಾಗಿ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಪ್ರಭು ಶ್ರೀರಾಮನ ದೇವಾಲಯಕ್ಕೆ ಕುಟುಂಬ ಸಮೇತ ಹೋಗಿದ್ದಾಗ, ಆ ದೇವಾಲಯದ ಭವ್ಯತೆ ಅಲ್ಲಿನ ಶಿಸ್ತು, ಸಂಯಮ ಎಲ್ಲವನ್ನೂ ನೋಡಿದಾಗ ನನಗೇ ಅರಿವಿಲ್ಲದಂತೆ 90ರ ದಶಕದಲ್ಲಿ ಆಗಷ್ಟೇ ಆರಂಭವಾಗಿದ್ದ ಅಯೋಧ್ಯಾ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿ ಮನೆ ಮನೆಗಳಿಗೂ ಹೋಗಿ ಹಣ ಸಂಗ್ರಹಣೆ ಮಾಡಿದ್ದು, ಇಟ್ಟಿಗೆಗಳನ್ನು ಸಂಗ್ರಹಿಸಿದ್ದು ನಂತರ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಫಣವಿದು ರಾಮನ ಮೇಲಾಣೆ ಮಂದಿರವಲ್ಲೇ ಕಟ್ಟುವೆವು, ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಮುಂತಾದ ಘೋಷಣೆಗಳನ್ನು ಮುಗಿಲು ಮುಟ್ಟುವಂತೆ ಕೂಗುತ್ತಿದ್ದದ್ದು, ಜನವರಿ 15 ರಿಂದ ಫೆಬ್ರವರಿ 27 2021ರ ವರೆಗೆ ಅಯೋಧ್ಯೆ ರಾಮಮಂದಿರಕ್ಕಾಗಿ ದೇಶಾದ್ಯಂತ ನಡೆದ ನಿಧಿ ಸಂಗ್ರಹ ಅಭಿಯಾನದಲ್ಲಿ ನಮ್ಮ ವಸತಿಯ ಮುಖ್ಯಸ್ಥನಾಗಿ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಸಾವಿರಾರು ಮನೆಗಳಿಗೆ ಹೋಗಿ ಲಕ್ಷಾಂತರ ಹಣವನ್ನು ಸಂಗ್ರಹಿಸಿ ತರುತ್ತಿದ್ದ ಹಣವನ್ನು ಅದರ ಮೊಬಲಿಗೆ ಅನುವಾಗಿ ನಮ್ಮಾಕಿ ಜೋಪಾನವಾಗಿ ವಿಂಗಡಿಸಿ ಬ್ಯಾಂಕ್ ಚಲಾನ್ ಬರೆದು ಮಾರನೆಯ ದಿನ ಬೆಳಿಗ್ಗೆ ಬ್ಯಾಂಕ್ ನಲ್ಲಿ ಹಣವನ್ನು ಜಮೆ ಮಾಡಿ, ಜಮಾ ವಿವರಗಳನ್ನು ಮೊಬೈಲ್ ಆಪ್ ನಲ್ಲಿ ಭರ್ತಿ ಮಾಡಿ ಮತ್ತೆ ಅಭಿಯಾನ ಮುಂದುವರೆಸುತ್ತಿದ್ದದ್ದು, 44 ದಿನಗಳ ಕಾಲದ ಅಭಿಯಾನ ಮುಗಿದ ಎರಡು ಮೂರು ದಿನಗಳಲ್ಲಿಯೂ ಪ್ರತೀ ಪೈಸೆ ಪೈಸೆಯ ಹಣದ ಲೆಖ್ಖಾಚಾರವೆಲ್ಲವೂ ಆಪ್ ಮೂಲಕ ಸರಿಯಾಗಿ ದೇಶಾದ್ಯಂತ ನಿರೀಕ್ಷೆಗೂ ಮೀರಿ ₹2,100 ಕೋಟಿಗೂ ಹೆಚ್ಚು ಸಂಗ್ರಹವಾದ ಸಂಗತಿ ತಿಳಿದು ಸಂತಸ ಪಟ್ಟಿದ್ದು ಎಲ್ಲವೂ ರಾಮಮಂದಿರದಲ್ಲಿ ಬಾಲರಾಮ ದರ್ಶನ ಮಾಡುವಾಗ ನೆನಪಾಗಿದ್ದಲ್ಲದೇ, ಅಂದು ನಾವು ಪಟ್ಟ ಶ್ರಮ ಮತ್ತು ಕೊಟ್ಟ ಹಣ ಎಲ್ಲೂ ಪೋಲಾಗದೇ, ಸತ್ಪಾತ್ರವಾಗಿ ಆಚಂದ್ರಾರ್ಕವಾಗಿ ಉಳಿಯುವಂತಾಗಿದೆ ಎಂದು ಸಂಭ್ರಮ ಪಡುವಂತಾಗಿತ್ತು.

ರಾಮಮಂದಿರದಲ್ಲಿ ಆಬಾಲ ವೃದ್ಧರಾದಿಯಾಗಿ ಸಾವಿರಾರು ಜನರ ಜೈ ಶ್ರೀರಾಂ ಜೈ ಜೈ ಶ್ರೀರಾಂ ಎಂಬ ಘೋಷಣೆಗಳ ಮಧ್ಯೆಯೂ ಯಾವುದೇ ತೊಂದರೆಗೂ ಆಸ್ಪದವಿಲ್ಲದಂತೆ, ಯಾವ ಪೂಜಾರಿಗಳು ಇಲ್ಲವೇ ಪಂಡಾಗಳ ಒತ್ತಡವಿಲ್ಲದಂತೆ, ಆ ಪೂಜೆ ಮಾಡಿಸಿ ಈ ಪೂಜೆ ಮಾಡಿಸಿ, ಸ್ಪರ್ಶ ದರ್ಶನ ಮಾಡಿ ಎಂಬ ಯಾವುದೇ ರೀತಿಯ ಆಮೀಷಗಳಿಲ್ಲದೇ ಇದ್ದದ್ದು ಮನಸ್ಸಿಗೆ ಮುದನೀಡಿ ರಾಮ ಲಲ್ಲನನ್ನು ದೂರದಿಂದಲೇ ನೋಡುತ್ತಿದ್ದಂತೆಯೇ ಮನಸ್ಸಿಗೆ ಸಂತೋಷವಾಗಿ ನಮಗೇ ಅರಿವಿಲ್ಲದಂತೆಯೇ ಜೋಬಿನೊಳಗೆ ಕೈಹಾಕಿ ಕೈಗೆ ಬಂದಷ್ಟು ಹಣವನ್ನು ದೇವರ ಹುಂಡಿಯಲ್ಲಿ ಹಾಕಿ ಭಕ್ತಿಯಿಂದ ಮತ್ತೊಮ್ಮೆ ದರ್ಶನದ ಭಾಗ್ಯ ನೀಡು ಭಗವಂತಾ ಎಂದು ಬೇಡಿಕೊಂಡು ಸುಮಾರು ಮೂರ್ನಾಲ್ಕು ಘಂಟೆಗಳ ಕಾಲ ದೇವಾಲಯದ ಪ್ರತಿ ಮೂಲೆ ಮೂಲೆಯಲ್ಲೂ ಇದ್ದ ದೇವಾನು ದೇವತೆಗಳು, ವಿವಿಧ ಸಾಧುಸಂತರ ಪ್ರತಿಮೆಗಳನ್ನು ನೋಡಿಕೊಂಡು ಹೊರಗೆ ದೇವಾಲಯದ ವತಿಯಿಂದ ನೀಡಿದ ಲಡ್ಡು ಪ್ರಸಾದವನ್ನು ಸ್ವೀಕರಿಸಿ ಹೊರಬರುತ್ತಿದ್ದಂತೆಯೇ ಜೀವನದಲ್ಲಿ ಏನೂ ಸಾಧಿಸಿದ ಭಾವನೆ ಮೂಡಿದ್ದಂತೂ ಸುಳ್ಳಲ್ಲಾ.

ಅಂದು ನಾವು ಪಟ್ಟ ಸಂಭ್ರಮದ ಸಂತಸ ನೀರಿನ ಮೇಲಿನ ಗುಳ್ಳೆಯಂತಾಗಿ ಕೆಲವೇ ಕೆಲವು ದಿನಗಳ ನಂತರ ದೇಶದ ಕೋಟ್ಯಂತರ ಹಿಂದೂಗಳ ಭಕ್ತಿ ಮತ್ತು ಭಾವನೆಯ ಪ್ರತೀಕವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆ ಹಣದ ದುರುಪಯೋಗ ಮತ್ತು ಕಳ್ಳತನದ ಆರೋಪ ನಿಜಕ್ಕೂ ಮನಸ್ಸಿನ ಮೇಲೆ ಭಾರೀ ಪ್ರಮಾಣದಲ್ಲಿ ಘಾಸಿ ಮಾಡಿದೆ. ರಾಮಲಲ್ಲನ ಮಂದಿರಕ್ಕೆ ಪ್ರತಿದಿನವೂ ಸಾವಿರಾರು ಭಕ್ತರು ಭೇಟಿ ನೀಡಿ ನಗದು, ಚಿನ್ನ, ಬೆಳ್ಳಿ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸಿ, ಅದರ ಮೂಲಕ ಪ್ರಭು ಶ್ರೀರಾಮ ಮತ್ತು ರಾಮ ಮಂದಿರದ ಮೂಲಕ ಮತ್ತಷ್ಟು ಸಮಾಜಮುಖೀ ಕಾರ್ಯಗಳು ಆಗಲಿ ಎಂದು ಭಾವಿಸಿದ್ದ ಆ ಕಾಣಿಕೆ ಹಣ ಸಂಘಟಿತ ರೀತಿಯಲ್ಲಿ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ದೇಶಾದ್ಯಂತ ಸುದ್ದಿಯಾಗಿದ್ದು. ಈ ಕುರಿತಂತೆ ಹೆಚ್ಚಿನ ವಿಚಾರಣೆ ನಡೆಸಲು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಆರಂಭಿಸಿದೆ.





