ತೆಲುಗಿನ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಆಶು ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹೈದರಾಬಾದ್ ಸಿಸಿಎಸ್ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
ಮದುವೆಯ ಹೆಸರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರಿಗೆ ಸುಮಾರು 10 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪ ಈಗ ಟಾಲಿವುಡ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹೈದರಾಬಾದ್ನ ಸಿಟಿ ಸೆಂಟ್ರಲ್ ಕ್ರೈಮ್ ಸ್ಟೇಷನ್ (CCS) ಪೊಲೀಸರು ಆಶು ರೆಡ್ಡಿ, ಅವರ ಸಹೋದರಿ ದಿವ್ಯಾ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಲಂಡನ್ನಲ್ಲಿ ವಾಸಿಸುವ ಧರ್ಮೇಂದ್ರ (ಸಾಫ್ಟ್ವೇರ್ ಎಂಜಿನಿಯರ್) ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಆಶು ರೆಡ್ಡಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನವನ್ನು ತೆಗೆದುಕೊಂಡಿದ್ದಾರೆ ಎಂದು ಸಂತ್ರಸ್ತನ ತಂದೆ ಸತ್ಯನಾರಾಯಣ ಮೂರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಧರ್ಮೇಂದ್ರನನ್ನು ಮದುವೆಯಾಗುವುದಾಗಿ ನಂಬಿಸಿ, 5 ಕೆಜಿ ಚಿನ್ನ ಮತ್ತು ಫ್ಲಾಟ್ ಕೇಳಿದ್ದು 3 ಕೋಟಿ ರೂ. ಮೌಲ್ಯದ ವಿಲ್ಲಾಕ್ಕಾಗಿ ಮುಂಗಡ ಹಣ ನೀಡಲಾಗಿದೆ. ಆಶುರೆಡ್ಡಿ ಒಟ್ಟು 9.83 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಶುರೆಡ್ಡಿ ತನ್ನ ಗೆಳೆಯ ಜಯಂತ್ ಜೊತೆ ಈ ನಾಟಕ ಆಡಿ, ವಿವಿಧ ಕಾರಣಗಳನ್ನು ನೀಡಿ ತಮ್ಮ ಮಗನನ್ನು ‘ಹನಿಟ್ರ್ಯಾಪ್’ ಮಾಡಿದ್ದಾರೆ ಎಂದು ಸಂತ್ರಸ್ತನ ತಂದೆ ದೂರಿನಲ್ಲಿ ವಿವರಿಸಿದ್ದಾರೆ. ಅಶುರೆಡ್ಡಿಯ ಸಹೋದರಿ ದಿವ್ಯಾ ರೆಡ್ಡಿ ಕೂಡ ಈ ಸಂಬಂಧದಲ್ಲಿ ಪಾಲುದಾರರಾಗಿದ್ದು, ಧರ್ಮೇಂದ್ರ ಕೂಡ ಆಕೆಗೆ 50 ಲಕ್ಷ ರೂ. ನೀಡಿದ್ದಾರೆ ಎನ್ನಲಾಗಿದೆ.
ಧರ್ಮೇಂದ್ರ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ, ಸಿಸಿಎಸ್ ಪೊಲೀಸರು ಅಶುರೆಡ್ಡಿ ಕುಟುಂಬದ ವಿರುದ್ಧ ಬಿಎನ್ಎಸ್ 318(4) ಆರ್/ಡಬ್ಲ್ಯೂ 3(5) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಂಚನೆ ಆರೋಪಗಳಿಗೆ ನಟಿ ಆಶುರೆಡ್ಡಿ ಪ್ರತಿಕ್ರಿಯಿಸಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡದಂತೆ ಕೇಳಿಕೊಂಡಿದ್ದಾರೆ. ಮದುವೆಯ ಹೆಸರಿನಲ್ಲಿ ತಾನು 9.83 ಕೋಟಿ ರೂ. ಗಳಿಸಿದ್ದೇನೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ. ಸುಳ್ಳು ಪ್ರಚಾರ ಹರಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಶುರೆಡ್ಡಿ ಎಚ್ಚರಿಸಿದ್ದಾರೆ.





