ಬಿಳಿಯ ಸಮುದ್ರವನ್ನೇ ನೋಡುತ್ತಿದ್ದ ಕಂಗಳಿಗೆ ಹಿತ ಮುದ ನೀಡಿತು, ಈ ನೀಲಿ ಸಮುದ್ರ. ದಡಕ್ಕಪ್ಪಳಿಸು ನೀಲ ವರ್ಣದ ದೊಡ್ಡ ದೊಡ್ಡ ಅಲೆಗಳು. ಸ್ವಚ್ಛ ಸುಂದರ ಮನಮೋಹಕ ಕಡಲ ತೊರೆಗಳು. ಅಪ್ಪಳಿಸಿ ಬರುವ ಆ ಅಲೆಗಳಲ್ಲಿ ಹಲವಾರು ಖುಷಿಯ ಸಂಗತಿಗಳು, ರಸಿಕ ಮನದ ಭಾಗಗಳು, ಹೆಣ್ಣಿನ ಮನದ ತಲ್ಲಣಗಳು! ಸುಂದರ ಹಳೆಯ ಪ್ರೇಮದ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಅಜ್ಜ ಅಜ್ಜಿಯರು, ಜೊತೆ ಜೊತೆಗ ಎಂಥವರನ್ನೂ ರೊಚ್ಚಿಗೆಬ್ಬಿಸೋ ನೀರಾಟಗಳು! ಸ್ವಾತಂತ್ರ್ಯ ಯೋಧರ ಸಾಹಸಗಾಥೆಗಳು, ಅವವರ ನರಳಾಟದ ಕೂಗುಗಳ ಯಶೋಗಾಥೆಗಳು! ಎಲ್ಲಿ ಎಂದಿರಾ? ಹೌದು ಇದುವೇ ಅಂಡಮಾನ್!
ಮಗಳ ಪರೀಕ್ಷೆ ಮುಗಿಯಿತು. ಓದಿ ದಣಿದ ಅವಳಿಗೆ ಸ್ವಲ್ಪ ರಿಲ್ಯಾಕ್ಸ್ ಕೊಡೋಣವೆಂದು ಈ ಟೂರ್ ಗೆ ಹೊರಟೆವು. ಮಗ ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ಲಾನ್ ಮಾಡಿದ್ದ. ಪ್ಯಾಕೇಜ್ ಟೂರೇ! ಬೆಂಗಳೂರಿನಿಂದ ಆಕಾಶ ಮಾರ್ಗವಾಗಿ ಸಾಗಿ ಪೋರ್ಟ್ ಬ್ಲೇರ್ ನಲ್ಲಿ ಇಳಿದೆವು. ಬಹಳ ಪುಟ್ಟ ದ್ವೀಪವದು! ವಿಮಾನ ನಿಲ್ದಾಣದ ಪಕ್ಕದಲ್ಲೇ ಇದ್ದ ಒಳ್ಳೆಯ ಹೋಟೆಲ್ ಗೆ ಕರೆದೊಯ್ದರು. ಒಳ ಅಡಿಯಿಡುತ್ತಿದ್ದಂತೆ ಸ್ವಾಗತ ಪೇಯ ಹಿತವಾಗಿತ್ತು.
ಊಟ ಮಾಡಿ ವಿಶ್ರಾಂತಿ! ಸಂಜೆ 4ಕ್ಕೆ ಸೆಲ್ಯುಲರ್ ಜೈಲ್ ವೀಕ್ಷಣೆ. ನನ್ನ ದೊಡ್ಡಪ್ಪ ಹೇಳ್ತಿದ್ರು, ಪುಣ್ಯ ಕ್ಷೇತ್ರಗಳಿಗೆ ಹೋದಾಗ ನಾವು ಎಷ್ಟು ದಕ್ಷಿಣೆ ಹಾಕ್ತೀವೋ ಅಷ್ಟೂ ಒಳ್ಳೆಯದು, ನಮ್ಮ ಪಾಪ ಕರ್ಮಗಳು ಕಳೆಯುತ್ತದೆಂದು. ಇದೂ ಒಂದು ಪುಣ್ಯ ಕ್ಷೇತ್ರವೇ ಎನಿಸಿತು.
ಕಾಲಾಪಾನಿ ಸೆಲ್ಯುಲರ್ ಜೈಲ್
ಅಲ್ಪಸ್ವಲ್ಪ ತಿಳಿದಿದ್ದರೂ ಕೂಡಾ ಯಾತ್ರಿಕರನ್ನೇ ನಂಬಿಕೊಂಡಿರುವ ಜೀವನ, ಗೈಡ್ ಗಳದ್ದು. ಹಾಗಾಗಿ ಗೈಡ್ ಒಬ್ಬರನ್ನು ಬುಕ್ ಮಾಡಿಕೊಂಡೆವು. ದಕ್ಷಿಣೆಯೆಂದು ಅವರಿಗೆ ಕಾಣಿಕೆ ನೀಡಿದೆ. ಕಾಲಾಪಾನಿಯ ಬಗ್ಗೆ ಗೂಗಲ್ ನಲ್ಲಿ ನಾವನೇ ನೋಡಿದ್ದರೂ ಸಹ, ಅಲ್ಲಿ ಎದುರಿಗೆ ನಿಂತು ನೋಡೋದು, ಅದನ್ನು ಅವರು ವಿವರಿಸುವ ಪರಿ, ನೋವುಂಟು ಮಾಡುತ್ತವೆ ಕಣ್ರೀ! ಅವರ ಮಾರ್ಗದರ್ಶನದಲ್ಲಿ ಸೆಲ್ಯುಲರ್ ಜೈಲ್ ನೋಡಲು ಹೊರಟೆವು. ಮಕ್ಕಳಾದಿಯಾಗಿ ಎಲ್ಲರೂ ತಿಳಿಯಲೇಬೇಕಾದ ಸಂಗೀತಗಳು ಹಲವಾರು. ಶಾಲಾ ದಿನಗಳಲ್ಲಿ ಓದಿದ ನೆನಪು. ದೇಶ ದೇಶಪ್ರೇಮ ದೇಶಪ್ರೇಮಿ, ಇದೇ ವಿಷಯಗಳೇ ತುಂಬಿದ್ದವು. ಆತ ಹೇಳುತ್ತಿದ್ದ ಮಾತುಗಳನ್ನು ಮನಸಾರೆ ಆಲಿಸುತ್ತಿದ್ದೆವು. ಮಗಳು ಅದರಲ್ಲಿ ತನ್ಮಯಳಾಗಿದ್ದಳು. ಮಗ ಫೋಟೋಗಳನ್ನು ತೆಗೆದುಕೊಳ್ಳುವುದರಲ್ಲಿ ತಲ್ಲೀನನಾಗಿದ್ದ. ಕಟ್ಟಡದ ವಿನ್ಯಾಸವೇ ಒಂದು ವಿಸ್ಮಯ. ಒಂದು ಭಾಗದಲ್ಲಿರುವ ದೇಶಪ್ರೇಮಿಗಳಿಗೆ ಮಗದೊಂದು ಭಾಗದವರು ಕಾಣಬಾರದು ಮತ್ತು ಅವರೊಟ್ಟಿಗೆ ಯಾವುದೇ ರೀತಿಯ ಸಂವಹನ ನಡೆಸಬಾರದೆಂಬ ಉದ್ದೇಶದಿಂದ ಮುಂಭಾಗಕ್ಕೆ ಹಿಂಭಾಗ ಎದುರಾಗುವಂತೆ ಕಟ್ಟಿದ್ದು ವಿಶೇಷವಾಗಿತ್ತು. 7 ಭಾಗಗಳಾಗಿ ಕಟ್ಟಿದ್ದ ಈ ಜೈಲಿನ ವಿನ್ಯಾಸ ಮನಸೆಳೆಯಿತು. ಈಗ ಅದನ್ನು ನವೀಕರಣಗೊಳಿಸುತ್ತಿದ್ದಾರೆ. ಅಲ್ಲಲ್ಲಿ ಕಟ್ಟಡ ಕಾರ್ಯಗಳು ನಡೆಯುತ್ತಿವೆ. ಇನ್ನು ಜೈಲು ವಾಸಿ ಆದರೆಂದರೆ ಆಯ್ತು ಅಲ್ಲಿಗೆ ಅವರ ಜೀವನ ಮುಕ್ತಾಯ ಎಂಬ ನಿರ್ಧಾರಕ್ಕೆ ಬರುತ್ತಿದ್ದರು. ಅದು ಸತ್ಯ ಹೌದು! ಕಠಿಣ ಶಿಕ್ಷೆಗಳ ಆಗರ ಈ ಜೈಲು! ಒಂದೊಂದು ಕೊಠಡಿಯೊಳಗೆ ಒಬ್ಬೊಬ್ಬರೇ ಇರುವ ವ್ಯವಸ್ಥೆ. ಒಂದು ತಟ್ಟೆ, ಲೋಟ ಹಾಗೂ ಒಂದು ಮಡಕೆ. ಮಡಕೆ ಏಕೆಂದರೆ ರಾತ್ರಿ ಏನಾದರೂ ಮಲಮೂತ್ರ ಮಾಡಬೇಕಾದಲ್ಲಿ ಅದರಲ್ಲಿ ಮಾಡಿ ಕೊಠಡಿಯೊಳಗೇ ಇಟ್ಟುಕೊಳ್ಳಬೇಕಾದಂತಹ ಸ್ಥಿತಿ, ಶೋಚನೀಯ. ವೀರ ಸಾವರ್ಕರ್ ಎಲ್ಲ ಭಾರತೀಯ ಯೋಧರಿಗಾಗಿ ಹೋರಾಡಿದ ಧೀಮಂತ ನಾಯಕನಾಗಿ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತಾರೆ. ಒಟ್ಟಿನಲ್ಲಿ ಭೂಮಿ ಮೇಲಿನ ನರಕ ಸೆಲ್ಯುಲರ್ ಜೈಲ್.