ಸ್ವಾತಂತ್ರ್ಯ ಪೂರ್ವದ ಬಹುತೇಕ ಕನ್ನಡದ ಸಾಹಿತಿಗಳು ಪೌರಾಣಿಕ, ಐತಿಹಾಸಿಕ ಮತ್ತು ಕೆಲವೊಬ್ಬರು ಸಾಮಾಜಿಕವಾದ ವಿಷಯಗಳನ್ನೇ ತಮ್ಮ ಬಹುತೇಕ ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅವರಲ್ಲೊಬ್ಬರು ಮಾತ್ರವೇ ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯ ಬೆಳೆಸಿದವರು. ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮದ ಯುವಪ್ರವರ್ತಕರು. ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಹೊಸ ರೂಪು ಕೊಟ್ಟವರು. ಬೇಂದ್ರೆ, ಕಾರಂತರಂತಹ ದಿಗ್ಗಜರುಗಳೇ ಅವರ ಕಾವ್ಯ ಸೃಷ್ಟಿಗಳಿಗೆ ಮಾರು ಹೋಗಿದ್ದರು. ಸಾಕ್ಷಿ ಎಂಬ ಪತ್ರಿಕೆಯ ಸಂಪಾದಕರಾಗಿ ಸುಮಾರು ಇಪ್ಪತ್ತು ವರ್ಷಗಳಷ್ಟು ಅದನ್ನು ಮುನ್ನಡಿಸಿದ್ದವರು, ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದ ಹೋರಾಟಗಾರ, ಕವಿ, ಪ್ರಾಧ್ಯಾಪಕ, ಸಾಹಿತ್ಯ ಸಂಘಟಕ, ಬಲಪಂತೀಯ ರಾಜಕಾರಣಿ ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದಂತಹ ಶ್ರೀ ಎಂ. ಗೋಪಾಲಕೃಷ್ಣ ಅಡಿಗರ ಬಗ್ಗೆ ತಿಳಿಯೋಣ.
ಬೈಂದೂರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಇದೇ ಸಮಯದಲ್ಲಿ ಶಿವರಾಮ ಕಾರಂತರ ಅಣ್ಣ ಕೋಲ ಕಾರಂತರು ಅಡಿಗರಿಗೆ ಪರಿಚಯವಾಗಿ, ಅವರು ಒಳ್ಳೊಳ್ಳೆಯ ಪುಸ್ತಕಗಳನ್ನು ಅಡಿಗರಿಗೆ ಕೊಟ್ಟು ಅವುಗಳನ್ನು ಹೆಚ್ಚು ಹೆಚ್ಚಾಗಿ ಓದಲು ಪ್ರೋತ್ಸಾಹಿಸುತ್ತಿದ್ದರು. ಆಗೆಲ್ಲಾ ದೇಶಾದ್ಯಂತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಪರಾಕಾಷ್ಠೆಯ ಕಾಲ. ಶಾಲಾ ಕಾಲೇಜಿನ ಹುಡುಗರೆಲ್ಲರೂ ಸ್ವಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುತ್ತಿದ್ದ ಕಾಲ. ಅಡಿಗರೂ ಇದಕ್ಕೆ ಹೊರತಾಗದೇ, ಅವರೂ ಕೂಡಾ ಹುಮ್ಮಸ್ಸಿನಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹೆಂಡದಂಗಡಿಯ ಮುಂದೆ ಜನರನ್ನು ಕಟ್ಟಿಕೊಂಡು ಧರಣಿ ನಡೆಸಿದ್ದರು. ಇದರ ಪರಿಣಾಮವಾಗಿ ಅಡಿಗರು ರಚಿಸಿದ ದೇಶಭಕ್ತಿಯ ಕುರಿತಾದ ಕವನಗಳು ಬೆಂಗಳೂರು, ಮಂಗಳೂರಿನ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್.ಎಸ್.ಎಲ್.ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿ ಕೊಂಡಾಗಲೇ ಅಡಿಗರ ಬದುಕಿನಲ್ಲಿ ಮಹತ್ವದ ತಿರುವನ್ನು ಪಡೆದು ಕೊಂಡಿತು.






