ಗೆಳೆಯರಾದ ರಾಜು ರಾಮು ಬಹಳ ಹೊತ್ತಿನಿಂದ ಹರಟೆ ಹೊಡೆಯುತ್ತಿದ್ದರು.
ರಾಜು : ಅಲ್ಲಿ ನೋಡು.... ಒಬ್ಬ ಅಮೆರಿಕನ್ ಚಂದ್ರನ ಮೇಲೆ ಇಳಿಯುತ್ತಿದ್ದಾನೆ.
ರಾಮು : ಏನು ನೋಡಲಿ ನಿನ್ ತಲೆ.... ಮೊನ್ನೆ ನಾನು ಚಂದ್ರಮಂಡಲಕ್ಕೆ ಹೋಗಿದ್ದಾಗ ಅಲ್ಲೇ ಕನ್ನಡಕ ಮರೆತು ಬಂದುಬಿಟ್ಟಿದ್ದೆ.
ಕಿರಣ್ : ಇವತ್ತು ನನಗೆ ಕೇವಲ 5/ ರೂ.ಗೆ 3 ಬಾಳೆಹಣ್ಣು ಸಿಕ್ಕಿತು ಗೊತ್ತಾ?
ವರುಣ್ : ಈ ಕಲಿಯುಗದಲ್ಲಿ ಅದು ಹೇಗೆ ಸಾಧ್ಯ?
ಕಿರಣ್ : ಬಾಳೆಹಣ್ಣಿನ ಗಾಡಿಯವನು 1 ಡಝನ್ ಹಣ್ಣಿಗೆ 60/ ರೂ. ಅಂದ. ಸರಿ ಅಂತ ನಾನು 5/ ರೂ. ಕೊಟ್ಟು ಒಂದು ಹಣ್ಣು ತಗೊಂಡೆ. ಅವನು ಆ ಕಡೆ ತಿರುಗಿದ್ದ ಅಂತ ಇನ್ನೊಂದು ಹಣ್ಣು ತಗೊಂಡು ಓಡತೊಡಗಿದ. ಅದನ್ನು ಗಮನಿಸಿದ ಅವನು ಕೋಪದಿಂದ ಇನ್ನೊಂದು ಹಣ್ಣು ತೆಗೆದು ನನ್ನತ್ತ ಬೀಸಿದ. ಬಿಡ್ತೀನಾ....? ಅದನ್ನೂ ಕರೆಕ್ಟ್ ಆಗಿ ಕ್ಯಾಚ್ ಹಿಡಿದೆ!
ವಿಮಲಮ್ಮ : ಅಲ್ವೋ ಪರಮೇಶಿ, ನಿನಗೆ ಪ್ರಾಕ್ಟಿಕಲ್ಸ್ ಎಗ್ಸಾಮ್ ಇದೆ ಅಂತ ಕಾಲೇಜಿಗೆ ಹೊರಟಿದ್ದಿ. ಹೊರಗೆ ನೋಡಿದ್ರೆ ರಾಜಕೀಯದ ಗಲಭೆಯಿಂದ ಗೋಲಿಬಾರ್ ನಡೆದು ಎಲ್ಲಾ ಕಡೆ ಶಾಲಾ ಕಾಲೇಜು ರಜೆ ಅಂತಿದ್ದಾರೆ.... ಮತ್ತೆ ನೀನೆಲ್ಲಿಗೆ ಹೊರಟಿದ್ದಿ ಅಂತ....?
ಪರಮೇಶಿ : ಅದೇಮ್ಮ ನಾನು ಹೇಳೋದೂ... ನಾನು ರಾಜನೀತಿ ಶಾಸ್ತ್ರ (ಪೊಲಿಟಿಕಲ್ ಸೈನ್ಸ್)ದ ವಿದ್ಯಾರ್ಥಿ. ಹೀಗಾಗಿ ಇದುವೇ ನನ್ನ ಪ್ರಾಕ್ಟಿಕಲ್ಸ್!
ಸಾಹುಕಾರ ಸಿದ್ದಪ್ಪ ಸೋಮಣ್ಣನಿಗೆ ಸಾಲ ಕೊಟ್ಟು ಅದನ್ನು ವಾಪಸ್ಸು ಪಡೆಯಲೆಂದು ಅಲೆದಲೆದೂ ಸಾಕಾಗಿ ಹೋಯಿತು. 6 ತಿಂಗಳಾದರೂ ಸೋಮಣ್ಣ ಸಾಲ ಹಿಂತಿರುಗಿಸುವ ಲಕ್ಷಣ ಕಾಣಲಿಲ್ಲ. ಬಡ್ಡಿನೂ ಕೊಡುತ್ತಿರಲಿಲ್ಲ. ಸಿದ್ದಪ್ಪನಿಗೆ ಸಾಕು ಸಾಕಾಗಿತ್ತು ಸಿದ್ದಪ್ಪ : ಸೋಮಣ್ಣ, ಹಾಳಾಗಿ ಹೋಗಲಿ. ನಾನು 10 ಸಾವಿರದಲ್ಲಿ ಅರ್ಧ ಕೊಟ್ಟಿದ್ದನ್ನು ಮರೆತು ಬಿಡ್ತೀನಿ. ಉಳಿದ 5 ಸಾವಿರವನ್ನಾದರೂ ಕೊಡು.
ಸೋಮಣ್ಣ : ಸಾಹುಕಾರ್ರೆ.... ಅಷ್ಟು ವಿಶಾಲ ಮನೋಭಾವದಿಂದ ಮೊದಲರ್ಧದ ಸಾಲವನ್ನು ನೀವು ಮರೆತಿರುವಂತೆ ಉಳಿದರ್ಧದ ಸಾಲವನ್ನು ನಾನೂ ಮರೆತುಬಿಡ್ತೀನಿ ಬಿಡಿ, ಇನ್ನೇಕೆ ಚಿಂತೆ?
ವಿನುತಾ : ಡಿಯರ್, ನೀನು ನನ್ನ ಬಾಯ್ ಫ್ರೆಂಡ್ ಅಂತ ಮನೆಯವರಿಗೆ ಹೇಗೋ ತಿಳಿದುಹೋಗಿದೆ. ಆದ್ದರಿಂದ ಅಪ್ಪಿತಪ್ಪಿಯೂ ನಮ್ಮ ಬೀದಿ ಕಡೆ ಸುಳಿಯಬೇಡ, ನಮ್ಮಣ್ಣನ ಕೈಗೆ ಸಿಕ್ಕಿಹಾಕಿಕೊಂಡ್ರೆ ಬಲೇ ಫಜೀತಿ!
ವರುಣ್ : ಅಷ್ಟೇ ತಾನೇ? ಕದ್ದೋಡುವಾಗ ಮನೆಯವರೂ, ಗುದ್ದೊಡುವಾಗ ಟ್ರಾಫಿಕ್ ಪೊಲೀಸರೂ ನನ್ನ ಹಿಡಿಯಲಾಗಲಿಲ್ಲ. ಇನ್ನು ನಿಮ್ಮಣ್ಣ ಯಾವ ಮಹಾ.....?
ಮಕ್ಕಳು ಸಂಜೆ ಮನೆ ಎದುರಿನ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆಗ ಚೆಂಡು ಎದುರು ಮನೆ ಅಂಗಳದೊಳಕ್ಕೆ ನುಗ್ಗಿಹೋಯಿತು. ಅದನ್ನು ಹುಡುಕಿ ತರುವ ಕೆಲಸ ಕಿಶೋರನದಾಗಿತ್ತು. ಕಿಶೋರ್ ಆ ಮನೆಯ ಗೇಟ್ ತೆರೆದು ಒಳಗೆ ಹೋಗಿ ಬಾಗಿಲು ಬಡಿದ.
ಕಿಶೋರ್ : ಅಂಕಲ್, ಯಾವುದಾದ್ರೂ ಬಾಲ್ ಸಿಕ್ಕಿತೇ?
ಅಂಕಲ್ : ಹೂಂ, ಯಾವುದೋ ಬಂದಹಾಗಿತ್ತು. ನೋಡು, ಇದೇನಾ ಅಂತ...?