ಪ್ರಸಕ್ತ ಟಿ-20 ವಿಶ್ವಕಪ್‌ 2026ರಲ್ಲೂ ಪಾಕಿಸ್ತಾನ ವಿರುದ್ಧದ ತನ್ನ ಗೆಲುವಿನ ನಾಗಾಲೋಟವನ್ನು ಭಾರತ ಮುಂದುವರೆಸಿದೆ.

ಐಸಿಸಿ ಆಯೋಜಿಸುವ ಪಂದ್ಯಾವಳಿಗಳಲ್ಲಿ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಭಾರತ, ಕೊಲಂಬೊದ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಪಾಕ್‌ ತಂಡಕ್ಕೆ ಮಣ್ಣು ಮುಕ್ಕಿಸಿದೆ.

ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸ್ಫೂರ್ತಿದಾಯಕ ಪ್ರದರ್ಶನ ನೀಡಿದ ಭಾರತ ತಂಡ ಟಿ20 ವಿಶ್ವಕಪ್​ನ ತನ್ನ 3ನೇ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನ ವಿರುದ್ಧ 61 ರನ್​ಗಳ ಜಯ ಸಾಧಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಸತತ 3ನೇ ಗೆಲುವು ದಾಖಲಿಸಿದ ಸೂರ್ಯಕುಮಾರ್​ ಯಾದವ್​ ತಂಡ “ಎ” ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಸೂಪರ್​ 8 ಹಂತಕ್ಕೆ ಅರ್ಹತೆ ಪಡೆದಿದೆ.ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಆಕರ್ಷಣೀಯ ಪಂದ್ಯದಲ್ಲಿ ಭಾರತ ತಂಡ ನೀಡಿದ 176 ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 2 ಓವರ್​ಗಳು ಬಾಕಿ ಇರುವಂತೆ 114 ರನ್​ಗಳಿಗೆ ಆಲ್​ಔಟ್​ ಆಗಿದೆ.

ಪಾಕಿಸ್ತಾನ ಪರ ಉಸ್ಮಾನ್​ ಖಾನ್​ (44) ಮತ್ತು ಸೈಮ್​ ಆಯೂಬ್​ (25ಕ್ಕೆ 3) ಗಮನ ಸೆಳೆದರೆ, ಭಾರತ ಪರ ಇಶಾನ್​ ಕಿಶನ್​ (77) ರನ್ ಸಿಡಿಸಿದರು. ಬುಮ್ರಾ, ವರುಣ್​, ಹಾರ್ದಿಕ್​ ಮತ್ತು ಅಕ್ಷರ್​ ತಲಾ 2 ವಿಕೆಟ್​ ಪಡೆದರು.

ನೋ ಹ್ಯಾಂಡ್​ ಶೇಕ್​: ಟೀಮ್​ ಇಂಡಿಯಾ ಕ್ಯಾಪ್ಟನ್​ ಸೂರ್ಯಕುಮಾರ್​ ಮತ್ತು ಪಾಕ್​ ನಾಯಕ ಸಲ್ಮಾನ್​ ಆಘಾ ಟಾಸ್​ ವೇಳೆ ಹಸ್ತಲಾಘವ ಮಾಡುವ ಸಂಪ್ರದಾಯದಿಂದ ವಿಶ್ವಕಪ್​ನಲ್ಲೂ ದೂರ ಉಳಿದರು. ಕಳೆದ ಏಷ್ಯಾಕಪ್​ನಲ್ಲೂ ಉಭಯ ನಾಯಕರು ಹಸ್ತಲಾಘವ ಮಾಡಿರಲಿಲ್ಲ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಪಾಕಿಸ್ತಾನ ಐಸಿಸಿಗೂ ದೂರು ಸಲ್ಲಿಸಿತ್ತು. ಪಹಲ್ಗಾಮ ದಾಳಿಯಲ್ಲಿ ಬಲಿಯಾದ ಭಾರತೀಯರಿಗೆ ಸಂತಾಪ ಸೂಚಕವಾಗಿ ಟೀಮ್ ಇಂಡಿಯಾ ಆಟಗಾರರು ಪಾಕ್​ ತಂಡಕ್ಕೆ ಹ್ಯಾಂಡ್​ ಶೇಕ್ ನೀಡುವ ಸಂಪ್ರದಾಯವನ್ನು ಕಡಿತಗೊಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ