ಐಷಾರಾಮಿ ಜೀವನ ಮತ್ತು ಆತ್ಮಹತ್ಯೆ

ಇತ್ತೀಚೆಗೆ ಪತ್ನಿ ಪೀಡಿತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಅಸಲಿಗೆ ಇಲ್ಲಿ ಪತ್ನಿ ಪೀಡಿತರಿಗಿಂತ ಸಾಲ ಪೀಡಿತರು ಆತ್ಮಹತ್ಯೆಗೆ ಶರಣಾಗುವುದು ಹಿಂದಿನಿಂದಲೂ ನಡೆದು ಬಂದಿದೆ. ಉತ್ತಮ ಲೈಫ್‌ ಸ್ಟೈಲ್‌, ಅನುಕೂಲಸ್ಥ ಮನೆತನದವರಿಂದ ಹಿಡಿದು ಬಡ ರೈತ, ಕೂಲಿ ಕಾರ್ಮಿಕರವರೆಗೂ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಮೊರೆಹೋಗುತ್ತಾರೆ.

ಇತ್ತೀಚೆಗೆ ದೆಹಲಿಯಲ್ಲಿ 12 ವರ್ಷದ ಒಬ್ಬ ಹುಡುಗನ ತಾಯಿತಂದೆ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡರು. ಏಕೆಂದರೆ ಇಲ್ಲಿ ಪತಿ ಕೊರೋನಾ ದೆಸೆಯಿಂದ ಅತಿ ಸಾಲ ಮಾಡಿ, ತೀರಿಸಲಾಗದೆ ಈ ದಾರಿ ಹಿಡಿದರೆ, ಪತ್ನಿಯೂ ಜೊತೆಗೂಡಿದಳು.

ಸಾಮಾನ್ಯವಾಗಿ ಈ ಸಾಲವನ್ನು ಬ್ಯಾಂಕು, ಕ್ರೆಡಿಟ್‌ ಕಾರ್ಡ್‌ ಕಂಪನಿಗಳಿಂದ ಪಡೆಯುತ್ತಾರೆ, ನಂತರ ಅವರು ಜೀವನವಿಡೀ ವಸೂಲಾತಿಗೆ ನಿಲ್ಲುತ್ತಾರೆ. ಬಹುತೇಕ ಸಾಲವನ್ನು ಪರಿಚಯದವರಿಂದಲೇ ಪಡೆಯುತ್ತಾರೆ. ಕೆಲವರು ಬಡ್ಡಿಯ ದುರಾಸೆಗೆ ಬಿದ್ದು ಸಾಲ ನೀಡುತ್ತಾರೆ, ಕೆಲವರು ಸಹಾಯ ಮಾಡುವ ನಿಯತ್ತಿಗಾಗಿ.

ಸಾಮಾನ್ಯವಾಗಿ ಸಾಲ ಪಡೆದವರು ತಮ್ಮ ವೈಯಕ್ತಿಕ ಖರ್ಚನ್ನು ಕಂಟ್ರೋಲ್ ಮಾಡಲಾರರು, ಆಗ ಸಾಲ ದೊಡ್ಡ ಹೊರೆ ಆಗಿಬಿಡುತ್ತದೆ. ಎಷ್ಟೇ ಸಾಲ ಪಡೆದಿರಲಿ, ಎಷ್ಟೇ ಲಾಸ್‌ ಆಗಿರಲಿ, ಇಂಥವರು ಸಣ್ಣ, ಮಧ್ಯಮ, ಭಾರೀ ಸಾಲಗಳನ್ನು, ತಮ್ಮ ಪರ್ಸನ್‌ ಖರ್ಚು ಕಂಟ್ರೋಲ್ ಮಾಡುತ್ತಾ ತೀರಿಸಬಹುದು, ಅದು ಬಿಟ್ಟು ನೇರ ಆತ್ಮಹತ್ಯೆ ಯತ್ನ ಸಲ್ಲದು.

ದೆಹಲಿಯ ಮತ್ತೊಂದು ಜೋಡಿ ಉತ್ತಮ ಫ್ಲಾಟ್‌ ನಲ್ಲಿ ವಾಸಿಸುತ್ತಲೇ ಈ ಕೃತ್ಯಕ್ಕೆ ಕೈಹಾಕಿದರು. 20 ದಿನಗಳ ಹಿಂದೆ ಅವರ ಬಳಿ ಲಗ್ಶುರಿ ಜೀವನಕ್ಕಾಗಿ ಕಾರ್‌ ಇತ್ತು. ಕೆಲವು ದಿನಗಳ ಹಿಂದೆ ತನ್ನ ಮೈದುನನ ಮದುವೆಯಲ್ಲಿ ಪತಿರಾಯ ಜೋರಾಗಿ ಡ್ಯಾನ್ಸ್ ಮಾಡಿದ್ದೂ ಉಂಟು. ಆ ಜೋಡಿ, ಕೊರೋನಾಗೂ ಮೊದಲೇ ಒಂದು ಮಾಲ್ ‌ನಲ್ಲಿ 4 ಲಕ್ಷ ಸಾಲ ಮಾಡಿ ಕ್ಲಬ್‌/ರೆಸ್ಟೋರೆಂಟ್ ಆರಂಭಿಸಿತ್ತು. ಏನೋ ಕಾರಣಕ್ಕೆ ಅದನ್ನು ಮುಚ್ಚಬೇಕಾಯಿತು.

ಆ ಧಂಧೆ ಐಷಾರಾಮಿಗಳಿಗೆಂದೇ ಮೀಸಲಾಗಿತ್ತು. ದುಂದು ಉಡಾಯಿಸುವ ಪ್ರವೃತ್ತಿಯವರು ಅಲ್ಲಿಗೆ ಬರುತ್ತಿದ್ದರು, ಈ ಜೋಡಿಯೂ ಅಂಥದ್ದೇ ಆಗಿತ್ತು. ಯಾವ ವ್ಯಕ್ತಿ ಕೆಲವು ದಿನಗಳ ಹಿಂದಷ್ಟೇ, ಮದುವೆಯಲ್ಲಿ ಎಲ್ಲರ ಮುಂದೆ ಡೌಲು ತೋರಿ ಕುಣಿದಿದ್ದನೋ, ಜೀವನವನ್ನು ಗಂಭೀರವಾಗಿ ಪರಿಗಣಿಸದೆ ಆತ್ಮಹತ್ಯೆಗೆ ಶರಣಾಗಿದ್ದು ವಿಡಂಬನೆಯೇ ಸರಿ.

ಭಾರಿ ಸಾಲಕ್ಕೆ ಸಿಲುಕಲು ಅನೇಕ ಕಾರಣಗಳಿರುತ್ತವೆ. ಒಮ್ಮೆ ವ್ಯಾಪಾರದಲ್ಲಿ ಆಗುವ ಲಾಸ್‌, ಭಾರಿ ದೊಡ್ಡ ಯೋಜನೆಗಳಿಂದ ರಾತ್ರೋ ರಾತ್ರಿ ಬೆಳೆದುಬಿಡಬೇಕು ಎನ್ನುವ ಹುನ್ನಾರ, ಎಲ್ಲಕ್ಕೂ ಮೀರಿದ ದುರಾಸೆಯೇ ಸಾಲಕ್ಕೆ ಸಿಲುಕಿಸುತ್ತದೆ. ವಿಜಯ್‌ ಮಲ್ಯಾ ಇನ್ನಷ್ಟು ಮತ್ತಷ್ಟು ಗಳಿಸುವ ದುರಾಸೆಯಲ್ಲಿ ಮುಳುಗಿಹೋದ, ಈಗ ಅಳಿದುಳಿದ ಹಣದಲ್ಲಿ ವಿದೇಶಗಳಲ್ಲಿ ಮೋಜು ಮಾಡುತ್ತಿದ್ದಾನೆ. ಲಲಿತ್‌ ಮೋದಿ ಕೋಟ್ಯಂತರ ಹಣ ಸಾಲ ಮಾಡಿ, ಲಂಡನ್‌ ಗೆ ಓಡಿಹೋಗಿ ಅಲ್ಲಿ ಮೋಜು ಮಾಡುತ್ತಿದ್ದಾನೆ.

ಇಂಥ ಸೆಲೆಬ್‌ ಗಳನ್ನೇ ಮಾಮೂಲಿ ತಮ್ಮ ಜನ ರೋಲ್ ಮಾಡೆಲ್ ‌ಆಗಿಸಿಕೊಳ್ಳುತ್ತಾರೆ. ಸಾಲ ಮಾಡಿ ದೊಡ್ಡ ವ್ಯಾಪಾರ ಶುರು ಮಾಡೋದು, ಅದರಿಂದ ಸಾಲ ತೀರಿಸೋದು ಅವರ ಕನಸು. ಕೈಗೆ ಆ ಹಣ ಬರುತ್ತಲೇ ತಮ್ಮದೇ ಐಷಾರಾಮಿ ಖರ್ಚನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಹು ದೊಡ್ಡ ಮನೆ, ದೊಡ್ಡ ಕಾರು, ದೇಶವಿದೇಶಗಳ ಟೂರ್‌, ಹಲವು ಬಗೆಯ ಕ್ರೆಡಿಟ್‌ ಕಾರ್ಡ್ಸ್, ದುಬಾರಿ ಕ್ಲಬ್ಬುಗಳ ಸದಸ್ಯತ್ವ, ಇದೇ ಲೈಫ್‌ ಸ್ಟೈಲ್ ‌ಆಗಿಬಿಡುತ್ತದೆ. ಗ್ರಾಂಡ್‌ ಪಾರ್ಟಿಗಳಲ್ಲಿ ದೊಡ್ಡ ಮೊತ್ತದ ಖರ್ಚು, ಮನೆ ಊಟ ಬೇಕಾಗೇ ಇಲ್ಲ.

ದೆಹಲಿ ಹತ್ತಿರದ ಶಾಲಿಮಾರ್‌ ಗಾರ್ಡನ್‌ ಬಳಿಯ ಯುವ ಜೋಡಿ, ತಮ್ಮ ಸುಯಿಸೈಡ್‌ ನೋಟ್‌ ನಲ್ಲಿ 6 ಜನರ ಹೆಸರು ನಮೂದಿಸಿದೆ, ಅವರು ಮತ್ತೆ ಮತ್ತೆ ಸಾಲ ವಾಪಸ್ಸು ಕೇಳಿದರು ಅಂತ. ಈಗ ಆ 6 ಮಂದಿ ಪೊಲೀಸರ ವಿಚಾರಣೆಯಲ್ಲಿ ಹೈರಾಣಾಗಿದ್ದಾರೆ. ಸಾಲ ಮಾಡುವಾಗ ಹೇಗೆ ಹಿಂದಿರುಗಿಸುತ್ತೇವೋ ಎಂಬ ಭಯ ಇಲ್ಲದವರೆಲ್ಲ ಸಾಲ ತಂದುಕೊಂಡು, ಸಾಲ ಕೊಟ್ಟವರನ್ನು ಪೊಲೀಸರ ಬಳಿ ಅಲೆದಾಡಿಸೋದು ಯಾವ ನ್ಯಾಯ? ಈ ಜೋಡಿಯ ಸಾವಿನಿಂದ ಅನ್ಯಾಯವಾಗಿ 12 ವರ್ಷದ ಹುಡುಗ ಅನಾಥನಾದ. ಹೆತ್ತವರ ತಪ್ಪಿನಿಂದ ಪಾಠ ಕಲಿತರೆ ಮಾತ್ರ ಅವನು ಉದ್ಧಾರವಾದಾನು.

ಅಸಲಿ ಅಪರಾಧಿ ಯಾರು?

ಕೌಟುಂಬಿಕ ವಿವಾದಗಳಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ನಂತರ, ಅವಳ ಪತಿಯನ್ನು ಜೇಲಿನಲ್ಲಿ ಸೆರೆ ಹಾಕುವುದು ಒಂದು ರೂಢಿ ಆಗಿಹೋಗಿದೆ. ಸತ್ತ ಪತ್ನಿಯ ತಾಯಿ ತಂದೆ ಬಗೆಬಗೆಯ ಆರೋಪ ಹೊರಿಸುತ್ತಾರೆ. ಪತಿ ಮತ್ತು ಅವನ ಮನೆಯವರು ತಮ್ಮ ಮಗಳಿಗೆ ನಾನಾ ಚಿತ್ರಹಿಂಸೆ ನೀಡುತ್ತಿದ್ದರು, ಹಾಗಾಗಿ ವಿಧಿಯಿಲ್ಲದೆ ಅವಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯ್ತು ಎನ್ನುತ್ತಾರೆ. ಹಳೆಯ (ಕಲಂ) 306ರ ಪ್ರಕಾರ ಆತ್ಮಹತ್ಯೆಗೆ ಕಾರಣ ಆಗುವವರು, ಅಥವಾ ಪ್ರಚೋದಿಸುವವರು, ಅದಕ್ಕೆ ಸಹಕರಿಸುವವರೂ ಸಹ ಅಪರಾಧಿ ಎನಿಸುತ್ತಾರೆ.

ಸಾವಿರಾರು ಪತಿಯರು ಇಂದು ಜೇಲಿನಲ್ಲಿ ಈ ಕಾರಣಕ್ಕಾಗಿಯೇ ಕೊಳೆಯುತ್ತಿದ್ದಾರೆ. ಕೆಲವರ ಮನೆಯವರೂ ಅಷ್ಟೇ ಘೋರ ಶಿಕ್ಷೆ ಅನುಭವಿಸುತ್ತಿದ್ದಾರೆ, ಇದಕ್ಕೆಲ್ಲ ಕಾರಣ ಆ ಪತ್ನಿ ಆತ್ಮಹತ್ಯೆ ಮಾಡಿಕೊಂಡದ್ದು. ಸುಪ್ರೀಂ ಕೋರ್ಟ್‌ 2024ರ ಡಿಸೆಂಬರ್‌ 12 ರಂದು ಒಂದು ಕೇಸ್‌ ಕುರಿತಾಗಿ ಕಲಂ 306ರ ಕುರಿತು ವಿವರಿಸುತ್ತಾ, ಕೇವಲ ಸತಾಯಿಸಿದರು ಎಂಬ ಸಾಕ್ಷಿ, ಆತ್ಮಹತ್ಯೆಗೆ ಪೋರ್ಸ್ ಮಾಡಲು ಕಾರಣವಾಗದು. ಮರಣಿಸಿದವರು ಅಂಥ ಕಠಿಣಕರ ನಿರ್ಧಾರಕ್ಕೆ ಬರಲು ಆರೋಪಿ ಎಷ್ಟು ಕಾರಣ ಎಂಬುದು ಇಲ್ಲಿ ಮುಖ್ಯ.

ಇಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದೂ ಸರಿಯಾಗಿದೆ. ಏಕೆಂದರೆ ಪತಿಪತ್ನಿ ವಿವಾದದಲ್ಲಿ, ದುರ್ಬಲ ಮನೋಭಾವದ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಪತಿಯತ್ತ ಸೇಡು ತೀರಿಸಿಕೊಳ್ಳುವ ವ್ಯವಹಾರ ಅನಾದಿ ಕಾಲದಿಂದಲೂ ಇದೆ. ಈಗ ಈ ಕಾನೂನಿನ ನೆರವನ್ನು ಹೆಚ್ಚಾಗಿ ಅವಳ ತಾಯಿತಂದೆ ಪಡೆಯುತ್ತಿದ್ದಾರೆ. ಈಗಲೇ ಬಾವಿಯಲ್ಲಿ ಬಿದ್ದು ಬಿಡ್ತೀನಿ ಎನ್ನುವ ಪತ್ನಿಯ ಹೇಳಿಕೆ ಎಂಥ ಪತಿಗಾದರೂ ಭಯ ತರಿಸುತ್ತದೆ. ಬೇಕೆಂದೇ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು, ಕೈಯಲ್ಲಿ ಬೆಂಕಿ ಕಡ್ಡಿ ಗೀರಿಕೊಂಡ ಪತ್ನಿ, ಪತಿಯನ್ನು ತನ್ನ ಮಾತಿನಂತೆ ಸುಲಭವಾಗಿ ಮಣಿಸಬಲ್ಲಳು.

ಆಫೀಸ್‌, ಕಾಲೇಜು, ವಠಾರ, ಇವರೆಲ್ಲರ ಬೈಗುಳ, ಗಲಾಟೆ ಈ ಕಾನೂನನ್ನು ಯಾರ ಮೇಲಾದರೂ ಹೇರಲು ಸುಲಭವಾಗುತ್ತದೆ. ದುರ್ಬಲ ಮನಸ್ಸಿನ ವ್ಯಕ್ತಿ ಆತ್ಮಹತ್ಯೆಗೆ ಬೇಗ ಶರಣಾಗುತ್ತಾನೆ, ಬದುಕಿನ ಕಷ್ಟ ಅನುಭವಿಸಲು ಅವರು ಸಿದ್ಧರಿಲ್ಲ. ಹಿಟ್ಲರ್‌ ನಂಥ ಕ್ರೂರ, ಹಠಮಾರಿ, ಶಕ್ತಿಶಾಲಿ, ಡಿಕ್ಟೇಟರ್‌ ತಾನು ಮುಂದೆ ಸೆರೆಯಾಗಬಾರದು ಎಂಬ ಕಾರಣಕ್ಕೆ 1945ರಲ್ಲಿ ಆತ್ಮಹತ್ಯೆಗೆ ಶರಣಾದ. ಹಾಗೇಂತ ಇಂಗ್ಲೆಂಡ್‌, ರಷ್ಯಾ, ಅಮೆರಿಕಾದ ಸೈನ್ಯವನ್ನು ಅಪರಾಧಿ ಎನ್ನಲಾದೀತೇ? ಎಷ್ಟೋ ಜನ ಅಮಾಯಕರ ಅಮಾನವೀಯ ಸಾವಿಗೆ ಕಾರಣನಾದ ಈ ವ್ಯಕ್ತಿ, ಆತ್ಮಹತ್ಯೆಗೆ ಈಡಾದ ಎಂಬ ಒಂದೇ ಕಾರಣಕ್ಕೆ, ಅಯ್ಯೋ ಪಾಪದವನು, ಎನಿಸಲಾರ.

ಈಗ ಎಲ್ಲೆಲ್ಲೂ ಕಾನೂನಿನ ಬಳಕೆ ಹೇಗಾಗುತ್ತಿದೆ ಎಂದರೆ, ಆತ್ಮಹತ್ಯೆ ಮಾಡಿಕೊಂಡವರೇ ಅತ್ಯುತ್ತಮರು, ಸಾಲ ಕೊಟ್ಟವರದೇ ತಪ್ಪು ಎಂಬಂತೆ. ಪತ್ನಿ ಸತ್ತರೆ ಅವಳ ಪತಿ ಮತ್ತು ಮನೆಯವರೇ ಮಹಾ ಪಾಪಿಗಳು. ಇದಕ್ಕೆ ಬದಲು ಅವಳು ಆ ಮನೆಯಿಂದ ದೂರವಾಗಿ ಬದುಕಬಹುದಿತ್ತಲ್ಲ? ಸುಪ್ರೀಂಕೋರ್ಟ್‌ ಷರತ್ತು ಅನ್ವಯಿಸಿ ಸರಿಪಡಿಸಿರಬಹುದು, ಆದರೆ ಬರೆಯುವ ಪೊಲೀಸ್‌ ಪೇದೆ ಯಾ ಮೊದಲ ಮ್ಯಾಜಿಸ್ಟ್ರೇಟ್‌ ಈ ನಿರ್ಧಾರದ ಬಗ್ಗೆ ಚಿಂತಿಸುವರೆ?

ಹಿಂದಿನ ಹಗರಣಗಳನ್ನು ಗಮನಿಸಿದರೆ, ಅವು ಸಾವಿರಾರು ಇವೆ, ಖಂಡಿತಾ ಇದು ಸರಿಯಲ್ಲ. ಪೊಲೀಸ್‌ ನವರು, ಮೊದಲ ಸರ್ಕಾರಿ ವಕೀಲ ಹಾಗೂ ಮೊದಲ ಮ್ಯಾಜಿಸ್ಟ್ರೇಟ್‌ ಈ ಕೇಸ್‌ ರದ್ದುಪಡಿಸುವುದಿರಲಿ, ಜಮಾನತ್ತು ಕೊಟ್ಟರೂ ಆರೋಪಿಯನ್ನು ಬಿಡಲಾರರು.

ಸುಪ್ರೀಂ ಕೋರ್ಟಿನ ತೀರ್ಪಂತೂ ಅಲ್ಲಿಗೆ ತಲುಪಿದಾಗ ತಾನೇ ತಿಳಿಯುವುದು ? ಅಲ್ಲಿಯವರೆಗೆ ಸತ್ತ ಪತ್ನಿಯ ಪತಿ ಎಷ್ಟು ವರ್ಷ ಜೇಲಿನಲ್ಲಿ ಕೊಳೆಯಬೇಕೋ ಗೊತ್ತಿಲ್ಲ!

ಆಪತ್ತು ಒಡ್ಡುತ್ತಿರುವ ಸಾಕುಪ್ರಾಣಿಗಳು

ಸಾಕುಪ್ರಾಣಿಗಳು ತಮ್ಮ ಮಾಲೀಕರಿಗೆ ಬಹಳ ನೆಮ್ಮದಿ, ಸುರಕ್ಷತೆ ಒದಗಿಸುತ್ತವೆ, ಆದರೆ ಬದಲಾಗುತ್ತಿರುವ ನಮ್ಮ ಜೀವನಶೈಲಿ ನೋಡಿದರೆ, ಈ ಸಾಕುಪ್ರಾಣಿಗಳು ನಿಜಕ್ಕೂ ಆಪತ್ತು ಒಡ್ಡತೊಡಗಿವೆ. ಇದರಲ್ಲಿ ನಾಯಿ ಅಂತೂ ಒಂದು ಟೆರರ್‌ ಆಗಿಹೋಗಿದೆ. ನಾಯಿಗಳ ಸುರಕ್ಷತೆ ಡಾಗ್‌ ಲವರ್ಸ್‌ ಗೆ ಮಾಮೂಲಿ ಜನರಿಗಿಂತ ಮುಖ್ಯ ಆಗಿಹೋಗಿದೆ. ಡಾಗ್‌ ಓನರ್ಸ್‌/ಲವರ್ಸ್‌ ಡಾಗ್ ವಿಕ್ಟಿಮರ್ಸ್‌ ನ್ನು ಹೇಗೆ ಗೋಳಾಡಿಸುತ್ತಿದ್ದಾರೆಂದರೆ, ಮಾಮೂಲಿ ಜನ ನಾಯಿಯ ಆಕ್ರಮಣ ಸಹಿಸದೆ ಬೇರೆ ದಾರಿ ಇಲ್ಲವಾಗಿದೆ.

ಉ. ಭಾರತದ ಹಾಡ್‌ ನಂಥ ನಗರದಲ್ಲಿ ಇಬ್ಬರು ಮಕ್ಕಳ ಮೇಲೆ ಸಿಂಹದಂತೆ ಪಿಟ್‌ ಬುಲ್ ‌ನಾಯಿ ಎರಗಿದಾಗ, ಅದರ ಓನರ್ ಅದನ್ನು ನಿಯಂತ್ರಿಸುವಲ್ಲಿ ಹೈರಾಣಾಗಿಹೋದ. ನಮ್ಮ ದೇಶದಲ್ಲಿ ನಾಯಿಯ ಕುರಿತಾಗಿ ಏನಾದರೂ ಕಾನೂನಿದ್ದರೆ, ಅದು ನಾಯಿಯ ಸುರಕ್ಷತೆಯ ಕುರಿತಾಗಿ ಮಾತ್ರ. ಕಚ್ಚಿಸಿಕೊಂಡವರ ಬಗ್ಗೆ ಏನೂ ಇಲ್ಲ! ಸಾಮಾನ್ಯವಾಗಿ ಡಾಗ್‌ ಅಟ್ಯಾಕ್‌ ನಂತರ, ವಿಕ್ಟಿಮ್ ನೆರೆಮನೆಯವರ ವಿರುದ್ಧ ಕೋರ್ಟಿಗೆ ಅಲೆದಾಡಲು ಸಿದ್ಧನಿರಲಾರ. ಬದಲಿಗೆ ನೆಮ್ಮದಿಯಾಗಿ ಮನೆಯಲ್ಲಿರಲು ಬಯಸುತ್ತಾನೆ.

ಡಾಗ್‌ ಲವರ್ಸ್‌ ಇತ್ತೀಚೆಗೆ ಮನೆಗಳಲ್ಲಿ ಮಕ್ಕಳಿಲ್ಲದ ಕೊರತೆಯನ್ನು ಇಂಥ ಸಾಕುಪ್ರಾಣಿಗಳನ್ನು ಇರಿಸಿಕೊಂಡು, ಅವುಗಳ ಲಾಲನೆಪಾಲನೆಯಲ್ಲಿ ವಾತ್ಸಲ್ಯ ಹಂಚಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಂದಿನ ಮಾರ್ಕೆಟ್‌ ಅಂತೂ ಡಾಗ್‌ ಫುಡ್‌, ಕ್ಲಿನಿಕ್‌, ಆ್ಯಕ್ಸೆಸರೀಸ್‌, ಟ್ರೇನರ್ಸ್‌, ಕಾಸ್ಮೆಟಿಕ್ಸ್/ಟಾಯ್ಲೆಟ್ರೀಸ್‌ ನಿಂದ ತುಂಬಿ ತುಳುಕಾಡುತ್ತಿದೆ. ರಾಜ್ಯ ಸರ್ಕಾರಗಳು, ಮಹಾ ನಗರಪಾಲಿಕೆಗಳು ಅವುಗಳ ರೆಜಿಸ್ಟ್ರೇಶನ್‌ ಗೆ ಹೆಚ್ಚು ಒತ್ತು ನೀಡುತ್ತಿವೆ. ಆದರೆ ಇದರಿಂದ ನಾಯಿಗಳ ಆಕ್ರಮಣಕಾರಿ ಬುದ್ಧಿ ಬದಲಾದೀತೇ? ನಾಯಿ ತೋಳ ಗುಂಪಿಗೆ ಸೇರುತ್ತದಾದರೂ, ಸಾಕುಪ್ರಾಣಿಯಾಗಿ ಜನಪ್ರಿಯತೆ ಗಳಿಸಿದೆ. ಹೀಗಾಗಿ ಅದಕ್ಕೆ ಹಳೆಯ ಕಾಡುಬುದ್ಧಿ ಎಲ್ಲಿ ಹೋದೀತು? ಇಂಥವನ್ನು ಪಾಶ್‌ ಬಂಗಲೆಗಳಲ್ಲಿ 4 ಗೋಡೆ, ಕಾಂಪೌಂಡ್‌ ಗಳಲ್ಲಿ ಇರಿಸಿಕೊಂಡ ಮಾತ್ರಕ್ಕೆ ಅವು ಬದಲಾದೀತೇ? ಇದರಿಂದ ನೆರೆಹೊರೆಯವರಿಗೆ ಆಪತ್ತು ತಪ್ಪಿದ್ದಲ್ಲ. ಮನ ಬಂದಾಗ ಕಚ್ಚುವುದು, ಸದಾ ಬೊಗಳುತ್ತಾ ಇರಿಟೇಟ್‌ ಮಾಡೋದು, ಬಯಸಿದಾಗ ರಾತ್ರಿ ಪೂರ್ತಿ ಊಳಿಡುತ್ತಾ ಎಲ್ಲರ ನಿದ್ದೆ ಕೆಡಿಸುತ್ತವೆ. ಯಾವ ಮಾಲೀಕರೂ ಅದರ ಈ ಹುಟ್ಟುಗುಣ ಬದಲಾಯಿಸಲು ಸಾಧ್ಯವಿಲ್ಲ. ಇಷ್ಟು ಮಾತ್ರವಲ್ಲ, ನಾಯಿಗಳ ಮಲಮೂತ್ರ ಎಲ್ಲೆಂದರಲ್ಲಿ ರಸ್ತೆ ಬದಿ ಇಟ್ಟಾಡುತ್ತಿರುತ್ತದೆ. ಕೆಲವೊಬ್ಬ ಸಭ್ಯ ಮಾಲೀಕರು ಮಾತ್ರವೇ ಇದನ್ನು ತಕ್ಷಣ ಕ್ಲೀನ್‌ ಮಾಡಿಸುತ್ತಾರೆ, ಉಳಿದವರು ಅದನ್ನು ತೆಗೆಸಿ ರಸ್ತೆ ಮೂಲೆಗೆ ಪೇರಿಸುತ್ತಾರೆ, ಅದೂ ತೆಗೆಯುವ ಸ್ಥಿತಿಯಲ್ಲಿದ್ದರೆ! ಒಳ್ಳೆ ಮನೆಗಳ ಏರಿಯಾದಲ್ಲಿ, ಬಹು ಮಹಡಿ ಕಟ್ಟಡಗಳ ಮೂಸೆ, ಲಿಫ್ಟ್, ಛಾವಣಿಗಳ ಪಾರ್ಕಿಂಗ್‌ ಪ್ಲೇಸ್‌ ಗಳಲ್ಲಿ ಇವುಗಳ ಮಲಮೂತ್ರದ ಘನಘೋರ ಹಿಂಸೆ ಸಹಿಸಲಾಗದು. ನಾಯಿ ಇಲ್ಲದರ ಪಾಡು, ನಿಜಕ್ಕೂ ನಾಯಿಪಾಡು!

ನಾಯಿಗಳಿಗೆ ಹಾಯಾಗಿರಲು ದೊಡ್ಡ ಮನೆಗಳ ವ್ಯವಸ್ಥೆ ಇರಬೇಕು, ಮುಖ್ಯವಾಗಿ ಅದರಲ್ಲಿ ಲಾನ್‌ ಇರಬೇಕು. ಸಣ್ಣ ಫ್ಲಾಟ್ಸ್, 2-3 ಮಹಡಿಗಳ ಮನೆಗಳು, ಇಕ್ಕಟ್ಟಾದ ಗಲ್ಲಿಗಳಲ್ಲಿ ವಾಸಿಸುವ ನಾಯಿಗಳಿಗೆ ಮಿತಿಮೀರಿದ ಕೋಪ ಇದ್ದೇ ಇರುತ್ತದೆ. ಹೀಗಾಗಿ ಇಂಥ ಓನರ್ಸ್‌ ಗೆ ಇತರರ ನೆಮ್ಮದಿ ಹಾಳು ಮಾಡುವ, ಅವರ ಓಣಿಗಳ ಜಾಗ ಕಬಳಿಸಿಕೊಳ್ಳುವ ಹಕ್ಕು ಎಲ್ಲಿದೆ? ಇದು ಇತರರ ಹಕ್ಕಿನ ಮೇಲೆ ನಿಜ ಆಕ್ರಮಣವೇ ಸರಿ. ನಾಯಿ ಅಂದ್ರೆ ಬಲು ಪ್ರೀತಿ, ಮುದ್ದು, ಮುಚ್ಚಟೆಯಾಗಿ ಮಡಿಲಿಗೆ ಔಚಿಕೊಳ್ಳಬೇಕು, ಒಂಟಿತನ ಓಡಿಸುತ್ತೆ…. ಎಲ್ಲಾ  ಸರಿ…. ಆದರೆ ಅವು ಪರರಿಗೆ ಆಪತ್ತು ಆಗಬಾರದು!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ