ಹಿಂಡಲಗಾ ಜೈಲಿನ ಕೈದಿಯೊಂದಿಗೆ ಸರಸ, ಸಲ್ಲಾಪದ ಆರೋಪ, PSI ಜಯಶ್ರೀ ಅಮಾನತು

ಪೊಲೀಸ್ ಇಲಾಖೆಯಂತಹ ಶಿಸ್ತು, ನಿಯಮ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಮಹತ್ವವಿರುವ ವ್ಯವಸ್ಥೆಯಲ್ಲಿ ಅಧಿಕಾರಿಯೊಬ್ಬರು ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿರುವುದು ಇದೀಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಹಿಂಡಲಗಾ ಕೇಂದ್ರ ಕಾರಾಗೃಹದ ಕೈದಿಯೊಂದಿಗೆ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಜಯಶ್ರೀ ಅವರದ್ದು ಎನ್ನಲಾದ ವಿಡಿಯೋ ಮತ್ತು ಆಡಿಯೋ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ವೈಯಕ್ತಿಕ ಸಂಬಂಧದ ಆರೋಪಕ್ಕಿಂತಲೂ ಗಂಭೀರವಾಗಿರುವುದು ಜೈಲು ಭದ್ರತೆ, ಪೊಲೀಸ್ ಅಧಿಕಾರದ ದುರುಪಯೋಗ, ಕೈದಿಗೆ ಮೊಬೈಲ್ ಸೌಲಭ್ಯ ದೊರೆತಿರುವುದು ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ಕೇಳಿಬಂದಿರುವ ಆರೋಪಗಳು.
ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್ ಹೇಗೆ?

ವರದಿಗಳ ಪ್ರಕಾರ, ತುಮಕೂರಿನ ಕುಣಿಗಲ್ ಮೂಲದ ಹಾಗೂ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾಯಿಕುಮಾರ್ ಅಲಿಯಾಸ್ ಸುರೇಶ್ ಅವರೊಂದಿಗೆ PSI ಜಯಶ್ರೀ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ವಿಡಿಯೋ ಕಾಲ್ ಮೂಲಕ ಸಂಪರ್ಕವಿತ್ತು ಎಂಬ ಆರೋಪಗಳು ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದ ಖಾಸಗಿ ವಿಡಿಯೋಗಳು ಹಾಗೂ ಆಡಿಯೋ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಜೈಲಿನಲ್ಲಿದ್ದ ಕೈದಿಗೆ ಮೊಬೈಲ್ ಸೌಲಭ್ಯ ಹೇಗೆ ದೊರೆಯಿತು ಎಂಬ ಪ್ರಶ್ನೆಯೂ ಈ ಪ್ರಕರಣದಲ್ಲಿ ಪ್ರಮುಖವಾಗಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಜೈಲು ಎಂಬುದು ಸಾಮಾನ್ಯ ಸ್ಥಳವಲ್ಲ. ಕೈದಿಗಳ ಸಂವಹನ, ಮೊಬೈಲ್ ಬಳಕೆ, ಭೇಟಿಗಳು ಹಾಗೂ ಹೊರಗಿನ ಸಂಪರ್ಕಗಳಿಗೆ ಕಟ್ಟುನಿಟ್ಟಿನ ನಿಯಮಗಳಿರುತ್ತವೆ. ಹೀಗಾಗಿ ಒಬ್ಬ ಪೊಲೀಸ್ ಅಧಿಕಾರಿಗೂ ಕೈದಿಗೂ ಇಂತಹ ಸಂಪರ್ಕವಿತ್ತು ಎಂಬ ಆರೋಪವೇ ಇಲಾಖಾ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಹಣಕಾಸಿನ ವ್ಯವಹಾರಗಳ ಆರೋಪ

ಈ ಪ್ರಕರಣ ಕೇವಲ ವೈಯಕ್ತಿಕ ಸಂಬಂಧದ ಆರೋಪಕ್ಕೆ ಸೀಮಿತವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಕೈದಿಯ ಬ್ಯಾಂಕ್ ಖಾತೆ ಹಾಗೂ ಆತನ ತಾಯಿಯ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆಯಾಗಿರುವುದಕ್ಕೆ ಸಂಬಂಧಿಸಿದ ಚಾಟ್ಗಳು ತನಿಖೆಯಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಕೈದಿಗೆ ಸೇರಿದ ಸ್ಕೂಟರ್ ಮತ್ತು ಸ್ವಿಫ್ಟ್ ಕಾರನ್ನು ಜಯಶ್ರೀ ಅವರ ಹೆಸರಿಗೆ ವರ್ಗಾಯಿಸಲಾಗಿದೆ ಎಂಬ ದಾಖಲೆಗಳೂ ತನಿಖೆಯ ಭಾಗವಾಗಿವೆ ಎಂದು ವರದಿಯಾಗಿದೆ. ಇವು ಸತ್ಯವೆಂದು ತನಿಖೆಯಲ್ಲಿ ದೃಢಪಟ್ಟರೆ, ಪ್ರಕರಣದ ಸ್ವರೂಪ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಏಕೆಂದರೆ ಆಗ ಇದು ಕೇವಲ ವೈಯಕ್ತಿಕ ಸಂಬಂಧದ ವಿಚಾರವಾಗದೆ, ಹಣಕಾಸು ವ್ಯವಹಾರ ಮತ್ತು ಅಧಿಕಾರದ ದುರುಪಯೋಗದ ಪ್ರಶ್ನೆಯನ್ನೂ ಒಳಗೊಂಡಂತಾಗುತ್ತದೆ.
ಎನ್ಕೌಂಟರ್ ಬಗ್ಗೆ ಆಡಿಯೋ?

ಈ ವಿಡಿಯೋ ವೈರಲ್ ಆದ ನಂತರ ಮತ್ತೊಂದು ಆಡಿಯೋ ಸಂಭಾಷಣೆ ಕೂಡ ಬೆಳಕಿಗೆ ಬಂದಿರುವುದಾಗಿ ವರದಿಯಾಗಿದೆ. ಈ ಆಡಿಯೋದಲ್ಲಿ ಸಾಯಿಕುಮಾರ್ನನ್ನು ಎನ್ಕೌಂಟರ್ ಮಾಡಿಸುವ ಕುರಿತು ಜಯಶ್ರೀ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಆಡಿಯೋದ ನೈಜತೆ, ಅದರಲ್ಲಿರುವ ಧ್ವನಿ ಯಾರದ್ದು ಮತ್ತು ಸಂಭಾಷಣೆಯ ಸಂಪೂರ್ಣ ಹಿನ್ನೆಲೆ ಏನು ಎಂಬುದು ತನಿಖೆಯಿಂದಲೇ ಖಚಿತವಾಗಬೇಕಿದೆ. ಇಂತಹ ಆರೋಪ ಸಾಬೀತಾದರೆ ಅದು ಅತ್ಯಂತ ಗಂಭೀರ ಸ್ವರೂಪ ಪಡೆಯುತ್ತದೆ. ಏಕೆಂದರೆ ಪೊಲೀಸ್ ಅಧಿಕಾರಿಯೊಬ್ಬರ ಮಾತಿನಲ್ಲಿ ‘ಎನ್ಕೌಂಟರ್’ ಕುರಿತು ಉಲ್ಲೇಖವಿರುವುದು ಸ್ವತಃ ತನಿಖೆಗೆ ಒಳಪಡಬೇಕಾದ ವಿಷಯವಾಗಿದ್ದು, ತಮಗೆ ಬೇಡವಾದವರನ್ನು, ಪೋಲೀಸರು ಅಷ್ಟು ಸುಲಭವಾಗಿ ಎನ್ಕೌಂಟರ್ ಮಾಡಿಸ ಬಹುದಾ? ಎಂಬ ಆತಂಕ ಜನಸಾಮಾನ್ಯರಿಗೆ ಮೂಡುತ್ತಿದೆ.





