ಬಾಣಲೆಯಿಂದ ಒಲೆಗೆ ಬಿದ್ದ ಕಥೆ
ಬಹುಶಃ ಬಾಣಲೆಯಿಂದ ಒಲೆಗೆ ಬಿದ್ದ ಹಾಗಾಯ್ತು ಎಂಬ ಈ ನೀತಿ ಕಥೆ ಬಹುತೇಕ ಎಲ್ಲರಿಗೂ ತಿಳಿದೇ ಇರುತ್ತದೆ.
ಅದೊಂದು ಹಳ್ಳಿಯಲ್ಲಿ ಇಲಿಗಳ ಕಾಟ ಹೆಚ್ಚಾಗಿತ್ತು. ಅದನ್ನು ಪರಿಹರಿಸಲು ಆ ಹಳ್ಳಿಯ ಮುಖಂಡರೆಲ್ಲಾ ಚರ್ಚಿಸಿ ಇಲಿಗಳನ್ನು ಹಿಡಿಯಲು ನೂರಾರು ಬೆಕ್ಕುಗಳನ್ನು ತರಿಸಿದರು. ಇಲಿಗಳ ಸಮಸ್ಯೆ ಕಡಿಮೆಯಾದರೂ, ಬೆಕ್ಕುಗಳಿಗೆ ಹಾಲಿನ ಸಮಸ್ಯೆ ಎದುರಾಯಿತು.
ಆಗ ಬೆಕ್ಕುಗಳ ಹಾಲಿಗಾಗಿ ಹಸುಗಳನ್ನು ತರಿಸಿದರು. ಹಸುಗಳಿಂದ ಮೇವು ಕೊರತೆ, ಸಗಣಿ–ಮೂತ್ರದ ಗಲೀಜು, ನೊಣ–ಸೊಳ್ಳೆಗಳ ಕಾಟ ಶುರುವಾಯಿತು. ಅದನ್ನು ನಿಯಂತ್ರಿಸಲು ಕಾಡುಹಂದಿ ಹಾಗೂ ಪಕ್ಷಿಗಳನ್ನು ತರಿಸಿದರೆ, ಅವುಗಳು ಆ ರೈತರ ಬೆಳೆಗಳನ್ನೇ ನಾಶಮಾಡತೊಡಗಿದವು.
ಕೊನೆಗೆ, ಮೊದಲು ಕೇವಲ ಇಲಿಗಳ ಕಾಟವಿದ್ದ ಹಳ್ಳಿ, ಸಮಸ್ಯೆಗೆ ಅವಸರದ ಪರಿಹಾರ ಹುಡುಕುತ್ತಾ ಇನ್ನಷ್ಟು ದೊಡ್ಡ ಸಮಸ್ಯೆಗಳ ಗೂಡಾಯಿತು. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲು, ಆ ಪರಿಹಾರದಿಂದ ಮುಂದೆ ಉಂಟಾಗಬಹುದಾದ ಪರಿಣಾಮಗಳನ್ನೂ ಯೋಚಿಸಬೇಕು. ಇಲ್ಲದಿದ್ದರೆ “ಬಾಣಲೆಯಿಂದ ಒಲೆಗೆ ಬಿದ್ದ ಹಾಗೆ” ಆಗುತ್ತದೆ. ಒಂದು ಸಮಸ್ಯೆಯನ್ನು ಪರಿಹರಿಸಲು ಹೋಗಿ ಮತ್ತಷ್ಟು ಸಮಸ್ಯೆಗಳನ್ನು ಮೈ ಮೇಲೆ ಹಾಕಿಕೊಂಡರು ಎನ್ನುವುದು ಈ ಕಥೆಯ ಸರಾಂಶವಾಗಿದ್ದು, ಈ ವಿಷಯ ಏಕಪ್ಪಾ ಎಂದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸಲುವಾಗಿ ಪ್ರಸ್ತುತ ಸರ್ಕಾರೆ ಬೆಂಗಳೂರಿನ ಕೆಲವೆಡೆಯಲ್ಲಿ ಸುರಂಗ ಮಾರ್ಗ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದು ಅದರ ಪರ/ವಿರೋಧವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಅವುಗಳ ಸಾಧಕ ಬಾಧಕಗಳನ್ನು ತಿಳಿಯೋಣ ಬನ್ನಿ,
ಗಾರ್ಡನ್ ಸಿಟಿ ಇಂದ ಟ್ರಾಫಿಕ್ ಜಾಮ್ ಸಿಟಿ
‘Walk in Lalbagh. Walk for Lalbagh’ ಎಂಬ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ನಾಗರಿಕರು, ಪರಿಸರ ಹೋರಾಟಗಾರರು, ವಾಕರ್ಸ್ ಅಸೋಸಿಯೇಷನ್ಗಳು, ನಿವಾಸಿಗಳ ಸಂಘಟನೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಭಾಗವಹಿಸಿದರು. ವರದಿಗಳ ಪ್ರಕಾರ 5,000ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಕೇಂದ್ರಬಿಂದು ಎರಡು ಪ್ರಮುಖ ವಿಷಯಗಳು:
- ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕ–2026
- ಹೆಬ್ಬಾಳ–ಸಿಲ್ಕ್ಬೋರ್ಡ್ ಸುರಂಗ ರಸ್ತೆ ಯೋಜನೆ
ಆದರೆ ಈ ಎರಡೂ ವಿಷಯಗಳ ಹಿಂದೆ ಕೇಳಿಬರುತ್ತಿರುವ ದೊಡ್ಡ ಪ್ರಶ್ನೆ ಒಂದೇ, “ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹರಿಸುವ ಹೆಸರಿನಲ್ಲಿ ನಗರದ ಹಸಿರು ಪ್ರದೇಶಗಳನ್ನೇ ಬಲಿಕೊಡಬೇಕೇ?”
5% ಪಾರ್ಕ್ ಭೂಮಿ ಬಳಸಲು ಅವಕಾಶ ನೀಡಿದ ವಿಧೇಯಕವೇನು?
1975ರ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆಯಲ್ಲಿ ಉದ್ಯಾನವನಗಳ ಭೂಮಿಯನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸುವುದಕ್ಕೆ ಕಠಿಣ ನಿರ್ಬಂಧವಿತ್ತು. ಆದರೆ 2026ರ ತಿದ್ದುಪಡಿ ಮೂಲಕ, ಸರ್ಕಾರಿ ಉದ್ಯಾನವನ ಅಥವಾ ಉದ್ಯಾನದ ಒಟ್ಟು ವಿಸ್ತೀರ್ಣದ ಗರಿಷ್ಠ 5% ಭೂಮಿಯನ್ನು ನಿರ್ದಿಷ್ಟ ಸಾರ್ವಜನಿಕ ಮೂಲಸೌಕರ್ಯ ಮತ್ತು ಸಾರ್ವಜನಿಕ ಉಪಯುಕ್ತತಾ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಹೈಲೆವೆಲ್ ಸಮಿತಿಯ ಶಿಫಾರಸು ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ಈ ವಿಧೇಯಕವನ್ನು ಆಗಸ್ಟ್ 24ರಂದು ವಿಧಾನಮಂಡಲದ ಎರಡೂ ಸದನಗಳಲ್ಲಿ ಅಂಗೀಕರಿಸಲಾಯಿತು. ಪ್ರತಿಪಕ್ಷದ ಪ್ರತಿಭಟನೆಯ ನಡುವೆ ವಿಧೇಯಕ ಅಂಗೀಕಾರವಾಗಿದ್ದು, ಅದರ ಬಗ್ಗೆ ಸಮರ್ಪಕ ಚರ್ಚೆ ನಡೆದಿಲ್ಲ ಎಂಬ ಆರೋಪವೂ ಕೇಳಿಬಂದಿದೆ.





