ಕನ್ನಂಬಾಡಿ ಕಟ್ಟೆಯಿಂದ ಮೈಸೂರು ಮೀಸಲಾತಿಯವರೆಗೆ — ಸರ್. ಎಂ. ವಿಶ್ವೇಶ್ವರಯ್ಯನವರ ನಿಜವಾದ ಪಾತ್ರವೇನು?
“ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ… ಅವರು ಮೈಸೂರು ಅರಸರ ಬಳಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಸಾಮಾನ್ಯ ಇಂಜಿನಿಯರ್ ಅಷ್ಟೇ… ಮೀಸಲಾತಿಯನ್ನು ಮೊದಲು ಬ್ರಾಹ್ಮಣರಿಗಾಗಿಯೇ ತರಲಾಗಿತ್ತು… ಮೀಸಲಾತಿಯ ಮೊತ್ತಮೊದಲ ಫಲಾನುಭವಿಗಳು ಸರ್. ಎಂ. ವಿಶ್ವೇಶ್ವರಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಾಹ್ಮಣರಿಗೆಂದೇ 25% ಮೀಸಲಾತಿ ತಂದಿದ್ದರು” ಇಂತಹ ಹಸೀ ಸುಳ್ಳುಗಳನ್ನು ಎಸ್.ಡಿ.ಪಿ.ಐ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ಪ್ರಸಾದ್ ಮತ್ತು ಮೊಹಿಯುದ್ದೀನ್ ರೌಫ್ (‘ರಾ ಚಿಂತನ್’ ಎಂಬ ಹೆಸರಿನಲ್ಲಿ ಹಿಂದೂಗಳನ್ನು ಮರಳು ಮಾಡುತ್ತಿರುವ ವ್ಯಕ್ತಿ) ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿರುವ ಕಾಲದಲ್ಲಿ ಕನ್ನಂಬಾಡಿ ಮತ್ತು ವೀಸಲಾತಿಯ ಕುರಿತಾಗಿ ವಿಶ್ವೇಶ್ವರಯ್ಯನವರ ಪಾತ್ರದ ವಾಸ್ತವತೆ ಇದೋ ನಿಮಗಾಗಿ
“ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ” ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಕನ್ನಂಬಾಡಿ ಅಣೆಕಟ್ಟಿನ ಇತಿಹಾಸದ ಪುಟಗಳನ್ನು ಒಂದೊಂದಾಗಿ ತಿರುವಿ ನೋಡಿದಾಗ, ವಿಶ್ವೇಶ್ವರಯ್ಯನವರ ಪಾತ್ರವನ್ನು ಸಂಪೂರ್ಣವಾಗಿ ನಿರಾಕರಿಸುವುದು ಎಷ್ಟು ಸರಿಯಾಗಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ಇದು ಕೇವಲ ಒಂದು ಅಣೆಕಟ್ಟಿನ ಕಥೆಯಲ್ಲ. ಇದು ಮೈಸೂರು ಸಂಸ್ಥಾನದ ದೂರದೃಷ್ಟಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ ಆಡಳಿತ, ಸರ್. ಎಂ. ವಿಶ್ವೇಶ್ವರಯ್ಯನವರ ತಾಂತ್ರಿಕ ಪ್ರತಿಭೆ, ಸಾವಿರಾರು ಕಾರ್ಮಿಕರ ಬೆವರು ಮತ್ತು ಜನರ ಶ್ರಮದಾನದ ಕಥೆ. ಮತ್ತೊಂದೆಡೆ, ಇದೇ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನದಲ್ಲಿ ನಡೆದ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಚರ್ಚೆಯೂ ಅತ್ಯಂತ ಕುತೂಹಲಕಾರಿ ಅಧ್ಯಾಯವಾಗಿದೆ. ಹಾಗಾದರೆ ಮೊದಲು ಕನ್ನಂಬಾಡಿ ಕಟ್ಟೆಯ ಕಥೆಯನ್ನು ತಿಳಿಯೋಣ.
ಕಾವೇರಿ ಇದ್ದರೂ ನೀರಿಗಾಗಿ ಪರದಾಡುತ್ತಿದ್ದ ಮೈಸೂರು–ಮಂಡ್ಯ
ಇಂದು ಕಾವೇರಿ ಎಂದರೆ ಮಂಡ್ಯ, ಮೈಸೂರು, ಕೃಷಿ, ಹಸಿರು ಹೊಲಗಳು, KRS ಮತ್ತು ನೀರಾವರಿ ಎಂಬ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿದ್ದರೂ, ಮಳೆಗಾಲ ಮುಗಿದ ನಂತರ ಮೈಸೂರು ಮತ್ತು ಮಂಡ್ಯ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಜನರು ಪರದಾಡುವಂತಹ ಪರಿಸ್ಥಿತಿ ಇತ್ತು. 1875–76ರಲ್ಲಿ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಸಂಭವಿಸಿದ ತೀವ್ರ ಬರಗಾಲ ಮೈಸೂರು ಸಂಸ್ಥಾನವನ್ನು ತತ್ತರಿಸಿಸಿತ್ತು. ಆ ಬರಗಾಲದಲ್ಲಿ ಮೈಸೂರು ಸಾಮ್ರಾಜ್ಯದ ಜನಸಂಖ್ಯೆಯ ಐದನೇ ಒಂದು ಭಾಗ ನಾಶವಾಯಿತು ಎಂಬ ಉಲ್ಲೇಖಗಳು ದೊರೆಯುತ್ತವೆ. ಇಂತಹ ಭೀಕರ ಅನುಭವದ ನಂತರ ಮೈಸೂರು ಸಂಸ್ಥಾನಕ್ಕೆ ಒಂದು ವಿಷಯ ಸ್ಪಷ್ಟವಾಯಿತು. ಮಳೆ ಬಂದಾಗ ಮಾತ್ರ ನೀರು ಸಿಗುವ ವ್ಯವಸ್ಥೆಯಿಂದ ಜನರನ್ನು ಶಾಶ್ವತವಾಗಿ ರಕ್ಷಿಸಲು ಸಾಧ್ಯವಿಲ್ಲ. ನೀರನ್ನು ಸಂಗ್ರಹಿಸಬೇಕು. ಅದನ್ನು ವರ್ಷಪೂರ್ತಿ ಕೃಷಿಗೆ ಬಳಸಬೇಕು. ಕುಡಿಯುವ ನೀರಿಗೂ ಬಳಸಬೇಕು. ಅಗತ್ಯವಿದ್ದರೆ ವಿದ್ಯುತ್ ಉತ್ಪಾದನೆಗೂ ಬಳಸಬೇಕು. ಈ ದೂರದೃಷ್ಟಿಯ ಚಿಂತನೆಯೇ ಮುಂದೆ ಕನ್ನಂಬಾಡಿ ಅಣೆಕಟ್ಟಿನ ರೂಪ ಪಡೆಯಿತು.
ಕನ್ನಂಬಾಡಿ ಯೋಜನೆಯ ಕನಸು ಮೊದಲು ಯಾರದ್ದು?
1890ರಲ್ಲಿಯೇ ಮೈಸೂರು ಮಹಾರಾಜರು ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಜಲಾಶಯ ನಿರ್ಮಿಸುವ ಬಗ್ಗೆ ಆಸಕ್ತಿ ತೋರಿದ್ದರು. ಅದಕ್ಕಾಗಿ ಕ್ಯಾಪ್ಟನ್ ಡೇವ್ಸ್ ಅವರ ನೇತೃತ್ವದಲ್ಲಿ ಇಂಜಿನಿಯರ್ಗಳ ತಂಡವನ್ನು ರಚಿಸಲಾಯಿತು. ಅಂದಿನ ಯೋಜನೆಯ ಪ್ರಕಾರ ಅಣೆಕಟ್ಟಿನ ಆರಂಭಿಕ ಎತ್ತರವನ್ನು ಸುಮಾರು 70 ಅಡಿ ಇಟ್ಟು, ನಂತರದ ಹಂತದಲ್ಲಿ ಅದನ್ನು 115 ಅಡಿಗಳಿಗೆ ವಿಸ್ತರಿಸುವ ಸಾಧ್ಯತೆಯನ್ನು ಪರಿಗಣಿಸಲಾಗಿತ್ತು. ವಿಸ್ತೃತ ಸಮೀಕ್ಷೆ ಮತ್ತು ಪರಿಶೀಲನೆಯ ನಂತರ ಯೋಜನೆಗೆ 1905ರ ಏಪ್ರಿಲ್ 25ರಂದು ಅನುಮೋದನೆ ದೊರೆಯಿತು.





