ಶಾಸ್ತ್ರೀಯ ಸಂಗೀತದ ನಂತರ ನಮ್ಮ ದೇಶದಲ್ಲಿ ಅತೀ ಪ್ರಸಿದ್ಧವಾದ ಶಾಸ್ತ್ರೀಯ ನೃತ್ಯಕಲೆ ಎಂದರೆ ಭರತನಾಟ್ಯ. ಅಮೋಘ ಕಲೆಯ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…….!

ಇಂದ್ರಾದಿ ದೇವತೆಗಳು ತಮ್ಮ ಬಿಡುವಿನ ವೇಳೆ ಕಳೆಯಲು ಯಾವುದಾದರೂ ಒಂದು ವಿಧಾನ ಹೇಳಿಕೊಡಬೇಕೆಂದು ಬ್ರಹ್ಮನನ್ನು ಪ್ರಾರ್ಥಿಸಿದರು. ಆಗ ನಾಟ್ಯವೇದನೆಂಬ ವೇದ ರಚಿಸಿ ಭರತ ಮುನಿಗೆ ಹೇಳಿದನೆಂದು ಆತ ಗಂಧರ್ವ ಅಪ್ಸರೆಯರಿಗೆ ಹೇಳಿಕೊಟ್ಟನೆಂದು, ಇವರೆಲ್ಲಾ ಸೇರಿ ಶಿವನ ಎದುರಿಗೆ ನರ್ತಿಸಿದಾಗ ಶಿವ ತೃಪ್ತನಾಗಿ ತನ್ನ ಗಣಗಳಿಗೂ ಬೋಧಿಸುವಂತೆ ಹೇಳಿದನಂತೆ. ಶಿವನ ತಾಂಡವ ಗಂಡು ನೃತ್ಯ, ಪಾರ್ವತಿಯ ಲಾಸ್ಯ ಹೆಣ್ಣು ನೃತ್ಯ. ಹೀಗೆ ದಂತ ಕಥೆ ನಮ್ಮ ದೇಶದ ಉದ್ದ ಅಗಲಕ್ಕೂ ಪಸರಿಸಿ ಭರತನಾಟ್ಯ ಎನಿಸಿದೆ.

ಭರತನಾಟ್ಯ ದಕ್ಷಿಣ ಭಾರತದ ಒಂದು ಪಾರಪಂರಿಕ ನೃತ್ಯ ಕಲೆ. ಭರತ ಮುನಿಯಿಂದ ರಚಿಸಲ್ಪಟ್ಟಿರುವುದರಿಂದ `ಭರತನಾಟ್ಯ’ ಎಂದು ಕರೆಯಲ್ಪಟ್ಟಿತು. ಇದು ಒಂದು ಶಾಸ್ತ್ರೀಯ ನೃತ್ಯ ಪ್ರಕಾರವಾಗಿದ್ದು, ದಕ್ಷಿಣ ಭಾರತದಲ್ಲಿ ತಮಿಳುನಾಡು ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇದು ಹೆಚ್ಚು ಮಹಿಳೆಯರಿಂದ ಮಾಡುವ ನೃತ್ಯವಾಗಿದೆ.

ಈ ನೃತ್ಯಕ್ಕೆ ಪ್ರಾಚೀನ ಚಿದಂಬರ ದೇಗುಲದ ಶಿಲ್ಪಗಳೇ ಸ್ಛೂರ್ತಿ. ಇದಕ್ಕೆ ಶಾಸ್ತ್ರೀಯ ನೆಲೆಗಟ್ಟನ್ನು ಒದಗಿಸಿದವರು ತಂಜಾವೂರಿನ ನಾಲ್ಕು ಸಹೋದರರು.

ಬೆಳೆದು ಬಂದ ಪರಿ

ಭರತನಾಟ್ಯ ಎಂದರೆ ಭಾವ ರಾಗ ತಾಳವನ್ನು ವ್ಯಕ್ತಪಡಿಸುವ ನೃತ್ಯ ಎಂದರ್ಥ. ಧಾರ್ಮಿಕ ಅನುಭವ ಆಳಗೊಳಿಸುವ ಉದ್ದೇಶದಿಂದ ದೇವಾಲಯಗಳಲ್ಲಿ ಬೇರುಬಿಟ್ಟಿತು. ದಕ್ಷಿಣ ಭಾರತದ ದೇವಾಲಯಗಳಲ್ಲಿ ಭಗವಂತನಿಗೆ ಸೇವೆ ಮಾಡಲು  ಮೀಸಲಾಗಿರುವ ನೃತ್ಯ ಮಾಡುವ ಮಹಿಳೆಯರು ದೇವದಾಸಿಗಳೆಂದು ಕರೆಯಲ್ಪಟ್ಟರು. ರಾಜ ಮಹಾರಾಜರ ಕಾಲದಲ್ಲೂ ನೃತ್ಯ ಮಾಡುವ ಮಹಿಳೆಯರಿಗೆ ವಿಶೇಷ ಗೌರವವಿತ್ತು. ಅವರು ಹೆಚ್ಚಿನ ಪ್ರೋತ್ಸಾಹ ಕೊಟ್ಟರು.

ಹೊಯ್ಸಳರ ದೊರೆ ವಿಷ್ಣುವರ್ಧನನ ರಾಣಿ ಶಾಂತಲೆ ನಾಟ್ಯ ಪ್ರವೀಣೆಯಾಗಿದ್ದಳೆಂದು ಬೇಲೂರಿನ ಶಿಲ್ಪಕಲೆಗೆ ಅವಳೇ ಸ್ಛೂರ್ತಿ. 23ನೇ ಶತಮಾನದ ದೇವಾಲಯಗಳ ಶಿಲ್ಪ ವಿನ್ಯಾಸದಲ್ಲಿ ಈ ಕಲೆಯನ್ನು ಗುರುತಿಸಬಹುದು. ತಂಜಾವೂರಿನ ರಾಜ ರಾಜ ಚೋಳ, ಬೃಹದೇಶ್ವರ ದೇವಾಲಯದ ಸಭಾಂಗಣದಲ್ಲಿ ಪೂಜಾ ಸಮಯದ ನರ್ತನಕ್ಕಾಗಿ 400 ನರ್ತಕಿಯರನ್ನು ನೇಮಿಸಿದ್ದನಂತೆ!

IMG20240229195632

ಬೇಲೂರಿನ ಶಿಲಾ ವೈಭವ

ಚಿದಂಬರದ ತಾಂಡವ ಭಂಗಿಗಳು ಬೇಲೂರಿನ ಮದನಿಕೆ ವಿಗ್ರಹಗಳು ಈ ನಾಟ್ಯದ ಬಗ್ಗೆ ಸೂಚಿಸುತ್ತವೆ. ಭರತನಾಟ್ಯಕ್ಕೆ ಇಂದು ತಮಿಳುನಾಡಿನ ತಂಜಾವೂರು ಮತ್ತು ಕಾಂಚಿಪುರಗಳು ಕೇಂದ್ರವಾಗಿವೆ.

ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾದರೆ ಕಲಾವಿದನ ದೇಹ ಹಾಗೂ ಇಂದ್ರಿಯಗಳು ಹತೋಟಿಯಲ್ಲಿ ಇರಬೇಕು. ಭರತನಾಟ್ಯ ಅಭ್ಯಾಸದಲ್ಲಿ ತಾಳ, ಹೆಜ್ಜೆ, ಹಸ್ತ ಮುದ್ರೆ, ಮುಖಭಾವಗಳಿಗೆ ಹೆಚ್ಚಿನ ಗಮನ ಕೊಡಬೇಕು. ಮುದ್ರೆ ಮತ್ತು ಮುಖಚಲನೆಯಿಂದ ಒಂದು ವಿಷಯದ ಬಗ್ಗೆ ಅಭಿನಯದ ರೂಪವಾಗಿ ನರ್ತಿಸಿದರೆ ನೃತ್ಯವಾಗುತ್ತದೆ. ಉಡುಪು ಸರಳಾಗಿರಬೇಕು.

ಆಂಗಿಕ ಅಭಿವ್ಯಕ್ತಿ

ದೇಹದ ಆಕೃತಿಗೆ ಹಾಗೂ ಮುಖ ಲಕ್ಷಣದ ಅಂದಕ್ಕೆ ಮೆರಗು ಕೊಡುವಂತಿರಬೇಕು. ಭರತನಾಟ್ಯದಲ್ಲಿ ಎಂಟು ರಸಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಸ್ಥಾಯಿಭಾವದಿಂದ ಒಂದೊಂದು ರಸ ಉತ್ಪನ್ನವಾಗುತ್ತದೆ. ಒಂದೊಂದು ರಸಕ್ಕೆ ಒಂದೊಂದು ಅಧಿದೇವತೆ ಹಾಗೂ ಒಂದೊಂದು ಬಣ್ಣ ಸೂಚಿಸಲಾಗಿದೆ. ಶೃಂಗಾರಕ್ಕೆ ಹಸಿರು, ಹಾಸ್ಯಕ್ಕೆ ಬಿಳಿ, ಕರುಣಕ್ಕೆ ಬೂದು, ರೌದ್ರಕ್ಕೆ ಕೆಂಪು, ಉತ್ಸಾಹಕ್ಕೆ ಕಿತ್ತಳೆ, ಭಯಕ್ಕೆ ಕಪ್ಪು, ಜಿಗುಪ್ಸೆಗೆ ನೀಲಿ, ವಿಸ್ಮಯಕ್ಕೆ ಹಳದಿ. ಇಂದಿನ ನಾಟ್ಯ ಪದ್ಧತಿಯಲ್ಲಿ ಶಾಂತ ರಸವನ್ನು ಸೇರಿಸಿ ನವರಸ ಎಂದು ಪ್ರದರ್ಶಿಸುತ್ತಾರೆ.

IMG20240229195703

ಭರತನಾಟ್ಯದಲ್ಲಿ ಹಾಡು ಮತ್ತು ಕಥೆಗೆ ಹೆಚ್ಚಿನ ಪ್ರಾಮುಖ್ಯತೆ, ಬ್ರಿಟಿಷ್‌ ಆಳ್ವಿಕೆಯ ಪ್ರಾರಂಭದಲ್ಲಿ ಆಕ್ರಮಣಕಾರರು ದಕ್ಷಿಣ ಭಾರತದ ದೇವದಾಸಿಯರನ್ನು ಅಮಾನಿಸಿದರು. ಅವರ ನಾಟ್ಯ ಸಂಪ್ರದಾಯವನ್ನು ವೇಶ್ಯೆಯರ ಚಟುವಟಿಕೆ ಸಮೀಕರಿಸಿ ಭಾರತೀಯ ಕಲಾ ಪ್ರಕಾರಗಳ ಮೇಲೆ ನಿಷೇಧವನ್ನು ಹೇರಿದರು.

ದೇವಾಲಯಗಳಲ್ಲಿ ನಾಟ್ಯ ಪದ್ಧತಿ

ಹೀಗಾಗಿ ದೇವಾಲಯದ ನಾಟ್ಯ ಪದ್ಧತಿ ಕೊನೆಗೊಳಿಸಿದರು. ಈ ಕಲಾ ಪ್ರಕಾರ ಪುನರುತ್ಥಾನಗೊಳಿಸಲು, ಪುನರುಜ್ಜೀವನಕಾರರಾದ ಕೃಷ್ಣ ಅಯ್ಯರ್‌, ರುಕ್ಮಿಣಿ ದೇವಿ ಅರುಂಡೇಲಂ ಕಾರಣರಾದರು. ಅನೇಕ ದೇಗುಲಗಳಲ್ಲಿ ಶಿವನ ಭಂಗಿಗಳು ಕೆತ್ತಲ್ಪಟ್ಟಿವೆ. ನಟರಾಜನ ನೃತ್ಯಗಳನ್ನು ಬಾದಾಮಿಯ ದೇವಾಲಯಗಳಲ್ಲೂ ಕಾಣಬಹುದು. ನಾವು ಚಿಕ್ಕವರಿದ್ದಾಗ ಕಮಲಹಾಸನ್‌ ಮತ್ತು ಜಯಪ್ರದಾ ಅಭಿನಯದ `ಸಾಗರ ಸಂಗಮಂ’ ಚಿತ್ರ ಭರತನಾಟ್ಯದಿಂದ ಪ್ರಸಿದ್ಧವಾಗಿದ್ದು ಇನ್ನೂ ಹಸಿರಾಗಿದೆ.

IMG20240229195852

ನಾಟ್ಯ ಪ್ರಸಿದ್ಧರು

ಹಾಗೆಯೇ ಹಲವು ದಶಕಗಳ ಹಿಂದಿನಿಂದ ಭರತನಾಟ್ಯಕ್ಕೆಂದೇ ಪ್ರಸಿದ್ಧರಾದ ಪದ್ಮಾ ಸುಬ್ರಹ್ಮಣ್ಯಂ, ಚಿತ್ರರಂಗದಲ್ಲಿ ನೆಲೆಯೂರಿದ ಹೇಮಮಾಲಿನಿ, ಶೋಭನಾ ಚಂದ್ರಕುಮಾರ್‌, ಲಕ್ಷ್ಮಿ ಗೋಪಾಲಸ್ವಾಮಿ, ಸುಧಾ ಚಂದ್ರನ್‌ ಮುಂತಾದ ಅನೇಕರು ಈಗಲೂ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವುದು ದೇಶಕ್ಕೇ ಹೆಮ್ಮೆಯ ವಿಷಯ.

ಶ್ರೀನಿವಾಸ ದೇಗುಲದ ನಾಟ್ಯ ಪ್ರದರ್ಶನ

ಕೋಣನಕುಂಟೆಯ ಶ್ರೀನಿಧಿ ಶ್ರೀನಿವಾಸ ದೇಗುಲದಲ್ಲಿ ಆಗಾಗ ನಾಟ್ಯ ಶಾಲೆಗಳಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸುತ್ತಾರೆ. ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಶಾಲಾ ದಿನಗಳಿಂದಲೇ ನೃತ್ಯ ಶಾಲೆಗಳಲ್ಲಿ ತರಬೇತಿ ಕೊಡಿಸಿ ಅವರಿಂದ ರಂಗ ಪ್ರವೇಶ ಮಾಡಿಸಿ, ಅವರು ಉನ್ನತ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ಕೊಟ್ಟು ಹೆಸರು ಕೀರ್ತಿ, ಹಣ ಪಡೆಯುವಂತೆ ಮಾಡಿದ ಅವರ ಈ ಕಾರ್ಯಕ್ಕೆ ಒಂದು ದೊಡ್ಡ ಅಭಿನಂದನೆ ಹೇಳಲೇಬೇಕು, ಹತ್ತು ಹೆಣ್ಣುಮಕ್ಕಳು ಇತ್ತೀಚೆಗೆ ಕೊಟ್ಟ ಪ್ರದರ್ಶನ, ಪ್ರಾರ್ಥನಾ ನೃತ್ಯವಾಗಲಿ, ವಿಷ್ಣುವಿನ ದಶಾವತಾರವಾಗಲಿ, ಶಿವನ ನೃತ್ಯ, ಶಾರದಾ ಸ್ತುತಿ, ವೆಂಕಟಾಚಲ ನಿಲಯಂ, ವೈಕುಂಠ ಪುರವಾಸಂ, ಅಷ್ಟಲಕ್ಷ್ಮಿ ನೃತ್ಯಗಳು ಒಂದಕ್ಕಿಂತ ಒಂದು ಅಮೋಘವಾಗಿದ್ದ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು ಅದನ್ನು ಆಸ್ವಾದಿಸುವುದನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ನಾಟ್ಯ ಕಲೆಯಲ್ಲಿದೆ. ಅಲ್ಲಿ ದೇವಿಯ ಸೌಂದರ್ಯ ಉಂಟು, ಶಿವನ ಗಾಂಭೀರ್ಯ ಉಂಟು. ನಾಟ್ಯಕ್ಕೆ ನಟರಾಜನ ಮೂರ್ತಿಯನ್ನು ವೇದಿಕೆಯಲ್ಲಿ ಒಂದು ಕಡೆ ಇರಿಸಿ ಮೊದಲ ಪೂಜೆ ಅವನಿಗೆ ಅರ್ಪಿತ. ಎಲ್ಲ ನೃತ್ಯ ಕಲಾವಿದರು ನಟರಾಜನ ಆರಾಧಕರೇ, ನಾಟ್ಯ, ಸಂಗೀತ, ನಾಟಕ ಮುಂತಾದ ದೃಶ್ಯ ಕಲೆಗಳು ಪ್ರಭಾವಶಾಲಿ ಮಾಧ್ಯಮಗಳು. ಅವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಮನರಂಜನೆ ಅಲ್ಲದೆ ಲೋಕಕ್ಕೆ ಶಿಕ್ಷಣವನ್ನು ನೀಡುವಲ್ಲಿಯೂ ನಮ್ಮ ಸಂಸ್ಕೃತಿ ಪ್ರಸಾರದಲ್ಲೂ ಮುಖ್ಯ ಪಾತ್ರ ವಹಿಸಬಲ್ಲ.

ಭಾರತಿ ಹೆಬ್ಬಾರ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ