`ಚಿಟ್ಟೆ ಹೆಜ್ಜೆ'ಯಲ್ಲಿ ನೇತ್ರಾ ಆಗಿ ಅಭಿನಯಿಸುತ್ತಿರುವ ನಯನಾ ಹೆಸರಿಗೆ ತಕ್ಕಂತೆಯೇ ಕಣ್ಣಿನ ಅಭಿನಯದಿಂದ ಖ್ಯಾತರಾದರು. ಹಾಗೆಂದೇ ಅವರನ್ನು `ಕಣ್ಣಿನ ಹುಡುಗಿ' ಎಂದೇ ಕರೆಯುತ್ತಾರೆ.
ನಯನಾ ಪುಟ್ಟಸ್ವಾಮಿ ಮೂಲತಃ ಸಾಹಸಿ ಪ್ರವೃತ್ತಿಯ ಯುವತಿ. ಕಾಲೇಜು ಜೀವನದಲ್ಲಿ ತೈಕ್ವಾಂಡೊ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಆಟಗಾರ್ತಿ ಎಂದು ಖ್ಯಾತಿ ಪಡೆದರು.
ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸುತ್ತಿದ್ದಂತೆಯೇ ಅವರ ಸಾಹಸ ಮನೋಭಾವಕ್ಕೆ ತಕ್ಕುದಾದ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಅದರಲ್ಲಿ ಜಯಶಾಲಿಯೂ ಆದರು.
ಅಂದಿನ ರಿಯಾಲಿಟಿ ಶೋದಿಂದ ಈವರೆಗಿನ ಧಾರಾವಾಹಿ, ಸಿನಿಮಾ ಲೋಕದಲ್ಲಿನ ತಮ್ಮ ಪಯಣದ ಬಗ್ಗೆ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
`ಚಿಟ್ಟೆ ಹೆಜ್ಜೆ'ಗೂ ಮುಂಚೆ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಅದರಲ್ಲಿ ಗೆದ್ದ ಖ್ಯಾತಿ ನಿಮಗಿದೆ. ಅದೆಲ್ಲ ಹೇಗೆ ಸಾಧ್ಯವಾಯಿತು?
ಶಾಲಾ ಜೀವನದಿಂದಲೇ ಕ್ರೀಡೆಗಳೆಂದರೆ ನನಗೆ ಪಂಚಪ್ರಾಣ. ಸ್ಕೈ ಡೈವಿಂಗ್, ಸ್ಕೂಬಾ ಡೈವಿಂಗ್ ಪ್ಯಾರಾ ಸೈಲಿಂಗ್ ಸ್ಪಾರ್ಕಲಿಂಗ್ ಮುಂತಾದ ಸಾಹಸ ಕ್ರೀಡೆಗಳಲ್ಲೂ ಪಾಲ್ಗೊಂಡಿದ್ದೆ. ಡಿಗ್ರಿ ಮುಗಿಸುತ್ತಿದ್ದಂತೆಯೇ ಸುವರ್ಣ ಚಾನೆಲ್ ನವರು `ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್' ರಿಯಾಲಿಟಿ ಶೋ ಮಾಡಲಿದ್ದಾರೆಂದು ನನಗೆ ಯಾರೋ ಹೇಳಿದರು. ನಾನು ಫೋಟೋ ಶೂಟ್ ಮಾಡಿ ಕಳಿಸಿದೆ. ಬುಲಾವ್ ಬಂತು, ಆಯ್ಕೆಯೂ ಆದೆ. ಒಂದೆರಡು ವಾರ ಇದ್ದು ಬರಬೇಕೆಂದು ಹೋದಳು ನಾನು. ಆದರೆ ಕ್ರಮೇಣ ಇತರ ಹುಡುಗಿಯರಿಗಿಂತ ಒಳ್ಳೆಯ ಪ್ರದರ್ಶನ ನೀಡಬಲ್ಲೇ ಎನ್ನುವುದು ನನಗೆ ಖಾತ್ರಿಯಾಗುತ್ತ ಬಂತು. ಶಿವಮೊಗ್ಗ ಜಿಲ್ಲೆಯ ಕುರದಾಳದಲ್ಲಿ ನಡೆದ ಈ ಶೋನ ಫೈನಲ್ ನಲ್ಲಿ ನಾನು ಗೆದ್ದೆ. ನನ್ನಲ್ಲಿನ ಆತ್ಮವಿಶ್ವಾಸವೇ ನನ್ನನ್ನು ಗೆಲ್ಲಿಸಿತು.
ರಿಯಾಲಿಟಿ ಶೋನಲ್ಲಿನ ಗೆಲುವು ಸಿನಿಮಾದಲ್ಲೂ ಅವಕಾಶಗಳು ದೊರಕಿಸಿಕೊಟ್ಟವು ಅಲ್ವೇ?
ಹೌದು. `ಗೋಲ್ ಮಾಲ್ ಗಾಯತ್ರಿ' ಎಂಬ ಸಿನಿಮಾದಲ್ಲಿ ಮೊದಲು ಅಭಿನಯಿಸಿದೆ. ಆದರೆ ಅದು ಕಾರಣಾಂತರದಿಂದ ಬಿಡುಗಡೆ ಕಾಣಲಿಲ್ಲ. ಆ ಬಳಿಕ `ಅಯೋಧ್ಯಾಪುರಂ,' `ಅಲೆಮಾರಿ' ಚಿತ್ರದಲ್ಲಿ ಅಭಿನಯಿಸಿದೆ. `ಘರ್ಷಣೆ' ಚಿತ್ರದಲ್ಲಿ ಮಾಲಾಶ್ರೀಯರು ನನಗೆ ಇನ್ಸ್ಪೆಕ್ಟರ್ಪಾತ್ರ ಕೊಟ್ಟರು.
`ಚಿಟ್ಟೆ ಹೆಜ್ಜೆ'ಯ ಕಡೆ ನೀ ಹೆಜ್ಜೆ ಹಾಕಿದ್ದು ಹೇಗೆ?
ಸಿನಿಮಾಗಳು ನನ್ನ ಕೈ ಹಿಡಿಯಲಿಲ್ಲ. ಒಳ್ಳೆಯ ಧಾರಾವಾಹಿಗಳು ಸಿಕ್ಕರೆ ಮಾಡೋಣ ಎಂದುಕೊಂಡಿದ್ದೆ. ಅಂತಹ ಸ್ಥಿತಿಯಲ್ಲಿ `ಚಿಟ್ಟೆ ಹೆಜ್ಜೆ' ಧಾರಾವಾಹಿ ನನ್ನನ್ನು ಹುಡುಕಿಕೊಂಡು ಬಂದಿತು. ಹೆಸರಾಂತ ನಿರ್ದೇಶಕ ವಿನೂ ಬಳಂಜ ಅವರ ಧಾರಾವಾಹಿಯಲ್ಲಿ ಅನಂತ್ ನಾಗ್ರಂತಹ ಹಿರಿಯ ನಟರು ನಟಿಸುತ್ತಿದ್ದಾರೆಂದು ತಿಳಿದು ನಾನು ತಕ್ಷಣವೇ ಒಪ್ಪಿಕೊಂಡೆ. ಅದು ನನ್ನ ನಿರೀಕ್ಷೆಗೂ ಮೀರಿದ ಒಳ್ಳೆಯ ಪಾತ್ರ ಎಂದು ಈಗ ಅರ್ಥವಾಗಿದೆ.
ನಿಮ್ಮಲ್ಲಿನ ಪ್ರತಿಭೆ ಹೊರಹೊಮ್ಮಿಸಲು ನಿರ್ದೇಶಕರು ಹೇಗೆ ಸಹಾಯ ಮಾಡುತ್ತಿದ್ದಾರೆ?
ನಮ್ಮ ನಿರ್ದೇಶಕರು ಅತ್ಯಂತ ಕಟ್ಟುನಿಟ್ಟಿನ ವ್ಯಕ್ತಿ. ಅವರಿಗೆ ಪ್ರತಿಯೊಂದು ನಿಟ್ಟಿನಲ್ಲೂ ಪರ್ಫೆಕ್ಷನ್ ಬೇಕು. ನಾನಿಂದು ಕನ್ನಡದಲ್ಲಿ ಅಷ್ಟು ಸ್ಪಷ್ಟವಾಗಿ ಸಂಭಾಷಣೆ ಹೇಳ್ತೀನಿ ಅಂದ್ರೆ ಅದಕ್ಕೆ ವಿನೂ ಬಳಂಜ ಸರ್ ಕಾರಣ. ಅಂತಹ ನಿರ್ದೇಶಕರ ಬಳಿ ಕೆಲಸ ಮಾಡುತ್ತಿರುವುದರಿಂದ ನಾನು ಎಲ್ಲಿ ಬೇಕಾದರೂ ಕೆಲಸ ಮಾಡ್ತೀನಿ ಅನ್ನೋ ಧೈರ್ಯ ಬಂದಿದೆ.