ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ್' ಎಂದು ಹೆಸರಿಡಲಾಗಿದೆ. ಜಮ್ಮು-ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಈ ದಾಳಿಯನ್ನು ನಡೆಸಿದೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಭಾರತೀಯ ಸೇನೆಯು ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದೆ.
ಕಾರ್ಯಾಚರಣೆ: ಮೇ 7ರಂದು ಬೆಳಗಿನ ಜಾವ 1:05 ರಿಂದ 1:30ರ ನಡುವೆ ದಾಳಿಗಳು ನಡೆದಿವೆ. ಪಾಕಿಸ್ತಾನದ ಬಹಾವಲ್ಪುರ್ ಸೇರಿದಂತೆ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳ ತರಬೇತಿ ಕೇಂದ್ರಗಳನ್ನು ನಾಶಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 70 ಭಯೋತ್ಪಾದಕರು ಹತ್ಯೆಯಾಗಿದ್ದಾರೆ.
ದಾಳಿಗಳು: ಗುಪ್ತಚರ ಮಾಹಿತಿಯ ಆಧಾರದ ಮೇಲೆ ನೆಲೆಗಳನ್ನು ಆಯ್ಕೆ ಮಾಡಲಾಗಿದೆ. ನಾಗರಿಕ ಪ್ರಾಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದೆ. ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸದೆ, ಕೇವಲ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ.
ಆಪರೇಷನ್ ಸಿಂಧೂರ್; ಸಿಂಧೂರ ಎಂಬ ಹೆಸರು ಹಿಂದೂ ವಿವಾಹಿತ ಮಹಿಳೆಯರು ಹಣೆಗೆ ಹಚ್ಚಿಕೊಳ್ಳುವ ಕೆಂಪು ಕುಂಕುಮವನ್ನು ಸೂಚಿಸುತ್ತದೆ. ಪಹಲ್ಗಾವ್ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರ ನೋವನ್ನು ಪ್ರತಿಬಿಂಬಿಸಲು ಈ ಹೆಸರನ್ನು ಆಯ್ಕೆ ಮಾಡಲಾಗಿದೆ.
ಗುಪ್ತಚರ ಮಾಹಿತಿ : ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ 'ದಿ ರೆಸಿಸ್ಟೆನ್ಸ್ ಫ್ರಂಟ್' ಪಹಲ್ಗಾಮ್ ದಾಳಿಗೆ ಹೊಣೆ ಹೊತ್ತಿದೆ. ಕಾಶ್ಮೀರದ ಪ್ರವಾಸೋದ್ಯಮವನ್ನು ಅಸ್ಥಿರಗೊಳಿಸುವುದು ಮತ್ತು ಎರಡು ಸಮುದಾಯಗಳ ನಡುವೆ ಅಶಾಂತಿ ಸೃಷ್ಟಿಸುವುದು ಈ ದಾಳಿಯ ಉದ್ದೇಶವಾಗಿತ್ತು.
ಪತ್ರಿಕಾಗೋಷ್ಠಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾರ್ಯಾಚರಣೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ಅಮೆರಿಕಾ, ಬ್ರಿಟನ್, ರಷ್ಯಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಪಾಕ್ ಹೇಳಿಕೆ: ನಾಗರಿಕರ ಪ್ರಾಣಕ್ಕೆ ಹಾನಿಯುಂಟಾಗಿದೆ. ನಾವು ಭಾರತದ ವಿಮಾನಗಳನ್ನು ಹೊಡೆದು ಉರಿಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಈ ಹೇಳಿಕೆ ಎಷ್ಟರ ಮಟ್ಟಿಗೆ ನಿಜವೆಂಬುದನ್ನು ಕಾದುನೋಡಬೇಕಿದೆ.
ಭಾರತದ ಸೇನೆಯು ಮಾಡಿರುವ ದಾಳಿಗಳನ್ನು 'ಯುದ್ಧ ರೀತಿಯ ಕಾರ್ಯಚರಣೆ' ಎಂದು ಪಾಕ್ ಹೇಳಿದೆ. ಪ್ರತಿದಾಳಿ ಮಾಡುವುದಾಗಿಯೂ ಎಚ್ಚರಿಸಿದೆ.